ಗುಜರಿ ಅಂತ ಜರೀಬೇಡಿ… ಗುಜರಿ ಮಾರಿ ಸರ್ಕಾರ ಗಳಿಸಿದ್ದೆಷ್ಟು ನೋಡಿ

Govt earnings from selling scraps: ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನ ಭರ್ಜರಿ ಯಶಸ್ವಿಯಾಗುತ್ತಿದೆ. ತ್ಯಾಜ್ಯಗಳ ವಿಲೇವಾರಿ ಜೊತೆಗೆ ಸರ್ಕಾರಕ್ಕೂ ಆದಾಯ ಸಿಗುತ್ತಿದೆ. ಸರ್ಕಾರಿ ಕಛೇರಿಗಳಲ್ಲಿ ಕೊಳೆಯುತ್ತಾ ಇದ್ದ ಹಲವು ಗುಜರಿ ವಸ್ತುಗಳನ್ನು ಸರ್ಕಾರ ಮಾರಿ, ಆದಾಯ ಕೂಡ ಸೃಷ್ಟಿಸಿಕೊಂಡಿದೆ.

ಗುಜರಿ ಅಂತ ಜರೀಬೇಡಿ... ಗುಜರಿ ಮಾರಿ ಸರ್ಕಾರ ಗಳಿಸಿದ್ದೆಷ್ಟು ನೋಡಿ
ಗುಜರಿ ವಸ್ತುಗಳ ಸಾಂದರ್ಭಿಕ ಚಿತ್ರ

Updated on: Nov 10, 2024 | 2:05 PM

ನವದೆಹಲಿ, ನವೆಂಬರ್ 10: ಸ್ವಚ್ಛತಾ ಅಭಿಯಾನದ ವೇಳೆ ಗುಜರಿಗಳನ್ನು ವಿಲೇವಾರಿ ಮಾಡಿ ಸರ್ಕಾರ ಸಾಕಷ್ಟು ಆದಾಯ ಗಳಿಸಿದೆ. ಸರ್ಕಾರವೇ ಬಿಡುಗಡೆ ಮಾಡಿರುವ ವರದಿ ಪ್ರಕಾರ ಈ ಒಂದು ತಿಂಗಳಲ್ಲೇ ಗುಜರಿ ಮಾರಿ 650 ಕೋಟಿ ರೂಗೂ ಹೆಚ್ಚು ಆದಾಯ ಸಿಕ್ಕಿದೆ. 2021ರಿಂದ ನಡೆಯುತ್ತಿರುವ ವಿಶೇಷ ಸ್ವಚ್ಛತಾ ಅಭಿಯಾನಗಳಲ್ಲಿ ಗುಜರಿಗಳನ್ನು ಮಾರಿ ಸರ್ಕಾರಕ್ಕೆ 2,364 ಕೋಟಿ ರೂ ಆದಾಯ ಸಿಕ್ಕಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಈ ಗುರಿ ವಿಲೇವಾರಿಯಿಂದಾಗಿ ಸರ್ಕಾರಿ ಕಚೇರಿಗಳೂ ಸ್ವಚ್ಛಗೊಂಡಿವೆ, ಸರ್ಕಾರಕ್ಕೂ ಆದಾಯ ಸಿಕ್ಕಂತಾಗಿದೆ.

ಅಕ್ಟೋಬರ್ 1ರಿಂದ 31ರವರೆಗೂ ಸರ್ಕಾರ ನಾಲ್ಕನೇ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಂಡಿತು. ಈ ಸಂದರ್ಭದಲ್ಲಿ ಗುಜರಿಗಳನ್ನು ಮಾರಿ ಸರ್ಕಾರಕ್ಕೆ ಸಿಕ್ಕ ಆದಾಯ 650 ಕೋಟಿ ರೂಗೂ ಅಧಿಕ ಎನ್ನಲಾಗಿದೆ. ಸಿಬ್ಬಂದಿ ಸಚಿವಾಲಯ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ಪ್ರಕಾರ, 5.97 ಲಕ್ಷ ಸ್ಥಳಗಳಲ್ಲಿ (ಸರ್ಕಾರಿ ಕಚೇರಿ) ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿತ್ತು. ಸಾಕಷ್ಟು ಕಾಲದಿಂದ ಅನಗತ್ಯವಾಗಿ ಬಿದ್ದಿದ್ದ ಗುಜರಿಗಳನ್ನು ಮಾರಲಾಗಿದೆ. ಇದರಿಂದ ಸರ್ಕಾರಿ ಕಚೇರಿಗಳಲ್ಲಿನ 190 ಚದರಡಿಯ ಜಾಗ ಕ್ಲಿಯರ್ ಆದಂತಾಗಿದೆಯಂತೆ.

