ಜೈಲಲ್ಲಿ ದರ್ಶನ್​ಗೆ ಮೊಬೈಲ್, ಸಿಮ್ ನೀಡಿದ್ದವರು ಕೊನೆಗೂ ಪತ್ತೆ! ರಹಸ್ಯವಾಗಿ ಸಿಮ್ ಕೊಟ್ಟಿದ್ಹೇಗೆ ಗೊತ್ತೇ?

| Updated By: ಗಣಪತಿ ಶರ್ಮ

Updated on: Oct 25, 2024 | 7:49 AM

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ದೊಡ್ಡ ಸದ್ದು ಮಾಡಿತ್ತು. ನಟ ದರ್ಶನ್ ಜೈಲಿನಿಂದ ಒಂದು ವಿಡಿಯೋ ಕಾಲ್ ಮಾಡಿದ್ದರು. ಆ ವಿಡಿಯೋ ಕಾಲ್ ಮಾಡಿದ್ದ ಮೊಬೈಲ್ ಮತ್ತು ಸಿಮ್ ಕಾರ್ಡ್ ರಹಸ್ಯ ಈಗ ಹೊರ ಬಂದಿದೆ. ಆ ಬಗ್ಗೆ ವಿವರ ಇಲ್ಲಿದೆ.

ಜೈಲಲ್ಲಿ ದರ್ಶನ್​ಗೆ ಮೊಬೈಲ್, ಸಿಮ್ ನೀಡಿದ್ದವರು ಕೊನೆಗೂ ಪತ್ತೆ! ರಹಸ್ಯವಾಗಿ ಸಿಮ್ ಕೊಟ್ಟಿದ್ಹೇಗೆ ಗೊತ್ತೇ?
ಜೈಲಲ್ಲಿ ದರ್ಶನ್​ಗೆ ಮೊಬೈಲ್, ಸಿಮ್ ನೀಡಿದ್ದವರು ಕೊನೆಗೂ ಪತ್ತೆ!
Follow us on

ಬೆಂಗಳೂರು, ಅಕ್ಟೋಬರ್ 25: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣದ ಜಾಡು ಹಿಡಿದಿರುವ ಪೊಲೀಸರು ಇದೀಗ ಕೊನೆಗೂ ಕೊಲೆ ಆರೋಪಿ ನಟ ದರ್ಶನ್​ಗೆ ಮೊಬೈಲ್ ಹಾಗೂ ಸಿಮ್ ನೀಡಿದವರನ್ನು ಪತ್ತೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ರಹಸ್ಯವಾಗಿ ದರ್ಶನ್​ಗೆ ಸಿಮ್ ಕೊಟ್ಟಿದ್ದು ಹೇಗೆ ಎಂಬುದನ್ನೂ ಬಯಲಿಗೆಳೆದಿದ್ದಾರೆ.

ಜೈಲಲ್ಲಿ ದರ್ಶನ್ ವಿಡಿಯೋ ಕಾಲ್ ಮಾಡಿದ್ದ ಕೇಸ್​ನಲ್ಲಿ ಆತನಿಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ಕೊಟ್ಟಿದ್ದು ಯಾರು ಎಂಬುದೇ ಗೊತ್ತಿರಲಿಲ್ಲ. ಆ ಬಗ್ಗೆ ತನಿಖೆ ಮಾಡುತ್ತಿರುವ ಪರಪ್ಪನ ಅಗ್ರಹಾರ ಪೊಲೀಸರು ಈಗ ಸಿಮ್ ಕೊಟ್ಟ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. ದರ್ಶನ್ ರೌಡಿಶೀಟರ್ ಧರ್ಮನ ಮೊಬೈಲ್​ನಿಂದ ಬ್ಯಾಡರಹಳ್ಳಿ ರೌಡಿ ಶೀಟರ್ ಸತ್ಯನಿಗೆ ವಿಡಿಯೋ ಕಾಲ್ ಮಾಡಿದ್ದ. ಈ ಮೊಬೈಲ್ ಧರ್ಮನಿಗೆ ಸೇರಿತ್ತು ಎಂಬುದು ಗೊತ್ತಾಗಿದೆ. ಬಾಣಸವಾಡಿ ರೌಡಿ ಶೀಟರ್ ಧರ್ಮನಿಗೆ ಬಾಣಸವಾಡಿಯ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್​ ಎಂಬಾತ ಸಿಮ್ ನೀಡಿದ್ದ ಎಂಬುದು ಗೊತ್ತಾಗಿದೆ.

