AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟ, ಉಡುಪು ಮಾತ್ರ ಕದಿಯುವ ಬನಹಟ್ಟಿ ಕಳ್ಳ: ಬೆಚ್ಚಿ ಬಿದ್ದ ಜನತೆ

ನೋಡಲು ವಿಚಿತ್ರವಾಗಿರುವ ಕಳ್ಳ ಯಾವಾಗ ಮನೆಗೆ ಯಾವ ಮೂಲೆಯಿಂದ ಬರುತ್ತಾನೋ ಎಂದು ಮಹಿಳೆಯರು ಮಕ್ಕಳು ಹೆದರುವಂತಾಗಿದೆ.

ಊಟ, ಉಡುಪು ಮಾತ್ರ ಕದಿಯುವ ಬನಹಟ್ಟಿ ಕಳ್ಳ: ಬೆಚ್ಚಿ ಬಿದ್ದ ಜನತೆ
ಬನಹಟ್ಟಿಯಲ್ಲಿ ಆಹಾರ ಕದಿಯುವ ಶಂಕಿತ ಕಳ್ಳ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jul 01, 2022 | 1:49 PM

Share

ಬಾಗಲಕೋಟೆ: ಆಭರಣ, ಹಣ, ಬೆಲೆಬಾಳುವ ವಸ್ತುಗಳು ಕಳುವಾಗುವ ಸುದ್ದಿ ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಆಸಾಮಿ ಕಳೆದ ಒಂದು ತಿಂಗಳಿನಿಂದ ಅಡುಗೆ ಮನೆಗೆ ನುಗ್ಗಿ ರುಚಿರುಚಿಯಾದ ಊಟ, ಉಪಹಾರ ಹಾಗೂ ಮನೆಯ ಹೊರಗೆ ಒಣ ಹಾಕಿರುವ ಬಟ್ಟೆ ಕದಿಯುತ್ತಿರುವ ವಿಚಿತ್ರ ಘಟನೆ ನಡೆಯುತ್ತಿದೆ. ಈ ಬೆಳವಣಿಗೆಗಳು ಬನಹಟ್ಟಿಯ ಲಕ್ಷ್ಮೀ ನಗರ, ಸಾಯಿನಗರ ಹಾಗು ಕಾಡಸಿದ್ದೇಶ್ವರ ನಗರದ ಜನತೆ ಆತಂಕಕ್ಕೆ ಈಡಾಗುವಂತೆ ಮಾಡಿದೆ. ನೋಡಲು ವಿಚಿತ್ರವಾಗಿರುವ ಕಳ್ಳ ಯಾವಾಗ ಮನೆಗೆ ಯಾವ ಮೂಲೆಯಿಂದ ಬರುತ್ತಾನೋ ಎಂದು ಮಹಿಳೆಯರು ಮಕ್ಕಳು ಹೆದರುವಂತಾಗಿದೆ. ಯಾಕೆಂದರೆ ಈತನ ಟಾರ್ಗೆಟ್ ಮೊದಲು ಅಡುಗೆ ಮನೆ‌ ನಂತರ ಬಟ್ಟೆ‌. ಸಹಜವಾಗಿಯೇ ಅಡುಗೆ ಮನೆಯಲ್ಲಿ ಮಹಿಳೆಯರು ಅಡುಗೆ ಕಾರ್ಯದಲ್ಲಿ ತೊಡಗಿರೋದರಿಂದ ಎಲ್ಲಿ ನಮ್ಮ ಮನೆಯ ಅಡುಗೆಕೋಣೆಗೂ ಬರುತ್ತಾನೋ ಎಂದು ಗಾಬರಿಯಾಗಿದ್ದಾರೆ. ಸೈಕೊ ಕಳ್ಳ ಹೊಂಚು ಹಾಕುವ ವಿಡಿಯೊ ತುಣುಕುಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯ ಜಗದಾಳ ರಸ್ತೆಯಲ್ಲಿರುವ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿರುವ ವ್ಯಕ್ತಿಯಿಂದ ಈ ಕೃತ್ಯ ನಡೆಯುತ್ತಿದೆ ಎಂಬುದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಮನೆಯ ಮುಂಭಾಗದಲ್ಲಿ ಒಣಹಾಕಿರುತ್ತಿದ್ದ ಬಟ್ಟೆಗಳು ಕಾಣೆಯಾಗುತ್ತಿದ್ದವು. ಕೆಲ ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮನೆಯೊಳಗೆ ಹೋಗಿ ಅಡುಗೆ ಮನೆಯಲ್ಲಿದ್ದ ಆಹಾರ, ಊಟವನ್ನೆಲ್ಲ ತಿಂದು ಹೊರನಡೆಯುತ್ತಿದ್ದ. ರಹಸ್ಯ ಬೇಧಿಸಲು ಹೊರಟ ಕೆಲವರು ಸಿಸಿ ಕ್ಯಾಮೆರಾ ಅಳವಡಿಸಿದ್ದರು.

