ಜಮೀನಿನಲ್ಲಿ ಸಿಕ್ತು ಮನೆಯಿಂದ ಹೊರ ಹೋದವನ ತಲೆ ಬರುಡೆ; ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ, ಐವರು ಅರೆಸ್ಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 14, 2024 | 5:13 PM

ಆತ ಮನೆಯಿಂದ ಕಾಣೆಯಾಗಿದ್ದ. ಕಂಡ ಕಂಡಲ್ಲಿ ಆತನಿಗಾಗಿ ಹುಡುಕಾಡಿದ್ದರೂ ಸುಳಿವು ಪತ್ತೆಯೇ ಆಗಿರಲಿಲ್ಲ. ಎಂದಿನಂತೆ ಮಹಾರಾಷ್ಟ್ರಕ್ಕೆ ದುಡಿಯೋಕೆ ಹೋಗಿರಬಹುದು ಎಂದುಕೊಂಡು ಮನೆಯವರೂ ಸಹ ಸುಮ್ಮನಾಗಿ ಬಿಟ್ಟಿದ್ದರು. ಎರಡು ತಿಂಗಳಾದರೂ ಮನೆಯಿಂದ ಹೊರ ಹೋದವ ವಾಪಸ್ ಬಾರದ ಕಾರಣ ಬೇರೆ ದಾರಿ ಕಾಣದೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಶೋಧ ನಡೆಸಿದ ಖಾಕಿ ಪಡೆಗೂ ಕಾಣೆಯಾದವನ ಸುಳಿವು ಸಿಕ್ಕಿರಲಿಲ್ಲ. ಆದರೆ, ಅದೊಂದು ದಿನ ನಾಪತ್ತೆಯಾದವನ ಬೈಕ್ ಬಾವಿಯೊಂದರಲ್ಲಿ ಸಿಕ್ಕಿದ ಮೇಲೆ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾದವ ಕೊಲೆಯಾಗಿರುವ ಸತ್ಯ ಗೊತ್ತಾಗಿದೆ. ಕೊಲೆ ಮಾಡಿದ 5 ಆರೋಪಿತರು ಅರೆಸ್ಟ್​ ಆಗಿದ್ದು, ಮತ್ತೋರ್ವನ ಬಂಧನಕ್ಕೆ ಕುಟುಂಬದವರು ಒತ್ತಾಯ ಮಾಡಿದ್ದಾರೆ.

ಜಮೀನಿನಲ್ಲಿ ಸಿಕ್ತು ಮನೆಯಿಂದ ಹೊರ ಹೋದವನ ತಲೆ ಬರುಡೆ; ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ, ಐವರು ಅರೆಸ್ಟ್​
ಬಂಧಿತ ಆರೋಪಿಗಳು, ಮೃತ ವ್ಯಕ್ತಿ
Follow us on

ವಿಜಯಪುರ, ಜೂ.14: ತಾಳಿಕೋಟೆ(Talikoti) ತಾಲೂಕಿನ ನೀರಲಗಿ ಗ್ರಾಮದ ದಾವಲಸಾಬ್ ಮುಜಾವರ್ ( 22 ) ಕಳೆದ 2023 ನವೆಂಬರ್​ 8 ರಂದು ಮನೆಯಿಂದ ನಾಪತ್ತೆಯಾಗಿದ್ದ. ಮನೆಯವರು ಕಂಡ ಕಂಡಲ್ಲಿ ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಎಂದಿನಂತೆ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗಿರಬಹುದು ಎಂದುಕೊಂಡು ಸುಮ್ಮನಾಗಿದ್ದರು. ಆದರೆ, ಬಹಳ ದಿನಗಳ ಬಳಿಕವೂ ದಾವಲಸಾಬ್ ಮನೆಗೆ ಬಾರದಿದ್ದ ಕಾರಣ 2024 ರ ಜನವರಿ 25 ರಂದು ದಾವಲಸಾಬ್ ಮುಜಾವರ ನಾಪತ್ತೆ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರ ತನಿಖೆಯಲ್ಲೂ ದಾವಲಸಾಬ್ ಪತ್ತೆಯಾಗಿರಲಿಲ್ಲ. ಯಾವುದೋ ಹುಡುಗಿ ಜೊತೆಗೆ ಹೋಗಿರಬಹುದು ಎಂದು ಕುಟುಂಬದವರಿಗೆ ಪೊಲೀಸರು ಹೇಳಿದ್ದರಂತೆ. ಬಳಿಕ ಇಲ್ಲಿಯವರೆಗೆ ಅಂದರೆ ಜೂನ್ 2 ರಂದು ನೀರಲಗಿ ಗ್ರಾಮದ ನಾನಾಗೌಡ ಮುದ್ನೂರ್ ಎಂಬುವವರ ಜಮೀನಿನಲ್ಲಿ ಮನುಷ್ಯನ ತಲೆ ಬುರುಡೆ ಪತ್ತೆಯಾಗಿದ್ದವು.

