AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB secrets: ಆರ್​​ಸಿಬಿಗೆ ಈ ಪರಿ ಹುಚ್ಚು ಅಭಿಮಾನಿಗಳು ಸಿಕ್ಕಿದ್ದು ಹೇಗೆ? ಇತರ ಫ್ರಾಂಚೈಸಿಗಳಿಗಿಂತ ಇದು ಹೇಗೆ ಭಿನ್ನ?

Secrets of RCB's great fan following: ಆರ್​​ಸಿಬಿ ಐಪಿಎಲ್ ಗೆದ್ದಾಗ ಇಡೀ ರಾತ್ರಿ ಬೆಂಗಳೂರು ಸಂಭ್ರಮಿಸಿದ್ದು, ಮಾರನೆ ದಿನ ಸಂಭ್ರಮಾಚರಣೆಯಲ್ಲಿ ನೂಕುನುಗ್ಗಲು ದುರಂತವಾಗಿದ್ದು ಆ ತಂಡಕ್ಕೆ ಅದೆಂಥ ಪ್ರಬಲ ಅಭಿಮಾನಿ ಸಮುದಾಯ ಇದೆ ಎಂದು ಯಾರಿಗಾದರೂ ಅರ್ಥವಾಗಬಹುದು. ಇಷ್ಟು ಹುಚ್ಚು ಅಭಿಮಾನಿಗಳನ್ನು ಆರ್​​ಸಿಬಿ ಹೇಗೆ ಸಂಪಾದಿಸಿತು ಎನ್ನುವುದೇ ಬಹಳ ಕುತೂಹಲ ಎನಿಸುವ ವಿಷಯ.

RCB secrets: ಆರ್​​ಸಿಬಿಗೆ ಈ ಪರಿ ಹುಚ್ಚು ಅಭಿಮಾನಿಗಳು ಸಿಕ್ಕಿದ್ದು ಹೇಗೆ? ಇತರ ಫ್ರಾಂಚೈಸಿಗಳಿಗಿಂತ ಇದು ಹೇಗೆ ಭಿನ್ನ?
ಆರ್​​ಸಿಬಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 05, 2025 | 12:51 PM

Share

ಬೆಂಗಳೂರು, ಜೂನ್ 5: ನಿನ್ನೆ ಆರ್​​ಸಿಬಿ (RCB) ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭೀಕರ ನೂಕುನುಗ್ಗಲುಗಳಾಗಿ 10-11 ಮಂದಿ ಬಲಿಯಾದ ದುರಂತ ಘಟನೆ ಸಂಭವಿಸಿತು. ಆರ್​​ಸಿಬಿ ಅಭಿಮಾನಿಗಳ ಸಂಭ್ರಮಾಚರಣೆಯು ಶೋಕಾಚರಣೆಯಾಯಿತು. ಐಪಿಎಲ್ ಗೆಲುವಿನ ಗುಂಗಿನಲ್ಲಿದ್ದ ತಂಡದ ಆಟಗಾರರಿಗೆ ಒಂದು ರೀತಿಯಲ್ಲಿ ಇದು ಆ್ಯಂಟಿ-ಕ್ಲೈಮ್ಯಾಕ್ಸ್ ಎನಿಸಿತ್ತು. ಜೂನ್ 3ರಂದು ರಾತ್ರಿ ಐಪಿಎಲ್ ಫೈನಲ್ ಮುಗಿದಾಗಲೇ ಇಡೀ ಬೆಂಗಳೂರು ದೀಪಾವಳಿ ಹಬ್ಬದ ರೀತಿಯಲ್ಲಿ ಕಂಗೊಳಿಸಿತ್ತು. ಮಾರನೆ ದಿನವೇ ಸಂಭ್ರಮಾಚರಣೆ ಆಯೋಜಿಸಿ ಯಡವಟ್ಟು ಮಾಡಲಾಯಿತು. ಗರಿಷ್ಠ 40-50 ಸಾವಿರ ಜನರನ್ನು ಹಿಡಿದಿಡಬಲ್ಲ ಸ್ಟೇಡಿಯಂನೊಳಗೆ ಆವೇಶಭರಿತರಾದ ಲಕ್ಷಕ್ಕೂ ಹೆಚ್ಚು ಜನರು ಸೇರಿದರೆ ನೂಕುನುಗ್ಗಲುಗಳಾಗದೇ ಮತ್ತಿನ್ನೇನು?

