ಹೋಟೆಲ್ ತಿಂಡಿ ದುಬಾರಿ: ಖಾದ್ಯತೈಲ, ಸಿಲಿಂಡರ್ ಬೆಲೆ ಏರಿಕೆಯ ಹೊರೆ ಗ್ರಾಹಕರಿಗೆ ವರ್ಗಾಯಿಸಲು ಚಿಂತನೆ

ಅಗತ್ಯವಸ್ತುಗಳ ಬೆಲೆ ಏರಿಕೆ ಸರಿದೂಗಿಸಲು ಊಟ-ತಿಂಡಿ ದರ ಹೆಚ್ಚಳಕ್ಕೆ ಹೋಟೆಲ್​ಗಳ ಮಾಲೀಕರು ಗಂಭೀರ ಚಿಂತನೆ ನಡೆಸಿದ್ದಾರೆ.

ಹೋಟೆಲ್ ತಿಂಡಿ ದುಬಾರಿ: ಖಾದ್ಯತೈಲ, ಸಿಲಿಂಡರ್ ಬೆಲೆ ಏರಿಕೆಯ ಹೊರೆ ಗ್ರಾಹಕರಿಗೆ ವರ್ಗಾಯಿಸಲು ಚಿಂತನೆ
ಅಡುಗೆ ಎಣ್ಣೆ ಮತ್ತು ಜಿಲೇಬಿ ತಯಾರಿಕೆ (ಪ್ರಾತಿನಿಧಿಕ ಚಿತ್ರ)
Edited By:

Updated on: Apr 01, 2022 | 2:24 PM

ಬೆಂಗಳೂರು: ನಗರ ಸೇರಿದಂತೆ ರಾಜ್ಯದಾದ್ಯಂತ ತಿನಿಸಿನ ಬೆಲೆ ಹೆಚ್ಚಿಸಲು ಹೋಟೆಲ್ ಮತ್ತು ಉಪಹಾರ ಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ. ನಾಳೆಯಿಂದಲೇ (ಏಪ್ರಿಲ್ 2) ಗ್ರಾಹಕರ ಜೇಬಿಗೆ ಹೋಟೆಲ್ ಉಪಹಾರ ಮತ್ತಷ್ಟು ಹೊರೆಯಾಗಬಹುದು. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಅಡುಗೆಗೆ ಬಳಕೆಯಾಗುವ ಖಾದ್ಯತೈಲ, ವಾಣಿಜ್ಯ ಬಳಕೆಯ ನೈಸರ್ಗಿಕ ಅನಿಲ ಸಿಲಂಡರ್​ನ ಬೆಲೆ ಹೆಚ್ಚಾಗಿದೆ. ಇದರ ಜೊತೆಗೆ ಪೆಟ್ರೋಲ್-ಡೀಸೆಲ್ ಧಾರಣೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಬೆಲೆ ಏರಿಕೆ ಸರಿದೂಗಿಸಲು ಊಟ-ತಿಂಡಿ ದರ ಹೆಚ್ಚಳಕ್ಕೆ ಹೋಟೆಲ್​ಗಳ ಮಾಲೀಕರು ಗಂಭೀರ ಚಿಂತನೆ ನಡೆಸಿದ್ದಾರೆ.

ಕೊವಿಡ್​ನಿಂದ ಕಂಗಾಲಾಗಿದ್ದ ಹೋಟೆಲ್ ಉದ್ಯಮವು ಇತ್ತೀಚೆಗೆ ತುಸು ಚೇತರಿಕೆ ಕಾಣುತ್ತಿತ್ತು. ಆದರೆ ಯುದ್ಧದಿಂದಾಗಿ ಏಕಾಏಕಿ ಅಗತ್ಯವಸ್ತುಗಳ ಬೆಲೆ ಏರಿಕೆಯ ಬಿಸಿ ಕಾಡುತ್ತಿದೆ. ಬೆಲೆ ಏರಿಕೆಯ ಹೊರೆಯನ್ನು ಈವರೆಗೆ ಹೊಟೆಲ್ ಮಾಲೀಕರು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಈಗ ವಿಧಿಯಿಲ್ಲದೆ ಬೆಲೆ ಏರಿಕೆ ಮಾಡಲೇಬೇಕಾಗಿದೆ ಎಂಬ ನಿರ್ಧಾರಕ್ಕೆ ಬಹುತೇಕ ಮಾಲೀಕರು ಬಂದಿದ್ದಾರೆ ಊಟ, ತಿಂಡಿ, ಕಾಫೀ, ಟೀ, ಜಾಟ್ಸ್ ಸೇರಿದಂತೆ ಎಲ್ಲ ಬಗೆಯ ತಿನಿಸು ಮತ್ತು ಪಾನೀಯಗಳ ದರ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ.

