ಟಾಟಾ ಟ್ರಸ್ಟ್ಸ್​ನ ಬಾಯ್ ಹಿರಾಬಾಯ್ ಟ್ರಸ್ಟ್​ನಿಂದ ಹೊರಬಿದ್ದ ವೇಣು ಶ್ರೀನಿವಾಸನ್

Venu Srinivasan exit from Tata Trust's Bai Hirabai Charitable trust: ದಿವಂಗತ ರತನ್ ಟಾಟಾ ಅವರಿಂದ ಟ್ರಸ್ಟೀ ಆಗಿ ನೇಮಕಾತಿ ಅಗಿದ್ದ ವೇಣು ಶ್ರೀನಿವಾಸನ್ ಅವರು ಹೊರಬಿದ್ದಿದ್ದಾರೆ. ಟಾಟಾ ಟ್ರಸ್ಟ್ಸ್ ಅಡಿಗೆ ಬರುವ ಬಾಯ್ ಹೀರಾಬಾಯ್ ಚಾರಿಟಬಲ್ ಟ್ರಸ್ಟ್​ನಲ್ಲಿ ಅವರು ಒಬ್ಬ ಟ್ರಸ್ಟೀ ಆಗಿದ್ದರು. ಈ ಟ್ರಸ್ಟ್ ನಿಬಂಧನೆಗಳ ಪ್ರಕಾರ ಪಾರ್ಸಿ ಸಮುದಾಯದವರು ಮಾತ್ರ ಟ್ರಸ್ಟೀ ಆಗಬಹುದು ಎಂದು ಮಾಜಿ ಟ್ರಸ್ಟೀ ಮೆಹ್ಲೀ ಮಿಸ್ತ್ರಿ ಆಕ್ಷೇಪ ಎತ್ತಿದ್ದಾರೆ.

ಟಾಟಾ ಟ್ರಸ್ಟ್ಸ್​ನ ಬಾಯ್ ಹಿರಾಬಾಯ್ ಟ್ರಸ್ಟ್​ನಿಂದ ಹೊರಬಿದ್ದ ವೇಣು ಶ್ರೀನಿವಾಸನ್
ಟಾಟಾ
Image Credit source: Shutterstock

Updated on: Apr 05, 2026 | 12:32 PM

ನವದೆಹಲಿ, ಏಪ್ರಿಲ್ 5: ಟಾಟಾ ಟ್ರಸ್ಟ್ಸ್ ಅಡಿಗೆ ಬರುವ ಬಾಯ್ ಹೀರಾಬಾಯ್ ಚಾರಿಟಬಲ್ ಟ್ರಸ್ಟ್​ನಿಂದ ವೇಣು ಶ್ರೀನಿವಾಸನ್ (Venu Srinivasan) ಅವರು ಹೊರಬಿದ್ದಿದ್ದಾರೆ. ನಿಯಮಗಳ ಪ್ರಕಾರ ಟ್ರಸ್ಟೀ ಆಗಿ ಕೆಲಸ ಮಾಡಲು ಅರ್ಹತೆ ಹೊಂದಿಲ್ಲ ಎನ್ನುವ ತಕರಾರು ಬಂದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಮಾಜಿ ಟ್ರಸ್ಟೀ ಮೆಹ್ಲೀ ಮಿಸ್ತ್ರಿ ಅವರು ಟ್ರಸ್ಟೀಗಳ ಆಯ್ಕೆ ಅಕ್ರಮವಾಗಿ ಆಗಿದೆ ಎಂದು ಆಕ್ಷೇಪ ಸಲ್ಲಿಕೆ ಮಾಡಿದ್ದರು.

ಬಾಯ್ ಹೀರಾಬಾಯ್ ಚಾರಿಟಬಲ್ ಟ್ರಸ್ಟ್​ಗೆ (Bai Hirabai Charitable Trust) ವೇಣು ಶ್ರೀನಿವಾಸನ್ ಅವರನ್ನು ಟ್ರಸ್ಟೀ ಆಗಿ ಮಾಡಿದ್ದೇ ರತನ್ ಟಾಟಾ. ಆಗಲೇ ಈ ನೇಮಕಾತಿ ಬಗ್ಗೆ ತಕರಾರುಗಳು ಮತ್ತು ಚರ್ಚೆಗಳು ನಡೆದಿದ್ದವು. ಟ್ರಸ್ಟ್​ನಲ್ಲಿ ಅಕ್ರಮ ನಡೆದಿದ್ದು ಅದರ ತನಿಖೆ ನಡೆಸಿಸಬೇಕೆಂದು ಮೆಹ್ಲಿ ಮಿಸ್ತ್ರಿ ಅವರು ಮಹಾರಾಷ್ಟ್ರ ಚಾರಿಟಿ ಕಮಿಷನರ್ ಎದುರು ಅಫಿಡವಿಟ್ ಸಲ್ಲಿಸಿದ್ದಾರೆ. ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರ ನೇಮಕಾತಿಯನ್ನು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್​ನಿಂದ ಹೈಟೆಕ್ ಟೋಲ್​ಬೂತ್; ಯುಆನ್, ಕ್ರಿಪ್ಟೋದಲ್ಲಿ ಟೋಲ್ ಕಟ್ಟಿರಿ, ಸೀಕ್ರೆಟ್ ಕೋಡ್ ಪಡೆಯಿರಿ

