Rahul Gandhi: ಉದ್ಯಮ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿರೋದನ್ನು ವಿರೋಧಿಸುತ್ತೇನೆ: ರಾಹುಲ್ ಗಾಂಧಿ ಸ್ಪಷ್ಟನೆ

Rahul Gandhi video message clarification: ನಾನು ಬಿಸಿನೆಸ್ ವಿರೋಧಿ ಅಲ್ಲ, ಆದರೆ, ಏಕಸ್ವಾಮ್ಯತೆಯ ವಿರೋಧಿಯಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಷ್ಪಡಿಸಿದ್ದಾರೆ. ಉದ್ಯಮ ವಲಯ ಕೆಲವೇ ವ್ಯಕ್ತಿಗಳ ಪ್ರಾಬಲ್ಯದಲ್ಲಿ ಇರುವುದನ್ನು ವಿರೋಧಿಸುತ್ತೇನೆ. ಅಸಮಾನತೆ ಹೆಚ್ಚುವುದನ್ನು ವಿರೋಧಿಸುತ್ತೇನೆ ಎಂದಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಮೆಸೇಜ್​ನಲ್ಲಿ ರಾಹುಲ್ ಗಾಂಧಿ ಈ ಸ್ಪಷ್ಟನೆ ನೀಡಿದ್ದಾರೆ.

Rahul Gandhi: ಉದ್ಯಮ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿರೋದನ್ನು ವಿರೋಧಿಸುತ್ತೇನೆ: ರಾಹುಲ್ ಗಾಂಧಿ ಸ್ಪಷ್ಟನೆ
ರಾಹುಲ್ ಗಾಂಧಿ

Updated on: Nov 08, 2024 | 12:14 PM

ನವದೆಹಲಿ, ನವೆಂಬರ್ 8: ತನ್ನನ್ನು ಬಿಸಿನೆಸ್ ವಿರೋಧಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಆದರೆ, ತಾನು ಬಿಸಿನೆಸ್ ವಿರೋಧಿಯಲ್ಲ. ಆದರೆ, ಆರ್ಥಿಕ ಶಕ್ತಿಯ ಕೇಂದ್ರೀಕರಣದ ವಿರೋಧಿ, ಬಿಸಿನೆಸ್ ಏಕಸ್ವಾಮ್ಯದ ವಿರೋಧಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಕೆಲವೇ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ ಎಂಬುದು ರಾಹುಲ್ ಗಾಂಧಿ ಸದಾ ಮಾಡುತ್ತಿರುವ ಆರೋಪ. ಆದರೆ, ಗೌತಮ್ ಅದಾನಿ, ಮುಕೇಶ್ ಅಂಬಾನಿ ಅವರತ್ತ ರಾಹುಲ್ ಆಗಾಗ್ಗೆ ಬೊಟ್ಟು ಮಾಡುತ್ತಲೇ ಇರುತ್ತಾರೆ. ಸಂಪತ್ತು ಮರುಹಂಚಿಕೆ ಬಗ್ಗೆ ಮಾತನಾಡುತ್ತಿರುತ್ತಾರೆ. ಅಂತೆಯೇ, ರಾಹುಲ್ ಗಾಂಧಿ ಉದ್ಯಮ ಮತ್ತು ಉದ್ಯಮಿಗಳ ವಿರೋಧಿ ಎನ್ನುವಂತಹ ಟೀಕೆಗಳೂ ಸಾಕಷ್ಟು ಕೇಳಿಬರುತ್ತಲೇ ಇವೆ. ಈ ಕಾರಣಕ್ಕೆ ರಾಹುಲ್ ಗಾಂಧಿ ನಿನ್ನೆ ವಿಡಿಯೋ ಸಂದೇಶವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು, ತಾನು ಬಿಸಿನೆಸ್ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸುವ ಪ್ರಯತ್ನ ಮಾಡಿದ್ದಾರೆ.

