
ನವದೆಹಲಿ, ಆಗಸ್ಟ್ 27: ಇತ್ತೀಚೆಗಷ್ಟೇ ಟಾಟಾ ಸನ್ಸ್ (Tata Sons) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಉದ್ಯಮ ರಂಗದ ದಿಗ್ಗಜ ಎನ್. ಚಂದ್ರಶೇಖರನ್ (N Chandrasekaran) ಅವರು ಕೇಂದ್ರ ಸಚಿವ ಸಂಪುಟವನ್ನು ಸೇರಬಹುದು ಎಂಬ ವದಂತಿ ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಸಂಭಾವ್ಯ ಮೋದಿ ಮಂತ್ರಿಮಂಡಲ ಪುನಾರಚನೆ (cabinet reshuffle) ವೇಳೆ ಚಂದ್ರಶೇಖರನ್ ಅವರಿಗೆ ಶಿಕ್ಷಣ ಸಚಿವ ಸ್ಥಾನ ನೀಡಬಹುದು ಎಂದು ಟ್ರಿಬ್ಯೂನ್ ಇಂಡಿಯಾ ಪತ್ರಿಕೆಯ ವರದಿಯೊಂದರಲ್ಲಿ ಹೇಳಲಾಗಿದೆ.
ಚಂದ್ರಶೇಖರನ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಆಲೋಚನೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಅದಿತಿ ಟಂಡನ್ ಅವರು ಈ ವರದಿಯಲ್ಲಿ ಬರೆದಿದ್ದಾರೆ. ಐಟಿ ಮತ್ತು ಕಾರ್ಪೊರೇಟ್ ರಂಗದಲ್ಲಿ (ಟಿಸಿಎಸ್ ಮತ್ತು ಟಾಟಾ ಗ್ರೂಪ್ ಸಂಸ್ಥೆಗಳಲ್ಲಿ) ದಶಕಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ಚಂದ್ರಶೇಖರನ್ ಅವರ ಅನುಭವವನ್ನು ಭಾರತದ ಆರ್ಥಿಕ, ಕೈಗಾರಿಕಾ ಅಥವಾ ತಂತ್ರಜ್ಞಾನ ವಲಯಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಇದನ್ನೂ ಓದಿ: ಬೀಟಾ ಗ್ರೂಪ್ ಮುಖ್ಯಸ್ಥರ ಸ್ಫೂರ್ತಿಯುತ ಕತೆ; ಸತತ ಕಷ್ಟ, ಸವಾಲುಗಳ ನಡುವೆ ಯಶಸ್ಸಿನ ಉದ್ಯಮ ಕಟ್ಟಿದ ರಾಜಮೋಹನ್ ಪಿಳ್ಳೈ
ರಾಜ್ಯಸಭೆ ಮೂಲಕ ಪ್ರವೇಶ?: ಅವರು ನೇರ ರಾಜಕೀಯದಲ್ಲಿ ಇಲ್ಲದಿರುವುದರಿಂದ, ಒಂದು ವೇಳೆ ಸಚಿವರಾದರೆ ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ (Rajya Sabha MP) ಮಾಡಿ ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಆದರೆ, ಈ ಕುರಿತು ಕೇಂದ್ರ ಸರ್ಕಾರವಾಗಲಿ ಅಥವಾ ಎನ್. ಚಂದ್ರಶೇಖರನ್ ಅವರಾಗಲಿ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಅಥವಾ ಪ್ರಕಟಣೆ ನೀಡಿಲ್ಲ.
ಸರ್ಕಾರ ಕೆಲವಾರು ಪ್ರಮುಖರನ್ನು ಹಿಂಬಾಗಿಲ ಮೂಲಕ ಸಂಪುಟಕ್ಕೆ ಸೇರಿಸಿಕೊಂಡಿದ್ದಿದೆ. ನೇರ ಚುನಾವಣೆಯನ್ನು ಎದುರಿಸದ, ಅಥವಾ ರಾಜಕೀಯ ನಂಟೇ ಇಲ್ಲದ ಕೆಲವರು ಸಚಿವರಾಗಿದ್ದಾರೆ. ಎಸ್ ಜೈಶಂಕರ್, ಎ ವೈಷ್ಣವ್ ಇದಕ್ಕೆ ತಾಜಾ ಉದಾಹರಣೆ. ಸರ್ಕಾರಿ ಆಡಳಿತ ಸೇವೆಯಲ್ಲಿದ್ದ ಈ ಇಬ್ಬರೂ ಕೂಡ ಮೋದಿ ಸಂಪುಟದಲ್ಲಿ ಯಶಸ್ವಿ ಸಚಿವರೆನಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಭಾರೀ ಸಾಲ; ಬಡ್ಡಿ ಕಟ್ಟಲು ಹೊಸ ಸಾಲ; ಬಾಂಡ್ ಈಲ್ಡ್ ಕುಸಿತ; ಚಿನ್ನದ ಬೆಲೆ ಏರುತ್ತಾ?
ಎನ್ ಚಂದ್ರಶೇಖರನ್ ಭಾರತದ ಉದ್ಯಮ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಟಾಟಾ ಸನ್ಸ್ ಛೇರ್ಮನ್ ಸ್ಥಾನ ಪಡೆದದ್ದೂ ಅಲ್ಲದೆ, ಹಲವು ವರ್ಷ ಕಾಲ ಆ ಸ್ಥಾನದಲ್ಲಿ ಮುಂದುವರಿದಿದ್ದು, ಹಾಗು ಟಾಟಾದ ವಿಸ್ತೃತ ಉದ್ದಿಮೆ ಪ್ರಪಂಚಕ್ಕೆ ಹೊಸ ಮೆರಗು ಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ. ಟಾಟಾ ಮನೆತನಕ್ಕೆ ಸೇರದ ಹೊರಗಿನ ವ್ಯಕ್ತಿಯೊಬ್ಬರು ಟಾಟಾ ಸನ್ಸ್ ಛೇರ್ಮನ್ ಆಗಿದ್ದು ಅದೇ ಮೊದಲು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