ಸೋಮವಾರ ತಡರಾತ್ರಿ 12 ಗಂಟೆ ಸುಮಾರಿಗೆ ಸಾಯಿ ನಗರದಲ್ಲಿರುವ ವೈದ್ಯರೊಬ್ಬರ ಮನೆಗೆ ಕಳ್ಳ ಬಂದಿದ್ದ. ಕಾಂಪೌಂಡ್ ಒಳಗೆ ನುಗ್ಗಿ ಮನೆಯ ಹಿಂದಿನ ಬಾಗಿಲಿನಿಂದ ನುಗ್ಗುವ ಪ್ರಯತ್ನ ಮಾಡುವಾಗ, ಕಿಟಕಿಯಲ್ಲಿ ಮನೆಯಲ್ಲಿದ್ದವರನ್ನು ಗಮನಿಸಿ ಓಡಿದ್ದ. ಮನೆಯ ಮಾಲಿಕರು ವಿಕಾರ ವ್ಯಕ್ತಿಯನ್ನು ನೋಡಿ ಗಾಬರಿಯಿಂದ ಚೀರಿದರು. ನೆರೆಹೊರೆಯವರು ಆತನನ್ನು ಹಿಡಿಯುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದ.

ಇಂಥ ಘಟನೆಗಳು ಘಟನೆ ಕಳೆದ ಒಂದು ತಿಂಗಳಿನಿಂದ ಆಗಾಗ ನಿರ್ಜನ ಪ್ರದೇಶದ ಮನೆಗಳಲ್ಲಿ ನಡೆಯುತ್ತಲೇ ಇತ್ತು. ಆರಂಭದಲ್ಲಿ ಪೊಲೀಸರು ಹೆಚ್ಚು ಗಮನ ಹರಿಸಲಿಲ್ಲ. ಆದರೆ ನಂತರದ ದಿನಗಳಲ್ಲಿ ಇಂಥ ಪ್ರಕರಣಗಳು ವಿವಿಧೆಡೆ ವರದಿಯಾಯಿತು. ತೀವ್ರ ಕಟ್ಟೆಚ್ಚರ ವಹಿಸಿದ ಇಲಾಖೆಯು ಆರೋಪಿಯ ಬಂಧನಕ್ಕಾಗಿ ವಿಶೇಷ ಪಡೆಯನ್ನು ರಚಿಸಿತು. ಇದೀಗ ಈತನ ಕೃತ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ನಂತರ ಆರೋಪಿ ಪತ್ತೆಗೆ ಪೊಲೀಸರು ಜಾಲವೊಂದನ್ನು ಹೆಣೆದು ಸತತ ಪ್ರಯತ್ನ ಆರಂಭಿಸಿದರು.

ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುವ ಅವಧಿಯಲ್ಲಿಯೇ ಈತ ತನ್ನ ಕೈಚಳ ತೋರಿಸುತ್ತಿದ್ದ. ಈತ ಮಾನಸಿಕ ಅಸ್ವಸ್ಥ ಎಂದು ಹಲವರು ಹೇಳುತ್ತಾರಾದರೂ, ಈತನ ಸಮಯಪ್ರಜ್ಞೆ ಮತ್ತು ತಂತ್ರಗಾರಿಕೆ ಗಮನ ಸೆಳೆಯುವಂತಿದೆ. ಧಾರಾವಾಹಿ ಪ್ರಸಾರದ ಸಮಯದಲ್ಲಿ ಹೆಣ್ಣುಮಕ್ಕಳು ಸಹಜವಾಗಿ ಮೈಮರೆತಿರುವುದರಿಂದ ಈತ ಮನೆಗಳಿಗೆ ನುಗ್ಗಿ ಆಹಾರ ಪದಾರ್ಥ, ಬಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದ.

‘ಕಳೆದ ಒಂದು ತಿಂಗಳಿಂದ ಬನಹಟ್ಟಿಯ ಸಾಯಿ ನಗರ, ಕಾಡಸಿದ್ದೇಶ್ವರ ನಗರ, ಲಕ್ಷ್ಮಿನಗರದಲ್ಲಿ ಕಳ್ಳತನಗಳು ನಡೆಯುತ್ತಿದ್ದವು. ಸಾಯಿ ನಗರದ ವೈದ್ಯ ಧನ್ವಂತರಿ ಚನಾಳ ಮನೆಗೆ ನುಗ್ಗಲು ಯತ್ನಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ. ನೋಡೋವುದಕ್ಕೆ ಮಾನಸಿಕ ಅಸ್ವಸ್ಥನಂತಿದ್ದರೂ ಯಾವುದೇ ಮನೆಯಲ್ಲಿ ಹಣ, ಆಭರಣ ಕಳ್ಳತನ ಮಾಡಿಲ್ಲ. ಕಳ್ಳನನ್ನು ಹಿಡಿಯಲು ನಾವು ರಾತ್ರಿ ಗಸ್ತು ತಿರುಗಾಡುತ್ತಿದ್ದೇವೆ. ಘಟನೆ ಬಗ್ಗೆ ಸಾಯಿನಗರದ ಜನರೆಲ್ಲರೂ ಬನಹಟ್ಟಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆದಷ್ಟು ಬೇಗ ಈತನನ್ನು ಬಂಧಿಸಿ ಜನರಲ್ಲಿನ ಭಯ ದೂರ ಮಾಡಬೇಕಿದೆ’ ಎಂದು ಬನಹಟ್ಟಿಯ ಸಾಯಿನಗರ ನಿವಾಸಿ ಪ್ರಶಾಂತ್ ಬಸ್ಮೆ ಹೇಳಿದರು.

Published On - 1:49 pm, Fri, 1 July 22