ಭಾರತದಲ್ಲಿ ಮೊದಲ ಬುಲೆಟ್ ಟ್ರೈನ್ ಸಂಚಾರ 2026ರಲ್ಲಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

Bullet Train from Surat to Bilimora In 2026: ಭಾರತದಲ್ಲಿ ಬುಲೆಟ್ ರೈಲು ಓಡುವುದನ್ನು ನೋಡಲು ಕಾಯುತ್ತಿರುವವರಿಗೆ ಖುಷಿ ಸುದ್ದಿ. 2026ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬುಲೆಟ್ ರೈಲು ಸಂಚರಿಸಲಿದೆ. ಸೂರತ್​ನಿಂದ ಬಿಲಿಮೋರಾವರೆಗಿನ ಹೈಸ್ಪೀಡ್ ರೈಲು ಟ್ರ್ಯಾಕ್​ನಲ್ಲಿ ಈ ಟ್ರೈನ್ ಓಡಾಟ ನಡೆಸಲಿದೆ. ಮುಂಬೈನಿಂದ ಅಹ್ಮದಾಬಾದ್​ವರೆಗಿನ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ 2028ಕ್ಕೆ ಪೂರ್ಣಗೊಳ್ಳಲಿದೆ. ಅದಾದ ಬಳಿಕ ಇನ್ನೂ ಏಳು ಬುಲೆಟ್ ರೈಲು ಯೋಜನೆಗಳತ್ತ ಗಮನ ಕೊಡಲಾಗುತ್ತದೆ. ನ್ಯೂಸ್18 ರೈಸಿಂಗ್ ಇಂಡಿಯಾ ಸಮಿಟ್​ನಲ್ಲಿ ಸಚಿವ ಅಶ್ವಿನಿ ವೈಷ್ಣವ್ ಈ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಮೊದಲ ಬುಲೆಟ್ ಟ್ರೈನ್ ಸಂಚಾರ 2026ರಲ್ಲಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಬುಲೆಟ್ ರೈಲು

Updated on: Mar 19, 2024 | 2:23 PM

ನವದೆಹಲಿ, ಮಾರ್ಚ್ 19: ಭಾರತದಲ್ಲಿ ಬುಲೆಟ್ ಟ್ರೈನ್ ಓಡುವುದನ್ನು ನೋಡಲು ಇನ್ನೆರಡು ವರ್ಷ ಕಾಯಬೇಕಾಗಬಹುದು. 2026ಕ್ಕೆ ಭಾರತದ ಮೊದಲ ಬುಲೆಟ್ ಟ್ರೈನ್ ಸಂಚರಿಸಲಿದೆ ಎನ್ನುವ ಮಾಹಿತಿಯನ್ನು ಕೇಂದ್ರ ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ನೀಡಿದ್ದಾರೆ. ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಚಿವರು, ಗುಜರಾತ್​ನ ಸೂರತ್​ನಿಂದ ಬಿಲಿಮೋರಾವರೆಗೆ (Surat to Bilimora) ಈ ಬುಲೆಟ್ ಟ್ರೈನ್ ಓಡಾಡುವ ಸಾಧ್ಯತೆ ಇದೆ. ಮುಂಬೈ ಅಹ್ಮದಾಬಾದ್ ಹೈಸ್ಪೀಡ್ ರೈಲ್ ಪ್ರಾಜೆಕ್ಟ್​ನ (Mumbai-Ahmedabad High Speed Rail Project) ಭಾಗವಾಗಿ ಅದೇ ಟ್ರ್ಯಾಕ್​ನಲ್ಲಿ ಸೂರತ್-ಬಿಲಿಮೊರಾ ಟ್ರ್ಯಾಕ್ ಮೊದಲು ಸಿದ್ಧಗೊಳ್ಳುತ್ತಿದೆ. 2026ಕ್ಕೆ ಇದು ಮುಗಿದು, ಈ ಟ್ರ್ಯಾಕ್​ನಲ್ಲಿ ಬುಲೆಟ್ ಟ್ರೈನ್ ಓಡುತ್ತದೆ. ಮುಂಬೈನಿಂದ ಅಹ್ಮದಾಬಾದ್​ವರೆಗೆ 508 ಕಿಮೀ ಉದ್ದದ ಪೂರ್ಣ ಟ್ರ್ಯಾಕ್ 2028ಕ್ಕೆ ಸಿದ್ಧಗೊಳ್ಳಬಹುದು. ಇದು ಹೌದಾದರೆ, ಮೂಲ ಗುರಿಗಿಂತ ಆರು ವರ್ಷ ಮೊದಲೇ ಪ್ರಾಜೆಕ್ಟ್ ಪೂರ್ಣಗೊಂಡಂತಾಗುತ್ತದೆ.

