ಕೊಡಗು: ಪ್ರೇಯಸಿಯ ಪತಿಯನ್ನು ಕೊಲೆ ಮಾಡಲು ಯತ್ನಿಸಿದ ಪೊಲೀಸ್ ಪೇದೆ

| Updated By: ವಿವೇಕ ಬಿರಾದಾರ

Updated on: Oct 23, 2024 | 2:13 PM

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಠಾಣೆಯ ಪೊಲೀಸ್​ ಪೇದೆ ಕೊಟ್ರೇಶ್​ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಆಯಿಷಾ ಎಂಬುವರ ಜೊತೆ ಅಕ್ರಮ ಸಂಬಂಧ ಬೆಳಸಿದ್ದಾನೆ. ಮಂಗಳವಾರ ಮಧ್ಯರಾತ್ರಿ ಕೊಟ್ರೇಶ್​​ ಪ್ರೇಯಸಿ ಆಯಿಷಾ ಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.

ಕೊಡಗು: ಪ್ರೇಯಸಿಯ ಪತಿಯನ್ನು ಕೊಲೆ ಮಾಡಲು ಯತ್ನಿಸಿದ ಪೊಲೀಸ್ ಪೇದೆ
ಪೊಲೀಸ್​ ಪೇದೆ ಕೊಟ್ರೇಶ್
Follow us on

ಕೊಡಗು, ಅಕ್ಟೋಬರ್​ 23: ಪೊಲೀಸ್​ ಪೇದೆಯೋರ್ವ (Police Constable) ಕೊಲೆ ಮಾಡಲು ಯತ್ನಿಸಿರುವ ಘಟನೆ ಸೋಮವಾರಪೇಟೆ (Somwarpet) ತಾಲೂಕಿನ ಶನಿವಾರಸಂತೆ ಎಂಬಲ್ಲಿ ನಡೆದಿದೆ. ಕೊಲೆ ಮಾಡಲು ಯತ್ನಿಸಿದ್ದ ಪೊಲೀಸ್​ ಪೇದೆ ​​​​ಕೊಟ್ರೇಶ್​ (30) ಮತ್ತು ಕೊಲೆಗೆ ಯತ್ನಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಕೊಟ್ರೇಶ್​ ಪ್ರಿಯತಮೆ ಆಯಿಷಾ (29)ಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಟ್ರೇಶ್​​ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಠಾಣೆಯಲ್ಲಿ ಪೊಲೀಸ್​ ಪೇದೆಯಾಗಿದ್ದಾರೆ.

ಶನಿವಾಸಂತೆಯ ನಿವಾಸಿ ಇಫ್ರಾಜ್ ಎಂಬುವರು ಆರು ವರ್ಷಗಳ ಹಿಂದೆ ಆಯಿಷಾಳನ್ನು ವಿವಾಹವಾಗಿದ್ದಾರೆ. ದಂಪತಿಗೆ ಒಂದೂವರೆ ವರ್ಷದ ಮಗು ಇದೆ. ಇಬ್ಬರ ಮಧ್ಯೆ ಅಷ್ಟೊಂದು ಅನೋನ್ಯತೆ ಇರಲಿಲ್ಲ. ಪತಿ ಪತ್ನಿ ಜಗಳವಾಡಿ ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ಪೊಲೀಸ್​ ಪೇದೆ ಕೋಟ್ರೆಶ್​ ಪ್ರೇಯಸಿ ಆಯಿಷಾಳ ಪಕ್ಕದ ಮನೆಯಲ್ಲಿ ವಾಸವಾಗಿದ್ದಾನೆ. ಆಯಿಷಾ ಪೊಲೀಸ್​ ಪೇದೆ ​​​​​ಕೊಟ್ರೇಶ್​ನನ್ನು ಅ.16 ಮಧ್ಯರಾತ್ರಿ ಮನೆಗೆ ಕರೆಸಿದ್ದಾಳೆ. ಬಳಿಕ, ಕೊಟ್ರೇಶ್​​ ದಿಂಬಿನಿಂದ ಉಸಿರುಗಟ್ಟಿಸಿ ಆಯಿಷಾ ಪತಿ ಇಫ್ರಾಜ್​ರನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಇಫ್ರಾಜ್​​ ಜೋರಾಗಿ ಕೂಗಿಕೊಂಡಿದ್ದಾರೆ. ಪಕ್ಕದ ಕೋಣೆಯಲ್ಲಿ ಮಲಗಿದ್ದ ಇಫ್ರಾಜ್​ ಅವರ​ಅಕ್ಕನ ಮಗ ಬಂದು ಬಾಗಿಲು ಒಡೆದು, ಅವರನ್ನು ರಕ್ಷಿಸಿದ್ದಾರೆ. ಬಳಿಕ ಇಫ್ರಾಜ್​ ಆರೋಪಿ ಕೊಟ್ರೇಶ್​​ನ ಬೆರಳು ಕಚ್ಚಿ ಪಾರಾಗಿದ್ದರು. ಬಳಿಕ ಇಫ್ರಾಜ್​ ಶನಿವಾರಸಂತೆ ಉಪಠಾಣೆಗೆ ತೆರಳಿ ದೂರು ನೀಡಲು ಮುಂದಾದರು,  ಆದರೆ ಆಷಿಯಾ ಕೂಡ ದೂರು ನೀಡಿದ್ದರಿಂದ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುವುದಿಲ್ಲ.

