ಇನ್ಫೋಸಿಸ್ ಹುಬ್ಬಳ್ಳಿ ಕ್ಯಾಂಪಸ್​ನಲ್ಲಿ ಕೆಲಸ ಮಾಡಲು ಇಚ್ಛಿಸುವ ಉದ್ಯೋಗಿಗಳಿಗೆ ಆಕರ್ಷಕ ಪ್ಯಾಕೇಜ್

|

Updated on: Jun 17, 2024 | 7:04 PM

Infosys Hubballi campus transfer policy: ಹುಬ್ಬಳ್ಳಿಯಲ್ಲಿರುವ ತನ್ನ ಕ್ಯಾಂಪಸ್​ಗೆ ಉದ್ಯೋಗಿಗಳನ್ನು ಆಕರ್ಷಿಸಲು ಇನ್ಫೋಸಿಸ್ ಒಳ್ಳೆಯ ಯೋಜನೆ ಹಾಕಿದೆ. ಹುಬ್ಬಳ್ಳಿಯ ಅದರ ಡೆವಲಪ್ಮೆಂಟ್ ಆಫೀಸ್​ಗೆ ವರ್ಗಾವಣೆ ಆಗಲು ಬಯಸುವ ಯಾವುದೇ ಉದ್ಯೋಗಿಗೆ ಉತ್ತೇಜಕ ಪ್ಯಾಕೇಜ್ ನೀಡುವ ನೀತಿಯನ್ನು ಪ್ರಕಟಿಸಿದೆ. ಎಂಟ್ರಿ ಲೆವಲ್​ನಿಂದ ಹಿಡಿದು ಹಿರಿಯ ಉದ್ಯೋಗಿಗಳವರೆಗೆ ಬೇರೆ ಬೇರೆ ಪ್ಯಾಕೇಜ್​ಗಳನ್ನು ಅದು ನೀಡುತ್ತಿದೆ.

ಇನ್ಫೋಸಿಸ್ ಹುಬ್ಬಳ್ಳಿ ಕ್ಯಾಂಪಸ್​ನಲ್ಲಿ ಕೆಲಸ ಮಾಡಲು ಇಚ್ಛಿಸುವ ಉದ್ಯೋಗಿಗಳಿಗೆ ಆಕರ್ಷಕ ಪ್ಯಾಕೇಜ್
ಹುಬ್ಬಳ್ಳಿ ಇನ್ಫೋಸಿಸ್
Follow us on

ಬೆಂಗಳೂರು, ಜೂನ್ 17: ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಯಾರಾದರೂ ಕೂಡ ಅದರ ಹುಬ್ಬಳ್ಳಿ ಕ್ಯಾಂಪಸ್​ಗೆ ವರ್ಗಾವಣೆ ಮಾಡಿಕೊಳ್ಳಲು ಇಚ್ಛಿಸಿದಲ್ಲಿ ಅವರಿಗೆ ಆಕರ್ಷಕ ಪ್ಯಾಕೇಜ್ ಸಿಗಲಿದೆ. ಈ ವರ್ಗಾವಣೆ ನೀತಿಯನ್ನು ಇನ್ಫೋಸಿಸ್ ಸಂಸ್ಥೆ (Infosys employees transfer policy) ಇಂದು ಸೋಮವಾರ ಪ್ರಕಟಿಸಿದೆ. ಇನ್ಫೋಸಿಸ್​ನ ಹುಬ್ಬಳ್ಳಿ ಕ್ಯಾಂಪಸ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಉತ್ತರ ಕರ್ನಾಟಕ ಮೂಲದ ಸಾಫ್ಟ್​ವೇರ್ ಎಂಜಿನಿಯರುಗಳಿಗೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡುವುದು ಬಹಳ ಅನುಕೂಲಕರವಾಗುತ್ತದೆ. ಇದು ಹುಬ್ಬಳ್ಳಿ ನಗರದ ಬೆಳವಣಿಗೆಗೂ ಕಾರಣ ಆಗುವ ನಿರೀಕ್ಷೆ ಇದೆ. ಆದರೆ, ಇನ್ಫೋಸಿಸ್​ನ ಈ ಹುಬ್ಬಳ್ಳಿ ಕ್ಯಾಂಪಸ್​ನಲ್ಲಿ ಕೆಲಸ ಮಾಡಲು ಹೆಚ್ಚು ಮಂದಿ ಆಸಕ್ತಿ ತೋರುತ್ತಿಲ್ಲ. ಈ ಕಾರಣಕ್ಕೆ ಸಂಸ್ಥೆ ಆಕರ್ಷಕ ಪ್ಯಾಕೇಜ್ ಮೂಲಕ ಉತ್ತೇಜನ ನೀಡುತ್ತಿದೆ.

