ಬಡಿಗೆಯಿಂದ ಹೊಡೆದು ಪತ್ನಿ ಕೊಲೆ; ಪ್ರಕರಣ ಮುಚ್ಚಿಹಾಕಲು ಶವ ಸುಟ್ಟು ಹಾಕಿದ ಹಂತಕ ಸಿಕ್ಕಿಬಿದ್ದಿದ್ದೇಗೆ?

ಹೆತ್ತವರು, ಮಗಳು ಚೆನ್ನಾಗಿರಲಿ, ನಮ್ಮೂರಲ್ಲಿಯೇ ಇರಲಿ ಎಂದು ಸಂಬಂಧಿಕನಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾಗಿ ಆರು ವರ್ಷವಾಗಿದ್ದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಆದರೂ ಮನೆಯಲ್ಲಿ ಚೆನ್ನಾಗಿಯೇ ಇದ್ದರು. ಮೊನ್ನೆ ಕುಡಿದು ಬಂದ ಗಂಡ ಮಲಗಿಕೊಂಡವಳಿಗೆ ಹೊಡೆದು ಸಾಯಿಸಿದ್ದಾನೆ. ಸಾಯಿಸಿದ ನಂತರ ತಂದೆ ಜೊತೆ ಸೇರಿ ಸುಟ್ಟು ಹಾಕಿದ್ದಾರೆ. ತನಿಖೆ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಡಿಗೆಯಿಂದ ಹೊಡೆದು ಪತ್ನಿ ಕೊಲೆ; ಪ್ರಕರಣ ಮುಚ್ಚಿಹಾಕಲು ಶವ ಸುಟ್ಟು ಹಾಕಿದ ಹಂತಕ ಸಿಕ್ಕಿಬಿದ್ದಿದ್ದೇಗೆ?
ಆರೋಪಿ ಗಂಡ, ಮೃತ ಪತ್ನಿ, ಮೃತಳ ತಾಯಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 08, 2024 | 10:21 PM

ಕೊಪ್ಪಳ, ಸೆ.08: ಜಿಲ್ಲೆಯ ಕುಕನೂರು(Kuknoor) ತಾಲೂಕಿನ ಆರಕೇರಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗೀತಾ ಬಾವಿಕಟ್ಟಿ ಎಂಬ ಮಹಿಳೆಯೋರ್ವಳ ಕೊಲೆಯಾಗಿತ್ತು. ಮೂವತ್ತು ವರ್ಷದ ಗೀತಾಳನ್ನು ಆಕೆಯ ಪತಿಯೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಮೂಲತಃ ಅರಕೇರಿ ಗ್ರಾಮದ ಈಶಪ್ಪ ಎಂಬುವವರು ಮಗಳಾದ ಗೀತಾಳನ್ನು ಅವರ ಮಾವ ಮಾಲ್ಲಾರೆಡ್ಡಿ ಎಂಬುವವರ ಮಗ ದೇವರೆಡ್ಡಿಗೆ ಆರು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಮಗಳು ನಮ್ಮೂರಲ್ಲಿಯೇ ಇರ್ತಾಳೆ, ಜೊತೆಗೆ ಸಂಬಂಧಿಯಾಗಿ ಆಗಿರುವುದರಿಂದ ಚೆನ್ನಾಗಿ ಇರುತ್ತಾರೆ ಎಂದು ಹೆತ್ತವರು ಮಗಳ ವಿವಾಹ ಮಾಡಿದ್ದರು.

ಆದರೆ, ಕಟ್ಟಿಕೊಂಡ ಗಂಡ, ರಾತ್ರಿ ಕುಡಿದು ಬಂದು ಆಕೆ ಹೊಡೆದು ಸಾಯಿಸಿದ್ದಾನೆ ಎಂದು ಕೊಲೆಯಾದ ಗೀತಾಳ ಹೆತ್ತವರು ಆರೋಪಿಸಿದ್ದಾರೆ. ಹೌದು, ಇದೇ ಸೆಪ್ಟೆಂಬರ್ 6 ರಂದು ರಾತ್ರಿ ಒಂದು ಗಂಟೆ ಸಮಯದಲ್ಲಿ ಮನೆಗೆ ಬಂದಿದ್ದ ಗೀತಾ ಪತಿ ದೇವರೆಡ್ಡಿ, ಮನೆಯಲ್ಲಿ ಮಲಗಿದ್ದ ಪತ್ನಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಬಿಟ್ಟಿದ್ದಾನೆ. ನಂತರ ಮುಂಜಾನೆ ದೇವರೆಡ್ಡಿ ತಂದೆ ಮಲ್ಲಾರಡ್ಡಿ ಗೀತಾಳ ಹೆತ್ತವರ ಬಳಿ ಹೋಗಿ, ನಿನ್ನ ಅಳಿಯ ನಿನ್ನ‌ ಮಗಳನ್ನು ಹೊಡೆದು ಕೊಂದಿದ್ದಾನೆ ಎಂದು ಹೇಳಿದ ಮೇಲೆ ಗೀತಾ ಹೆತ್ತವರಿಗೆ ಮಾಹಿತಿ ಗೊತ್ತಾಗಿದೆ. ನಂತರ ಎಲ್ಲರು ಸೇರಿಕೊಂಡೆ ಶವದ ಅಂತ್ಯಕ್ರಿಯೆ ಮಾಡಿದ್ದಾರೆ.

