
ನವದೆಹಲಿ, ಆಗಸ್ಟ್ 12: ಆಹಾರ ಪದಾರ್ಥಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದ ರೀಟೇಲ್ ಹಣದುಬ್ಬರವು (Consumer Price Index – CPI) ಜುಲೈ ತಿಂಗಳಲ್ಲಿ 4.45% ಗೆ ಏರಿಕೆಯಾಗಿದೆ. ಜೂನ್ ತಿಂಗಳಿನಲ್ಲಿ ಇದು 4.38% ಆಗಿತ್ತು. ಇದರೊಂದಿಗೆ ದೇಶದ ಚಿಲ್ಲರೆ ಹಣದುಬ್ಬರವು ಸತತ ಎರಡನೇ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಗದಿಪಡಿಸಿರುವ 4% ಮಧ್ಯಮಾವಧಿ ಗುರಿಗಿಂತ ಮೇಲೆ ಹೋಗಿದೆ. ಆದರೆ, ಹಣದುಬ್ಬರ ತಾಳಿಕೆ ಮಿತಿಯಾದ 6% ಒಳಗೆಯೇ ಇದೆ.
ಗ್ರಾಹಕ ಬೆಲೆ ಅನುಸೂಚಿ ಆಧಾರಿತವಾದ ಈ ಚಿಲ್ಲರೆ ಹಣದುಬ್ಬರದ ಏರಿಕೆಗೆ ಆಹಾರ ದರಗಳ ತೀವ್ರ ಹೆಚ್ಚಳವೇ ಮುಖ್ಯ ಕಾರಣವಾಗಿದೆ. ಜುಲೈನಲ್ಲಿ ಆಹಾರ ಹಣದುಬ್ಬರ ಅಥವಾ ಆಹಾರ ಪದಾರ್ಥಗಳ ಸರಾಸರಿ ಬೆಲೆ ಏರಿಕೆ 5.52% ಇದೆ.
ಉಳ್ಳಿ, ಖಾದ್ಯ ತೈಲಗಳು, ಅಕ್ಕಿ ಮತ್ತು ಬೇಳೆಕಾಳುಗಳಂತಹ ಅತ್ಯಗತ್ಯ ಆಹಾರವಸ್ತುಗಳ ದರ ಹೆಚ್ಚಳವು ಗ್ರಾಹಕರ ಬಜೆಟ್ ಮೇಲೆ ನೇರ ಪರಿಣಾಮ ಬೀರಿದೆ.
ಇದನ್ನೂ ಓದಿ: ಟಾಟಾ ಸನ್ಸ್ ಉನ್ನತ ಸ್ಥಾನ ತೊರೆದ ಎನ್ ಚಂದ್ರಶೇಖರನ್ ಅವರ ವೇತನ, ಕಮಿಷನ್ ಇತ್ಯಾದಿ ವರಮಾನ ಎಷ್ಟು ಗೊತ್ತಾ?
ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಭಾವ: ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರದ ಪ್ರಭಾವ ಹೆಚ್ಚಾಗಿದೆ. ಗ್ರಾಮೀಣ ಭಾಗದ ಕುಟುಂಬಗಳ ವೆಚ್ಚದಲ್ಲಿ ಆಹಾರ ಧಾನ್ಯಗಳ ಪಾಲು ಹೆಚ್ಚಾಗಿರುವುದೇ ಇದಕ್ಕೆ ಕಾರಣ.
ದೇಶದಾದ್ಯಂತ ಅಸಮಾನ ಮುಂಗಾರು ಮಳೆಯು ಕೃಷಿ ಉತ್ಪಾದನೆ ಮತ್ತು ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದೆ. ಜುಲೈ ದ್ವಿತೀಯಾರ್ಧದಲ್ಲಿ ಮಳೆ ಪ್ರಮಾಣ ಸುಧಾರಿಸಿದ್ದು, ಶೇಕಡಾ 63 ರಷ್ಟು ರಾಜ್ಯಗಳಲ್ಲಿ ಸಾಧಾರಣ ಮಳೆಯಾಗಿದೆ. ಖಾರಿಫ್ ಬೆಳೆಗಳ ಬಿತ್ತನೆ ಪ್ರಮಾಣ ಉತ್ತಮವಾಗಿದ್ದರೂ, ಆಹಾರ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ದರ ಏರಿಕೆಗೆ ದಾರಿಯಾಗಿದೆ.
ಇದನ್ನೂ ಓದಿ: ಕೆಲಸ ಬಿಟ್ಟ ಆರು ಮಂದಿಯ ಹುಚ್ಚುತನದಲ್ಲಿ ಆರಂಭವಾಗಿತ್ತು ಎಚ್ಸಿಎಲ್; ಕಾರು ಮಾರಿ ಕಟ್ಟಿದ ಕಂಪನಿಯ ಕಥೆ ಇದು…
ಹಣದುಬ್ಬರವು ಆರ್ಬಿಐನ 4% ಗುರಿಯನ್ನು ಮೀರಿದ್ದರೂ, ಅದು ನಿಗದಿಪಡಿಸಿರುವ 2% ನಿಂದ 6% ಒಳಗಿನ ತಾಳಿಕೆಯ ಮಿತಿಯಲ್ಲೇ ಇದೆ. ಆದ್ದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಇತ್ತೀಚಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರಗಳನ್ನು (Repo Rate) ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ.
ಆದಾಗ್ಯೂ, ಹವಾಮಾನ ವೈಪರೀತ್ಯ ಹಾಗೂ ಕಚ್ಚಾ ತೈಲ ದರಗಳ ಏರಿಳಿತಗಳಿಂದಾಗಿ ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