ದಾವಣಗೆರೆ: ನ್ಯಾಯಕ್ಕಾಗಿ ಹೋರಾಡಿದ 13 ದಲಿತ ಯುವಕರ ವಿರುದ್ಧವೇ ಪ್ರಕರಣ ದಾಖಲಿಸಿದ ಪೊಲೀಸರು
ದಲಿತ ವ್ಯಕ್ತಿಯ ಸಾವಿಗೆ ಕಾರಣನಾದ ಆರೋಪಿ ಬಂಧನಕ್ಕೆ ಆಗ್ರಹಿಸಿ ಶವ ವಿಟ್ಟು ಪ್ರತಿಭಟನೆ ನಡೆಸಿದ ದಲಿತ ಯುವಕರ ವಿರುದ್ಧವೇ ಇದೀಗ ಚನ್ನಗಿರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಲಸಕ್ಕೆ ಬಂದಿಲ್ಲವೆಂದು ಶೇಖರಪ್ಪ ಎಂಬವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ದಲಿತ ಯುವಕರ ಮೇಲೆ ಕೇಸ್ ದಾಖಲು ಮಾಡಿರುವುದು ದಲಿತ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದೆ.

ದಾವಣಗೆರೆ, ಜ.30: ಬಂದಿಲ್ಲವೆಂದು ಶೇಖರಪ್ಪ ಎಂಬವರನ್ನು ಹತ್ಯೆ (Murder) ಮಾಡಿದ್ದ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಶವ ಇಟ್ಟು ಪ್ರತಿಭಟನೆ ನಡೆಸಿದ್ದ ದಲಿತ ಯುವಕರ ವಿರುದ್ಧವೇ ಚನ್ನಗಿರಿ (Channagiri) ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪೊಲೀಸರು ಒಟ್ಟು 13 ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೊಡಕಿಕೆರೆ ಕ್ಯಾಂಪ್ನ ದಲಿತ ಕೃಷಿ ಕೂಲಿ ಕಾರ್ಮಿಕ ಶೇಖರಪ್ಪ (50) ಎಂಬವರನ್ನು ಜನವರಿ 27 ರಂದು ಹತ್ಯೆ ಮಾಡಲಾಗಿತ್ತು. ಗ್ರಾಮದ ಚಂದ್ರಶೇಖರ ಎಂಬ ಜಮೀನ್ದಾರನ ಬಳಿ ಕೂಲಿ ಕೆಲಸಕ್ಕೆ ಬರುವುದಾಗಿ ಹೇಳಿದ್ದ ಶೇಖರಪ್ಪ ಮುಂಗಡ ಹಣ ಪಡೆದಿದ್ದರು. ಆದರೆ ತೋಟಕ್ಕೆ ಕೆಲಸಕ್ಕೆ ಶೇಖರ್ ಅವರು ಹೋಗಿರಲಿಲ್ಲ.
ಇದನ್ನೂ ಓದಿ: ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಹತ್ಯೆ: ಕೇರಳದ 15 ಪಿಎಫ್ಐ ಕಾರ್ಯಕರ್ತರಿಗೆ ಮರಣದಂಡನೆ
ಇದೇ ಸಿಟ್ಟಿನಿಂದ ಚಂದ್ರಶೇಖರ ತನ್ನ ಬೈಕ್ನಿಂದ ಡಿಕ್ಕಿ ಹೊಡೆದು ಶೇಖರಪ್ಪನಿಗೆ ಗಾಯಗೊಳಿಸಿದ್ದ. ಕೂಡಲೇ ಗಾಯಾಳು ಶೇಖರಪ್ಪ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶೆಖರಪ್ಪ ಮೃತಪಟ್ಟಿದ್ದರು.
ಶೇಖರಪ್ಪ ಸಾವಿಗೆ ಕಾರಣವಾದ ಚಂದ್ರಶೇಖರನನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಯುವಕರು ಶೇಖರಪ್ಪ ಅವರ ಮೃತದೇಹವನ್ನು ಇಟ್ಟುಕೊಂಡು ಹೋರಾಟ ನಡೆಸಿದ್ದರು. ಆದರೆ, ಆರೋಪಿಯನ್ನು ಬಂಧಿಸುವ ಬದಲು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ನ್ಯಾಯಕ್ಕಾಗಿ ಹೋರಾಡಿದ ಯುವಕರ ವಿರುದ್ಧವೇ ಕೇಸ್ ಬುಕ್ ಮಾಡಿದ ಪೊಲೀಸರ ವಿರುದ್ಧ ದಲಿತ ಸಂಘಟನೆ ಪ್ರಮುಖರು ಆಕ್ರೋಶ ಹೊರಹಾಕಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