ನವದೆಹಲಿ, ಫೆಬ್ರುವರಿ 26: ಭಾರತದ ರಕ್ಷಣಾ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಸ್ವಾವಂಬನೆಯತ್ತ ಕ್ಷಿಪ್ರವಾಗಿ ನಡೆಯುತ್ತಿದೆ. ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಕ್ಷಿಪಣಿಗಳು ಇತ್ಯಾದಿ ರಕ್ಷಣಾ ವಸ್ತುಗಳನ್ನು ದೇಶೀಯವಾಗಿ ತಯಾರಿಸುವುದರತ್ತ ಹೆಚ್ಚು ಗಮನ ಹರಿಸಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತಕ್ಕೆ ಅಗತ್ಯವಾಗಿರುವ ಮದ್ದುಗುಂಡುಗಳನ್ನು ಬಹುತೇಕ ಭಾರತದಲ್ಲೇ ತಯಾರಿಸಲಾಗುತ್ತಿದೆ ಎಂದಿದ್ಧಾರೆ. ಅವರ ಪ್ರಕಾರ ಮದ್ದುಗುಂಡು ತಯಾರಿಕೆಯಲ್ಲಿ ಭಾರತ ಶೇ. 88ರಷ್ಟು ಸ್ವಾವಲಂಬನೆ ಸಾಧಿಸಿದೆ. ಅಂದರೆ, ಭಾರತಕ್ಕೆ ಅಗತ್ಯವಾಗಿರುವ ಶೇ. 88ರಷ್ಟು ಮದ್ದುಗುಂಡುಗಳನ್ನು ದೇಶೀಯವಾಗಿ ತಯಾರಿಸಲಾಗುತ್ತಿದೆ.
ಐಐಟಿ ಮಂಡಿಯ 16ನೇ ಸಂಸ್ಥಾಪನಾ ದಿನಾಚರಣೆಯ ವೇಳೆ ಮಾತನಾಡುತ್ತಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ರಕ್ಷಣಾ ಕ್ಷೇತ್ರದಿಂದ ರಫ್ತು ಹೆಚ್ಚಾಗುತ್ತಿರುವ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. 2023-24ರಲ್ಲಿ ರಕ್ಷಣಾ ವಸ್ತುಗಳ ರಫ್ತು ಪ್ರಮಾಣ 23,000 ಕೋಟಿ ರೂ ಆಗಿದೆ. 2029ರೊಳಗೆ ರಫ್ತು 50,000 ಕೋಟಿ ರೂಗೆ ಏರಿಸುವ ಗುರಿ ಇದೆ ಎಂದಿದ್ದಾರೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಇನ್ವೆಸ್ಟರ್ಸ್ ಸಭೆ; ಹೂಡಿಕೆಗಳ ಮಹಾಪೂರ; ದಶಕಗಳಿಂದ ಅವಗಣನೆಯಲ್ಲಿದ್ದ ಈಶಾನ್ಯ ಪ್ರದೇಶಕ್ಕೆ ಈಗ ಹೆಚ್ಚಿದ ಬೇಡಿಕೆ
ಎಐ ಸಮರತಂತ್ರ, ಸೈಬರ್ ಸೆಕ್ಯೂರಿಟಿ, ದೇಶೀಯ ಎಐ ಚಿಪ್ ತಯಾರಿಕೆ, ಕ್ವಾಂಟಮ್ ತಂತ್ರಜ್ಞಾನ ಇತ್ಯಾದಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹೆಚ್ಚಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಐಐಟಿ ಮಂಡಿ ಇತ್ಯಾದಿ ಶಿಕ್ಷಣ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕೆಂದು ಸಚಿವರು ಕರೆ ನೀಡಿದ್ದಾರೆ.
ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಐಐಟಿಗೆ ರಾಜನಾಥ್ ಸಿಂಗ್ ಹೊಸ ವ್ಯಾಖ್ಯಾನ ನೀಡಿದ್ದಾರೆ. ಐಐಟಿ ಎಂದರೆ ಇನಿಷಿಯೇಟ್, ಇಂಪ್ರೂವ್ ಮತ್ತು ಟ್ರಾನ್ಸ್ ಫಾರ್ಮ್ ಎಂದು ಕರೆದಿದ್ದಾರೆ. ಅಂದರೆ, ಆರಂಭ, ಸುಧಾರಣೆ ಮತ್ತು ಪರಿವರ್ತನೆ. ಈ ಐಐಟಿಯನ್ನು ಅಳವಡಿಸಿ 2047ರೊಳಗೆ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡಲು ವಿದ್ಯಾರ್ಥಿಗಳು ತಂತ್ರಜ್ಞಾನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಬೇಕೆಂದೂ ಕೇಂದ್ರ ರಕ್ಷಣಾ ಸಚಿವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಅಮೆರಿಕಕ್ಕೆ ಹೋಗಲು ಇಬಿ-5 ವೀಸಾ ಬದಲು ಹೊಸ ಗೋಲ್ಡ್ ಕಾರ್ಡ್: ಬೆಲೆ 5 ಮಿಲಿಯನ್ ಡಾಲರ್
‘ಐಐಟಿ ಮಂಡಿಯ ಸಂಶೋಧಕರು ರೋಬೋಟಿಕ್ಸ್, ಡ್ರೋನ್ ಟೆಕ್ನಾಲಜಿ, ಎಆರ್ ವಿಆರ್ ಟೆಕ್ನಾಲಜಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲೂ ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರಗಳಲ್ಲೂ ಇವರು ಇಷ್ಟೇ ಉತ್ಸಾಹದಿಂದ ಕೊಡುಗೆ ನೀಡುತ್ತಾರೆ’ ಎಂದು ರಾಜನಾಥ್ ಸಿಂಗ್ ಪ್ರಶಂಸಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