ಪಾಕಿಸ್ತಾನಕ್ಕೆ ಸಾಲ ಕೊಡಬೇಡಿ: ಐಎಂಎಫ್ಗೆ ಭಾರತ ಮನವಿ; ಈ ಸಾಲ ತಪ್ಪಿದರೆ ಪಾಕಿಸ್ತಾನಕ್ಕೆ ಏನು ಸಮಸ್ಯೆ?
Pakistan's debt support from IMF: ಪಾಕಿಸ್ತಾನಕ್ಕೆ ಸಾಲ ನೀಡುವ ನಿರ್ಧಾರ ಪರಾಮರ್ಶಿಸಿ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಗೆ ಭಾರತ ಮನವಿ ಮಾಡಿದೆ. ಕಳೆದ ವರ್ಷ ಐಎಂಎಫ್ ಪಾಕಿಸ್ತಾನಕ್ಕೆ 7 ಬಿಲಿಯನ್ ಡಾಲರ್, ಈ ವರ್ಷ 1.3 ಬಿಲಿಯನ್ ಡಾಲರ್ ಸಾಲದ ನೆರವು ಬಿಡುಗಡೆ ಮಾಡಿತ್ತು. ಪಾಕಿಸ್ತಾನ ಈ ಹಣವನ್ನು ದುರುಪಯೋಗಿಸಿಕೊಳ್ಳಬಹುದು ಎನ್ನುವುದು ಭಾರತದ ಆಕ್ಷೇಪ. ಈ ಹಿನ್ನೆಲೆಯಲ್ಲಿ ಸಾಲ ನೀಡಬಾರದೆಂದು ಪಾಕಿಸ್ತಾನ ಮನವಿ ಮಾಡಿರುವುದು.

ನವದೆಹಲಿ, ಮೇ 2: ಪಹಲ್ಗಾಂನಲ್ಲಿ ಉಗ್ರ ದಾಳಿಗೆ ಕುಮ್ಮಕ್ಕು ನೀಡಿದೆ ಎನ್ನಲಾಗುತ್ತಿರುವ ಪಾಕಿಸ್ತಾನದ (Pakistan) ಮೇಲೆ ಭಾರತ ಕೈಲಾದಷ್ಟು ಒತ್ತಡ ಹಾಕಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದ ಹಿಂಪಡೆದಿರುವುದು, ಏರ್ ಸ್ಪೇಸ್ ಮುಚ್ಚಿರುವುದು, ವ್ಯಾಪಾರ ವಹಿವಾಟು ಸಂಪೂರ್ಣ ನಿಲ್ಲಿಸಿರುವುದು ಹೀಗೆ ವಿವಿಧ ಕ್ರಮಗಳನ್ನು ಭಾರತ ಕೈಗೊಂಡಿದೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲೂ ಪಾಕಿಸ್ತಾನದ ವಿರುದ್ಧ ಭಾರತ ಧ್ವನಿ ಎತ್ತುತ್ತಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಸಾಲ (international loans) ಸಿಗದಂತೆ ನೋಡಿಕೊಳ್ಳಲು ಭಾರತ ಯತ್ನಿಸುತ್ತಿದೆ. ಪಾಕಿಸ್ತಾನಕ್ಕೆ ಸಾಲ ನೀಡಬೇಡಿ ಎಂದು ಐಎಂಎಫ್ಗೆ ಭಾರತ ಮನವಿ ಮಾಡಿದೆ.
ಪಾಕಿಸ್ತಾನಕ್ಕೆ ಹಣಕಾಸು ನೆರವು ದೊರೆತರೆ ಅದರ ಕುಕೃತ್ಯಗಳಿಗೆ ಇನ್ನಷ್ಟು ಪ್ರಚೋದನೆ ಸಿಕ್ಕಂತಾಗುತ್ತದೆ. ಹೀಗಾಗಿ, ಆ ದೇಶಕ್ಕೆ ಸಾಲ ನೀಡುವ ನಿರ್ಧಾರವನ್ನು ಹಿಂಪಡೆಯಲು ಯೋಚಿಸಿ ಎಂದು ಐಎಂಎಫ್ಗೆ ಕರೆ ನೀಡಿದೆ.
