ಭಾರತದ ಮುಂದಿನ ಸ್ಟಾರ್ಟಪ್ ಕೇಂದ್ರ ಕರ್ನಾಟಕದ ಈ ಬಂದರುನಗರಿ: ಸುನೀಲ್ ಶೆಟ್ಟಿ, ಮೋಹನದಾಸ್ ಪೈ ಅನಿಸಿಕೆ
Mangalore is India's next startup hotspot says Mohandas Pai, Suniel Pai:ಮಂಗಳೂರು ಭಾರತದ ಮುಂದಿನ ಸ್ಟಾರ್ಟಪ್ ಹಬ್ ಆಗಲಿದೆ ಎಂದು ವೆಂಚರ್ ಕ್ಯಾಪಿಟಲಿಸ್ಟ್ ಮೋಹನದಾಸ್ ಪೈ ಹೇಳಿದ್ದಾರೆ. ಬಾಲಿವುಡ್ ನಟ ಹಾಗೂ ಉದ್ಯಮಿ ಸುನೀಲ್ ಶೆಟ್ಟಿ ಅವರೂ ಪೈ ಅವರ ಅನಿಸಿಕೆಯನ್ನು ಪುನರುಚ್ಚರಿಸಿದ್ದಾರೆ. ಸ್ಟಾರ್ಟಪ್ಗಳ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣ ಅಥವಾ ಇಕೋಸಿಸ್ಟಂ ಮಂಗಳೂರಿನಲ್ಲಿ ಇದೆ ಎಂಬುದು ಅವರ ಅಭಿಪ್ರಾಯ.

ಬೆಂಗಳೂರು, ಅಕ್ಟೋಬರ್ 7: ಕರ್ನಾಟಕದ ಬಂದರುನಗರಿ ಮಂಗಳೂರು ಭಾರತದ ಮುಂದಿನ ಸ್ಟಾರ್ಟಪ್ ಮತ್ತು ಇನ್ನೋವೇಶನ್ನ ಕೇಂದ್ರವಾಗಬಹುದು ಎಂದು ಉದ್ಯಮಿ ಮೋಹನದಾಸ್ (Mohandas Pai) ಪೈಕಿ ಮತ್ತು ನಟ ಸುನೀಲ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಸ್ಟಾರ್ಟಪ್ ಹಬ್ ಆಗಲು ಬೇಕಾದ ಎಲ್ಲಾ ಪೂರಕ ವಾತಾವರಣ ಮಂಗಳೂರು ನಗರಕ್ಕೆ ಇದೆ ಎಂಬುದು ಇವರ ಅನಿಸಿಕೆ. ಮಂಗಳೂರಿನಲ್ಲಿ ವಿವಿಧ ಪ್ರತಿಭೆಗಳ ಸಂಯೋಗ ಇದೆ; ಆಧುನಿಕ ಕಾರ್ಯಸ್ಥಳಗಳಿವೆ; ಗುಣಮಟ್ಟದ ಜೀವನ ಇದೆ; ವಿದೇಶಗಳಿಂದ ಮರಳಿ ಬರುವ ಆಂಟ್ರಪ್ರನ್ಯೂರ್ಗಳಿಗೆ ಬೆಂಬಲ ನೀಡುವ ಇಕೋಸಿಸ್ಟಂ ಇದೆ ಎಂದು ಮೋಹನ್ ದಾಸ್ ಪೈ ಮತ್ತು ಸುನೀಲ್ ಶೆಟ್ಟಿ ಒತ್ತಿ ಹೇಳಿದ್ದಾರೆ.
‘ಮಂಗಳೂರು ಭಾರತದ ಮುಂದಿನ ಇನ್ನೋವೇಶನ್ ಹಾಟ್ಸ್ಪಾಟ್ ಆಗಿದೆ. ಬಹಳ ಪ್ರತಿಭೆಗಳ, ಉತ್ತಮ ಜೀವನಮಟ್ಟದ, ಕೈಗೆಟುಕುವ ವಸತಿ ಇರುವ, ಶ್ರೇಷ್ಠ ಶಾಲೆಗಳಿರುವ, ಅದ್ಭುತ ವ್ಯಕ್ತಿತ್ವಗಳ ಜನರಿರುವ, ಒಳ್ಳೆಯ ಆಹಾರ ಸಿಗುವ ನಗರವಾಗಿದೆ ಮಂಗಳೂರು. ವಿಶೇಷ ವರ್ಕ್ ಸ್ಪೀಸ್, ಒಳ್ಳೆಯ ಬೀಚ್ಗಳು, ರಿಸಾರ್ಟ್ಗಳಿರುವ ಮಂಗಳೂರಿಗೆ ಬನ್ನಿ’ ಎಂದು ವೆಂಚರ್ ಕ್ಯಾಪಿಟಲಿಸ್ಟ್ ಆಗಿರುವ ಮೋಹನದಾಸ್ ಪೈ ಹೇಳಿದ್ದಾರೆ.
