6 ದಿನ ಪೊಲೀಸ್​ ಕಸ್ಟಡಿಗೆ ದರ್ಶನ್​, ಪವಿತ್ರಾ ಗೌಡ; ರೇಣುಕಾ ಸ್ವಾಮಿ ಹತ್ಯೆ ತನಿಖೆ ಚುರುಕು

ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿಯ ಕೊಲೆ ನಡೆದಿದೆ. ಈ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿ ಒಟ್ಟು 13 ಆರೋಪಿಗಳನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಎದುರು ಹಾಜರುಪಡಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ತನಿಖೆಯಿಂದ ಶಾಕಿಂಗ್​ ವಿಚಾರಗಳು ಹೊರಬರುತ್ತಿವೆ.

6 ದಿನ ಪೊಲೀಸ್​ ಕಸ್ಟಡಿಗೆ ದರ್ಶನ್​, ಪವಿತ್ರಾ ಗೌಡ; ರೇಣುಕಾ ಸ್ವಾಮಿ ಹತ್ಯೆ ತನಿಖೆ ಚುರುಕು
ಪವಿತ್ರಾ ಗೌಡ, ದರ್ಶನ್, ಕೊಲೆಯಾದ ರೇಣುಕಾ ಸ್ವಾಮಿ
Follow us
| Updated By: ಮದನ್​ ಕುಮಾರ್​

Updated on: Jun 11, 2024 | 7:34 PM

ಸ್ಯಾಂಡಲ್​ವುಡ್​ ನಟ ದರ್ಶನ್​ (Darshan) ಈಗ ಪೊಲೀಸರ ಅತಿಥಿ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅವರನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. 6 ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡ (Pavithra Gowda) ಅವರನ್ನೂ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಚಿತ್ರರಂಗನ್ನು ಬೆಚ್ಚಿ ಬೀಳಿಸಿರುವ ಈ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿಯನ್ನು (Renuka Swamy) ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದ ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ. ಡಿ ಗ್ಯಾಂಗ್​ ಮೇಲೆ ಆರೋಪ ಎದುರಾಗಿದೆ.

ರಾಜಕಾಲುವೆ ಬಳಿ ರೇಣುಕಾ ಸ್ವಾಮಿ ಶವ ಸಿಕ್ಕ ಬಳಿಕ ಪೊಲೀಸರು ತನಿಖೆ ಆರಂಭಿಸಿದರು. ಆಗ ದರ್ಶನ್​ ಹೆಸರು ಹೊರಗೆ ಬಂದಿತ್ತು. ಕೂಡಲೇ ದರ್ಶನ್​ ಅವರನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಬೆಂಗಳೂರಿಗೆ ಕರೆದುಕೊಂಡು ತನಿಖೆ ಮುಂದುವರಿಸಲಾಯಿತು. ಬಳಿಕ ಬೌರಿಂಗ್​ ಆಸ್ಪತ್ರೆಯಲ್ಲಿ ದರ್ಶನ್​, ಪವಿತ್ರಾ ಗೌಡ, ಕೆ. ಪವನ್​ ಸೇರಿದಂತೆ ಎಲ್ಲ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಜಡ್ಜ್​ ಮುಂದೆ ಹಾಜರುಪಡಿಸಲಾಯಿತು.

ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆಯಾದ ಶೆಡ್​ಗೆ ಬಂದಿತ್ತು ದರ್ಶನ್​ ಕಾರು; ಸಿಸಿಟಿವಿ ದೃಶ್ಯ ಲಭ್ಯ

ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾರೆ. ನಟ ದರ್ಶನ್​ ಎ2 ಆಗಿದ್ದಾರೆ. ಕೆ. ಪವನ್​ ಎ3 ಆಗಿದ್ದಾನೆ. ರೇಣುಕಾ ಸ್ವಾಮಿ ಕೊಲೆಯಿಂದ ಕುಟುಂಬದವರಿಗೆ ಆಘಾತ ಆಗಿದೆ. ದರ್ಶನ್​ ಮತ್ತು ಸಹಚರರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಮೃತನ ಕುಟುಂಬದವರು ಒತ್ತಾಯಿಸಿದ್ದಾರೆ.

‘ಎಲ್ಲೆಲ್ಲಿ ಹೊಡೆದಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು. ವೆಪನ್ ಸೀಜ್ ಮಾಡಬೇಕು. ಹೀಗಾಗಿ ಪೊಲೀಸ್​ ಕಸ್ಟಡಿ ಅಗತ್ಯವಿದೆ. ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ನೀಡುವುದು ಅಗತ್ಯ’ ಎಂದು ತನಿಖಾಧಿಕಾರಿ ವಾದ ಮಾಡಿದರು. ‘ದರ್ಶನ್ ತಪ್ಪಿಸಿಕೊಂಡಿಲ್ಲ. ತನಿಖೆಗೆ ಸಹಕರಿಸಿದ್ದಾರೆ. ದರ್ಶನ್‌ ವಿರುದ್ಧ ಯಾವುದೇ ಆರೋಪವಿಲ್ಲ’ ಎಂದು ದರ್ಶನ್​ ಪರ ವಕೀಲರು ವಾದಿಸಿದರು.

ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ವಿರುದ್ಧ ಪೊಲೀಸರಿಗೆ ಸಿಕ್ಕಿವೆ ಈ ಸಾಕ್ಷಿಗಳು

ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಚಾರಣೆ ಮಾಡಲಾಯಿತು. ನಿಮ್ಮನ್ನು ಎಷ್ಟು ಗಂಟೆಗೆ, ಎಲ್ಲಿ ಬಂಧಿಸಲಾಯಿತೆಂದು ಜಡ್ಜ್‌ ಪ್ರಶ್ನೆ ಕೇಳಿದರು. ಮಧ್ಯಾಹ್ನ 3 ಗಂಟೆಗೆ ಬಂಧಿಸಿದ್ದಾರೆಂದು ಪವಿತ್ರಾ ಗೌಡ ಹೇಳಿದರು. ತಮ್ಮನ್ನು ಮಧ್ಯಾಹ್ನ 2.30ಕ್ಕೆ ಪೊಲೀಸ್‌ ಠಾಣೆಯಲ್ಲಿ ಬಂಧಿಸಿದರು ಎಂದು ದರ್ಶನ್‌ ಉತ್ತರಿಸಿದರು. ಪೊಲೀಸರು ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಕೂಡ ಉತ್ತರಿಸಿದರು. ವಕೀಲರನ್ನು ನೇಮಿಸಿಕೊಳ್ಳುತ್ತೀರಾ ಎಂದು ಜಡ್ಜ್ ಕೇಳಿದ್ದಕ್ಕೆ ಹೌದು ಎಂದರು ದರ್ಶನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