ಐಎಂಎಫ್ನ ಅತಿಹೆಚ್ಚು ಸಾಲಗಾರರ ಪಟ್ಟಿಯಲ್ಲಿ ಪಾಕಿಸ್ತಾನ…
ಪಾಕಿಸ್ತಾನ ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿದೆ. ತನ್ನ ಶಕ್ತಿಗೆ ಮೀರಿದ ಸಾಲ ಮಾಡಿ ದುಃಸ್ಥಿತಿಗೆ ಸಿಲುಕಿದೆ. ತನ್ನ ಹಣಕಾಸು ಕಷ್ಟಕ್ಕೆ ಪರಿಹಾರವಾಗಿ ಐಎಂಎಫ್ ಸಾಲದ ನೆರವಿನ ಮೇಲೆ ಅದು ಅವಲಂಬಿತವಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ವಿಳಿಂಜಂ ಬಂದರು ಅನಾವರಣ; ಇದು ಭಾರತದ ಮೊದಲ ಟ್ರಾನ್ಸ್ಶಿಪ್ಮೆಂಟ್ ಹಬ್
ಕಳೆದ ವರ್ಷ ಪಾಕಿಸ್ತಾನ ಐಎಂಎಫ್ನಿಂದ 7 ಬಿಲಿಯನ್ ಡಾಲರ್ ಸಾಲ ಪಡೆದಿತ್ತು. ಈ ವರ್ಷ ಮಾರ್ಚ್ ತಿಂಗಳಲ್ಲಿ 1.3 ಬಿಲಿಯನ್ ಡಾಲರ್ ಸಾಲ ಪಡೆಯಿತು. ಹವಾಮಾನ ಸಮಸ್ಯೆಗಳ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಈ ಸಾಲ ಸಿಕ್ಕಿತ್ತು. ಇದನ್ನು ಪಾಕಿಸ್ತಾನ ಹಣಕಾಸು ಸಂಕಷ್ಟ ಕಡಿಮೆ ಮಾಡಿಕೊಳ್ಳಲು ಬಳಸಿಕೊಂಡಿದ್ದಾಗಿ ಹೇಳಿದೆ.
ಪಾಕಿಸ್ತಾನವು ಈ ಐಎಂಎಫ್ ಸಾಲಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬುದು ಭಾರತದ ಆತಂಕ. ಹೀಗಾಗಿ, ಸಾಲ ನಿರ್ಧಾರವನ್ನು ಪರಾಮರ್ಶಿಸಬೇಕೆಂದು ಐಎಂಎಫ್ಗೆ ಭಾರತ ಮನವಿ ಮಾಡಿರುವುದು. ಪಾಕಿಸ್ತಾನಕ್ಕೆ ಐಎಂಎಫ್ ಸಾಲ ತಪ್ಪಿದರೆ ಹಣಕಾಸು ಸಂಕಷ್ಟ ಪರಿಸ್ಥಿತಿ ತೀವ್ರಗೊಳ್ಳುತ್ತದೆ. ಭಯೋತ್ಪಾದನೆ, ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಕೆ ಮಾಡಲು ಹಣದ ಕೊರತೆ ಎದುರಾಗುತ್ತದೆ. ಇದು ಭಾರತದ ಉದ್ದೇಶವಾಗಿದೆ.
ಇದನ್ನೂ ಓದಿ: ಗುಟ್ಟಾಗಿ ಉಳಿದಿಲ್ಲ; ಉಗ್ರರೊಂದಿಗಿನ ಪಾಕಿಸ್ತಾನದ ನಂಟು ಒಪ್ಪಿಕೊಂಡ ಬಿಲಾವಲ್ ಭುಟ್ಟೋ
ಉಗ್ರರಿಗೆ ಪಾಕಿಸ್ತಾನದ ಬೆಂಬಲ…
ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 25 ಮಂದಿ ಬಲಿಯಾಗಿದ್ದಾರೆ. ಈ ದಾಳಿ ಹಿಂದೆ ಉಗ್ರರಿಗೆ ಪಾಕಿಸ್ತಾನದ ಕುಮ್ಮಕ್ಕು ಇದೆ ಎಂಬುದು ಭಾರತದ ವಾದ. ಪಾಕಿಸ್ತಾನ ಈ ಆರೋಪವನ್ನು ತಳ್ಳಿಹಾಕಿದೆಯಾದರೂ, ವಿವಿಧ ಪಾಕಿಸ್ತಾನೀ ಮುಖಂಡರು, ಭಯೋತ್ಪಾದಕರಿಗೆ ಪಾಕಿಸ್ತಾನ ಬೆಂಬಲ ನೀಡಿರುವ ಇತಿಹಾಸ ಇರುವುದು ಹೌದು ಎಂದು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








