Murder: ಇದು ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಕತೆ!; ಸೇಡಿಗಾಗಿ ಹನಿಮೂನ್​ನಲ್ಲೇ ಹೆಂಡತಿಯನ್ನು ಕೊಂದ ಗಂಡ

| Updated By: ಸುಷ್ಮಾ ಚಕ್ರೆ

Updated on: Jul 27, 2021 | 3:22 PM

Crime News Today: ಬಬಿತಾಳ ಒತ್ತಾಯಕ್ಕೆ ಆಕೆಯನ್ನು ಮದುವೆಯಾಗಿದ್ದ ರಾಜೇಶ್ ರೈ ಹನಿಮೂನ್​ಗೆಂದು ನೈನಿತಾಲ್​ಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯನ್ನು ಬೆಟ್ಟದಿಂದ ತಳ್ಳಿ ಕೊಲೆ ಮಾಡಿದ್ದಾನೆ. ಕಾರಣವೇನು ಗೊತ್ತಾ?

Murder: ಇದು ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಕತೆ!; ಸೇಡಿಗಾಗಿ ಹನಿಮೂನ್​ನಲ್ಲೇ ಹೆಂಡತಿಯನ್ನು ಕೊಂದ ಗಂಡ
Follow us on

ನವದೆಹಲಿ: ನೀವು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ನೋಡಿದ್ದೀರಾ? 1993ರಲ್ಲಿ ತೆರೆಕಂಡ ಈ ಕನ್ನಡದ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಇಂದಿಗೂ ತನ್ನ ಹಾಡು, ಬಿಗಿಯಾದ ಚಿತ್ರಕತೆ, ಶಿಮ್ಲಾದ ಸುಂದರವಾದ ದೃಶ್ಯಗಳಿಂದ ಜನಮಾನಸದಲ್ಲಿ ಹಾಗೇ ಉಳಿದಿದೆ. ಶಿಮ್ಲಾಗೆ ಹನಿಮೂನ್​ಗೆ ಹೋದ ನವಜೋಡಿ ಬದುಕಿನಲ್ಲಿ ಏನೆಲ್ಲ ಘಟಿಸುತ್ತದೆ, ಹನಿಮೂನ್​ಗೆ ಹೋದಾಗ ನಾಯಕಿ ಏಕೆ ಕೊಲೆಯಾಗುತ್ತಾಳೆ ಎಂಬ ಥ್ರಿಲ್ಲರ್ ಕತೆ ಇರುವ ಈ ಸಿನಿಮಾ ರೀತಿಯಲ್ಲೇ ಉತ್ತರಾಖಂಡದ ನೈನಿತಾಲ್​ನಲ್ಲಿ ಒಂದು ಕೊಲೆ ಪ್ರಕರಣ ನಡೆದಿದೆ. ಮದುವೆಯಾದ ಹೆಂಡತಿಯನ್ನು ನೈನಿತಾಲ್​ಗೆ (Nainital)  ರೊಮ್ಯಾಂಟಿಕ್ ಟ್ರಿಪ್​ಗೆ ಕರೆದುಕೊಂಡು ಹೋದ ಗಂಡ ಆಕೆಯನ್ನು ಬೆಟ್ಟದಿಂದ ತಳ್ಳಿ ಕೊಲೆ ಮಾಡಿದ್ದಾನೆ; ಸೇಮ್ ಟು ಸೇಮ್ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದ ಕತೆಯಂತೆ!

2020ರಲ್ಲಿ ಬಬಿತಾ ಎಂಬ ಯುವತಿಯೊಬ್ಬಳೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿ, ಮದುವೆಯಾಗುವುದಾಗಿ ನಂಬಿಸಿದ್ದ ದೆಹಲಿಯ ರಾಜೇಶ್ ರೈ ಎಂಬ ಸೇಲ್ಸ್​ಮನ್ ಆಕೆಗೆ ಮೋಸ ಮಾಡಿದ್ದ. ಇದಾದ ಬಳಿಕ ಸುಮ್ಮನೆ ಕೂರದ ಆ ಯುವತಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆ ಸೇಮ್ಸ್​ಮನ್ ಮೇಲೆ ಪೊಲೀಸರಿಗೆ ದೂರು ನೀಡಿದ್ದಳು. ಈ ದೂರಿನ ಆಧಾರದಲ್ಲಿ ಕಳೆದ ವರ್ಷ ಆಗಸ್ಟ್​ನಲ್ಲಿ ರಾಜೇಶನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಅಕ್ಟೋಬರ್ ತಿಂಗಳಲ್ಲಿ ಆ ಯುವತಿ ತನ್ನ ಕೇಸನ್ನು ವಾಪಾಸ್ ಪಡೆದಿದ್ದಳು. ಹೀಗಾಗಿ, ರಾಜೇಶ್ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ರಾಜೇಶನನ್ನು ತಾನು ಮದುವೆಯಾಗುವುದಾಗಿ ಆಕೆ ಪೊಲೀಸರ ಮುಂದೆ ಹೇಳಿದ್ದಳು. ಹೀಗಾಗಿ, ಬೇರೆ ದಾರಿಯಿಲ್ಲದೆ ರಾಜೇಶ್ ರೈ ಬಬಿತಾಳನ್ನು ವಿವಾಹವಾಗಿದ್ದ.

