
ನವದೆಹಲಿ, ಮೇ 25: ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ (Petrol and Diesel rates) ಮಾಡಿರುವ ಕ್ರಮಕ್ಕೆ ಬಹಳಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಆದರೆ, ಈ ವಿರೋಧಗಳಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು? ಅಂಕಿ ಅಂಶಗಳು ಬೇರೆಯೇ ಕಥೆ ಹೇಳುತ್ತವೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಂತರ ತೈಲ ಬೆಲೆ ಏರಿಕೆಯಾದರೂ ಭಾರತದಲ್ಲಿ ತಿಂಗಳುಗಟ್ಟಲೆ ಪೆಟ್ರೋಲ್, ಡೀಸಲ್ ಬೆಲೆ ಏರಿಸದೇ ತಡೆಯಲಾಗಿತ್ತು. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಕೂಡ ಮಾಡಿತು. ತೈಲ ಕಂಪನಿಗಳು ದಿನಕ್ಕೆ ಸಾವಿರಾರು ಕೋಟಿ ರೂ ನಷ್ಟ ಕಾಣುತ್ತಿದ್ದಾಗ್ಯೂ ಸರ್ಕಾರ ಇತ್ತೀಚೆಗಷ್ಟೇ ಅಲ್ಪ ಹೆಚ್ಚಳಕ್ಕೆ ಅನುವು ಮಾಡಿತ್ತು. 2026ರ ಫೆಬ್ರವರಿಯಲ್ಲಿ ‘ಸ್ಟೇಟ್ ಆಫ್ ಹಾರ್ಮುಜ್’ (Strait of Hormuz) ಮುಚ್ಚಲ್ಪಟ್ಟ ನಂತರ ಜಗತ್ತಿನಾದ್ಯಂತ ತೈಲ ಬೆಲೆಗಳು (crude oil prices) ಗಗನಕ್ಕೇರಿದರೂ, ಭಾರತವು ಸತತ 78 ದಿನಗಳ ಕಾಲ ಬೆಲೆಯನ್ನು ಹೆಚ್ಚಿಸದೆ ಸ್ಥಿರವಾಗಿಟ್ಟಿತ್ತು. ತದನಂತರ ಮೇ ತಿಂಗಳಲ್ಲಿ 4 ಹಂತಗಳಲ್ಲಿ ಮಾಡಿದ ಒಟ್ಟು ₹7 ರವರೆಗಿನ ಪರಿಷ್ಕರಣೆಯು ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆ ಏರಿಕೆಯಾಗಿದೆ.
ತೈಲ ಬಿಕ್ಕಟ್ಟಿನ ಸಮಯದಲ್ಲಿ ಇಡೀ ಜಗತ್ತು ಶೇ. 10 ರಿಂದ ಶೇ. 90 ರಷ್ಟು ಬೆಲೆ ಹೆಚ್ಚಳ ಮಾಡಿದರೆ, ಭಾರತವು ತನ್ನ ಇಂಧನ ಬೆಲೆಗಳನ್ನು ಬಹುತೇಕ ಬದಲಾಯಿಸದೆ ಗ್ರಾಹಕರಿಗೆ ನೆರವಾಯಿತು.
ಮೇ 15, 19, 23 ಮತ್ತು 25 ರಂದು ಒಟ್ಟು ನಾಲ್ಕು ಬಾರಿ ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡಿದವು. ಇದರಿಂದಾಗಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ ₹7.35 ಮತ್ತು ಡೀಸೆಲ್ ಮೇಲೆ ₹7.53 ರಷ್ಟು ಮಾತ್ರ ಹೆಚ್ಚಳವಾಗಿದೆ.
ಈ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ ₹94.77 ರಿಂದ ₹102.12 ಕ್ಕೆ ಹಾಗೂ ಡೀಸೆಲ್ ದರ ₹87.67 ರಿಂದ ₹95.20 ಕ್ಕೆ ತಲುಪಿದೆ.
ಯೂರೋಪ್ನ ಪ್ರಮುಖ ದೇಶಗಳಲ್ಲಿ ಪೆಟ್ರೋಲ್ ದರ ಲೀಟರ್ಗೆ ₹180 ಕ್ಕಿಂತ ಹೆಚ್ಚಿದ್ದರೆ, ಭಾರತವು ಅಭಿವೃದ್ಧಿ ಹೊಂದುತ್ತಿರುವ ಬಹುತೇಕ ದೇಶಗಳಿಗಿಂತ ಕಡಿಮೆ ದರದಲ್ಲಿ ಇಂಧನವನ್ನು ನೀಡುತ್ತಿದೆ. ನೆರೆರಾಷ್ಟ್ರಗಳಾದ ಪಾಕಿಸ್ತಾನ ಮತ್ತು ನೇಪಾಳಗಳಲ್ಲೂ ಪೆಟ್ರೋಲ್ ದರ ಲೀಟರ್ಗೆ ₹135 ಕ್ಕಿಂತ ಹೆಚ್ಚಿದೆ.
