ವಾರಕ್ಕೆ ಶೇ. 6 ರಿಟರ್ನ್ ಕೊಡುವ ಆಮಿಷಕ್ಕೆ ಮೋಸ ಹೋದ ಆಮಾಯಕರು; ಟೋರೆಸ್ ಹಗರಣದ ಆರೋಪಿ ತೌಸೀಫ್ ಬಂಧನ

Torres Jewellery Ponzi Scam: ಟೋರೆಸ್ ಜ್ಯೂವೆಲರ್ಸ್ ವಂಚನೆ ಹಗರಣದ ಆರೋಪಿ ಪ್ಲಾಟಿನಂ ಹರ್ನ್ ಸಿಇಒ ತೌಸೀಫ್ ರಿಯಾಜ್​ರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆಕರ್ಷಕ ರಿಟರ್ನ್ ಕೊಡುವ ಆಮಿಷವೊಡ್ಡಿ ಹೂಡಿಕೆದಾರರಿಂದ ನೂರಾರು ಕೋಟಿ ರೂ ಪಡೆದು ವಂಚಿಸಿದ ಹಗರಣ ಇದು. ವಂಚನೆಯ ಇನ್ವೆಸ್ಟ್​ಮೆಂಟ್ ಸ್ಕೀಮ್ ಅನ್ನು ನಡೆಸಲಾಗುತ್ತಿದ್ದ ಟೋರೆಸ್ ಜ್ಯೂವೆಲ್ಸ್ ಮಳಿಗೆಗಳನ್ನು ನಿರ್ವಹಿಸುತ್ತಿದ್ದುದು ಪ್ಲಾಟಿನಂ ಹರ್ನ್ ಕಂಪನಿಯೇ.

ವಾರಕ್ಕೆ ಶೇ. 6 ರಿಟರ್ನ್ ಕೊಡುವ ಆಮಿಷಕ್ಕೆ ಮೋಸ ಹೋದ ಆಮಾಯಕರು; ಟೋರೆಸ್ ಹಗರಣದ ಆರೋಪಿ ತೌಸೀಫ್ ಬಂಧನ
ಟಾರೆಸ್ ಸ್ಟೋರ್

Updated on: Jan 26, 2025 | 3:57 PM

ಮುಂಬೈ, ಜನವರಿ 26: ಸಾವಿರ ಕೋಟಿ ರೂ ಮೊತ್ತದ ಟೋರೆಸ್ ಹಗರಣ ಸಂಬಂಧ ಪ್ಲಾಟಿನಂ ಹರ್ನ್ ಎಂಬ ಕಂಪನಿಯ ಸಿಇಒ ತೌಸಿಫ್ ರಿಯಾಜ್ ಅವರನ್ನು ಬಂಧಿಸಲಾಗಿದೆ. ಮುಂಬೈ ಪೊಲೀಸ್​ನ ಆರ್ಥಿಕ ಅಪರಾಧ ವಿಭಾಗದಿಂದ ಇಂದು ಭಾನುವಾರ ತೌಸೀಫ್ ಅವರನ್ನು ಬಂಧಿಸಲಾಗಿದೆ. ಹಲವು ದಿನಗಳಿಂದ ಪರಾರಿಯಾಗಿದ್ದ ಪ್ಲಾಟಿನಂ ಹರ್ನ್ ಸಿಇಒ ಅವರನ್ನು ಮುಂಬೈನ ಲೋನಾವಾಲ ಎಂಬಲ್ಲಿನ ಹೋಟೆಲ್​ವೊಂದರಲ್ಲಿ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಟೋರೆಸ್ ವಂಚನೆ ಹಗರಣದಲ್ಲಿ ತೌಸೀಫ್ ಸೇರಿದಂತೆ ಐದು ಮಂದಿ ಈವರೆಗೂ ಬಂಧಿತರಾಗಿದ್ದಾರೆ. ಸದ್ಯ ತೌಸೀಫ್ ಅವರನ್ನು ಫೆಬ್ರುವರಿ 1ರವರೆಗೂ ಪೊಲೀಸ್ ಕಸ್ಟಡಿಗೆ ಕೊಡಲಾಗಿದೆ.

ಏನಿದು ಟೋರೆಸ್ ಹಗರಣ?

ಹೆಚ್ಚು ರಿಟರ್ನ್ಸ್ ಕೊಡುವ ಆಮಿಷವೊಡ್ಡಿ ಹೂಡಿಕೆಗಳನ್ನು ಆಕರ್ಷಿಸಿ ಆ ಬಳಿಕ ವಂಚನೆ ಎಸಗಿರುವ ನೂರಾರು ಹಗರಣಗಳು ದೇಶದಲ್ಲಿ ನಡೆದಿವೆ. ಟೋರೆಸ್ ಜ್ಯುವೆಲರೀಸ್ ಕೂಡ ಇಂಥದ್ದೊಂದು ಸ್ಕೀಮ್ ಅನ್ನು ನಡೆಸಿತ್ತು. ಅಮೂಲ್ಯವಾದ ಮಾಯಿಸನೈಟ್ ಹರಳುಗಳನ್ನು ಖರೀದಿಸಿದವರಿಗೆ ವಾರಕ್ಕೆ ಶೇ. 6ರಂತೆ ರಿಟರ್ನ್ ಕೊಡುವುದಾಗಿ ಈ ಸ್ಕೀಮ್​ನಲ್ಲಿ ಪ್ರಚಾರ ಮಾಡಲಾಗಿತ್ತು.