ಆರ್​​ಸಿಬಿಗೆ ಇಷ್ಟೊಂದು ಬಲಿಷ್ಠ, ನಿಷ್ಠ ಅಭಿಮಾನಿಗಳು ಸಿಕ್ಕಿದ್ದು ಹೇಗೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭದ ಐಪಿಎಲ್​​ನ ಎಂಟು ತಂಡಗಳಲ್ಲಿ ಒಂದು. ಲಲಿತ್ ಮೋದಿ ಮಾಸ್ಟರ್ ಮೈಂಡ್​​ನಲ್ಲಿ ರೂಪುಗೊಂಡ ಐಪಿಎಲ್ ಎನ್ನುವುದೇ ಬಹಳ ದೊಡ್ಡ ಸಕ್ಸಸ್ ಎನಿಸಿತು. ಫ್ರಾಂಚೈಸಿ ಮಾಡಲ್​​ನಲ್ಲಿ ಟೂರ್ನಿ ನಡೆಸುವ ನಿರ್ಧಾರ ವರ್ಕೌಟ್ ಆಗಿತ್ತು. ಎಲ್ಲಾ ತಂಡಗಳಿಗೂ ಸಮಾನವಾದ ಅವಕಾಶ ನೀಡಲಾಯಿತು. ಸಮಾನವಾಗಿ ಪರಿಮಿತಿಗಳನ್ನೂ ಹಾಕಲಾಯಿತು. ಇಷ್ಟರ ಮಧ್ಯೆ ಸಿಎಸ್​​ಕೆ, ಆರ್​ಸಿಬಿಯಂತಹ ತಂಡಗಳ ಜನಪ್ರಿಯತೆ ಮತ್ತು ಅಭಿಮಾನಿಗಳ ಬಳಗ ಬಹಳ ಏರಿಕೆ ಆಯಿತು.

ವಿಜಯ್ ಮಲ್ಯ ಎನ್ನುವ ಮೋಡಿ ಮನುಷ್ಯ ಹಾಕಿದ ಅಡಿಪಾಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸೀಸನ್​​ನಿಂದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡತೊಡಗಿತು. ಆರ್​​ಸಿಬಿ ಎಂದರೇ ಒಂದು ವಿಶಿಷ್ಠ ಬ್ರ್ಯಾಂಡ್ ಆಗಿ ಹೋಗಿತ್ತು. ಅದಕ್ಕೆ ಹೆಚ್ಚಿನ ಕಾರಣ ವಿಜಯ್ ಮಲ್ಯ. ಇವರು ಆಗ ಬಹಳ ದೊಡ್ಡ ಉದ್ಯಮಿ. ಮದ್ಯದ ದೊರೆ ಎನಿಸಿದವರು. ಕಿಂಗ್​ಫಿಶರ್ ಏರ್​ಲೈನ್ಸ್ ನಡೆಸುತ್ತಿದ್ದವರು. ವೈಯಕ್ತಿಕವಾಗಿ ಬಹಳ ಶೋಕಿಯ ಮನುಷ್ಯ. ಈತನ ಸುತ್ತಲೂ ಸುಂದರಿಯರು, ಸ್ಟಾರ್​​ಗಳೇ ಇರುತ್ತಿದ್ದರು. ಐಪಿಎಲ್ ಪಂದ್ಯ ಮುಗಿದ ಮೇಲೆ ಇವರು ಆಯೋಜಿಸುತ್ತಿದ್ದ ನೈಟ್ ಪಾರ್ಟಿಗಳಲ್ಲಿ ಸ್ಟಾರ್ ನಟ ನಟಿಯರು, ಮಾಡಲ್​ಗಳು ಮತ್ತು ಕ್ರಿಕೆಟಿಗರು ಸಮ್ಮಿಳನವೇ ಆಗುತ್ತಿತ್ತು. ಇಂಥದ್ದೊಂದು ಇಮೇಜ್ ಆರ್​​ಸಿಬಿ ತಂಡದ ವರ್ಚಸ್ಸು ಬೆಳೆಸಲು ಸಹಾಯಕವಾಯಿತು.

ಇದನ್ನೂ ಓದಿ: ಗಗನಕ್ಕೇರಿತಾ ಆರ್​​ಸಿಬಿ ಬ್ರ್ಯಾಂಡ್ ಮೌಲ್ಯ? ಜಾಗತಿಕ ಬ್ರ್ಯಾಂಡ್​ಗಳಿಗೆ ಹೋಲಿಸಿದರೆ ಹೇಗಿದೆ ರಾಯಲ್ ಚಾಲೆಂಜರ್ಸ್?