‘ಬಿಜೆಪಿಯಲ್ಲಿರುವ ನನ್ನ ವಿರೋಧಿಗಳು ನನ್ನನ್ನು ಬಿಸಿನೆಸ್ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ನಾನು ಬಿಸಿನೆಸ್ ವಿರೋಧಿಯಲ್ಲ. ಆದರೆ, ಏಕಸ್ವಾಮ್ಯತೆಯನ್ನು ವಿರೋಧಿಸುತ್ತೇನೆ. ಕೆಲವೇ ಉದ್ಯಮಿಗಳ ಪ್ರಾಬಲ್ಯವನ್ನು ವಿರೋಧಿಸುತ್ತೇನೆ. ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ನಾನು ವೃತ್ತಿ ಆರಂಭಿಸಿದೆ. ಬಿಸಿನೆಸ್ ಯಶಸ್ವಿಯಾಗಲು ಏನು ಅಗತ್ಯ ಎಂಬುದನ್ನು ಬಲ್ಲೆ. ಆದರೆ, ನಾನು ಬಸಿನೆಸ್ ವಿರೋಧಿಯಲ್ಲ. ಏಕಸ್ವಾಮ್ಯದ ವಿರೋಧಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ,’ ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ತಮ್ಮ ವಿಡಿಯೋ ಮೆಸೇಜ್​ನಲ್ಲಿ ಅವರು ಈಸ್ಟ್ ಇಂಡಿಯ ಕಂಪನಿಯ ಉದಾಹರಣೆ ನೀಡಿದ್ದಾರೆ. ಈಸ್ಟ್ ಇಂಡಿಯಾ ಕಂಪನಿ ಬಿಸಿನೆಸ್ ತಂತ್ರದಿಂದ ಅಲ್ಲ, ಏಕಸ್ವಾಮ್ಯ ನಿಯಂತ್ರಣ ಮೂಲಕ ಭಾರತವನ್ನು ಹಿಡಿತಕ್ಕೆ ತೆಗೆದುಕೊಂಡರು. ದುರ್ಬಲ ಮಹಾರಾಜರು ಮತ್ತು ನವಾಬರಿಗೆ ಬೆದರಿಕೆ ಹಾಕುತ್ತಾ, ಲಂಚ ನೀಡುತ್ತಾ, ಹೊಂದಾಣಿಕೆಗೆ ನೂಕುತ್ತಾ ಭಾರತವನ್ನು ಉಸಿರುಗಟ್ಟಿಸಿದರು. ಬ್ಯಾಂಕಿಂಗ್, ಆಡಳಿತ, ಮಾಹಿತಿ ಜಾಲಗಳನ್ನು ನಿಯಂತ್ರಿಸಿದರು. ನಾವು ಬೇರೆ ದೇಶಕ್ಕೆ ನಮ್ಮ ಸ್ವಾತಂತ್ರ್ಯ ಕಳೆದುಕೊಳ್ಳಲಿಲ್ಲ. ಬದಲಾಗಿ ಏಕಸ್ವಾಮ್ಯ ಉದ್ದಿಮೆಗೆ ಸೋತೆವು ಎಂದಿದ್ದಾರೆ.

ಇದನ್ನೂ ಓದಿ: ರಾಜಮನೆತನ ಟೀಕಿಸುವ ರಾಹುಲ್ ಗಾಂಧಿ ಲೇಖನದ ಬಗ್ಗೆ ಯದುವೀರ್ ಸೇರಿ ಹಲವರು ಗರಂ

ಈಸ್ಟ್ ಇಂಡಿಯಾ ಕಂಪನಿ 150 ವರ್ಷ ಹಿಂದೆ ಕಾರ್ಯಾಚರಣೆ ನಿಲ್ಲಿಸಿತು. ಆದರೆ, ಈಗ ಹೊಸ ರೀತಿಯ ಮಾನೋಪೊಲಿಸ್ಟ್​ಗಳು ಹುಟ್ಟಿದ್ದಾರೆ. ಸಾಕಷ್ಟು ಸಂಪತ್ತು ಗಳಿಸಿದ್ದಾರೆ. ಭಾರತದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚಿದೆ. ನಮ್ಮ ಸಂಸ್ಥೆಗಳು ಜನರಿಗೆ ಸೇರುವ ಬದಲು ಶಕ್ತಿವಂತರಿಗೆ ಮಣಿಯುತ್ತಿವೆ. ಲಕ್ಷಾಂತರ ಉದ್ದಿಮೆಗಳು ನೆಲಸಮಗೊಂಡಿವೆ ಎಂದು ರಾಹುಲ್ ಗಾಂಧಿ ಖೇದ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