ಬಟ್ಟೆಯಲ್ಲಿ ಅಡಗಿಸಿ ಸಿಮ್ ಕಳುಹಿಸಿದ್ದ ಆರೋಪಿ

ಬಾಣಸವಾಡಿಯಲ್ಲಿ ಒಂದು ಟೂರ್ಸ್ ಅಂಡ್ ಟ್ರಾವಲ್ಸ್ ನಡೆಸುವ ಮಣಿವಣ್ಣನ್, ಕಂಪನಿಯ ಚಾಲಕ ಯಾದವ್ ಹೆಸರಲ್ಲಿ ಸಿಮ್ ಖರೀದಿ ಮಾಡಿದ್ದ ಎನ್ನಲಾಗಿದೆ. ನಂತರ ಬಟ್ಟೆಯಲ್ಲಿ ಅಡಗಿಸಿ ಜೈಲಿಗೆ ಕಳುಹಿಸಿದ್ದ. ಮೊದಲು ಜೈಲಿನ ಕೆಲ ಭ್ರಷ್ಟ ಅಧಿಕಾರಿಗಳ ಮೂಲಕ ಮೊಬೈಲ್ ಅನ್ನೂ ಸಹ ಕಳುಹಿಸಿದ್ದ ಎನ್ನಲಾಗಿದೆ.

ರೌಡಿ ಧರ್ಮನಿಗಾಗಿ ಒನ್ ಪ್ಲಸ್ ಮೊಬೈಲ್ ಅನ್ನು ಮೆಜೆಸ್ಟಿಕ್ ಬಳಿಯ ಒಂದು ಮೊಬೈಲ್ ಅಂಗಡಿಯಿಂದ ಸೆಕೆಂಡ್ ಹ್ಯಾಂಡ್​​ನಲ್ಲಿ ಖರೀದಿ ಮಾಡಿದ್ದ. ಮೊಬೈಲ್ ಖರೀದಿಗೂ ಮುನ್ನ ಮೊಬೈಲ್ ಫೋಟೋ ಕಳುಹಿಸಿ ಯಾವುದು ಬೇಕು ಎಂದು ಕೇಳಿದ್ದ. ಈ ಸಂಬಂಧ ಅಂಗಡಿ ಮಾಲೀಕನ ಮೊಬೈಲ್​ನಿಂದ ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ವೇಳೆ ಎರಡು ಮೊಬೈಲ್ ಫೋಟೋ ಕಳುಹಿಸಿ ಒಂದು ಮೊಬೈಲ್ ಆಯ್ಕೆ ಮಾಡುವಂತೆ ಹೇಳಿದ್ದು, ನಂತರ ಒನ್ ಪ್ಲಸ್ ಮೊಬೈಲ್ ಅನ್ನು ಆಯ್ಕೆ ಮಾಡಿಕೊಂಡಿದ್ದು ಎಲ್ಲವೂ ಬಯಲಾಗಿದೆ. ಈಗ ಮೊಬೈಲ್ ಅಂಗಡಿ ಮಾಲೀಕನನ್ನ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಸಿಮ್ ಜಜ್ಜಿ ಟಾಯ್ಲೆಟ್​​ನಲ್ಲಿ ಎಸೆದಿದ್ದ ಧರ್ಮ

ಟ್ರಾವೆಲ್ ಮಾಲೀಕ ಮಣಿವಣ್ಣನ್ ಬಂಧಿಸಿದ್ದ ಪೊಲೀಸರು ಸದ್ಯ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಕಾಲ್​​ನ ವಿಡಿಯೋ ವೈರಲ್ ಆಗುತ್ತಿದ್ದಂತೆ ಧರ್ಮ ಮೊಬೈಲ್ ಮತ್ತು ಸಿಮ್​ ಅನ್ನು ಜಜ್ಜಿ ಟಾಯ್ಲೆಟ್​ನಲ್ಲಿ ಹಾಕಿ ನೀರು ಸುರಿದಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ರಾಜಾತಿಥ್ಯ ಪ್ರಕರಣ: ತನಿಖೆ ವೇಳೆ ಬಯಲಾಯ್ತು ಜೈಲೊಳಗಿನ ಮತ್ತಷ್ಟು ರಹಸ್ಯ, ಶೀಘ್ರದಲ್ಲೇ ಚಾರ್ಜ್​​ಶೀಟ್ ಸಲ್ಲಿಕೆ

ಈ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್​ಶೀಟ್ ತಯಾರು ಮಾಡಿದ್ದು, ಕೆಲ ದಿನಗಳಲ್ಲೆ ನ್ಯಾಯಲಯಕ್ಕೆ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