ಇದನ್ನೂ ಓದಿ:ಗಣೇಶ ಪೂಜೆಗೆ ಇಟ್ಟ ಹಣದ ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ

ಇನ್ನು ಗೀತಾಳನ್ನು ಆಕೆಯ ಪತಿ ಕೊಲೆ ಮಾಡಿದ್ದು ಯಾಕೆ ಎನ್ನುವುದು ಮಾತ್ರ ಸ್ಪಷ್ಟವಾಗಿ ಯಾರಿಗೂ ಗೊತ್ತಾಗಿಲ್ಲ. ಆದ್ರೆ, ಗೀತಾ ಮತ್ತು ದೇವರೆಡ್ಡಿ ಮದುವೆಯಾಗಿ ಆರು ವರ್ಷವಾಗಿತ್ತಂತೆ.  ದಂಪತಿಗೆ ಮಕ್ಕಳು ಆಗಿರಲಿಲ್ಲ. ಹೀಗಾಗಿ ಆಗಾಗ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತಂತೆ. ಆದರೆ, ಎಂದಿಗೂ ಕೂಡ ಜಗಳ ಗಂಭೀರವಾಗಿರಲಿಲ್ಲ. ತಮ್ಮ ಮಗಳು ಕೂಡ ನಮ್ಮ ಮುಂದೆ ಯಾವ ನೋವುಗಳನ್ನು ಕೂಡ ಹೇಳಿಕೊಂಡಿಲ್ಲ. ಹೀಗಾಗಿ ಕೊಲೆ ಯಾಕೆ ಆಯ್ತು ಎನ್ನೋದು ನಮಗೂ ಕೂಡ ತಿಳಿಯದಂತಾಗಿದೆ ಎಂದು ಗೀತಾಳ ಹೆತ್ತವರು ಹೇಳ್ತಿದ್ದಾರೆ. ಇತ್ತ ಮೃತಳ ಅಣ್ಣ ಸಿದ್ದಾರಡ್ಡಿ ಮಾತನಾಡಿ, ‘ದೇವರೆಡ್ಡಿ ಕುಡಿತದ ಚಟದ ದಾಸನಾಗಿದ್ದ. ಮೊನ್ನೆ ರಾತ್ರಿ ಕೂಡ ಕುಡಿದು ಬಂದು ಕೊಲೆ ಮಾಡಿದ್ದಾನೆ ಎಂದು ಕುಟುಂಬ ಆರೋಪಿಸುತ್ತಿದ್ದಾರೆ. ನಾವೆಲ್ಲರು ಚೆನ್ನಾಗಿಯೇ ಇದ್ದೇವೆ. ನಮ್ಮ ಮಾವ ಆಕೆಯನ್ನು ಕೊಂದಿದ್ದಾನೆ. ನಮ್ಮ ದೊಡ್ಡ ಮಾವನದು ತಪ್ಪಿಲ್ಲ. ಆದರೆ ಕೊಲೆ ಮಾಡಿರುವ ದೇವರೆಡ್ಡಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಹಂತಕ ಸಿಕ್ಕಿಬಿದ್ದಿದ್ದೇಗೆ?

ಅಚ್ಚರಿಯಂದರೆ ಗೀತಾ ಕೊಲೆಯಾದರೂ ಕೂಡ ಆರಂಭದಲ್ಲಿ ಗೀತಾ ಹೆತ್ತವರು ಪೊಲೀಸರಿಗೆ ಮಾಹಿತಿ ಹೇಳಿಲ್ಲ. ಸಂಬಂಧಿಕರೇ ಆಗಿದ್ದರಿಂದ ಸುಮ್ಮನಾಗಿದ್ದಾರೆ. ಆದ್ರೆ, ನಿನ್ನೆ ಮುಂಜಾನೆ ಗೀತಾ ಕೊಲೆ ಮಾಹಿತಿ ಕುಕನೂರು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರು ವಿಚಾರಣೆ ಆರಂಭಿಸಿದಾಗ ಕೊಲೆಯಾದ ಗೀತಾ ಹೆತ್ತವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹತ್ಯೆ ಮಾಡಿದ ದೇವರೆಡ್ಡಿ ಹಾಗೂ ಆತನ ತಂದೆ ಮಲ್ಲಾರೆಡ್ಡಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸಮಸ್ಯೆ ಇದ್ದರೆ ದೊಡ್ಡವರಿಗೆ ಹೇಳಿ ಬಗೆಹರಿಸಿಕೊಳ್ಳಬಹುದಿತ್ತು.ಆದ್ರೆ, ಪಾಪಿ ಪತಿ ಕುಡಿದು ಬಂದು ಪತ್ನಿಯನ್ನೇ ಕೊಲೆ ಮಾಡಿ ಪತ್ನಿಯನ್ನು ಬಾರದ ಲೋಕಕ್ಕೆ ಕಳಿಸಿದ್ರೆ ತಾನು ಕಂಬಿ ಹಿಂದೆ ಹೋಗಿದ್ದು ಮಾತ್ರ ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