ಎಲ್ಲವೂ ಸುಖಾಂತ್ಯವಾಯಿತು ಎಂದುಕೊಳ್ಳುವಷ್ಟರಲ್ಲಿ ರಾಜೇಶ್ ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಆಕೆಗೆ ಹೊಡೆಯುವುದು, ನಿಂದಿಸುವುದು ಮಾಡಿ ತನ್ನ ದ್ವೇಷ ತೀರಿಸಿಕೊಳ್ಳುತ್ತಿದ್ದ. ಇಬ್ಬರ ನಡುವೆ ಯಾವಾಗಲೂ ಜಗಳವಾಗುತ್ತಿತ್ತು. ಆತ ಬದಲಾಗಿರಬಹುದು ಎಂದು ನಂಬಿ ತನ್ನ ಕೇಸ್ ವಾಪಾಸ್ ಪಡೆದುಕೊಂಡು ಮದುವೆಯಾಗಿದ್ದ ಆಕೆಗೆ ರಾಜೇಶ್ ನರಕ ದರ್ಶನ ಮಾಡಿಸಿದ್ದ. ಹೀಗಾಗಿ, ಬಬಿತಾ ಆತನನ್ನು ಬಿಟ್ಟು ತವರುಮನೆಗೆ ಬಂದಿದ್ದಳು.

ಆದರೆ, ಬಬಿತಾ ತವರಿನಲ್ಲಿದ್ದರೆ ತಾನು ಆಕೆಗೆ ಹಿಂಸೆ ನೀಡಲು ಸಾಧ್ಯವಿಲ್ಲ ಎಂದು ಆಕೆಯನ್ನು ಮತ್ತೆ ತನ್ನ ಮನೆಗೆ ಕರೆಸಿಕೊಂಡಿದ್ದ ರಾಜೇಶ್. ಬಳಿಕ ಕಳೆದ ಜೂನ್ 11ರಂದು ಆಕೆಯನ್ನು ಉತ್ತರಾಖಂಡದ ನೈನಿತಾಲ್ ಬಳಿ ಇರುವ ಹಳ್ಳಿಗೆ ರೊಮ್ಯಾಂಟಿಕ್ ಟ್ರಿಪ್​ಗೆ ಕರೆದುಕೊಂಡು ಹೋಗಿದ್ದ. ಮದುವೆಯಾದ ನಂತರ ಮೊದಲ ಬಾರಿಗೆ ಹನಿಮೂನ್​ಗೆ ಹೋಗುತ್ತಿರುವುದಕ್ಕೆ ಬಬಿತಾ ಬಹಳ ಖುಷಿಯಾಗಿದ್ದಳು. ಹನಿಮೂನ್​ಗೆ ಹೋದ ನಂತರ ಬಬಿತಾಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ದೆಹಲಿಯಲ್ಲಿದ್ದ ಆಕೆಯ ತಂದೆ-ತಾಯಿಗೆ ಬಹಳ ಆತಂಕ ಶುರುವಾಗಿತ್ತು.

ತನ್ನ ಮಗಳು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ಅಳಿಯನೂ ನಾಪತ್ತೆಯಾಗಿದ್ದಾನೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ, ರಾಜೇಶನ ಮೊಬೈಲ್ ನೆಟ್​ವರ್ಕ್​ನಿಂದ ಆತ ಇರುವ ಸ್ಥಳವನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತನಗೇನೂ ಗೊತ್ತಿಲ್ಲ ಎಂದೇ ನಾಟಕವಾಡಿ ರಾಜೇಶ್ ಬಳಿಕ ತಾನೇ ಬಬಿತಾಳನ್ನು ನೈನಿತಾಲ್​ನಲ್ಲಿರುವ ಬೆಟ್ಟದಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತ ಹೇಳಿರುವ ಬೆಟ್ಟದ ಕೆಳಗೆ ಬಿದ್ದಿದ್ದ ಬಬಿತಾಳ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನನ್ನ ಮೇಲೆ ಕೇಸ್ ಹಾಕಿ, ಜೈಲಿಗೆ ಹೋಗುವಂತೆ ಮಾಡಿದ್ದಕ್ಕೆ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದೆ. ಹೀಗಾಗಿ, ನೈನಿತಾಲ್​ಗೆ ಹನಿಮೂನ್​ಗೆ ಕರೆದುಕೊಂಡು ಹೋಗಿ, ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ನಂತರ ಬೆಟ್ಟದ ಬಳಿ ಸೂರ್ಯಾಸ್ತ ನೋಡಲು ಹೋಗಿದ್ದೆವು. ಆಗ ಆಕೆಯನ್ನು ಬೆಟ್ಟದಿಂದ ಕೆಳಗೆ ತಳ್ಳಿ ಕೊಲೆ ಮಾಡಿದೆ ಎಂದು ರಾಜೇಶ್ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: Crime News: ಕೇರಳದ ತೃತೀಯಲಿಂಗಿ ಆರ್​ಜೆ ಅನನ್ಯಾ ಸಾವಿನ ಬೆನ್ನಲ್ಲೇ ಆಕೆಯ ಗೆಳೆಯನೂ ನೇಣಿಗೆ ಶರಣು

Crime News: ಬಾಯ್​ಫ್ರೆಂಡ್​ನನ್ನು ಕೆಲಸದಿಂದ ಕಿತ್ತೊಗೆದ ಕಂಪನಿಗೆ ಗರ್ಲ್​ಫ್ರೆಂಡ್ ಮಾಡಿದ್ದೇನು ಗೊತ್ತಾ?

(Murder News Today: Delhi man Took Wife to Nainital for Honeymoon and Pushed her Off Cliff)