ಹಣ ಕಟ್ ಆಯ್ತು, ಗೊತ್ತಿಲ್ಲ ಎಲ್ಲೋಯ್ತು; ಗ್ರೋ ಪ್ಲಾಟ್​ಫಾರ್ಮ್ ವಿರುದ್ಧ ವಂಚನೆ ಆರೋಪದ ಸದ್ದು

Groww platform controversy over allegations by an investor: ಬ್ರೋಕರ್ ಪ್ಲಾಟ್​ಫಾರ್ಮ್ ಆದ ಗ್ರೋ ವಿರುದ್ಧ ವ್ಯಕ್ತಿಯೊಬ್ಬರು ವಂಚನೆಯ ಆರೋಪ ಮಾಡಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ ಫೋಲಿಯೋ ಅಕೌಂಟ್ ರಚನೆಯಾದರೂ ಆ ಹಣ ಮ್ಯೂಚುವಲ್ ಫಂಡ್​ಗೆ ತಲುಪುವುದೇ ಇಲ್ಲ. ಮೂರ್ನಾಲ್ಕು ವರ್ಷದ ಬಳಿಕ ಫಂಡ್ ರಿಡೀಮ್ ಮಾಡಲು ಹೋದಾಗ ಸಾಧ್ಯವಾಗುವುದಿಲ್ಲ. ಗ್ರೋ ಕಸ್ಟಮರ್ ಕೇರ್ ವಿಭಾಗವನ್ನು ಸಂಪರ್ಕಿಸಿದರೆ ಉದ್ಧಟತನದಿಂದ ವರ್ತಿಸುತ್ತಾರೆ ಎಂದು ಆ ವ್ಯಕ್ತಿ ಆರೋಪ ಮಾಡಿದ್ದಾರೆ.

ಹಣ ಕಟ್ ಆಯ್ತು, ಗೊತ್ತಿಲ್ಲ ಎಲ್ಲೋಯ್ತು; ಗ್ರೋ ಪ್ಲಾಟ್​ಫಾರ್ಮ್ ವಿರುದ್ಧ ವಂಚನೆ ಆರೋಪದ ಸದ್ದು
ಗ್ರೋ ಆ್ಯಪ್

Updated on: Jun 24, 2024 | 12:17 PM

ನವದೆಹಲಿ, ಜೂನ್ 24: ಜನಪ್ರಿಯ ಸ್ಟಾಕ್ ಮಾರ್ಕೆಟ್ ಬ್ರೋಕರ್ ಸಂಸ್ಥೆಯಾದ ಗ್ರೋ (Groww) ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವಂಚನೆ ಆರೋಪ ಕೇಳಿಬಂದಿದೆ. ಹಣ ಕಡಿತಗೊಳಿಸಿ ಅದು ಎಲ್ಲಿಯೂ ಹೂಡಿಕೆ ಮಾಡದೇ ವಂಚಿಸಲಾಗಿದೆ ಎಂದು ಗ್ರೋ ಪ್ಲಾಟ್​ಫಾರ್ಮ್​ನ ಬಳಕೆದಾರರೊಬ್ಬರು ಆರೋಪಿಸಿದ್ದಾರೆ. ಹನೇಂದ್ರ ಪ್ರತಾಪ್ ಸಿಂಗ್ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಗ್ರೋ ಸಂಸ್ಥೆ ಸ್ಪಂದಿಸಿ, ಇದು ತಾಂತ್ರಿಕ ದೋಷವೆಂದು ಸ್ಪಷ್ಟಪಡಿಸಿದ್ದು, ಆ ಹಣವನ್ನೂ ಗ್ರಾಹಕರಿಗೆ ಮರಳಿಸಿದೆ.

ಏನಿದು ಪ್ರಕರಣ?

ಹನೇಂದ್ರ ಪ್ರತಾಪ್ ಸಿಂಗ್ ಎಂಬುವವರು ತಮ್ಮ ಸೋದರಿಗೆ ಆದ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಗ್ರೋ ಪ್ಲಾಟ್​ಫಾರ್ಮ್​ನಲ್ಲಿ 2020ರಲ್ಲಿ ಪರಾಗ್ ಪಾರಿಖ್ ಮ್ಯೂಚುವಲ್ ಫಂಡ್​ನಲ್ಲಿ ಅವರ ಸೋದರಿ ಹೂಡಿಕೆ ಮಾಡಿದ್ದರಂತೆ. ಅದಕ್ಕಾಗಿ ಫೋಲಿಯೋ ಖಾತೆಯನ್ನೂ ರಚನೆಯಾಗಿತ್ತು. ಇತರ ಮ್ಯೂಚುವಲ್ ಫಂಡ್​ಗಳಂತೆ ಇದೂ ಕೂಡ ಪ್ರತೀ ದಿನ ಲಾಭ ನಷ್ಟದ ಏರಿಳಿಕೆಯನ್ನು ತೋರಿಸುತ್ತಿತ್ತು. ಇದೀಗ ಫಂಡ್ ಅನ್ನು ಮರಳಿಸಿ ಹಣ ಪಡೆಯಲು ಹೋದಾಗ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಕ್ವಾಂಟ್ ಮ್ಯೂಚುವಲ್ ಫಂಡ್ ಮೇಲೆ ಫ್ರಂಟ್ ರನಿಂಗ್ ಕಪ್ಪು ಚುಕ್ಕೆ; ಸೆಬಿಯಿಂದ ತನಿಖೆ; ಏನಿದು ಪ್ರಕರಣ?