ಜಾಗತಿಕ ಸರಾಸರಿ ಪೆಟ್ರೋಲ್ ಬೆಲೆ ಏರಿಕೆ ಶೇ. 22ಕ್ಕೂ ಹೆಚ್ಚಿದೆ. 27 ದೇಶಗಳಿರುವ ಯೂರೋಪಿಯನ್ ಯೂನಿಯನ್ನಲ್ಲಿ ಶೇ. 18ರಷ್ಟು ಏರಿದೆ. ತೈಲ ಉತ್ಪಾದನೆ ನಡೆಯುವ ಅಮೆರಿಕದಲ್ಲೇ ಗ್ಯಾಸೊಲಿನ್ ಬೆಲೆ ಶೇ. 44ರಷ್ಟು ಹೆಚ್ಚಿದೆ. ಪ್ರಮುಖ ತೈಲ ರಫ್ತು ದೇಶವಾದ ಯುಎಇ ಕೂಡ ಶೇ. 52ರಷ್ಟು ಬೆಲೆ ಹೆಚ್ಚಳ ಮಾಡಿದೆ.
ಮಯನ್ಮಾರ್, ಮಲೇಷ್ಯಾ, ಪಾಕಿಸ್ತಾನ, ಯುಎಇ ದೇಶಗಳಲ್ಲಿ ಪೆಟ್ರೋಲ್ ಬೆಲೆ ಶೇ. 50ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ.
ಇದನ್ನೂ ಓದಿ: ಭರವಸೆ ಮೂಡಿಸಿದ ಅಮೆರಿಕ-ಇರಾನ್ ಡೀಲ್; ಗರಿಗೆದರಿದ ಷೇರುಬಜಾರು
ದೇಶದ ಎಲ್ಲಾ ರಾಜ್ಯಗಳಲ್ಲೂ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ ಒಂದೇ ಆಗಿರುತ್ತದೆ. ಆದರೆ, ವಿವಿಧ ರಾಜ್ಯಗಳು ವಿಧಿಸುವ ಮೌಲ್ಯವರ್ಧಿತ ತೆರಿಗೆ (VAT) ಮತ್ತು ಸೆಸ್ (Cess) ಪ್ರಮಾಣದಲ್ಲಿನ ವ್ಯತ್ಯಾಸದಿಂದಾಗಿ ವಿವಿಧ ನಗರಗಳಲ್ಲಿ ಇಂಧನ ಬೆಲೆಗಳು ಬೇರೆಯಾಗಿರುತ್ತವೆ.
ವರದಿಯ ಪ್ರಕಾರ, ಪ್ರತಿಪಕ್ಷಗಳು (ಕಾಂಗ್ರೆಸ್ / ಇಂಡಿಯಾ ಕೂಟ / TVK / AAP) ಆಳುವ ರಾಜ್ಯಗಳಲ್ಲಿ ಇಂಧನ ದರಗಳು, ಎನ್ಡಿಎ (NDA/BJP) ಆಡಳಿತವಿರುವ ರಾಜ್ಯಗಳಿಗಿಂತ ಹೆಚ್ಚಿವೆ.
ಹೆಚ್ಚು ದರವಿರುವ ರಾಜ್ಯಗಳು: ತೆಲಂಗಾಣ (ಕಾಂಗ್ರೆಸ್) ಮತ್ತು ಕೇರಳ (ಇಂಡಿಯಾ ಕೂಟ) ರಾಜ್ಯಗಳಲ್ಲಿ ವ್ಯಾಟ್ ಅತ್ಯಂತ ಹೆಚ್ಚಾಗಿದ್ದು, ಅಲ್ಲಿ ಪೆಟ್ರೋಲ್ ದರ ₹112 ಕ್ಕಿಂತ ಹೆಚ್ಚಿದೆ. ಕರ್ನಾಟಕದಲ್ಲೂ ಪೆಟ್ರೋಲ್ ದರ ₹110.3 ರಷ್ಟಿದೆ.
ಕಡಿಮೆ ದರವಿರುವ ರಾಜ್ಯಗಳು: ಗುಜರಾತ್, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಗೋವಾ ಮತ್ತು ಅಸ್ಸಾಂನಂತಹ ಬಿಜೆಪಿ ಆಡಳಿತವಿರುವ ಆರು ರಾಜ್ಯಗಳಲ್ಲಿ ಪೆಟ್ರೋಲ್ ದರ ₹102 ಅಥವಾ ಅದಕ್ಕಿಂತ ಕಡಿಮೆಯಿದೆ.