ಈ ಆಕರ್ಷಕ ಸ್ಕೀಮ್​ಗೆ ಮಾರುಹೋಗಿ ಮುಂಬೈ ಹಾಗೂ ಸುತ್ತಮುತ್ತ ಲಕ್ಷಾಂತರ ಜನರು ಹೂಡಿಕೆ ಮಾಡಿದ್ದರು. ಭರವಸೆ ಕೊಟ್ಟಂತೆ ಆರಂಭದಲ್ಲಿ ಹೂಡಿಕೆದಾರರಿಗೆ ರಿಟರ್ನ್ ಸಿಕ್ಕುತ್ತಿತ್ತು. 2024ರ ಡಿಸೆಂಬರ್ 30ರಿಂದ ಯಾವ ಪೇಮೆಂಟ್ ಮಾಡಲಾಗಲಿಲ್ಲ.

ಇದನ್ನೂ ಓದಿ: ಮಹಾಕುಂಭಕ್ಕೆ ವಿದೇಶಗಳಿಂದ ಜನಪ್ರವಾಹ; ಋಷಿಕೇಶ, ವಾರಾಣಸಿ, ಹರಿದ್ವಾರಕ್ಕೂ ಭರ್ಜರಿ ಭಕ್ತರ ದಂಡು

ಟಾರೆಸ್ ಸ್ಟೋರ್​ಗಳಲ್ಲಿ ಈ ಸ್ಕೀಮ್ ಅನ್ನು ನಡೆಸಲಾಗುತಿತ್ತು. ಜನರು ಈ ಮಳಿಗೆಗಳ ಮುಂದೆ ಜಮಾಯಿಸತೊಡಗಿದರು. ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾದವು.

ಪ್ಲಾಟಿನಂ ಹರ್ನ್ ಕಂಪನಿಗೂ ಇದಕ್ಕೂ ಏನು ಸಂಬಂಧ?

ಟಾರೆಸ್ ಸ್ಟೋರ್​ಗಳನ್ನು ನಿರ್ವಹಿಸುತ್ತಿದ್ದ ಕಂಪನಿಯೇ ಪ್ಲಾಟಿನಂ ಹರ್ನ್. ಪೊಲೀಸರು ಈ ಕಂಪನಿಯ ಸಿಇಒ ತೌಸೀಫ್ ರಿಯಾಜ್ ಹಾಗೂ ಇತರ ನಾಲ್ವರು ಎಕ್ಸಿಕ್ಯೂಟಿವ್​ಗಳ ಮೇಲೆ ಪ್ರಕರಣ ದಾಖಲಿಸಿದರು.

ಕುತೂಹಲ ಎಂದರೆ, ಈ ಹಗರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇ ತಾನು ಎಂದು ತೌಸೀಫ್ ಒಂದೊಮ್ಮೆ ಹೇಳಿದ್ದರು. ಆದರೆ, ಪೊಲೀಸರು ಲುಕೌಟ್ ನೋಟೀಸ್ ನೀಡಿದ ಬಳಿಕ ತೌಸೀಫ್ ಪರಾರಿಯಾಗಿದ್ದರು. ಪಟ್ನಾ ಮೊದಲಾದೆಡೆ ಅಡಗಿದ್ದ ಅವರು ಮುಂಬೈಗೆ ಬಂದಿದ್ದಾಗ ಪೊಲೀಸರಿಗೆ ಸುಳಿವು ಸಿಕ್ಕು, ಸೆರೆ ಸಿಕ್ಕಿಬಿದ್ದರು.

ಇದನ್ನೂ ಓದಿ: ಹೊಸದಾಗಿ ಹೊಟೇಲ್​ ಆರಂಭಿಸಲು ಹೊರಟಿದ್ದೀರೇ, ಹಾಗಿದ್ದರೆ ಈ ವಿಚಾರಗಳನ್ನು ತಿಳಿದಿರಿ

ಟೋರೆಸ್ ಹಗರಣದ ಮೊತ್ತ ಸಾವಿರ ಕೋಟಿ ರೂ ಎಂದು ಅಂದಾಜಿಸಲಾಗಿದೆ. ಅಕ್ರಮ ಹಣ ಅವ್ಯವಹಾರ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆ ಇದೆ. ಮುಂಬೈಕ, ಜೈಪುರ್​ನ ಹತ್ತು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದಿಂದ ರೇಡ್​ಗಳಾಗಿವೆ. ಈ ಹಗರಣದಲ್ಲಿ 12 ಮಂದಿಯ ವಿರುದ್ಧ ಆರೋಪ ಇದ್ದು, ಇವರಲ್ಲಿ ಎಂಟು ಮಂದಿ ದೇಶ ಬಿಟ್ಟು ಹೋಗಿದ್ದಾರೆ. ಹೀಗೆ ಪರಾರಿಯಾಗಿರುವವರಲ್ಲಿ ಏಳು ಮಂದಿ ಉಕ್ರೇನ್ ನಾಗರಿಕರೂ ಸೇರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us