ಪರಾಗ್ ಪಾರೀಖ್ ಫಂಡ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಆ ಫೋಲಿಯೋವೇ ಸೃಷ್ಟಿಯಾಗಿಲ್ಲ ಎಂಬ ಮಾಹಿತಿ ಗೊತ್ತಾಗುತ್ತದೆ. ತನ್ನ ಸೋದರಿ ಕಸ್ಟಮರ್ ಕೇರ್ ವಿಭಾಗವನ್ನು ಸಂಪರ್ಕಿಸಿದರೆ ಉದ್ದಟತನದಿಂದ ವರ್ತಿಸಿದ್ದಾರೆ. ತಾಂತ್ರಿಕ ದೋಷವನ್ನು ಸರಿಪಡಿಸುವುದಾಗಿ ಹೇಳಿ ಒಟಿಪಿಗಳನ್ನು ಪಡೆದು ಫೋಲಿಯೋ ಎಂಟ್ರಿಯನ್ನೇ ತೆಗೆದುಹಾಕಿದ್ದಾರೆ. ಆದರೆ, ಬ್ಯಾಂಕ್ ಅಕೌಂಟ್​ಗೆ ಹಣ ಮರಳಿಲ್ಲ. ತಾನು ಯಾವ ಹಂತಕ್ಕೆ ಹೋಗಿಯಾದರೂ ಪಾಠ ಕಲಿಸುವುದಾಗಿ ಹನೇಂದ್ರ ಪ್ರತಾಪ್ ಸಿಂಗ್ ತಮ್ಮ ಪೋಸ್ಟ್​ನಲ್ಲಿ ಹಾಕಿದ್ದಾರೆ.

ರೋಹನ್ ದಾಸ್ ಎಂಬುವವರು ಈ ಪೋಸ್ಟ್​ನ ಸ್ಕ್ರೀನ್​ಶಾಟ್ ತೆಗೆದು ತಮ್ಮ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಗ್ರೋ ಸಂಸ್ಥೆ, ಇದು ತಾಂತ್ರಿಕ ದೋಷ ಮಾತ್ರವೇ ಆಗಿದ್ದು, ಗ್ರಾಹಕರ ಖಾತೆಯಿಂದ ಹಣ ಕಡಿತಗೊಳಿಸಲಾಗಿರಲಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಏನಾಗುತ್ತೆ? ಈ ಪರಿಣಾಮಗಳನ್ನು ತಿಳಿದಿರಿ

ಖಾತೆಯಿಂದ ಹಣ ಕಡಿತಗೊಳಿಸಲಾಗಿಲ್ಲ ಎಂದಾದರೆ ಗ್ರಾಹಕರಿಗೆ ಹಣ ಯಾಕೆ ಮರಳಿಸಿದ್ದೀರಿ ಎಂದು ರೋಹನ್ ದಾಸ್ ಮತ್ತೊಂದು ಸ್ಕ್ರೀನ್​ಶಾಟ್​ವೊಂದನ್ನು ಲಗತ್ತಿಸಿ, ಕೇಳಿದ್ದಾರೆ. ಇದು ಗ್ರಾಹಕರಿಗೆ ಅವರ ಹಣದ ಬಗ್ಗೆ ಆತಂಕಗೊಳ್ಳಬಾರದು ಎಂಬ ಕಾರಣಕ್ಕೆ ವಿಶ್ವಾಸಪೂರ್ವಕವಾಗಿ ಹಣವನ್ನು ಕ್ರೆಡಿಟ್ ಮಾಡಿದ್ದೇವೆ. ಬ್ಯಾಂಕ್​ನಿಂದ ಹಣ ಕಡಿತಗೊಂಡಿದ್ದರೆ ಅದರ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಕೊಡಲು ಗ್ರಾಹಕರಿಗೆ ತಿಳಿಸಿದ್ದೇವೆ ಎಂದು ಗ್ರೋ ಸಂಸ್ಥೆ ಪ್ರತಿಕ್ರಿಯಿಸಿದೆ.

ಈ ಪೋಸ್ಟ್​ಗೆ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವರು ತಮಗೂ ಇಂಥ ಸಮಸ್ಯೆಗಳಾಗಿವೆ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us