ವೇಣು ಶ್ರೀನಿವಾಸನ್ ನೇಮಕಾತಿಯಲ್ಲಿ ಏನಿದೆ ಅಕ್ರಮ?

ಟಾಟಾ ಕುಟುಂಬದಲ್ಲಿ ಹಲವು ಟ್ರಸ್ಟ್​ಗಳು ಕಾರ್ಯನಿರ್ವಹಿಸುತ್ತಿವೆ. ಅವೆಲ್ಲವನ್ನು ಕೂಡ ಸರ್ ರತನ್ ಟಾಟಾ ಟ್ರಸ್ಟ್ ಅಡಿಗೆ ಸೇರಿಸಲಾಗಿದೆ. ಈ ಟ್ರಸ್ಟ್​ಗಳಲ್ಲಿ ಬಾಯ್ ಹೀರಾಬಾಯ್ ಜಮ್​ಶೆಟ್​ಜಿ ಟಾಟಾ ನವಸಾರಿ ಚಾರಿಟಬಲ್ ಇನ್ಸ್​ಟಿಟ್ಯೂಶನ್​ನ ಟ್ರಸ್ಟ್ ಡೀಡ್ ಆಗಿದ್ದು 1923ರಲ್ಲಿ. ಈ ಟ್ರಸ್ಟ್​ನ ನಿಬಂಧನೆಗಳ ಪ್ರಕಾರ ಪಾರ್ಸೀ ಸಮುದಾಯದವರೇ ಇದರ ಟ್ರಸ್ಟೀಗಳಾಗಬೇಕು ಎಂದಿದೆ.

ಪ್ರಸಕ್ತ ಟ್ರಸ್ಟೀಗಳಾಗಿರುವ ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರು ಪಾರ್ಸಿ ಸಮುದಾಯಕ್ಕೆ ಸೇರಿದವರಲ್ಲ. ಹಿಂದೆ ಟ್ರಸ್ಟೀ ಆಗಿದ್ದ ಆರ್ ಕೃಷ್ಣಕುಮಾರ್ ಅವರೂ ಪಾರ್ಸಿ ಸಮುದಾಯದವರಲ್ಲ. ಹೀಗಾಗಿ, ಈ ನೇಮಕಾತಿಗಳು ಮೂಲ ನಿಬಂಧನೆಗಳ ಉಲ್ಲಂಘನೆಯಾಗಿದೆ. ಈ ರೀತಿ ಅಕ್ರಮವಾಗಿ ಟ್ರಸ್ಟೀಗಳಾದವರು ತೆಗೆದುಕೊಳ್ಳುವ ನಿರ್ಧಾರಗಳು ಸಿಂಧುವೆನಿಸುವುದಿಲ್ಲ ಎಂದು ಮಿಸ್ತ್ರಿ ಅವರ ವಾದ.

ಇದನ್ನೂ ಓದಿ: ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಹೆಚ್ಚಿಸಲು ಸಿದ್ಧ: ರಷ್ಯಾ ಅಭಯ

ಮುಂಬೈ ಮತ್ತು ನವಸಾರಿಯಲ್ಲಿ ಪಾರ್ಸಿ ಸಮುದಾಯಕ್ಕೆಂದು ಅಗ್ನಿ ಮಂದಿರ, ಶಾಲೆ ಮತ್ತು ವಾಸ ಸೌಕರ್ಯಗಳು ಇತ್ಯಾದಿ ಆಸ್ತಿಗಳನ್ನು ಈ ಟ್ರಸ್ಟ್ ನಿರ್ವಹಿಸುತ್ತಿದೆ. ಶತಮಾನದ ಹಿಂದಿನ ಈ ಟ್ರಸ್ಟ್​ನಲ್ಲಿ ಆಡಳಿತ ದುರುಪಯೋಗ ತಡೆಯಬೇಕು ಎಂದು ಮಿಸ್ತ್ರಿ ಹೇಳುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us