ಸರಕು ಸಾಗಣೆ, ಕೃಷಿ ಮತ್ತು ಸಾರ್ವಜನಿಕ ಸಾರಿಗೆಗೆ ಬಳಕೆಯಾಗುವ ಡೀಸೆಲ್ ಮೇಲಿನ ವ್ಯಾಟ್ ಅನ್ನು ಬಿಜೆಪಿ ಆಡಳಿತದ ರಾಜ್ಯಗಳು ಕಡಿಮೆ ಇಟ್ಟಿವೆ. ಆದರೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಡೀಸೆಲ್ ದರ ಪ್ರತಿ ಲೀಟರ್ಗೆ ₹15 ರಿಂದ ₹16 ರಷ್ಟು ಹೆಚ್ಚಾಗಿದೆ. ಇದು ಶ್ರಮಿಕ ವರ್ಗದ ಮೇಲೆ ಹೆಚ್ಚಿನ ಹೊರೆ ಉಂಟುಮಾಡುತ್ತಿದೆ ಎಂದು ವರದಿ ಹೇಳುತ್ತದೆ.
ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್ಮೆಂಟ್ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್
2022 ರ ರಷ್ಯಾ-ಉಕ್ರೇನ್ ಯುದ್ಧ ಮತ್ತು 2026 ರ ಹಾರ್ಮುಜ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 120 ಡಾಲರ್ ದಾಟಿದ್ದರೂ, ಭಾರತ ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಬಾರಿ ಚಿಲ್ಲರೆ ಇಂಧನ ಬೆಲೆಯನ್ನು ಕಡಿತಗೊಳಿಸಿದೆ.
2014 ರಲ್ಲಿ ಪೆಟ್ರೋಲ್ ಬೆಲೆ ₹71 ಇತ್ತು ಎಂದು ಕಾಂಗ್ರೆಸ್ ವಾದಿಸುತ್ತದೆ. ಆದರೆ ಆ ಬೆಲೆಯು ಅಂದಿನ ಯುಪಿಎ ಸರ್ಕಾರವು (2005-2010ರ ನಡುವೆ) ತೈಲ ಕಂಪನಿಗಳಿಗೆ ನೀಡಿದ್ದ ₹1.34 ಲಕ್ಷ ಕೋಟಿ ಮೌಲ್ಯದ ‘ಆಯಿಲ್ ಬಾಂಡ್ಗಳ’ ಪರಿಣಾಮವಾಗಿತ್ತು. ಇದು ಮುಂದಿನ ಪೀಳಿಗೆಯ ಮೇಲೆ ಹೊರಿಸಲಾದ ಸಾಲವಾಗಿತ್ತು.
ಪ್ರಸ್ತುತ ಮೋದಿ ಸರ್ಕಾರವು ಆ ಹಳೆಯ ತೈಲ ಬಾಂಡ್ಗಳ ಅಸಲು ಮತ್ತು ಬಡ್ಡಿಯನ್ನು ತೀರಿಸುತ್ತಿದೆ. 2021 ರಿಂದ ಈವರೆಗೆ 1.30 ಲಕ್ಷ ಕೋಟಿಗೂ ಅಧಿಕ ಅಸಲು ಹಣವನ್ನು ಸರ್ಕಾರ ಮರುಪಾವತಿಸಿದೆ.
ಈಗಿನ ಸರ್ಕಾರವು ಯಾವುದೇ ಹೊಸ ಸಾಲದ ಬಾಂಡ್ಗಳನ್ನು ಸೃಷ್ಟಿಸದೆ, ನೇರವಾಗಿ ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಮೂಲಕ ತೈಲ ಬೆಲೆಯ ಹೊರೆಯನ್ನು ಬಜೆಟ್ನಲ್ಲೇ ಹೀರಿಕೊಳ್ಳುತ್ತಿದೆ. 27 ಮಾರ್ಚ್ 2026 ರ ಒಂದೇ ಒಂದು ಸುಂಕ ಕಡಿತದಿಂದ ಕೇಂದ್ರ ಸರ್ಕಾರಕ್ಕೆ ಸುಮಾರು ₹30,000 ಕೋಟಿ ರಾಜಸ್ವದ ನಷ್ಟವಾಗಿದೆ.
ಜಾಗತಿಕ ಯುದ್ಧ ಮತ್ತು ಬಿಕ್ಕಟ್ಟುಗಳ ನಡುವೆಯೂ ಭಾರತವು ತನ್ನ ಗ್ರಾಹಕರನ್ನು ರಕ್ಷಿಸಲು ಗರಿಷ್ಠ ಪ್ರಯತ್ನ ಮಾಡಿದೆ. ಕೇಂದ್ರ ಸರ್ಕಾರವು ತನ್ನ ತೆರಿಗೆಯನ್ನು ಕಡಿತಗೊಳಿಸಿ ಹಳೆಯ ತೈಲ ಬಾಂಡ್ಗಳ ಸಾಲವನ್ನೂ ತೀರಿಸುತ್ತಿದ್ದರೆ, ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ತಮ್ಮ ವ್ಯಾಟ್ (VAT) ದರವನ್ನು ಕಡಿಮೆ ಮಾಡದೆ ಇರುವುದರಿಂದ ಅಲ್ಲಿನ ಗ್ರಾಹಕರು ಹೆಚ್ಚಿನ ಹಣ ನೀಡಬೇಕಾಗಿ ಬಂದಿದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