Bengaluru Crime News: ಪ್ರಿಯಕರನಿಗಾಗಿ ಗಂಡನನ್ನು ಕೊಂದು, ದರೋಡೆಯ ಕತೆ ಕಟ್ಟಿದ ಮಹಿಳೆ

| Updated By: ಸುಷ್ಮಾ ಚಕ್ರೆ

Updated on: May 02, 2022 | 5:51 PM

Murder: ಮಧ್ಯರಾತ್ರಿ ಎಚ್ಚರಗೊಂಡ ಮಗ ತನ್ನ ತಂದೆ-ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ, ಗಾಬರಿಯಾಗಿದ್ದ. ಆತ ಜೋರಾಗಿ ಕೂಗಿಕೊಂಡ ನಂತರ ಅಕ್ಕಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದ್ದರು.

Bengaluru Crime News: ಪ್ರಿಯಕರನಿಗಾಗಿ ಗಂಡನನ್ನು ಕೊಂದು, ದರೋಡೆಯ ಕತೆ ಕಟ್ಟಿದ ಮಹಿಳೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮದುವೆಯಾದ ಮೇಲೂ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ (Extra marital Affair) ಹೊಂದಿರುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಬೆಂಗಳೂರಿನ ಮಹಿಳೆಯೊಬ್ಬಳು (Bengaluru Woman) ತಾನು ಪ್ರೀತಿಸಿದ್ದ ಯುವಕನೊಂದಿಗೆ ಇರಬೇಕೆನ್ನುವ ಆಸೆಯಿಂದ ತನ್ನ ಗಂಡನನ್ನು ಕೊಲೆ (Murder) ಮಾಡಿ, ಅದು ದರೋಡೆಕೋರರ ಕೃತ್ಯ ಎಂದು ಕತೆ ಕಟ್ಟಿದ್ದಳು. ಹಾಗಾದರೆ, ಆಕೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ? ಇಲ್ಲಿದೆ ಪೂರ್ತಿ ಮಾಹಿತಿ.

ತನ್ನ ಪತಿಯನ್ನು ಕೊಲೆ ಮಾಡಿ ನಂತರ ತನ್ನ ಪ್ರಿಯಕರನೊಂದಿಗೆ ವಾಸಿಸಲು ದೊಡ್ಡ ದರೋಡೆಯ ಕಥೆಯನ್ನು ಹೆಣೆದಿದ್ದ ಮಹಿಳೆಯನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ದರೋಡೆಕೋರರು ದಾಳಿ ನಡೆಸಿ, ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಆಕೆ ಹೇಳಿದ್ದಳು. ಆದರೆ, ಪೊಲೀಸರಿಗೆ ಆಕೆಯ ಮಾತಿನ ಮೇಲೆ ಅನುಮಾನ ಉಂಟಾಗಿತ್ತು. ಹೀಗಾಗಿ, ಸೂಕ್ತ ಸಾಕ್ಷಿಗಳನ್ನು ಕಲೆಹಾಕಿ, ಆ ಮಹಿಳೆಯನ್ನು ಮತ್ತೆ ವಿಚಾರಣೆ ನಡೆಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಗಂಡನನ್ನು ಕೊಂದು, ಪ್ರಿಯಕರನ ಜೊತೆ ಹಾಯಾಗಿರಬೇಕು ಎಂದುಕೊಂಡಿದ್ದವಳು ಈಗ ಕಂಬಿ ಎಣಿಸುವಂತಾಗಿದೆ.

ಆರೋಪಿ ದಿಲ್ಲಿ ರಾಣಿ (27) ತನ್ನ ಪತಿ ಶಂಕರ್ ರೆಡ್ಡಿ ಮತ್ತು ತನ್ನ 7 ವರ್ಷದ ಮಗನೊಂದಿಗೆ ವಾಸವಾಗಿದ್ದಳು. ಆಕೆಯ ಪತಿ ಯಶವಂತಪುರದ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದರು. ಗುರುವಾರ ಮಧ್ಯರಾತ್ರಿ ಎಚ್ಚರಗೊಂಡ ಮಗ ತನ್ನ ತಂದೆ-ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ, ಗಾಬರಿಯಾಗಿದ್ದ. ಆತ ಜೋರಾಗಿ ಕೂಗಿಕೊಂಡ ನಂತರ ಅಕ್ಕಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಹಾಗೇ, ಗಂಡ-ಹೆಂಡತಿ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತು.

ಆರೋಪಿ ದಿಲ್ಲಿ ರಾಣಿ ಅವರ ಕೈಗೆ ಗಾಯಗಳಾಗಿದ್ದರೆ, ಶಂಕರ್ ಆಸ್ಪತ್ರೆಗೆ ಬರುವಾಗಲೇ ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಾಗ ದಿಲ್ಲಿ ರಾಣಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡಲಾರಂಭಿಸಿದಾಗ ಪೊಲೀಸರಿಗೆ ಅನುಮಾನ ಉಂಟಾಗಿತ್ತು. ಬಳಿಕ, ಮನೆಯಿಂದ ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿದ್ದ ಚಿನ್ನದ ಸರ ನಾಪತ್ತೆಯಾಗಿರುವುದು ಪತ್ತೆಯಾಗಿತ್ತು. ಯಾರೋ ಮನೆಯ ಬಾಗಿಲು ಒಡೆದು, ಒಳಗೆ ಬಂದು ಈ ದರೋಡೆ ಮಾಡಿರುವ ಕುರುಹು ಅಲ್ಲಿರಲಿಲ್ಲ. ಹೀಗಾಗಿ, ಪರಿಚಯಸ್ಥರೇ ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಉಂಟಾಗಿತ್ತು.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಈ ಬಗ್ಗೆ ವಿಚಾರಣೆ ಆರಂಭಿಸಿದ ಪೊಲೀಸರಿಗೆ ದಿಲ್ಲಿ ರಾಣಿಯ ಕೈಯಲ್ಲಿ ಆಗಿರುವ ಗಾಯ ಬೇರೆ ಯಾರೋ ಮಾಡಿದ್ದಲ್ಲ, ಅದು ಆಕೆಯೇ ಮಾಡಿಕೊಂಡ ಗಾಯ ಎಂಬುದು ಗೊತ್ತಾಗಿತ್ತು. ಆಕೆಯ ಮೊಬೈಲ್ ಫೋನ್ ದಾಖಲೆಗಳು ಆಕೆ ತನ್ನ ಮನೆಯ ಬಳಿಯೇ ಇದ್ದ ಇನ್ನೋರ್ವ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು, ಆತನ ಜೊತೆ ವಾಸಿಸಲು ತನ್ನ ಪತಿಯನ್ನು ಕೊಲ್ಲಲು ಯೋಜಿಸಿದ್ದಳು ಎಂದು ಸಾಕ್ಷಿ ಹೇಳಿತ್ತು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಬಗ್ಗೆ ಆಕೆ ಕೂಡ ತಪ್ಪೊಪ್ಪಿಕೊಂಡಿದ್ದು, ಕೊಲೆಗಾಗಿ ಆಕೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.