ಹೋಟೆಲ್ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಏಪ್ರಿಲ್ 4ರಂದು ರಾಜ್ಯ ಹೋಟೆಲ್ ಮಾಲೀಕರ ಸಂಘ ಸಭೆ ಕರೆದಿದೆ. ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಶೇ 10ರಷ್ಟು ಹೆಚ್ಚಿಸಲು ಹೋಟೆಲ್ ಉದ್ಯಮಿಗಳು ಚಿಂತನೆ ನಡೆಸಿದ್ದಾರೆ. ಈವರೆಗೆ ಅಗತ್ಯ ಸಾಮಾಗ್ರಿಗಳ ದರ ಇಳಿಕೆಯಾಗಬಹುದು ಎಂದು ಹೋಟೆಲ್ ಉದ್ಯಮಿಗಳು ಕಾಯುತ್ತಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಅಡುಗೆ ಎಣ್ಣೆ, ಸಿಲಿಂಡರ್ ಇಳಿಕೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಅಂದರೆ ಯುಗಾದಿ ನಂತರ ನೀರಿನ ಬಿಲ್, ವಿದ್ಯುತ್ ಬಿಲ್, ಹಾಲಿನ ಬಿಲ್ ಎಲ್ಲವೂ ಏರಿಕೆ ಆಗಲಿದೆ. ಯುಗಾದಿ ಬಳಿಕ ಇವೆಲ್ಲದರ ದರ ಏರಿಕೆ ಸಾಧ್ಯತೆಯಿದೆ. ಹೀಗಾಗಿ ಹೋಟೆಲ್​ಗಳು ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ‘ಗ್ರಾಹಕರಿಗೆ ಆರ್ಥಿಕ ಹೊರೆಯಾದರೂ ಬೆಲೆ ಏರಿಕೆ ಅನಿವಾರ್ಯ’ ಎಂದು ಅಭಿಪ್ರಾಯಪಡುತ್ತಾರೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ‌ದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.

‘ಒನ್ ಟೈಮ್ ಲೈಸೆನ್ಸ್ ಸೇರಿದಂತೆ ಹೊಟೆಲ್ ಉದ್ಯಮಿಗಳ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ದಾದ ಜೋಶಿ ಅವರಿಗೆ ಮನವಿ ಸಲ್ಲಿಸಿದೆವು. ಹೋಟೆಲ್ ಉದ್ಯಮದ ವಿವಿಧ ಸಮಸ್ಯೆಗಳ ಬಗ್ಗೆಯೂ ಅವರಿಗೆ ವಿವರಿಸಿದೆ. ಸಮಸ್ಯೆಗಳನ್ನು ಪರಿಹರಿಸುವ ಕುರಿತು ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು’ ಎಂದು ಪಿ.ಸಿ.ರಾವ್ ಹೇಳಿದರು.