ಪೂರ್ವಯೋಜಿತ ಕೊಲೆ

ಈ ತಲೆ ಬುರುಡೆ ಹಾಗೂ ಎಲುವುಗಳು ದಾವಲಸಾಬ್​ನದ್ದು ಇರಬಹುದು ಎಂದು ಕಲಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಾಹಿತಿ ತಿಳಿಯುತ್ತಿದ್ದಂತೆ ಪರೀಕ್ಷೆ ಮಾಡಿದಾಗ ಇದು ದಾವಲಸಾಬ್ ತಲೆ ಬುರುಡೆ ಹಾಗೂ ಎಲುವು ಎಂಬ ಸಂಶಯದಿಂದ ಮೊಬೈಲ್ ಟವರ್ ಸಿಡಿಆರ್ ಹಾಕಿದಾಗ ಕೆಲವರ ಮೇಲೆ ಪೊಲೀಸರಿಗೆ ಸಂಶಯ ಮೂಡುತ್ತದೆ. ಆಗ ದನೀಪ್ ಭಾಗವಾನ್ ಎಂಬುವವನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗಲೇ ದಾವಲಸಾಬ್ ಮುಜಾವರ ಕೊಲೆಯಾಗಿದ್ದಾನೆಂಬ ಭಯಾನಕ ವಿಚಾರ ಬಹಿರಂಗವಾಗುತ್ತದೆ.

ಇದನ್ನೂ ಓದಿ:ಮದ್ಯದ ನಶೆಯಲ್ಲಿ ಮಗನ ಬಾಯಿಗೆ ಪೇಪರ್​ ತುರುಕಿ ಕೊಲೆ ಮಾಡಿದ ತಂದೆ

ಇದೊಂದು ಪೂರ್ವಯೋಜಿತ ಕೊಲೆ ಎಂದು ಪ್ರಮುಖ ಆರೋಪಿ ದನೀಫ್ ಭಾಗವಾನ್ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ. ಕಳೆದ 2023 ರ ನವೆಂಬರ್ 8 ರಂದು ದಾವಲಸಾಬ್ ಮುಜಾವರನನ್ನು ದನೀಪ್ ಭಾಗವಾನ್ ಕರೆದುಕೊಂಡು ಬಂದಿದ್ದಾನೆ. ಗ್ರಾಮದ ಹೊರ ಭಾಗದಲ್ಲಿ ಇಬ್ಬರೂ ಮದ್ಯ ಸೇವನೆ ಮಾಡಿದ್ದಾರೆ. ನಂತರ ದಾವಲಸಾಬ್​ನನ್ನು ಅನತಿ ದೂರದಲ್ಲಿರುವ ಹುಚ್ಚೇಶ್ವರಿ ದೇವಸ್ಥಾನ ಬಳಿ ಕರೆದುಕೊಂಡು ಹೋಗಿದ್ದಾನೆ. ದೇವಸ್ಥಾನದ ಬಳಿ ಅಂದುಕೊಂಡಂತೆ ಅಲ್ಲಿಸಾಬ್ ಮುಜಾವರ್, ಅಜ್ಮೀರ್ ಮುಜಾವರ್, ಸಮೀರ್ ಸೌದಾಗರ್, ಸದ್ದಾಂ ಮುಜಾವರ್ ಜಮಾಯಿಸುತ್ತಾರೆ. ಆಗ ಬಡಿಗೆ ಹಾಗೂ ಸಲಿಕೆಯಿಂದ ದಾವಲಸಾಬ್ ಗೆ ಹಲ್ಲೆ ಮಾಡುತ್ತಾರೆ. ಸ್ಥಳದಲ್ಲೇ ಆತಾ ಮೃತಪಡುತ್ತಾನೆ.