ಇದನ್ನೂ ಓದಿ: 20 ವರ್ಷದಲ್ಲಿ ಜೆಟ್ ಎಂಜಿನ್ ತಯಾರಿಸಲಾಗಲಿಲ್ಲ: ಚೀನಾ ಮತ್ತು ಭಾರತ ಹೋಲಿಸಿದ ಮೋಹನದಾಸ್ ಪೈ
ಇದಕ್ಕೂ ಮೊದಲು ಉದ್ಯಮಿ ಅಮೃತ್ ಶೇಣವ ಅವರು ಮಂಗಳೂರಿನ ಉದ್ಯಮಶೀಲತೆಯ ವಾತಾವರಣದ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ತನಗೆ ತಿಳಿದಿರುವ ಬಹಳಷ್ಟು ಮಂಗಳೂರಿಗರು ತಮ್ಮ ಊರಿಗೆ ಹೋಗಿ ಸ್ಟಾರ್ಟಪ್ ಆರಂಭಿಸಲು ಇಚ್ಛಿಸುತ್ತಿದ್ದಾರೆ ಎಂದು ಹೇಳಿದ ಅವರು, ಮಂಗಳೂರಿನಲ್ಲಿರುವ ಇಕೋಸಿಸ್ಟಂ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಆಂಟ್ರಪ್ರನ್ಯೂರ್ಗಳಿಗೆ ಮತ್ತು ಸ್ಟಾರ್ಟಪ್ಗಳಿಗೆ ಉತ್ತೇಜನ ನೀಡುವ ಮತ್ತು ಸಹಾಯವಾಗುವಂತಹ ಉದ್ಯಮ ಸಂಘಟನೆಗಳು, ವರ್ಕ್ ಸ್ಪೇಸ್ಗಳು ಮಂಗಳೂರಿನಲ್ಲಿ ಇರುವ ಸಂಗತಿಯನ್ನು ಅಮೃತ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಮೊದಲ ಲೈಫೈ ಇಂಟರ್ನೆಟ್ ಸಿಸ್ಟಂ ಅಳವಡಿಸಿದ ಕೀರ್ತಿ ಭಾರತೀಯ ಕಂಪನಿಯದ್ದು
ಅಮೃತ್ ಶೇಣವ ಅವರ ಈ ಪೋಸ್ಟ್ಗೆ ಮೋಹನದಾಸ್ ಪ್ರತಿಕ್ರಿಯಿಸುತ್ತಾ, ಮಂಗಳೂರು ಮುಂದಿನ ಸ್ಟಾರ್ಟಪ್ ಹಬ್ ಆಗಲಿದೆ ಎಂದಿದ್ದಾರೆ. ನಟ ಹಾಗೂ ಉದ್ಯಮಿ ಸುನೀಲ್ ಶೆಟ್ಟಿ ಅವರೂ ಕೂಡ ಪೈ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ.
‘ಮಂಗಳೂರು ಮುಂದಿನ ಹಾಟ್ಸ್ಟಾಪ್ ಮಾತ್ರವೇ ಅಲ್ಲ, ಟೆಕ್ಕಿಗಳು, ಯುವ ಉದ್ದಿಮೆದಾರರು ಮತ್ತು ಉತ್ತಮ ಜೀವನಕ್ಕೆ ಪ್ರಶಸ್ತ ಸ್ಥಳವಾಗಲಿದೆ. ಭಾರತದಲ್ಲಿ ಮಾತ್ರವಲ್ಲ, ಇಡೀ ಏಷ್ಯಾದಲ್ಲೇ ಮಂಗಳೂರು ಎದ್ದು ಕಾಣುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಗಾಢವಾದ ಆದ್ಮಾತ್ತಿಕತೆ ಹೊಂದಿರುವ ಸ್ಥಳ ಕೂಡ ಹೌದು’ ಎಂದು ಬಾಲಿವುಡ್ ಹೀರೋ ಸುನೀಲ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