ಬಿಡುಬೀಸು ಬ್ಯಾಟುಗಾರರ ಬಳಗವಾಗಿತ್ತು ಆರ್​​ಸಿಬಿ

ನೀವು ಆರ್​​ಸಿಬಿಯ 18 ವರ್ಷದ ಇತಿಹಾಸ ತೆಗೆದುಕೊಂಡರೆ ಐಪಿಎಲ್​​ನ ಲೆಜೆಂಡ್ರಿ ಬ್ಯಾಟುಗಾರರು ಅದರ ಭಾಗವಾಗಿದ್ದಾರೆ. ಐಪಿಎಲ್​​ನ ಮೊದಲ ಸೀಸನ್​​ನಿಂದಲೂ ವಿರಾಟ್ ಕೊಹ್ಲಿ ಇದ್ದಾರೆ. ಆರಂಭದಲ್ಲಿ ವಿರಾಟ್ ಎಂದರೆ ಆ್ಯಂಗ್ರಿ ಯಂಗ್ ಮ್ಯಾನ್ ಎನ್ನುವ ಇಮೇಜ್ ಎದ್ದು ಕಾಣುತ್ತಿತ್ತು. ಕ್ರಿಸ್ ಗೇಲ್, ಎಬಿ ಡೀವಿಲಿಯರ್ಸ್, ಗ್ಲೆನ್ ಮ್ಯಾಕ್ಸ್​​ವೆಲ್ ಅವರಂಥ ಕ್ರಿಕೆಟಿಗರು ಈ ತಂಡದಲ್ಲಿ ಹಲವು ವರ್ಷ ಆಡಿ ಹೋಗಿದ್ದಾರೆ. ಈ ಮೂವರೂ ಕೂಡ ಕ್ರಿಕೆಟ್ ದಂತಕಥೆಗಳೇ. ಅಬ್ಬರದ ಬ್ಯಾಟಿಂಗ್ ಮಾಡುವವರು. ಗೇಲ್ ಉತ್ತುಂಗದ ಫಾರ್ಮ್​​ನಲ್ಲಿದ್ದಾಗ ಅವರಿಗೆ ಬೌಲರ್​​ಗಳು ಚೆಂಡೆಸೆಯಲು ಹೆದರುತ್ತಿದ್ದುಂಟು.

ಇನ್ನು, ಸೌತ್ ಆಫ್ರಿಕನ್ ಕ್ರಿಕೆಟಿಗ ಎಬಿ ಡೀವಿಲಿಯರ್ಸ್ ಮಿಸ್ಟರ್ 360 ಡಿಗ್ರಿ ಎಂದು ಹೆಸರಾದವರು. ಇವರು ಸಿಕ್ಸರ್ ಹೊಡೆದರೆ ಬೌಲರ್ ಕೂಡ ಚಪ್ಪಾಳೆ ತಟ್ಟುತ್ತಿದ್ದುದು ಉಂಟು. ಅಂಥ ಅದ್ಭುತ ಇಮೇಜ್ ಇರುವ ಆಟಗಾರ. ಎಬಿಡಿ ರೀತಿಯವರೇ ಗ್ಲೆನ್ ಮ್ಯಾಕ್ಸ್​​ವೆಲ್. ಇಂಥ ಅಮೋಘ ಬ್ಯಾಟರ್​​ಗಳಿದ್ದ ಆರ್​​ಸಿಬಿ ತಂಡಕ್ಕೆ ಅಭಿಮಾನಿಗಳ ಬಳಗ ಹೆಚ್ಚದೇ ಇರಲು ಕಾರಣಗಳೇ ಇಲ್ಲ.

ಹೊರ ರಾಜ್ಯಗಳಲ್ಲೂ ಆರ್​​ಸಿಬಿಗೆ ಅಭಿಮಾನಿಗಳು ಹುಟ್ಟಲು ಏನು ಕಾರಣ?

ಇದಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ. ಆರ್​​ಸಿಬಿಗೆ ಬಂದ ಹೊಸದರಲ್ಲಿ ವಿರಾಟ್ ಅವರು ಭಾರತದ ಭರವಸೆಯ ಕ್ರಿಕೆಟಿಗರೆನಿಸಿದ್ದರು. ಆನ್​​ಫೀಲ್ಡ್​​ನಲ್ಲಿ ತಮ್ಮ ಆಕ್ರಮಣಕಾರಿ ವೈಖರಿಯಿಂದ ಯುವಜನರನ್ನು ಸೂಜಿಗಲ್ಲಿನಂತೆ ಸೆಳೆದವರು. ಹೀಗಾಗಿ, ರಾಷ್ಟ್ರಾದ್ಯಂತ ಬಹಳ ಕ್ರಿಕೆಟ್ ಅಭಿಮಾನಿಗಳು ಆರ್​​ಸಿಬಿ ಪರ ಒಂದು ರೀತಿಯಲ್ಲಿ ಆಸಕ್ತಿ, ಕುತೂಹಲ, ಒಲವು ಬೆಳೆಸಿಕೊಂಡಿದ್ದುಂಟು.