ನಂತರ ಶವವನ್ನು ಸಮೀಪದ ಬಸವಂತರಾಯಗೌಡ ಪಾಟೀಲ್ ಎಂಬುವವರ ಜಮೀನಿನ ಬಳಿ ಹೂತು ಹಾಕುತ್ತಾರೆ. ದಾವಲಸಾಬ್ ತಂದಿದ್ದ KA 33- X 2908 ನಂಬರಿನ ಬೈಕ್​ನನ್ನು ಮತ್ತೊಬ್ಬರ ಬಾವಿಯಲ್ಲಿ ಬಿಸಾಡಿ ಹೋಗಿದ್ದಾಗಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದರು. ಇಡೀ ಕೊಲೆಗೆ ದಾವಲಸಾಬ್ ಕೌಟುಂಬಿಕ ಕಲಹ ಹಾಗೂ ಅಕ್ರಮ ಸಂಬಂಧ ಎಂಬ ಮಾಹಿತಿ ಲಭ್ಯವಾಗಿದೆ. ತನಿಖೆ ಇನ್ನೂ ಮುಂದುವರೆದಿರುವ ಕಾರಣ ಪೊಲೀಸರು ಸಹ ಹೆಚ್ಚಿನ ಮಾಹಿತಿ ತನಿಖೆ ಬಳಿಕ ನೀಡುವುದಾಗಿ ಹೇಳಿದ್ಧಾರೆ.

ಇದನ್ನೂ ಓದಿ:6 ದಿನ ಪೊಲೀಸ್​ ಕಸ್ಟಡಿಗೆ ದರ್ಶನ್​, ಪವಿತ್ರಾ ಗೌಡ; ರೇಣುಕಾ ಸ್ವಾಮಿ ಹತ್ಯೆ ತನಿಖೆ ಚುರುಕು

ಕೊಲೆಗೆ ಕಾರಣವೇನು?

