ಭಾರತ ಬಿಟ್ಟುಹೋಗ್ತೀರಾ? ಟ್ಯಾಕ್ಸ್ ಕಟ್ಟಿ ಹೋಗಿ; ಟಿಸಿ ಸರ್ಟಿಫಿಕೇಟ್ ಕಡ್ಡಾಯ; ಅ. 1ರಿಂದ ಕಾನೂನು ಜಾರಿ

Tax clearance certificate: ಭಾರತವನ್ನು ಬಿಟ್ಟು ವಿದೇಶಗಳಿಗೆ ಹೋಗಬೇಕೆನ್ನುವವರು ತೆರಿಗೆ ಇಲಾಖೆಯಿಂದ ಟ್ಯಾಕ್ಸ್ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. ಕಪ್ಪು ಹಣ ಕಾಯ್ದೆ ಅಡಿ ಈಗಾಗಲೇ ಇಂಥದ್ದೊಂದು ನಿಯಮ ಇದೆ. ಈ ನಿಯಮವನ್ನು ಸರ್ಕಾರ ಇನ್ನಷ್ಟು ಬಿಗಿಗೊಳಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಸೂಚನೆ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ.

ಭಾರತ ಬಿಟ್ಟುಹೋಗ್ತೀರಾ? ಟ್ಯಾಕ್ಸ್ ಕಟ್ಟಿ ಹೋಗಿ; ಟಿಸಿ ಸರ್ಟಿಫಿಕೇಟ್ ಕಡ್ಡಾಯ; ಅ. 1ರಿಂದ ಕಾನೂನು ಜಾರಿ
ಏರ್​ಪೋರ್ಟ್ ಚಿತ್ರ

Updated on: Jul 25, 2024 | 10:53 AM

ಮುಂಬೈ, ಜುಲೈ 25: ದೇಶ ತೊರೆದು ವಿದೇಶಗಳಲ್ಲಿ ನೆಲಸಲು ಹೋಗುವವರು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದನ್ನು ಕಡ್ಡಾಯಪಡಿಸಲಾಗಿದೆ. ಕಪ್ಪು ಹಣ ಕಾಯ್ದೆ ಅಡಿ ವ್ಯಕ್ತಿಗೆ ಯಾವುದೇ ತೆರಿಗೆ ಬಾಧ್ಯತೆ ಇಲ್ಲ ಎನ್ನುವಂತಹ ಪ್ರಮಾಣ ಪತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ. ಭಾರತವನ್ನು ಬಿಟ್ಟು ಹೋಗುತ್ತಿರುವವರಿಗೆ ಈ ಬಿಗಿ ಕಾನೂನು ರೂಪಿಸಲಾಗಿದೆ. ಅಕ್ಟೋಬರ್ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 230 ಅಡಿಯಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಅದರ ಪ್ರಕಾರ ಯಾವುದೇ ತೆರಿಗೆ ಬಾಧ್ಯತೆ ಇಲ್ಲ ಎಂದು ತೆರಿಗೆ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಅಥವಾ ತೆರಿಗೆ ಬಾಕಿ ಇದ್ದರೆ ಅದನ್ನು ಪಾವತಿಸಲು ವ್ಯವಸ್ಥೆ ಮಾಡಿರುವುದಾಗಿ ಪ್ರಮಾಣಪತ್ರ ಪಡೆದಿರಬೇಕು. ಇವಿಲ್ಲದಿದ್ದರೆ ಅಂಥವರು ದೇಶ ಬಿಟ್ಟು ಹೋಗುವಂತಿಲ್ಲ.

ಈಗಿರುವ ಐಟಿ ಕಾಯ್ದೆ, ಈ ಹಿಂದೆ ಇದ್ದ ವೆಲ್ತ್ ಟ್ಯಾಕ್ಸ್ ಗಿಫ್ಟ್ ಟ್ಯಾಕ್ಸ್ ಕಾಯ್ದೆ ಮತ್ತು ಎಕ್ಸ್​ಪೆಂಡಿಚರ್ ಟ್ಯಾಕ್ಸ್ ಕಾಯ್ದೆ ಅಡಿಯಲ್ಲೂ ಈ ನಿಯಮ ಅನ್ವಯ ಆಗುತ್ತದೆ.

