ತೆರಿಗೆ ಹೇರುವ ಆಸೆ ನಂಗೂ ಇಲ್ಲ, ಆದರೆ ಸರ್ಕಾರ ನಡೆಸಲು ಹಣ ಬೇಕಲ್ಲ: ನಿರ್ಮಲಾ ಸೀತಾರಾಮನ್

Nirmala Sitharaman speaks at Bhopal: ತೆರಿಗೆಗಳ ಹೇರಿಕೆಗೆ ಕುಖ್ಯಾತಿ ಪಡೆದಿರುವ ನಿರ್ಮಲಾ ಸೀತಾರಾಮನ್ ಅವರು ತಮಗೆ ತೆರಿಗೆ ಹೇರುವ ಆಸೆ ಇಲ್ಲ, ಆದರೆ ಬೇರೆ ವಿಧಿ ಇಲ್ಲ ಎಂದಿದ್ದಾರೆ. ಸರ್ಕಾರ ನಡೆಸಲು ಹಣದ ಅಗತ್ಯತೆ ಇದೆ. ಅದಕ್ಕೆ ತೆರಿಗೆ ಹೇರುವುದು ಅನಿವಾರ್ಯ ಎಂಬುದು ಅವರ ಅನಿಸಿಕೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಐಐಎಸ್​ಇಆರ್​ನ 11ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ತೆರಿಗೆ ಹೇರುವ ಆಸೆ ನಂಗೂ ಇಲ್ಲ, ಆದರೆ ಸರ್ಕಾರ ನಡೆಸಲು ಹಣ ಬೇಕಲ್ಲ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us
|

Updated on: Aug 14, 2024 | 12:43 PM

ಭೋಪಾಲ್, ಆಗಸ್ಟ್ 14: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ತೆರಿಗೆಗಳ ಅಮ್ಮ ಎಂದು ಬಹಳ ಜನರು ಟ್ರೋಲ್ ಮಾಡುವುದುಂಟು. ತೆರಿಗೆ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿರುವ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್​ನಲ್ಲಿ ಒಂದಷ್ಟು ತೆರಿಗೆ ಏರಿಕೆ ಮಾಡಿ ತಮ್ಮ ‘ಕುಖ್ಯಾತಿ’ಯನ್ನು ಉಳಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್​ನ (ಐಐಎಸ್​ಇಆರ್) 11ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಹಣಕಾಸು ಸಚಿವೆ, ತಮ್ಮ ತೆರಿಗೆ ಹೇರಿಕೆ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ತೆರಿಗೆಗಳು ಹೇಗೆ ಒಂದು ದೇಶದ ಅಭ್ಯುದಯಕ್ಕೆ ಕಾರಣವಾಗಬಲ್ಲುವು ಎಂಬುದನ್ನು ವಿವರಿಸಿದ್ದಾರೆ.

‘ನಮ್ಮ ತೆರಿಗೆಗಳು ಯಾಕೆ ಇಷ್ಟು ಇವೆ ಎಂದು ಜನರಿಗೆ ಉತ್ತರ ಹೇಳುವಾಗ ಹಣಕಾಸು ಸಚಿವೆಯಾಗಿ ಮುಜುಗರ ಆಗುತ್ತದೆ. ತೆರಿಗೆಯನ್ನು ಸೊನ್ನೆಗೆ ತರಬೇಕೆಂಬ ಮನಸ್ಸು ನನಗೂ ಇದೆ. ಆದರೆ, ದೇಶದ ಮುಂದೆ ಸಾಕಷ್ಟು ಸವಾಲುಗಳಿವೆ. ಈ ಸವಾಲುಗಳನ್ನು ನಾವು ಎದುರಿಸುವುದು ಅಗತ್ಯ,’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

‘ಸರ್ಕಾರ ಕೇವಲ ಮಾತನಾಡುತ್ತಿಲ್ಲ. ತೆರಿಗೆಯಿಂದ ಬಂದ ಹಣವನ್ನು ಆರ್ ಅಂಡ್ ಡಿಗೆ ಹಾಕುತ್ತಿದೆ. ನನ್ನ ಕೆಲಸ ಜನರಿಗೆ ತೊಂದರೆ ಕೊಡುವುದಲ್ಲ, ಆದರೆ, ಆದಾಯ ಸೃಷ್ಟಿಸುವುದು ಮಾತ್ರವೇ ನನ್ನ ಕೆಲಸ. ನಾವು ಸಂಶೋಧನೆಗೆ ಹಣ ತೊಡಗಿಸಬೇಕಾದ್ದರಿಂದ ಈ ತೆರಿಗೆ ಹಣ ಬೇಕು,’ ಎಂದು ಹಣಕಾಸು ಸಚಿವೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಗೌತಮ್ ಅದಾನಿ ನಂತರ ಯಾರು? ಬ್ಲೂಮ್​ಬರ್ಗ್ ಸಂದರ್ಶನದ ಎಕ್ಸ್​ಕ್ಲೂಸಿವ್ ವಿಡಿಯೋ

ಹವಾಮಾನ ಒಪ್ಪಂದ ಅಳವಡಿಕೆಗೆ ವಿಶ್ವದ ನೆರವಿಗೆ ಭಾರತ ಕಾಯಲಿಲ್ಲ…

ಆ ಘಟಿಕೋತ್ಸವ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಪ್ಯಾರಿಸ್ ಕ್ಲೈಮೇಟ್ ಒಪ್ಪಂದದ ವಿಚಾರವನ್ನು ಪ್ರಸ್ತಾಪಿಸಿದರು. ಆ ಒಪ್ಪಂದದ ಪ್ರಕಾರ ಪೆಟ್ರೋಲ್, ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನದಿಂದ ಮರುಬಳಕೆ ಇಂಧನಕ್ಕೆ ಬದಲಾಗುವ ಗುರಿಯೂ ಇದೆ. ಈ ಸಾಧನೆಗೆ ಭಾರತಕ್ಕೆ ವಿಶ್ವದ ಶ್ರೀಮಂತ ದೇಶಗಳು ಧನಸಹಾಯ ಮಾಡುವ ಭರವಸೆ ನೀಡಿವೆ. ಇದರ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತವು ರಿನಿವಬಲ್ ಎನರ್ಜಿಯ ವ್ಯವಸ್ಥೆ ಅಳವಡಿಸಲು ತನ್ನದೇ ಹಣ ಬಳಸುತ್ತಿದೆ. ವಿಶ್ವದ ಹಣಕ್ಕಾಗಿ ಕಾಯಲಿಲ್ಲ. ಆ ಹಣ ಇನ್ನೂ ಕೂಡ ಬಂದಿಲ್ಲ ಎಂದು ಮಾರ್ಮಿಕವಾಗಿ ಕುಟುಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