ಬೆಂಗಳೂರು: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, ಸುಲಿಗೆ

ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ಆರು ಆರೋಪಿಗಳನ್ನು ಬೆಂಗಳೂರಿನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, ಸುಲಿಗೆ
ಸಾಂದರ್ಭಿಕ ಚಿತ್ರ
Edited By:

Updated on: Feb 01, 2025 | 10:39 AM

ಬೆಂಗಳೂರು, ಫೆಬ್ರವರಿ 01: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ (Honeytrap) ಮೂಲಕ ಖೆಡ್ಡಾಕ್ಕೆ ಕೆಡವಿಕೊಂಡು ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಆರು ಆರೋಪಿಗಳನ್ನು ಹೆಬ್ಬಾಳ ಠಾಣೆ  ಪೊಲೀಸರು (Hebbal Police) ಬಂಧಿಸಿದ್ದಾರೆ. ಗೀತಾ, ಮಂಜುಳಾ, ವಿಜಯಲಕ್ಷ್ಮಿ, ಲೀಲಾವತಿ, ಹರೀಶ್, ವೆಂಕಟೇಶ ಬಂಧಿತ ಆರೋಪಿಗಳು.

ಕೆಲ ದಿನಗಳ ಹಿಂದೆ ಸಂತ್ರಸ್ತ ಯುವಕನಿಗೆ ಆರೋಪಿ ಮಂಜುಳ ಪರಿಚಿತರಾಗಿದ್ದಳು. ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ಸಂತ್ರಸ್ತ ಯುವಕ “ತಾನು ವಧು ಹುಡುಕುತ್ತಿದ್ದು ಕನ್ಯೆ ಇದ್ದರೆ ಹೇಳಿ” ಎಂದು ಮಂಜುಳಗೆ ಹೇಳಿದ್ದರು. ಸಂತ್ರಸ್ತ ಯುವಕ ಜನವರಿ 20 ರಂದು ಮಂಜುಳಾಗೆ ಕರೆ ಮಾಡಿ ವಿಚಾರಿಸಿದಾಗ, ಹೆಬ್ಬಾಳದ ತನ್ನ ಸ್ನೇಹಿತೆ ಮನೆಗೆ ಹೋದರೆ ಕನ್ಯೆ ತೋರಿಸುವುದಾಗಿ ಹೇಳಿದ್ದಳು.

ಅದರಂತೆ ಮಂಜುಳ ಸ್ನೇಹಿತೆ ವಿಜಯಲಕ್ಷ್ಮಿ ಮನೆಗೆ ಸಂತ್ರಸ್ತ ಯುವಕ ಹೋಗಿದ್ದನು. ಮನೆಯಲ್ಲಿ ಲೀಲಾವತಿ ಎಂಬ ಯುವತಿಯನ್ನು ಯುವಕನಿಗೆ ವಿಜಯಲಕ್ಷ್ಮಿ ಪರಿಚಯ ಮಾಡಿಸಿದ್ದಾಳೆ. “ಟೀ ತಯಾರಿಸುತ್ತಿರು ಬರುತ್ತೇನೆ” ಎಂದು ಹೇಳಿ, ಯುವಕನಿಂದ ಹಣ ಪಡೆದು ವಿಜಯಲಕ್ಷ್ಮಿ ಮನೆಯಿಂದ ತೆರಳಿದ್ದಾಳೆ.

ಇದನ್ನೂ ಓದಿ: ಸುಂದರಿಯ ಬಲೆಗೆ ಬಿದ್ದ 57ರ ವ್ಯಕ್ತಿ: ಪೊಲೀಸರ ಸೋಗಿನಲ್ಲಿ ಹನಿಟ್ರ್ಯಾಪ್​, ಪ್ರಮುಖ ಆರೋಪಿ ಸೇರಿ ಗ್ಯಾಂಗ್​ ಅರೆಸ್ಟ್

ಮನೆಯಲ್ಲಿ ಒಂಟಿಯಾಗಿದ್ದ ಸಂತ್ರಸ್ತ ಯುವಕ ಮತ್ತು ಲೀಲಾವತಿ ಇಬ್ಬರೇ ಇದ್ದಾರೆ. ಈ ವೇಳೆ ಪೊಲೀಸರ ಸೋಗಿನಲ್ಲಿ ಗೀತಾ, ಹರೀಶ ಮತ್ತು ವೆಂಕಟೇಶ ಬಂದಿದ್ದಾರೆ. ಮನೆಯಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದೀರಾ? ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಸಂತ್ರಸ್ತ ಯುವಕ, ಆರೋಪಿಗಳಿಗೆ ಪೋನ್ ಪೇ ಮೂಲಕ 50 ಸಾವಿರ ಹಣ ಕಳುಹಿಸಿದ್ದಾನೆ.

ಬಳಿಕ, ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಸಂತ್ರಸ್ತ ಯುವ, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Sat, 1 February 25

Follow Us