ಇದನ್ನೂ ಓದಿ: ಆರ್​​ಸಿಬಿ ಗೆಲುವಿನಿಂದ ಹಿಗ್ಗಿದ್ದು ಅಭಿಮಾನಿಗಳು ಮಾತ್ರವಲ್ಲ, ಈ ವಿದೇಶೀ ಕಂಪನಿಯ ಷೇರುಸಂಪತ್ತೂ ಏರಿಕೆ

ಈ ಮೊದಲು ತಿಳಿಸಿದಂತೆ, ಕ್ರಿಸ್ ಗೇಲ್, ಎಬಿಡಿ, ಮ್ಯಾಕ್ಸ್​​ವೆಲ್​​ನಂತಹ ಅದ್ಭುತ ಬ್ಯಾಟರುಗಳ ಉಪಸ್ಥಿತಿಯೂ ರಾಷ್ಟ್ರವ್ಯಾಪಿ ಆರ್​ಸಿಬಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುವಂತೆ ಮಾಡಿದೆ.

ಸ್ಥಳೀಯ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ ಈ ಸಲ ಕಪ್ ನಮ್ದೇ

ಆರ್​​ಸಿಬಿ ತಂಡದಲ್ಲಿ ಆರಂಭದ ಸೀಸನ್​​ಗಳಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವಿನಯ್ ಕುಮಾರ್ ಇದ್ದದ್ದು ಬಿಟ್ಟರೆ ಹೆಚ್ಚಿನ ಸೀಸನ್​​ಗಳಲ್ಲಿ ಕನ್ನಡದ ಐಡೆಂಟಿಟಿ ಇರುವ ಸ್ಥಳೀಯ ಆಟಗಾರರ ಉಪಸ್ಥಿತಿ ತೀರಾ ಕಡಿಮೆ. ಆದರೂ ಕೂಡ ಕರ್ನಾಟಕಾದ್ಯಂತ ಹುಚ್ಚು ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ.

ಇದಕ್ಕೆ ಕಾರಣ, ಕೆಲ ಮಾರ್ಕೆಟಿಂಗ್ ತಂತ್ರಗಳು. ಮಿಸ್ಟರ್ ನಾಗ್ಸ್ (ಡೇನಿಯಲ್ ಸೇಠ್) ಮೂಲಕ ಕನ್ನಡಿಗರಿಗೆ ಖುಷಿಪಡಿಸುವ ಮೀಮ್ಸ್​​ಗಳನ್ನು ಆರ್​​ಸಿಬಿ ನಿರಂತರವಾಗಿ ಹೊರತರುತ್ತಿತ್ತು. ‘ಈ ಸಲ ಕಪ್ ನಮ್ದೇ’ ಎನ್ನುವ ಸ್ಲೋಗನ್ ಆರ್​​ಸಿಬಿಗೆ ಪವರ್ ಕೊಟ್ಟಿತು.

ಪ್ರತೀ ಸೀಸನ್​​ನಲ್ಲೂ ಅದ್ಭುತ ಕ್ರಿಕೆಟಿಗರಿದ್ದರೂ ಆರ್​​​ಸಿಬಿಗೆ ಕಪ್ ಗೆಲ್ಲಲು ಆಗುತ್ತಿರಲಿಲ್ಲ. ಅಭಿಮಾನಿಗಳಿಗೆ ನಿರಾಸೆಯಾದರೂ ತಂಡದ ಮೇಲೆ ಭರವಸೆ ಮಾತ್ರ ಹೋಗದೇ ಇರಲು ಸಾಧ್ಯವಾಗಿದ್ದು ಈ ಲೆಜೆಂಡ್ರಿ ಕ್ರಿಕೆಟಿಗರ ಉಪಸ್ಥಿತಿ. ಈ ಸಲ ಅಲ್ಲವಾದರೂ ಮುಂದಿನ ಸಲ ತಂಡ ಗೆಲ್ಲುತ್ತೆ ಎನ್ನುವ ಭರವಸೆ ಮುಂದುವರಿದೇ ಇತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?
ಇಂದು ಈ ರಾಶಿಯವರಿಗೆ ಜವಾಬ್ದಾರಿ ಹೆಚ್ಚಾಗಲಿದೆ!
ಇಂದು ಈ ರಾಶಿಯವರಿಗೆ ಜವಾಬ್ದಾರಿ ಹೆಚ್ಚಾಗಲಿದೆ!
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