ಇಲ್ಲಿ ನಡೆದ ಕೊಲೆಗೆ ಕೌಟುಂಬಿಕ ಕಹಲ ಹಾಗೂ ಅಕ್ರಮ ಸಂಬಂಧ ಕಾರಣ ಎನ್ನಲಾಗಿದೆ. ಕೊಲೆಯಾಗಿರುವ ದಾವಲಸಾಬ್ ಕಳೆದ ಎರಡು ವರ್ಷಗಳ ಹಿಂದೆ ಸಬೀಯಾ ಎಂಬ ಯುವತಿಯೊಂದಿಗೆ ಮದುವೆಯಾಗಿದ್ದ. ಸಬೀಯಾ ಸೋದರ ಮಾವ ಹಾಗೂ ದಾವಲಸಾಬ್ ಕೊಲೆಯ ಎ1 ಆರೋಪಿ ಅಲ್ಲಿಸಾಬ್ ಮುಜಾವರ್ ನೇತೃತ್ವದಲ್ಲಿ ಮದುವೆ ನಡೆದಿತ್ತು. ಅಲ್ಲಿಸಾಬ್ ತನ್ನ ಸಹೋದರಿಯ ಮಗಳಾದ ಸಬೀಯಾಳನ್ನು ದಾವಲಸಾಬ್ ಜೊತೆಗೆ ಮದುವೆ ಮಾಡಿಸಿದ್ದರು. ಆದರೆ, ದಾವಲಸಾಬ್ ಹಾಗೂ ಸಬೀಯಾ ಮದ್ಯೆ ಸಂಸಾರದಲ್ಲಿ ಜಗಳವೇ ಆಗುತ್ತಿತ್ತಂತೆ. ಈ ವಿಚಾರದಲ್ಲಿ ದಾವಲಸಾಬ್ ಹಾಗೂ ಅಲ್ಲಿಸಾಬ್ ಮದ್ಯೆ ಗಲಾಟೆಗಲೂ ಆಗಿದ್ದವಂತೆ, ನನ್ನ ಸೋದರ ಸೊಸೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಅಲ್ಲಿಸಾಬ್ ದಾವಲಸಾಬಗೆ ಎಚ್ಚರಿಕೆ ನೀಡಿದ್ದನಂತೆ.

ಇನ್ನು ಅಲ್ಲಿಸಾಬ್ ಪುತ್ರ ಅಜ್ಮೀರ್ ಮುಜಾವರ ಪತ್ನಿ ತಸ್ಲೀಂ ಜೊತೆಗೆ ದಾವಲಸಾಬ್ ಅಕ್ರಮ ಸಂಬಂಧ ಹೊಂದಿದ್ದನಂತೆ. ಯಾವಾಗ ದಾವಲಸಾಬ್ ಹಾಗೂ ಸಬೀಯಾ ಮದುವೆಯಾಯ್ತೋ ಆಗ ತಸ್ಲೀಂ ದಾವಲಸಾಬ್ ಸಂಬಂಧ ಮುರಿದು ಬಿದ್ದಿದೆ. ಅಷ್ಟೇಯಲ್ಲ ಅದೇ ತಸ್ಲೀಂ ಅದೇ ಗ್ರಾಮದ ದನೀಪ್ ಭಾಗವಾನ್ ಎಂಬುವವನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳಂತೆ. ಇದಕ್ಕೆ ದಾವಲಸಾಬ್ ವಿರೋಧಿಸಿದ್ದ. ಇದೇ ವಿಚಾರ ಗ್ರಾಮದ ಜನರ ಮುಂದೆ ಪ್ರಚಾರ ಮಾಡಿದ್ದನಂತೆ. ಇದಕ್ಕೆ ದನೀಪ್ ಬಾಗವಾನ್ ಹಾಗೂ ತಸ್ಲೀಂ ಗಂಡನ ಮನೆಯವರು ಸಿಟ್ಟಾಗಿದ್ದರಂತೆ ಎಂಬ ಮಾಹಿತಿ ಕೆಲ ಮೂಲಗಳಿಂದ ತಿಳಿದು ಬಂದಿದೆ. ಇದೇ ದ್ವೇಷಕ್ಕೆ ದನೀಪ್ ಬಾಗವಾನ್ ಹಾಗೂ ದಾವಲಸಾಬ್ ಪತ್ನಿ ಸಾಬೀಯಾ ಸೋದರ ಮಾವ ಅಲ್ಲಿಸಾಬ್, ಅಜ್ಮೀರ್ ಮುಜಾವರ್, ಸಮೀರ್ ಸೌದಾಗರ್ ಇತರನ್ನು ಜೊತೆಗೂಡಿಸಿಕೊಂಡು ದಾವಲಸಾಬ್​ನನ್ನು ಬಡಿಗೆ ಹಾಗೂ ಸಲಿಕೆಯಿಂದ ಹೊಡೆದು ಕೊಲೆ ಮಾಡಿ ಶವವನ್ನು ಹೂತು ಹಾಕಿ ಸುಮ್ಮನಾಗಿ ಬಿಟ್ಟಿದ್ದರು.

