ಚಂದ್ರಬಾಬು ನಾಯ್ಡು ಈ ಹೇಳಿಕೆ ಕೊಟ್ಟ ಬಳಿಕ ಷೇರು ಮಾರುಕಟ್ಟೆ ಮತ್ತೆ ಹಸಿರು ಬಣ್ಣಕ್ಕೆ

Lok Sabha election results and Chadrababu Naidu statement: ನಿನ್ನೆ ಮಂಗಳವಾರ ಭಾರಿ ವಿಪ್ಲವ ಕಂಡಿದ್ದ ಷೇರು ಮಾರುಕಟ್ಟೆ ಇವತ್ತು ಹಸಿರು ಬಣ್ಣಮಯ ಆಗಿದೆ. ಎನ್​ಎಸ್​ಇ ಮತ್ತು ಬಿಎಸ್​ಇನ ಹೆಚ್ಚಿನ ಸೂಚ್ಯಂಕಗಳು ಪಾಸಿಟಿವ್ ಆಗಿವೆ. ಎನ್​ಡಿಎಯಿಂದ ಸ್ಥಿರ ಸರ್ಕಾರ ರಚನೆ ಸಾಧ್ಯವಾ ಎನ್ನುವ ಆರಂಭಿಕ ದುಗುಡ ನಿನ್ನೆ ಇತ್ತು. ಇವತ್ತು ಟಿಡಿಪಿ ಮತ್ತು ಜೆಡಿಯು ಎನ್​ಡಿಎ ಜೊತೆ ಇರುವುದಾಗಿ ಭರವಸೆ ಕೊಟ್ಟಿವೆ. ಈ ನಿಟ್ಟಿನಲ್ಲಿ ಚಂದ್ರಬಾಬು ನಾಯ್ಡು ನೀಡಿದ ಭರವಸೆಯ ಮಾತುಗಳು ಷೇರು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದಂತೆ ಕಾಣುತ್ತಿದೆ. ಮಂಗಳವಾರ ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಪೇಟೆ ಮಧ್ಯಾಹ್ನದ ಹೊತ್ತಿಗೆ ಗರಿಗೆದರಿದೆ.

ಚಂದ್ರಬಾಬು ನಾಯ್ಡು ಈ ಹೇಳಿಕೆ ಕೊಟ್ಟ ಬಳಿಕ ಷೇರು ಮಾರುಕಟ್ಟೆ ಮತ್ತೆ ಹಸಿರು ಬಣ್ಣಕ್ಕೆ
ಚಂದ್ರಬಾಬು ನಾಯ್ಡು

Updated on: Jun 05, 2024 | 1:08 PM

ಮುಂಬೈ, ಜೂನ್ 5: ಮೋದಿ ನೇತೃತ್ವದಲ್ಲಿ ಎನ್​ಡಿಎ ಮೈತ್ರಿಕೂಟ ಮೂರನೇ ಬಾರಿ ಅಧಿಕಾರ (Lok Sabha Elections 2024) ರಚಿಸಲು ಅಣಿಯಾಗಿದೆ. ಈ ಬಾರಿ ಮೈತ್ರಿಕೂಟಕ್ಕೆ ಬೇರೆ ಕಳೆ ಬಂದಿದೆ. ಜೆಡಿಯು ಮತ್ತು ಟಿಡಿಪಿ ಎಂಬ ಎರಡು ಊರುಗೋಲು ಈಗ ಬಿಜೆಪಿಗೆ ಬೇಕಾಗಿದೆ. ಹೀಗಾಗಿ, ಮೋದಿ 3.0 ಸರ್ಕಾರದ ಬಗ್ಗೆ ಬೇರೆಯೇ ನಿರೀಕ್ಷೆಗಳು ಹುಟ್ಟುತ್ತಿವೆ. ರಿಸಲ್ಟ್ ಬಂದ ದಿನ ಹೂಡಿಕೆದಾರರು ಆತಂಕಕ್ಕೊಳಗಾಗಿದ್ದರು. ಪರಿಣಾಮವಾಗಿ 38 ಲಕ್ಷಕೋಟಿ ರೂ ನಷ್ಟ ಮಾಡಿಕೊಂಡಿದ್ದರು. ಇವತ್ತು ಬೆಳಗ್ಗೆ ನಿಫ್ಟಿ, ಸೆನ್ಸೆಕ್ಸ್ ಒಂದಷ್ಟು ಕುಸಿತ ಕಂಡು ಬಳಿಕ ಮಧ್ಯಾಹ್ನ ಆಗುತ್ತಿರುವಂತೆಯೇ ಚೇತರಿಕೆ ಕಾಣತೊಡಗಿದೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ನೀಡಿದ ಒಂದು ಹೇಳಿಕೆ ಬಳಿಕ ಮಾರುಕಟ್ಟೆ ವರ್ತನೆ ಬದಲಾದಂತೆ ತೋರುತ್ತಿದೆ.

ಚಂದ್ರಬಾಬು ನಾಯ್ಡು ನೀಡಿದ ಹೇಳಿಕೆ ಏನು?

