ಪಿಎಂಎಸ್ 4.0 ಆ್ಯಪ್ ಬಿಡುಗಡೆ; ಕೇಂದ್ರದಿಂದ ನೇರವಾಗಿ ಅಕ್ಕಿ ಖರೀದಿಸಲು ರಾಜ್ಯಗಳಿಗೆ ಅವಕಾಶ

Pralhad Joshi launches PMS 4.0 app: ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಆಗಸ್ಟ್ 1ರಂದು ಪ್ರೈಸ್ ಮಾನಿಟರಿಂಗ್ ಸಿಸ್ಟಂನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ. ದೇಶಾದ್ಯಂತ 38 ಆಹಾರಧಾನ್ಯಗಳ ಬೆಲೆಗಳ ಅಪ್​ಡೇಟೆಡ್ ಮಾಹಿತಿ ಈ ಆ್ಯಪ್​ನಲ್ಲಿ ಸಿಗುತ್ತದೆ. ಹಾಗೆಯೇ, ಯಾವುದೇ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಬೇಕಿದ್ದರೆ ಕೇಂದ್ರದಿಂದ ನೇರವಾಗಿ ಖರೀದಿಸುವ ಅವಕಾಶವನ್ನು ನೀಡಲಾಗಿದೆ.

ಪಿಎಂಎಸ್ 4.0 ಆ್ಯಪ್ ಬಿಡುಗಡೆ; ಕೇಂದ್ರದಿಂದ ನೇರವಾಗಿ ಅಕ್ಕಿ ಖರೀದಿಸಲು ರಾಜ್ಯಗಳಿಗೆ ಅವಕಾಶ
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ

Updated on: Aug 01, 2024 | 6:29 PM

ನವದೆಹಲಿ, ಆಗಸ್ಟ್ 1: ವಿವಿಧ ಆಹಾರಧಾನ್ಯಗಳ ಬೆಲೆಗಳ ಮೇಲೆ ನಿಗಾ ಇಡಲು ಪ್ರೈಸ್ ಮಾನಿಟರಿಂಗ್ ಸಿಸ್ಟಂ ಅಥವಾ ಪಿಎಂಎಸ್​ನ 4ನೇ ಆವೃತ್ತಿಯ ಆ್ಯಪ್ ಅನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಇಂದು ಗುರುವಾರ ಅನಾವರಣಗೊಳಿಸಿದ್ದಾರೆ. ಈ ಮುಂಚೆಯೇ ಈ ಆ್ಯಪ್​ನಲ್ಲಿ 22 ವಸ್ತುಗಳ ಬೆಲೆಗಳನ್ನು ಟ್ರ್ಯಾಕ್ ಮಾಡಲಾಗಿತ್ತು. ನಾಲ್ಕನೇ ಆವೃತ್ತಿಯಲ್ಲಿ 16 ಹೊಸ ಸೇರ್ಪಡೆಗಳಾಗಿವೆ. ಇದರೊಂದಿಗೆ ಈ ಆ್ಯಪ್​ನಲ್ಲಿ 38 ಆಹಾರವಸ್ತುಗಳ ದೇಶವ್ಯಾಪಿ ದರಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ.

ರಾಗಿ, ಗೋದಿ, ಜೋಳ ಮೊದಲಾದವುಗಳನ್ನು ಹೊಸದಾಗಿ ಪಿಎಂಎಸ್ ಮಾನಿಟರಿಂಗ್ ಸಿಸ್ಟಂಗೆ ಸೇರಿಸಲಾಗಿದೆ. ದೇಶಾದ್ಯಂತ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 550 ಸೆಂಟರ್​ಗಳಿಂದ ಈ ಆಹಾರವಸ್ತುಗಳ ಬೆಲೆಗಳ ಮಾಹಿತಿ ಈ ಆ್ಯಪ್​ಗೆ ಬರುತ್ತದೆ. ಈ ದರ ವ್ಯತ್ಯಯವನ್ನು ಗಮನಿಸಿ ಸೂಕ್ತ ನೀತಿ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಈ ಪಿಎಂಎಸ್ ಅನುವು ಮಾಡಿಕೊಡುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಈ ವ್ಯವಸ್ಥೆ ಬಹಳ ಉಪಯುಕ್ತವಾಗಲಿದೆ. ಈ 38 ಆಹಾರವಸ್ತುಗಳ ಬೆಲೆಗಳು ಹಣದುಬ್ಬರದ ಶೇ. 31 ಭಾಗವನ್ನು ನಿರ್ಧರಿಸುತ್ತವೆ ಎಂಬುದು ಗಮನಾರ್ಹ.

ರಾಜ್ಯಗಳು ನೇರವಾಗಿ ಅಕ್ಕಿ ಖರೀದಿಸಲು ಅವಕಾಶ

ರಾಜ್ಯಗಳಿಗೆ ಅಕ್ಕಿ ಕೊರತೆ ಬಿದ್ದರೆ ಅವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಮೂಲಕ ನೇರವಾಗಿ ಆಹಾರ ನಿಗಮವಾದ ಎಫ್​ಸಿಐನಿಂದ ಖರೀದಿಸಬಹುದು. ಅಕ್ಕಿಯನ್ನು ಖರೀದಿಸಲು ಇ-ಹರಾಜಿನಲ್ಲಿ ಪಾಲ್ಗೊಳ್ಳಬೇಕಿಲ್ಲ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರೂ ಆದ ಪ್ರಹ್ಲಾದ್ ಜೋಷಿ ಇಂದು ಗುರುವಾರ ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್​ನಿಂದ 32,403 ಕೋಟಿ ರೂ ಜಿಎಸ್​ಟಿ ಬಾಕಿ ಇದೆಯಾ? ಇಲ್ಲ ಎನ್ನುತ್ತಿದೆ ಐಟಿ ಸಂಸ್ಥೆ; ಯಾತಕ್ಕಾಗಿ ಈ ತೆರಿಗೆ?

ಕ್ವಿಂಟಾಲ್​ಗೆ 2,800 ರೂ ಬೆಲೆಗೆ ಅಕ್ಕಿಯು ರಾಜ್ಯಗಳಿಗೆ ಸಿಗಲಿದೆ. ಕೇಂದ್ರ ಸರ್ಕಾರ ಪಡಿತರ ಯೋಜನೆ ಅಡಿ ಪ್ರತೀ ಕುಟುಂಬಕ್ಕೆ 5 ಕಿಲೋ ಉಚಿತ ಅಕ್ಕಿ ಒದಗಿಸುತ್ತದೆ. ಯಾವುದೇ ರಾಜ್ಯ ಸರ್ಕಾರಗಳಿಗೆ ಇದಕ್ಕಿಂತ ಹೆಚ್ಚು ಅಕ್ಕಿ ಬೇಕಿದ್ದರೆ ಕ್ವಿಂಟಾಲ್​ಗೆ 2,800 ರೂ ಬೆಲೆಗೆ ಅಕ್ಕಿಯನ್ನು ಎಫ್​ಸಿಐನಿಂದ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us