ಇದಕ್ಕೆ ಸದ್ದಾಂ ಮುಜಾವರ ಕುಮ್ಮಕ್ಕು ನೀಡಿದ್ದಾನೆ ಎಂಬುದು ಪೊಳೀಸರಿಗೆ ತಿಳಿದು ಹೋಗಿತ್ತು. ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ದನೀಪ್ ಬಾಗವಾನ್, ಹಾಗೂ ಅಲ್ಲಿಸಾಬ್ ಮುಜಾವರ್, ಅಜ್ಮೀರ್ ಮುಜಾವರ್, ಸಮೀರ್ ಸೌದಾಗರ್ ಎಂಬುವವರನ್ನು ಬಂಧಿಸಿದ್ದಾರೆ. ತಸ್ಲೀಂಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಮನೆಗೆ ಕಳುಹಿಸಿದ್ದಾರೆ. ಈ ಕುರಿತು ಮಾತನಾಡಿದ ಮೃತ ಕುಟುಂಬಸ್ಥರು ‘ದಾವಲಸಾಬ್ ಕೊಲೆ ವಿಚಾರದಲ್ಲಿ ಐವರನ್ನು ಬಂಧಿಸಿದ್ದರೂ ಸಹ ತಸ್ಲೀಂ ಮುಜಾವರ್ ಹಾಗೂ ಸಮೀರ್ ಸೌದಾಗರ್ ಎಂಬುವರನ್ನು ವಶಕ್ಕೆ ಪಡೆದು ವಾಸಪ್ ಕಳುಹಿಸಿದ್ದಾರೆ. ಕೊಲೆಗೆ ಕುಮ್ಮಕ್ಕು ನೀಡಿರೋ ಸದ್ದಾಂ ಮುಜಾವರ್ ನನ್ನು ಬಂಧಿಸಿಲ್ಲ. ಈ ಗ್ಯಾಂಗ್ ಜೊತೆಗೆ ಇನ್ನೂ ಮೂರು ಜನ ಆರೋಪಿಗಳಿದ್ಧಾರೆ. ಅವರೂ ದಾವಲಸಾಬ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಅವರ್ಯಾರನ್ನೂ ಪೊಲೀಸರು ಬಂಧಿಸಿಲ್ಲ. ನಮಗೆ ನ್ಯಾಯ ಬೇಕು. ಸಾವಲಸಾಬ್ ಕೊಲೆ ಮಾಡಿದವರಿಗೆಲ್ಲ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯ ಮಾಡಿದ್ಧಾರೆ.

ಈ ನಿಟ್ಟಿನಲ್ಲಿ ಕೊಲೆಯಾದ ದಾವಲಸಾಬ್ ಕುಟುಂಬಸ್ಥರು ಎಸ್ಪಿ ಕಚೇರಿಗೆ ಆಗಮಿಸಿ ನ್ಯಾಯ ನೀಡಬೇಕೆಂದು ಮನವಿ ಮಾಡಿದ್ದಾರೆ. ದಾವಲಸಾಬ್ ಕೊಲೆ ಆರೋಪಿತರಲ್ಲಿ ಕೆಲವರನ್ನು ಮಾತ್ರ ಬಂಧಿಸಲಾಗಿದೆ. ಇತರೆ ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಸಂಸಾರದ ಕಹಲ ಮತ್ತು ಅಕ್ರಮ ಸಂಬಂಧ ಇಲ್ಲಿ ಓರ್ವ ಯುವಕನನ್ನೇ ಬಲಿ ತೆಗೆದುಕೊಂಡಿದೆ. ಕೊಲೆಯ ಸಂಚಿನಲ್ಲಿ ಸಂಬಂಧಿಕರೇ ಭಾಗಿಯಾಗಿದ್ದು ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