Crime News: ಪ್ರೀತಿಯನ್ನು ನಿರಾಕರಿಸಿದ 15 ವರ್ಷದ ಬಾಲಕಿಗೆ ಶೂಟ್ ಮಾಡಿ ಕೊಂದ ಯುವಕ

| Updated By: ಸುಷ್ಮಾ ಚಕ್ರೆ

Updated on: Jan 19, 2023 | 1:08 PM

ಅರವಿಂದ್ 15 ವರ್ಷದ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ, ಅವಳು ಆತನ ಪ್ರೀತಿಯನ್ನು ಒಪ್ಪಲಿಲ್ಲ. ಇದೇ ಕಾರಣಕ್ಕೆ ಆತ ಆಕೆಯನ್ನು ಶೂಟ್ ಮಾಡಿ ಕೊಂದಿದ್ದಾನೆ.

Crime News: ಪ್ರೀತಿಯನ್ನು ನಿರಾಕರಿಸಿದ 15 ವರ್ಷದ ಬಾಲಕಿಗೆ ಶೂಟ್ ಮಾಡಿ ಕೊಂದ ಯುವಕ
ಸಾಂದರ್ಭಿಕ ಚಿತ್ರ
Follow us on

ಭದೋಹಿ: ಉತ್ತರ ಪ್ರದೇಶದ (Uttar Pradesh) ಭದೋಹಿಯ ಸುರ್ವಾಯಾ ಪ್ರದೇಶದಲ್ಲಿ 15 ವರ್ಷದ ಬಾಲಕಿಯೊಬ್ಬಳು ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಬುಧವಾರ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಅನುರಾಧಾ ಬಿಂದ್ ಎಂಬ ಬಾಲಕಿ ತನ್ನ ಸೋದರ ಸಂಬಂಧಿ ನಿಶಾ ಜೊತೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಿಂದ ಮನೆಗೆ ಮರಳುತ್ತಿದ್ದಾಗ ಆರೋಪಿ 22 ವರ್ಷದ ಅರವಿಂದ್ ವಿಶ್ವಕರ್ಮ ಆಕೆಯ ತಲೆಗೆ ಗುಂಡು ಹಾರಿಸಿ ಕೊಲೆ (Murder) ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರವಿಂದ್ ಆ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ, ಅವಳು ಆತನ ಪ್ರೀತಿಯನ್ನು ಒಪ್ಪಲಿಲ್ಲ. ಇದೇ ಕಾರಣಕ್ಕೆ ಆತ ಆಕೆಯನ್ನು ಶೂಟ್ ಮಾಡಿ ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತನ್ನ ಪ್ರೀತಿಯನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡ ಆತ ಆಕೆಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಡಿಕೇರಿಯಲ್ಲಿ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಕೆರೆಗೆ ಹಾರಿದ್ದ ಹಂತಕನ‌ ದೇಹ ಪತ್ತೆ

ಬೆಂಗಳೂರಿನಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿದೆ. ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ವಿವಾಹಿತ ವ್ಯಕ್ತಿಯೊಬ್ಬ 19 ವರ್ಷದ ಯುವತಿಯನ್ನು ಕೊಂದಿದ್ದ. ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಕಾಲೇಜಿಗೆ ಹೋಗುತ್ತಿದ್ದ ಹುಡುಗಿಯನ್ನು ಕೊಂದ ಆರೋಪದ ಮೇಲೆ 25 ವರ್ಷದ ಯುವಕನನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬುಧವಾರ ಬಂಧಿಸಿದ್ದರು.

ಬಂಧಿತ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ನೆಲೆಸಿದ್ದ ಆಂಧ್ರಪ್ರದೇಶ ಮೂಲದ ಮಧುಚಂದ್ರ ಎಂದು ಗುರುತಿಸಲಾಗಿದೆ. ರಾಜಾನುಕುಂಟೆ ಪೊಲೀಸ್ ವ್ಯಾಪ್ತಿಯ ಶ್ಯಾನುಭೋಗನಹಳ್ಳಿ ನಿವಾಸಿ ರಾಶಿ ಎಂಬಾಕೆಯೇ ಬಲಿಯಾದ ಯುವತಿ. ಆಕೆ ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದಳು. ರಾಶಿ ಮತ್ತು ಮಧುಚಂದ್ರ ಇಬ್ಬರ ನಡುವೆ ಸ್ನೇಹವಿತ್ತು. ಮಧುಚಂದ್ರ ರಾಶಿಗೆ ಪ್ರಪೋಸ್ ಮಾಡಿದ್ದನು. ಆದರೆ ಅವಳು ಯೋಚಿಸಲು ಸಮಯ ಕೇಳಿದ್ದಳು. ಮಧುಚಂದ್ರಗೆ ಮದುವೆಯಾಗಿ ಮಗು ಇದೆ ಎಂದು ರಾಶಿಗೆ ತಿಳಿದ ನಂತರ ಆಕೆ ಆತನನ್ನು ಅವಾಯ್ಡ್​ ಮಾಡತೊಡಗಿದ್ದಳು.

ಇದನ್ನೂ ಓದಿ: ಕೊಡಗಿನ ಹತಾಶೆ ಪ್ರೀತಿಗೆ ಎರಡು ಬಲಿ: ಯುವತಿ ಬರ್ಬರ ಕೊಲೆ; ಹಂತಕನ ಶವ ಕೆರೆಯಲ್ಲಿ ಪತ್ತೆ

ಇದರಿಂದ ಕೋಪಗೊಂಡ ಮಧುಚಂದ್ರ ಮಂಗಳವಾರ ಸಂಜೆ ಆಕೆಯನ್ನು ಜಮೀನಿಗೆ ಕರೆದೊಯ್ದು ಆಕೆಯ ಕತ್ತು ಕೊಯ್ದು ಕೊಂದಿದ್ದಾನೆ. ಮಧುಚಂದ್ರನನ್ನು ಬುಧವಾರ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