ಇದನ್ನೂ ಓದಿ: ಒಳ್ಳೆಯ ಲಾಭದಲ್ಲಿದ್ದರೂ ಲೇ ಆಫ್ ಮಾಡ್ತಾರೆ… ಇದು ಅಪ್ಪಟ ದುರಾಸೆ… ಫ್ರೆಷ್​ವರ್ಕ್ಸ್​ಗೆ ತಿವಿದ ಜೋಹೋ ಸಿಇಒ ಶ್ರೀಧರ್ ವೆಂಬು

ವರ್ಷದಿಂದ ವರ್ಷಕ್ಕೆ ಸ್ವಚ್ಛತಾ ಅಭಿಯಾನದ ತೀವ್ರತೆ ಮತ್ತು ವ್ಯಾಪಕತೆ ಹೆಚ್ಚುತ್ತಿದೆ. 2023ರಲ್ಲಿ 2.59 ಲಕ್ಷ ಸ್ಥಳಗಳಲ್ಲಿ ಅಭಿಯಾನ ನಡೆದಿತ್ತು. 2024ರಲ್ಲಿ 5.97 ಲಕ್ಷ ಸೈಟ್​​ಗಳನ್ನು ಕವರ್ ಮಾಡಲಾಗಿದೆ. ಸ್ಪೆಷನ್ ಕೆಂಪೈನ್ 4.0 ಅನ್ನು ಗಮನಿಸಲೆಂದೇ ನಿರ್ದಿಷ್ಟ ಪೋರ್ಟಲ್ ಅನ್ನು ರೂಪಿಸಲಾಗಿದೆ. ದಿನ ನಿತ್ಯದ ಸ್ವಚ್ಛತಾ ಕಾರ್ಯಗಳ ವಿವರಗಳನ್ನು ಈ ಪೋರ್ಟಲ್​ನಲ್ಲಿ ಹಾಕಲಾಗುತ್ತದೆ.

ಸ್ವಚ್ಛತಾ ಅಭಿಯಾನ 4.0 ಯಶಸ್ಸಿನ ಬಗ್ಗೆ ಎಕ್ಸ್​ನಲ್ಲಿ ಸಚಿವ ಜಿತೇಂದ್ರ ಸಿಂಗ್ ಹಾಕಿದ ಪೋಸ್ಟ್​ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಂಘಿಕ ಪ್ರಯತ್ನಗಳಿಂದ ಉತ್ತಮ ಫಲ ದೊರಕುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತವೇನಾದರೂ ರಷ್ಯಾದಿಂದ ತೈಲ ಖರೀಸದೇ ಹೋಗಿದ್ದರೆ ಜಾಗತಿಕವಾಗಿ ಬೆಲ ದುಬಾರಿಯಾಗುತ್ತಿತ್ತು: ಸಚಿವ ಹರ್ದೀಪ್ ಸಿಂಗ್ ಪುರಿ

ತ್ಯಾಜ್ಯ ವಸ್ತುಗಳನ್ನು ಬಳಸಿ ಶಿಲ್ಪಗಳನ್ನು ರಚನೆ ಇತ್ಯಾದಿ ವಿವಿಧ ಕಾರ್ಯಗಳನ್ನು ಈ ಸ್ವಚ್ಛತಾ ಅಭಿಯಾನದಲ್ಲಿ ಕೈಗೊಳ್ಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us