ಆರ್ಥಿಕ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು; ದಿಟ್ಟ ಸುಧಾರಣೆ ಕ್ರಮ ಕೈಗೊಳ್ಳಬೇಕು: ನಿಲೇಶ್ ಶಾ

Nilesh Shah calls for bold economic reforms: ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆಯೂ, ಭಾರತವು ದಿಟ್ಟ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲು ಇದೊಂದು ಸುವರ್ಣಾವಕಾಶ ಎಂದು ಆರ್ಥಿಕ ತಜ್ಞ ನಿಲೇಶ್ ಶಾ ಅಭಿಪ್ರಾಯಪಟ್ಟಿದ್ದಾರೆ. ಉತ್ಪಾದನೆ, ಕಾರ್ಮಿಕ ಕಾನೂನು, ಗ್ರಾಹಕ ನಂಬಿಕೆ ಹೆಚ್ಚಳ ಹಾಗೂ ಹೂಡಿಕೆ ಉತ್ತೇಜನಕ್ಕೆ ಒತ್ತು ನೀಡಿದರೆ 2047ರ ವಿಕಸಿತ ಭಾರತದ ಗುರಿ ತಲುಪಬಹುದು. 1991ರಂತೆ ಈ ಬಿಕ್ಕಟ್ಟನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಅವರು ಸಲಹೆ ನೀಡಿದ್ದಾರೆ.

ಆರ್ಥಿಕ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು; ದಿಟ್ಟ ಸುಧಾರಣೆ ಕ್ರಮ ಕೈಗೊಳ್ಳಬೇಕು: ನಿಲೇಶ್ ಶಾ
ನಿಲೇಶ್ ಶಾ ಅವರ ಫೈಲ್ ಚಿತ್ರ
Image Credit source: TV9 Network

Updated on: May 26, 2026 | 6:16 PM

ನವದೆಹಲಿ, ಮೇ 26: ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ ಹಾಗೂ ಸವಾಲುಗಳು ಎದುರಾಗಿರುವ ಈ ಸಮಯದಲ್ಲಿ, ಭಾರತವು ಈ ಬಿಕ್ಕಟ್ಟನ್ನು ಕೇವಲ ಒಂದು ಸಮಸ್ಯೆಯಾಗಿ ನೋಡಬಾರದು. ಬದಲಿಗೆ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ಮತ್ತು ದಿಟ್ಟ ಸುಧಾರಣೆಗಳನ್ನು (Bold Reforms) ಜಾರಿಗೆ ತರಲು ಇದೊಂದು ಅತ್ಯುತ್ತಮ ಅವಕಾಶ ಎಂದು ಖ್ಯಾತ ಆರ್ಥಿಕ ತಜ್ಞ ನಿಲೇಶ್ ಶಾ (Nilesh Shah) ಅಭಿಪ್ರಾಯಪಟ್ಟಿದ್ದಾರೆ. ಸಿಎನ್​ಬಿಸಿ ಆವಾಜ್ ಎನ್ನುವ ಹಿಂದಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಕೋಟಕ್ ಎಎಂಸಿಯ ಎಂಡಿ ನಿಲೇಶ್ ಶಾ, 2047ರ ವಿಕಸಿತ ಭಾರತದ (Viksit Bharat) ಗುರಿ ಈಡೇರಬೇಕಾದರೆ ತಂತ್ರಜ್ಞಾನ ಸಾಮರ್ಥ್ಯ ಹೆಚ್ಚಿಸಬೇಕು ಎಂದಿದ್ದಾರೆ.

“ಇತಿಹಾಸವನ್ನು ಗಮನಿಸಿದರೆ ಭಾರತವು ದೊಡ್ಡ ಬಿಕ್ಕಟ್ಟುಗಳು ಎದುರಾದಾಗಲೆಲ್ಲಾ ಅತ್ಯಂತ ಕ್ರಾಂತಿಕಾರಿ ಸುಧಾರಣೆಗಳನ್ನು ತಂದಿದೆ. 1991ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ದೇಶವು ಆರ್ಥಿಕ ಉದಾರೀಕರಣವನ್ನು (Liberalisation) ಅಪ್ಪಿಕೊಂಡಿತು. ಅದೇ ರೀತಿ ಪ್ರಸ್ತುತ ಎದುರಾಗುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸಲು ಸರ್ಕಾರವು ಮತ್ತಷ್ಟು ದಿಟ್ಟ ಆರ್ಥಿಕ ಹೆಜ್ಜೆಗಳನ್ನು ಇಡಬೇಕು,” ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮೈರಾ, ಕೈರಾ, ನೈನಾ… ಡಿಜಿಟಲ್ ಲೋಕದಲ್ಲಿ ‘AI ಇನ್‌ಫ್ಲುಯೆನ್ಸರ್ಸ್’ ಹವಾ; ಯಂತ್ರಿಣಿಯರ ಮಧ್ಯೆ ಮನುಷ್ಯರಿಗಿದೆಯಾ ಬೆಲೆ?