ಸೋಮವಾರಪೇಟೆ ಮುಖ್ಯ ಠಾಣೆಯಲ್ಲೂ ಪ್ರಕರಣ ದಾಖಲಿಸಿಕೊಳ್ಳದೆ ಪೊಲಿಸರು ತನ್ನನ್ನು ಬೆದರಿಸಿ ಕಳುಹಿಸಿದರು ಎಂದು ಇಫ್ರಾಜ್​​ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರನ್ನು ನೇರವಾಗಿ ಭೇಟಿ ಮಾಡಿ ದೂರು ನೀಡಿದ್ದಾರೆ. ಸೋಮವಾರಪೇಟೆ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಎಸ್ಪಿ ರಾಮರಾಜನ್ ಪೊಲಿಸರಿಗೆ ಸೂಚಿಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಕೊಲೆ ಯತ್ನದ ದೂರು ದಾಖಲಿಸಿಕೊಂಡಿದ್ದಾರೆ.

ವಿಚಿತ್ರ ಅಂದರೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವವರೆಗೂ ತನ್ನ ಪತ್ನಿ ಜೊತೆ ಸೇರಿ ದಾಳಿ ಮಾಡಿದ್ದು ಯಾರು? ಅನ್ನೋ ಮಾಹಿತಿ ಇಫ್ರಾಜ್​ಗೆ ಇರಲಿಲ್ಲ. ಆದರೆ, ಎಸ್ಪಿ ಭೇಟಿ ಮಾಡಿದ ಬಳಿಕ ಶನಿವಾರಸಂತೆ ಪೊಲೀಸ್​ ಠಾಣೆಗೆ ದೂರು ನೀಡಲು ತೆರಳಿದಾಗ ಅಲ್ಲಿದ್ದ ಪೇದೆ ಕೊಟ್ರೇಶ್​ ಅಸಹಜವಾಗಿ ವರ್ತಿಸಲು ಶುರುಮಾಡಿದ್ದಾನೆ. ತನ್ನ ಕೈ ಬೆರಳನ್ನು ಮುಚ್ಚಿಕೊಳ್ಳಲು ಶುರುಮಾಡಿದ್ದಾನೆ.

ತೀವ್ರ ಬೆವರುತ್ತಿದ್ದ ಆತ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಾನೆ. ಈ ಸಂದರ್ಭದಲ್ಲಿ ಇಫ್ರಾಜ್ ಆತನ ಬೆರಳನ್ನ ನೋಡಿದಾಗ ಗಾಯವಾಗಿರವುದನ್ನು ಕಂಡಿದ್ದಾರೆ. ಅಲ್ಲದೇ, ಕೊಲೆ ಯತ್ನ ಸಂದರ್ಭದಲ್ಲಿ ಕೊಟ್ರೇಶ್​​ ಓಡಿ ಹೋಗುವಾಗ ಚಪ್ಪಲಿ ಬಿಟ್ಟು ಹೋಗಿದ್ದಾನೆ. ಈ ಪೇದೆಯ ಶೂ ಸೈಜ್ ಮತ್ತು ಆ ಚಪ್ಪಲಿಯ ಸೈಜ್ ಮ್ಯಾಚ್​ ಆಗಿದೆ.
ಅಲ್ಲದೇ, ಕೊಲೆ ಯತ್ನ ಸಂದರ್ಭದಲ್ಲಿ ಆರೋಪಿ ಪೊಲೀಸರು ಧರಿಸುವ ನೀಲಿ ಬಣ್ಣದ ಕ್ರೀಡಾ ಜರ್ಕಿನ್ ಧರಿಸಿದ್ದು ನೆನಪಿಗೆ ಬಂದಿದೆ. ಅದೂ ಅಲ್ಲದೇ, ಇಫ್ರಾಜ್ ಎಸ್​ಐ ಜೊತೆ ಮಾತನಾಡುವಾಗ ಪೇದೆ ಕೊಟ್ರೇಶ್​ ಬಾಗಿಲು ಬಳಿ ನಿಂತು ಮಾತುಗಳನ್ನ ಕದ್ದು ಆಲಿಸುವುದೂ ಗಮನಕ್ಕೆ ಬಂದಿದೆ.