ಈಗ ಇದೇ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲಾಗಿರುವುದು ತಿಳಿದು ಬಂದಿದೆ. ಮಂಗಳವಾರ ಮಂಡಿಸಲಾದ ಬಜೆಟ್​ನಲ್ಲಿ ಈ ವಿಚಾರವನ್ನು ಪ್ರಕಟಿಸಲಾಗಿದೆ. ಆದರೆ, ಈ ಬಗ್ಗೆ ಬದಲಾವಣೆ ಮಾಡಲಾದ ಅಂಶಗಳೇನು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ವರದಿ ಪ್ರಕಾರ ತೆರಿಗೆ ಇಲಾಖೆಯಿಂದ ಹೊಸ ನಿಯಮದ ಬಗ್ಗೆ ಇನ್ನೂ ಅಧಿಸೂಚನೆ ಬರಬೇಕಿದೆ. ಈ ನೋಟಿಫಿಕೇಶನ್ ಬಂದ ಬಳಿಕ ಒಂದು ಸ್ಪಷ್ಟತೆ ಸಿಗಲಿದೆ.

ಇದನ್ನೂ ಓದಿ: ಹೊಸ ವಾತ್ಸಲ್ಯ ಎನ್​ಪಿಎಸ್ ಯೋಜನೆ; ಸಣ್ಣ ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರಿಗಿದೋ ಅವಕಾಶ

10 ಲಕ್ಷ ರೂ ದಂಡದ ನಿಯಮ ರದ್ದು…

ವಿದೇಶೀ ಆಸ್ತಿಗಳನ್ನು ಘೋಷಿಸದೇ ಇದ್ದರೆ ಕಪ್ಪು ಹಣ ಕಾಯ್ದೆಯ ಸೆಕ್ಷನ್ 42 ಮತ್ತು 43 ಅಡಿಯಲ್ಲಿ 10 ಲಕ್ಷ ರೂ ದಂಡ ವಿಧಿಸುವ ಕಾನೂನು ಇದೆ. ಈ ನಿಯಮದಲ್ಲಿ ಸ್ವಲ್ಪ ರಿಯಾಯಿತಿ ಕೊಡಲಾಗಿದೆ. ಬಜೆಟ್​ನಲ್ಲಿ ಘೋಷಿಸಿರುವ ಪ್ರಕಾರ, ರಿಯಲ್ ಎಸ್ಟೇಟ್ ಹೊರತುಪಡಿಸಿ 20 ಲಕ್ಷ ರೂವರೆಗಿನ ಇತರ ವಿದೇಶೀ ಆಸ್ತಿಗಳ ವಿವರವನ್ನು ಘೋಷಿಸದೇ ಹೋದರೆ ಅಂಥ ಅಪರಾಧವನ್ನು 10 ಲಕ್ಷ ರೂ ದಂಡದ ಶಿಕ್ಷೆಯಿಂದ ಹೊರತಪಡಿಸಲಾಗಿದೆ. ಆದರೆ, ವಿದೇಶದಲ್ಲಿನ ರಿಯಲ್ ಎಸ್ಟೇಟ್ ಆಸ್ತಿ ಯಾವುದೇ ಇದ್ದರೂ ಘೋಷಿಸಬೇಕು. ಹಾಗೆಯೇ 20 ಲಕ್ಷ ರೂ ಮೌಲ್ಯದ ಇತರ ಆಸ್ತಿಗಳಿದ್ದರೆ ಅದನ್ನೂ ಘೋಷಿಸಲೇ ಬೇಕು. ಇಲ್ಲದಿದ್ದರೆ ಬ್ಲ್ಯಾಕ್ ಮನಿ ಆ್ಯಕ್ಟ್ ಪ್ರಕಾರ ದಂಡ ವಿಧಿಸಲಾಗುತ್ತದೆ. ಅಕ್ಟೋಬರ್ 1ರಿಂದ ಈ ಕಾನೂನು ಜಾರಿಯಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us