ನಿನ್ನೆ ನಿತೀಶ್ ಕುಮಾರ್ ಅವರು ತಮ್ಮ ಬೆಂಬಲ ಎನ್​ಡಿಎಗೆಯೇ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಚಂದ್ರಬಾಬು ನಾಯ್ಡು ವತಿಯಿಂದ ಯಾವ ಹೇಳಿಕೆಯೂ ಬಂದಿರಲಿಲ್ಲ. ಇಂದು ಈ ಬಗ್ಗೆ ಮಾತನಾಡಿರುವ ನಾಯ್ಡು, ಎನ್​ಡಿಎ ಜೊತೆ ಟಿಡಿಪಿ ಇರುತ್ತೆ ಎಂದು ವಾಗ್ದಾನ ನೀಡಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ಯಾಕೆ ಸೋತಿತು? ಅಖಿಲೇಶ್-ರಾಹುಲ್ ತಂತ್ರಗಳೇನು? ಇಲ್ಲಿವೆ ಕಾರಣಗಳು

ಎನ್​ಡಿಎ ಮೈತ್ರಿಕೂಟ ಒಟ್ಟಾರೆ ಗೆದ್ದಿರುವುದು 292 ಸ್ಥಾನ. ಈ ಪೈಕಿ ಬಿಜೆಪಿ 240, ಟಿಡಿಪಿ 16, ಜೆಡಿಯು 12 ಸ್ಥಾನಗಳನ್ನು ಹೊಂದಿವೆ. ಶಿವಸೇನೆ, ಎಲ್​ಜೆಪಿ, ಜೆಡಿಎಸ್ ಮತ್ತಿತರೆ ಪಕ್ಷಗಳಿಂದಲೂ ಒಂದಷ್ಟು ಸಂಸದರಿದ್ದಾರೆ. ಇಲ್ಲಿ ಟಿಡಿಪಿ ಮತ್ತು ಜೆಡಿಯು ಪಕ್ಷಗಳು ಪ್ರಮುಖ ಕಿಂಗ್ ಮೇಕರ್ ಎನಿಸುತ್ತವೆ.

ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಬೇಕಾದರೆ ಟಿಡಿಪಿ, ಜೆಡಿಯು ಹಾಗೂ ಎಲ್ಲಾ ಎನ್​ಡಿಎ ಮಿತ್ರಪಕ್ಷಗಳ ಬೆಂಬಲ ಅತ್ಯಗತ್ಯ. ಯಾರೊಬ್ಬರೂ ಹಳಿ ಬಿಟ್ಟು ಹೋದರೂ ಎನ್​ಡಿಎ ಅಪಘಾತಕ್ಕೊಳಗಾಗುತ್ತದೆ. ಹೀಗಾಗಿ, ಚಂದ್ರಬಾಬು ನಾಯ್ಡು ಹೇಳಿಕೆ ಬಹಳ ಮುಖ್ಯವಾಗಿದೆ. ಇಂದು ಬಿಜೆಪಿ ಸೇರಿದಂತೆ ಎನ್​ಡಿಎ ಮೈತ್ರಿಕೂಟದ ಎಲ್ಲಾ ಪಕ್ಷಗಳ ಮುಖಂಡರ ಸಭೆ ನಡೆಯುತ್ತಿದ್ದು ಮುಂದಿನ ಹಾದಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳ ಮಧ್ಯೆ ಮಾರುಕಟ್ಟೆ ಸಮಾಧಾನದ ಉಸಿರು ಬಿಡಲು ಆರಂಭಿಸಿದಂತೆ ತೋರುತ್ತಿದೆ.

ನಿಫ್ಟಿ50 ಸೂಚ್ಯಂಕ ಮಧ್ಯಾಹ್ನ 1 ಗಂಟೆಯ ವೇಳೆ ಶೇ. 1.70ರಷ್ಟು ಏರಿತ್ತು. ಎನ್​ಎಸ್​ಇಯ ಇತರ ಎಲ್ಲಾ ಸೂಚ್ಯಂಕಗಳೂ ಕೂಡ ಪಾಸಿಟಿವ್ ಇವೆ. ಸೆನ್ಸೆಕ್ಸ್ ಸೇರಿದಂತೆ ಬಿಎಸ್ಇಯ ಬಹುತೇಕ ಎಲ್ಲಾ ಸೂಚ್ಯಂಕಗಳೂ ಪಾಸಿಟಿವ್ ಇವೆ ಎನ್ನುವುದು ಸಮಾಧಾನದ ಸಂಗತಿ. ಪಿಎಸ್​ಯು ಸೆಕ್ಟರ್​ನ ಸ್ಟಾಕ್​ಗಳು ಮಾತ್ರ ಇವತ್ತೂ ಕೆಂಪು ಬಣ್ಣದಲ್ಲಿವೆ.

ಇದನ್ನೂ ಓದಿ: ಒಂಬತ್ತಲ್ಲ, 38 ಲಕ್ಷ ಕೋಟಿ ರೂ ನಷ್ಟ ಕಂಡ ಷೇರುಪೇಟೆ; ಮಾರುಕಟ್ಟೆ ನಡುಗಿದ ನಾಲ್ಕು ಸಂದರ್ಭಗಳಿವು

ಅತಿಹೆಚ್ಚು ಹೂಡಿಕೆ ಸೆಳೆಯುತ್ತಿರುವ ಷೇರುಗಳಿವು…

  1. ಹೀರೋ ಮೋಟೊಕಾರ್ಪ್
  2. ಮಹೀಂದ್ರ ಅಂಡ್ ಮಹೀಂದ್ರ
  3. ಹಿಂದೂಸ್ತಾನ್ ಯುನಿಲಿವರ್
  4. ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್
  5. ಇಂಡಸ್​ಇಂಡ್ ಬ್ಯಾಂಕ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Wed, 5 June 24

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us