ಇವೆಲ್ಲದ್ದಕಿಂತ ಹೆಚ್ಚು ಕೊಟ್ರೇಶ್​ ಪತ್ನಿ ಆಯಿಷಾಳ ತಂದೆ-ತಾಯಿ ನೆಲೆಸಿರುವ ಕಟ್ಟಡದಲ್ಲೇ ಬಾಡಿಗಗೆ ಇದ್ದಾನೆ. ಹೀಗಾಗಿ ತನ್ನ ಮೇಲೆ ದಾಳಿ ಮಾಡಿದ್ದು ಈತನೇ ಎಂಬುದು ಇಫ್ರಾಜ್​ಗೆ ಸ್ಪಷ್ಟವಾಗಿದೆ. ಈ ವಿಚಾರವನ್ನು ಎಸ್​ಐಗೆ ತಿಳಿಸಿದ ಹಿನ್ನೆಲೆಯಲ್ಲಿ ಪೊಲಿಸರು ಕೊಟ್ರೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಸತ್ಯ ಒಪ್ಪಿಕೊಂಡಿದ್ದಾನೆ. ಸದ್ಯ ಕೊಟ್ರೇಶ್​ ಮತ್ತು ಪ್ರೇಯಸಿ ಆಯಿಷಾಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಾವೇರಿ ಮೂಲದ ಕೊಟ್ರೇಶ್​ಗೆ ನವೆಂಬರ್​ನಲ್ಲಿ ಮದುವೆ ಫಿಕ್ಸ್​ ಆಗಿದೆಯಂತೆ. ಆದರೆ ಇಲ್ಲಿ ಪರಸ್ತ್ರೀ ಸಹವಾಸ ಮಾಡಿ ಜೈಲು ಪಾಲಾಗಿದ್ದಾನೆ. ಕೊಡಗಿನ ಖಡಕ್ ಎಸ್ಪಿ ರಾಮರಾಜನ್ ಅವರ ಕರ್ತವ್ಯಪರತೆಯಿಂದಾಗಿ ಪ್ರಕರಣ ಬಯಲಾಗಿದೆ. ಪ್ರಕರಣದ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಇಫ್ರಾಜ್ ಕುಟುಂಬ ಮನವಿ ಮಾಡಿದೆ.

ಇದನ್ನೂ ಓದಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ: ಬೆಂಗಳೂರಿನ ಹೆಡ್​​ಕಾನ್ಸ್ಟೇಬಲ್​ ಅಮಾನತು

ಗೃಹಲಕ್ಷ್ಮೀ ಯೋಜನೆ ಹಣ ತರಲು ಹೋಗಿದ್ದ ಮಹಿಳೆಯ ಕೊಲೆ

ದಾವಣಗೆರೆ: ಗೃಹಲಕ್ಷ್ಮೀ ಯೋಜನೆ ಹಣ ತರಲು ಬ್ಯಾಂಕ್​ಗೆ ಹೋಗಿದ್ದ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಜಗಳೂರು ತಾಲೂಕಿನ ಉಜ್ಜಪ್ಪರ ಒಡೆರಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಸಿರುಗಟ್ಟಿಸಿ ಪತ್ನಿ ಸತ್ಯಮ್ಮಳನ್ನು ಕೊಲೆಮಾಡಿ ಪತಿ ಅಣ್ಣಪ್ಪ ಪರಾರಿಯಾಗಿದ್ದಾನೆ.

ದಂಪತಿ 12 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಇದೆ. ಪತಿ ಅಣ್ಣಪ್ಪ ನಿತ್ಯ ಕುಡಿದು ಬಂದು ಪತ್ನಿ ಸತ್ಯಮ್ಮರಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಸತ್ಯಮ್ಮ ತವರು ಮನೆ ಸೇರಿದ್ದರು.

ಗೃಹಲಕ್ಷ್ಮೀ ಯೋಜನೆ ಹಣ ಪಡೆಯಲು ಸತ್ಯಮ್ಮ ಮಂಗಳವಾರ ಜಗಳೂರು ತಾಲೂಕಿನ ಅಸಗೋಡ್​​ ಬ್ಯಾಂಕ್​​ಗೆ ಬಂದಿದ್ದರು. ಇದೇ ವೇಳೆ ಬ್ಯಾಂಕ್​ಗೆ ಬಂದ ಪತಿ ಅಣ್ಣಪ್ಪ ಪತ್ನಿ ಸತ್ಯಮ್ಮ ಅವರನ್ನು ಜಮೀನಿಗೆ ಕರೆದೊಯ್ದು ಹಲ್ಲೆ ಮಾಡಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:11 am, Wed, 23 October 24