ಹೈಸ್ಪೀಡ್ ರೈಲು ಯೋಜನೆಯಲ್ಲಿ ಏಳು ಕಾರಿಡಾರ್​ಗಳನ್ನು ಕೇಂದ್ರ ಸರ್ಕಾರ ಆಯ್ದುಕೊಂಡಿದೆ. ಅದರಲ್ಲಿ ಬೆಂಗಳೂರಿನಿಂದ ಚೆನ್ನೈವರೆಗಿನ ಬುಲೆಟ್ ಟ್ರ್ಯಾಕ್ ಕೂಡ ಒಂದು. ಮುಂಬೈ ಅಹ್ಮದಾಬಾದ್ ಎಚ್​ಎಸ್​ಆರ್ ಪ್ರಾಜೆಕ್ಟ್ ಒಂದು ರೀತಿಯ ಪೂರ್ವಬಾವಿ ತಯಾರಿಯಂತಿದೆ. ಈ ಯೋಜನೆ ಎಷ್ಟು ಬೇಗ ಪೂರ್ಣಗೊಳ್ಳುತ್ತದೆ, ಅದರ ಆಧಾರದ ಮೇಲೆ ಮೇಲಿ ಏಳು ಯೋಜನೆಗಳಿಗೆ ಗುರಿ ನಿಗದಿ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಜಪಾನ್​ನಲ್ಲಿ 17 ವರ್ಷ ಬಳಿಕ ಮೊದಲ ಬಾರಿಗೆ ಬಡ್ಡಿದರ ಹೆಚ್ಚಳ; ನೂರಕ್ಕೆ ಕೇವಲ 10 ಪೈಸೆ ಬಡ್ಡಿ

ಚೆನ್ನೈ ಟು ಮೈಸೂರು ಹೈಸ್ಪೀಡ್ ರೈಲು ಯೋಜನೆಗೆ ಮೂಲ ಡೆಡ್​ಲೈನ್ 2051 ಎಂದು ಇದೆಯಾದರೂ ಇನ್ನಷ್ಟು ಬೇಗ ಪೂರ್ಣಗೊಳ್ಳಲು ಹೊಸ ಗಡುವು ನಿಗದಿ ಮಾಡಬಹುದು.

ಹೈಸ್ಪೀಡ್ ರೈಲು ಕಾರಿಡಾರ್​ಗಳಿವು…

  1. ಮುಂಬೈನಿಂದ ಅಹ್ಮದಾಬಾದ್​ವರೆಗೆ – 508 ಕಿಮೀ
  2. ಮುಂಬೈನಿಂದ ಹೈದರಾಬಾದ್​ವರೆಗೆ – 671 ಕಿಮೀ
  3. ಮುಂಬೈನಿಂದ ನಾಗಪುರ್​ವರೆಗೆ: 765 ಕಿಮೀ
  4. ದೆಹಲಿಯಿಂದ ವಾರಾಣಸಿ – 813 ಕಿಮೀ
  5. ದೆಹಲಿಯಿಂದ ಅಹ್ಮದಾಬಾದ್ – 878 ಕಿಮೀ
  6. ದೆಹಲಿಯಿಂದ ಚಂಡೀಗಡ್ ಮತ್ತು ಅಮೃತಸರ್ – 459 ಕಿಮೀ
  7. ವಾರಾಣಸಿಯಿಂದ ಹೌರಾ – 760 ಕಿಮೀ
  8. ಚೆನ್ನೈನಿಂದ ಮೈಸೂರುವರೆಗೆ ವಯಾ ಬೆಂಗಳೂರು – 435 ಕಿಮೀ

ರೈಲ್ವೆ ಯೋಜನೆ ಇಷ್ಟು ಚುರುಕುಗೊಳ್ಳಲು ಏನು ಕಾರಣ?

ಭಾರತೀಯ ರೈಲ್ವೆ ಇತ್ತೀಚಿನ ದಿನಗಳಲ್ಲಿ ಮೈಕೊಡವಿಕೊಂಡು ನಿಂತಂತೆ ತೋರುತ್ತಿದೆ. ಹಲವು ಯೋಜನೆಗಳು ನಿಗದಿತ ಗುರಿಗಿಂತ ಬೇಗ ಪೂರ್ಣಗೊಳ್ಳುತ್ತಿವೆ. ಇದಕ್ಕೆ ಮೂರು ಕಾರಣಗಳನ್ನು ಸಚಿವ ವೈಷ್ಣವ್ ಪಟ್ಟಿ ಮಾಡಿದ್ದಾರೆ. ಒಂದು, ರೈಲ್ವೆಗೆ ಫಂಡಿಂಗ್ ಹೆಚ್ಚಿರುವುದು. ಎರಡನೆಯದು, ರೈಲ್ವೆ ತಂತ್ರಜ್ಞಾನದ ಭವಿಷ್ಯದ ಪಾಲನೆಗೆ ವ್ಯವಸ್ಥಿತವಾದ ಯೋಜನೆ ಹಾಕಿರುವುದು. ಮೂರನೆಯ ಕಾರಣವೆಂದರೆ ರೈಲ್ವೆಯನ್ನು ರಾಜಕೀಯದಿಂದ ವಿಮುಕ್ತಿಗೊಳಿಸಿರುವುದು.

ನ್ಯೂಸ್18ನ ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಸಚಿವ ವೈಷ್ಣವ್, ಹಿಂದಿನ ಸರ್ಕಾರಗಳು ರೈಲ್ವೆಯನ್ನು ರಾಜಕೀಯ ಸಾಧನವಾಗಿ ಬಳಸುತ್ತಿದ್ದರು ಎಂದು ಕುಟುಕಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us