ಎಂಟ್ರಿ ಲೆವೆಲ್ ಎನ್ನಲಾಗುವ ಎರಡು ಮತ್ತು ಮೂರನೇ ಬ್ಯಾಂಡ್​ನಲ್ಲಿನ ಉದ್ಯೋಗಿಗಳು ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್​ಗೆ ವರ್ಗಾವಣೆ ಆದರೆ ತತ್​​ಕ್ಷಣಕ್ಕೆ 25,000 ರೂ ಪ್ರೋತ್ಸಾಹಕ ಧನ ನೀಡಲಾಗುತ್ತದೆ. ಪ್ರತೀ ಆರು ತಿಂಗಳಿಗೊಮ್ಮೆ 25,000 ರೂನಂತೆ ಎರಡು ವರ್ಷದಲ್ಲಿ 1.25 ಲಕ್ಷ ರೂ ಪ್ಯಾಕೇಜ್ ಕೊಡಲಾಗುತ್ತದೆ.

ಇದನ್ನೂ ಓದಿ: ಅಮೆರಿಕ-ಸೌದಿ ಮಧ್ಯೆ ಇನ್ಮುಂದೆ ಇರಲ್ಲ ಪೆಟ್ರೋಡಾಲರ್; ಚೀನಾ ಕಡೆ ವಾಲುತ್ತಿದೆಯಾ ಗ್ಲೋಬಲ್ ಪವರ್?

ಮೂರಕ್ಕಿಂತ ಹೆಚ್ಚಿನ ಮಟ್ಟದ ಬ್ಯಾಂಡ್​ನ ಉದ್ಯೋಗಿಗಳಿಗೆ ಪ್ರೋತ್ಸಾಹಕ ಧನ ಇನ್ನೂ ಹೆಚ್ಚಿರುತ್ತದೆ. ಬ್ಯಾಂಡ್ ಏಳರ ಉದ್ಯೋಗಿಗಳಿಗೆ ಇಲ್ಲಿ ವರ್ಗಾವಣೆ ಆದಾಗ ಒಂದೂವರೆ ಲಕ್ಷ ರೂ ಹಾಗೂ ಎರಡು ವರ್ಷದಲ್ಲಿ ಒಟ್ಟು ಎಂಟು ಲಕ್ಷ ರೂವರೆಗೆ ಧನ ಸಹಾಯ ಕೊಡುವುದಾಗಿ ಇನ್ಫೋಸಿಸ್ ಸಂಸ್ಥೆ ಹೇಳಿದೆ. ಇದು ಸಂಬಳವಲ್ಲದೇ ಹೆಚ್ಚುವರಿಯಾಗಿ ನೀಡುವ ಪ್ರೋತ್ಸಾಹಕ ಧನವಾಗಿದೆ.

ವಾಣಿಜ್ಯ ಮತ್ತ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಇನ್ಫೋಸಿಸ್​ನ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಪ್ರಾದೇಶೀಕ ಆರ್ಥಿಕತೆಗಳ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿರುವ ಅವರು ಇನ್ಫೋಸಿಸ್​ನ ಬದ್ಧತೆಯನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಚೀನೀ ಟೆಕ್ಕಿಗಳಿಗೆ ಮಣೆಹಾಕಲು ಭಾರತ ಸಜ್ಜು; ಚೀನೀಯರ ಆಗಮನದಿಂದ ಏನು ಪರಿಣಾಮ? ಇಲ್ಲಿದೆ ಡೀಟೇಲ್ಸ್

ಬಿಜೆಪಿ ನಾಯಕರಿಂದ ಈಚೆಗೆ ಟೀಕೆ

ಕುತೂಹಲ ಎಂದರೆ ಇತ್ತೀಚೆಗಷ್ಟೇ ಬಿಜೆಪಿ ನಾಯಕರು ಇನ್ಫೋಸಿಸ್​ನ ಹುಬ್ಬಳ್ಳಿ ಕ್ಯಾಂಪಸ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು. ಹುಬ್ಬಳ್ಳಿಯಲ್ಲಿ ಕ್ಯಾಂಪಸ್ ನಿರ್ಮಿಸಲು 58 ಎಕರೆ ಜಾಗ ಪಡೆದು ಈಗ ಯಾವ ಉದ್ಯೋಗಿಗಳನ್ನೂ ಅಲ್ಲಿ ನೇಮಿಸಿಕೊಂಡಿಲ್ಲ. ಇನ್ಫೋಸಿಸ್ ತಾನು ಕೊಟ್ಟ ಮಾತನ್ನು ತಪ್ಪಿದೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಭಾಸ್ಕರ್ ರಾವ್ ಮೊದಲಾದವರು ಟೀಕಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:03 pm, Mon, 17 June 24