ಯುಗಾದಿ ಮುನ್ನಾ ದಿನ ಎಲ್​ಪಿಜಿ ದರ ಏರಿಕೆ: ಹೊಟೆಲ್​ಗಳಲ್ಲಿ ದರ ಹೆಚ್ಚಳದ ಬಿಸಿ

ಆರ್ಥಿಕ ವರ್ಷದ ಮೊದಲ ದಿನವೂ ಆಗಿರುವ ಏಪ್ರಿಲ್ 1ರಂದು ಕೇಂದ್ರ ಸರ್ಕಾರ ಎಲ್​ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಿದೆ. ವಾಣಿಜ್ಯ ಎಲ್​ಪಿಸಿ ಸಿಲಿಂಡರ್‌ ಬೆಲೆ ₹2,253ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿ ಉಪಹಾರ, ಊಟ ದುಬಾರಿಯಾಗುವ ಸಾಧ್ಯತೆ ಇದೆ. ಏಪ್ರಿಲ್ 2ನೇ ವಾರದಲ್ಲಿ ಮತ್ತೆ ದರ ಏರಿಕೆ ಮಾಡುವ ಚಿಂತನೆಯೂ ಕೇಂದ್ರ ಸರ್ಕಾರಕ್ಕೆ ಇದೆ ಎನ್ನಲಾಗಿದೆ. ದಿನಬಳಕೆ ವಸ್ತುಗಳ ದರದ ಮೇಲೆ ಪ್ರಭಾವ ಬೀರುವ ಅಡುಗೆ ಅನಿಲ, ಎಣ್ಣೆ, ಪೆಟ್ರೋಲ್, ಡೀಸೆಲ್, ನೀರಿನ ಬಿಲ್, ವಿದ್ಯುತ್ ಬಿಲ್, ಹಾಲಿನ ದರ ಏರಿಕೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿಯೂ ಟೀ, ಕಾಫಿ, ಉಪಹಾರ, ಊಟದ ಬೆಲೆ ಹೆಚ್ಚಿಸಲು ಹೊಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ ಎಂದು ಟಿವಿ9ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ‌ ಅಧ್ಯಕ್ಷ ಪಿ.ಸಿ.ರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ನಿರಂತರ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮ ಕಂಗಾಲಾಗಿದೆ. ಕಳೆದ 3 ತಿಂಗಳ ಅವಧಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹ 350ರಷ್ಟು ಹೆಚ್ಚಾಗಿದೆ. ಇಂದು ಒಂದೇ ದಿನ ₹ 250 ಏರಿಕೆಯಾಗಿದೆ. ಹೀಗಾಗಿ ಉದ್ಯಮ ನಿರ್ವಹಣೆ ಕಷ್ಟವಾಗುತ್ತಿದೆ. ಎಲ್ಲ ರೀತಿಯ ಊಟ, ತಿಂಡಿ ದರಗಳ ಪರಿಷ್ಕರಣೆ ಅನಿವಾರ್ಯವಾಗುತ್ತಿದೆ. ಸರಾಸರಿ ₹ 5ರಷ್ಟು ಬೆಲೆ ಹೆಚ್ಚಿಸಲು ಚಿಂತನೆ ನಡೆಸುತ್ತಿದ್ದೇವೆ. ಸೋಮವಾರ ಸಂಜೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ದರ ಏರಿಕೆ ಆದರೆ ಎಷ್ಟಾಗಬಹುದು?
ಬೆಂಗಳೂರಿನಲ್ಲಿ ತಿನಿಸುಗಳ ಸರಾಸರಿ ದರ ಹೀಗೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಒಂದು ಪ್ಲೇಟ್ ಪೂರಿ ₹ 40ರಿಂದ 45, ಒಂದು ಉದ್ದಿನ ವಡೆ ₹ 20ರಿಂದ 25, ಒಂದು ಪ್ಲೇಟ್ ಇಡ್ಲಿ ₹ 40ರಿಂದ 45, ರೈಸ್​ಬಾತ್ ₹ 35ರಿಂದ 40, ಚೌಚೌ ಬಾತ್ ₹ 40ರಿಂದ 45, ಕಾಫೀ ಮತ್ತು ಟೀ ದರ ₹ 15ರಿಂದ 20, ಪ್ರತಿ ಚಾಟ್ಸ್ ಐಟಂಗಳ ಮೇಲೆಯೂ ₹ 5 ರಿಂದ 10ರಷ್ಟು ಏರಿಕೆ ಸಾಧ್ಯತೆಯಿದೆ. ಗೋಬಿ ಮಂಚೂರಿ, ಪಾನಿಪೂರಿ, ಸಮೋಸ ಬೆಲೆ ₹ 5 ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Edible Oil Price: ಅಡುಗೆಮನೆಗೆ ತಟ್ಟಿದ ಉಕ್ರೇನ್ ಸಂಘರ್ಷದ ಬಿಸಿ: ಖಾದ್ಯತೈಲದ ಬೆಲೆ ಶೇ 60ರಷ್ಟು ಏರಿಕೆ

ಇದನ್ನೂ ಓದಿ: ಉಕ್ರೇನ್​ ಯುದ್ಧದ ಪರಿಣಾಮ: ಕರ್ನಾಟಕದ ಹೊಟೆಲ್​ಗಳಲ್ಲಿ ವಡೆ, ಪಕೋಡಾ, ಪೂರಿ ಬೆಲೆ ಹೆಚ್ಚಳ

Published On - 8:25 am, Fri, 1 April 22

Web contact

TV9 Kannada

Read More
Follow Us