ಕೈಗೊಳ್ಳಬೇಕಾದ ಪ್ರಮುಖ ಸುಧಾರಣೆಗಳನ್ನು ತಿಳಿಸಿದ ನಿಲೇಶ್ ಶಾ

ಭಾರತವು ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವಾಗಲು ಹಾಗೂ ಆಂತರಿಕ ಮಾರುಕಟ್ಟೆಯನ್ನು ಸದೃಢಗೊಳಿಸಲು ಈ ಕೆಳಗಿನ ಕ್ಷೇತ್ರಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ಅವರು ಒತ್ತಿಹೇಳಿದ್ದಾರೆ:

  • ರಚನಾತ್ಮಕ ಸುಧಾರಣೆಗಳು (Structural Reforms): ಉತ್ಪಾದನಾ ವಲಯ (Manufacturing), ಭೂಮಿ ಮತ್ತು ಕಾರ್ಮಿಕ ಕಾನೂನುಗಳ ಸರಳೀಕರಣದ ಕಡೆಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು.
  • ಬಳಕೆದಾರರ ನಂಬಿಕೆ ಹೆಚ್ಚಿಸುವುದು (Consumer Resilience): ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿ ಸಾಮರ್ಥ್ಯ ಹಾಗೂ ಬಳಕೆಯ ಪ್ರವೃತ್ತಿಯನ್ನು (Consumption Trends) ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು.
  • ಹೂಡಿಕೆಗೆ ಉತ್ತೇಜನ: ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು (FIIs) ಸೆಳೆಯಲು ಭಾರತದ ಮಾರುಕಟ್ಟೆಯನ್ನು ಸುಲಭ ಹಾಗೂ ಸುರಕ್ಷಿತ ಹೂಡಿಕೆಯ ತಾಣವನ್ನಾಗಿ ರೂಪಿಸಬೇಕು.

ಇದನ್ನೂ ಓದಿ: ಏರ್ಟೆಲ್​ನಿಂದ ಕಮರ್ಷಿಯಲ್ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್; ಉತ್ತಮ ವೇಗಕ್ಕೆ ಪ್ರೀಮಿಯಮ್ ದರ?

ಭಾರತದ ಭವಿಷ್ಯದ ಮೇಲೆ ಭರವಸೆ

ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಸುಂಕದ ನೀತಿಗಳು ಹಾಗೂ ತಂತ್ರಜ್ಞಾನ ವಲಯದಲ್ಲಿನ ಏರುಪೇರುಗಳ ನಡುವೆಯೂ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಗಟ್ಟಿಯಾಗಿವೆ. ಜಾಗತಿಕ ಕಂಪನಿಗಳು ಚೀನಾಕ್ಕೆ ಪರ್ಯಾಯವಾಗಿ ಬೇರೆ ದೇಶಗಳನ್ನು ಹುಡುಕುತ್ತಿರುವಾಗ, ಭಾರತವು ತನ್ನ ನೀತಿಗಳನ್ನು ಮತ್ತಷ್ಟು ಉದಾರಗೊಳಿಸಿ ಆ ಹೂಡಿಕೆಗಳನ್ನು ತನ್ನತ್ತ ಸೆಳೆದುಕೊಳ್ಳಬೇಕು. ಈ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಿಸಿದರೆ ಮುಂಬರುವ ವರ್ಷಗಳಲ್ಲಿ ಭಾರತವು ಜಾಗತಿಕ ಆರ್ಥಿಕತೆಯ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ನಿಲೇಶ್ ಶಾ ಆಶಾವಾದ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us