Viral Video: ಇದು ಕಲ್ಲಂಗಡಿ ಆದ್ರೆ ವಾಟರ್​ಮೆಲನ್ ಅಲ್ಲ: ಖತರ್ನಾಕ್ ಪ್ಲ್ಯಾನ್ ಮಾಡಿ ಸಿಕ್ಕಿ ಬಿದ್ದ ಖದೀಮರು

Crime News In Kannada: ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಗೆ ಖತರ್ನಾಕ್ ಗ್ಯಾಂಗ್ ಕಲ್ಲಂಗಡಿಯ ಮೊರೆ ಹೋಗಿದ್ದರು. ಇಡೀ ಕಲ್ಲಂಗಡಿಯನ್ನು ಖಾಲಿ ಮಾಡಿ ಅದರ ಸಿಪ್ಪೆಯನ್ನು ಮಾತ್ರ ಇರಿಸಿಕೊಂಡಿದ್ದರು.

Viral Video: ಇದು ಕಲ್ಲಂಗಡಿ ಆದ್ರೆ ವಾಟರ್​ಮೆಲನ್ ಅಲ್ಲ: ಖತರ್ನಾಕ್ ಪ್ಲ್ಯಾನ್ ಮಾಡಿ ಸಿಕ್ಕಿ ಬಿದ್ದ ಖದೀಮರು
ಸಾಂದರ್ಭಿಕ ಚಿತ್ರ
Updated By: ಝಾಹಿರ್ ಯೂಸುಫ್

Updated on: Aug 30, 2021 | 9:22 PM

ಖದೀಮರು ಚಾಪೆ ಕೆಳಗೆ ತೂರಿದರೇ, ಚಾಣಕ್ಷ್ಯ ಪೊಲೀಸರು ರಂಗೋಲಿ ಕೆಳಗೆ ತೂರಬಲ್ಲರು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅವರು ಪ್ರತಿ ನಿತ್ಯ ಅದೇ ಮಾರ್ಗವಾಗಿ ಟ್ರಕ್​ನಲ್ಲಿ ಕಲ್ಲಂಗಡಿ ತೆಗೆದುಕೊಂಡು ಹೋಗುತ್ತಿದ್ದರು. ಅಂದು ಕೂಡ ಅದೇ ರೀತಿಯಲ್ಲಿ ಕಲ್ಲಂಗಡಿ ತುಂಬಿದ್ದ ಲಾರಿ ಆ ರಸ್ತೆಯ ಮೂಲಕ ಹಾದು ಹೋಗಬೇಕಿತ್ತು. ಆದರೆ ಅಂದು ಟ್ರಕ್​ನಲ್ಲಿದ್ದವರು ಹಾವಭಾವ ನೋಡಿ ಪೊಲೀಸರಿಗೆ ಅದೇನೋ ಸಂಶಯ ಮೂಡಿತ್ತು. ಹೀಗಾಗಿ ಟ್ರಕ್​ ಅನ್ನು ಪರಿಶೀಲಿಸಲು ಮುಂದಾದರು.

ಟ್ರಕ್​ನ ಹಿಂಬದಿಯ ಡೋರ್ ಓಪನ್ ಮಾಡಿದಾಗ ಎಂದಿನಂತೆ ಕಲ್ಲಂಗಡಿಗಳ ರಾಶಿ. ಹಚ್ಚ ಹಸಿರಿನಿಂದ ಕೂಡಿದ್ದ ಕಲ್ಲಂಗಡಿಯನ್ನು ನೋಡಿದ ಪೊಲೀಸರು ವಾಹನವನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಆದರೆ ಪೊಲೀಸರ ತಂಡದಲ್ಲಿದ್ದ ಒಬ್ಬ ಅಧಿಕಾರಿಗಂತು ಆ ತಂಡದ ಮೇಲಿನ ಸಂಶಯ ದೂರವಾಗಿರಲಿಲ್ಲ. ಹೀಗಾಗಿ ಟ್ರಕ್ ಒಳಗೆ ಹತ್ತಿ ಒಂದಷ್ಟು ಕಲ್ಲಂಗಡಿಯನ್ನು ಹೊರ ಹಾಕಿದರು. ಬಳಿಕ ಅದನ್ನು ಕತ್ತರಿಸಿ ಪರಿಶೀಲಿಸಿದಾಗ ಗೊತ್ತಾಗಿದ್ದೇ ಖದೀಮರ ಖತರ್ನಾಕ್ ಪ್ಲ್ಯಾನ್.

ಹೌದು, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಗೆ ಖತರ್ನಾಕ್ ಗ್ಯಾಂಗ್ ಕಲ್ಲಂಗಡಿಯ ಮೊರೆ ಹೋಗಿದ್ದರು. ಇಡೀ ಕಲ್ಲಂಗಡಿಯನ್ನು ಖಾಲಿ ಮಾಡಿ ಅದರ ಸಿಪ್ಪೆಯನ್ನು ಮಾತ್ರ ಇರಿಸಿಕೊಂಡಿದ್ದರು. ಆ ಬಳಿಕ ಅದರೊಳಗೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ತುಂಬಿಸಿಕೊಂಡು ಅಂಟಿಸಿದ್ದರು. ಹೀಗೆ ಮಾದಕ ವಸ್ತುಗಳು ಹೊಂದಿರುವ ಕಲ್ಲಂಗಡಿಯನ್ನು ಲೋಡ್ ಮಾಡಿ ಹೋಗುತ್ತಿದ್ದ ವೇಳೆ ಪೊಲೀಸರು ಟ್ರಕ್ ಅನ್ನು ತಡೆದಿದ್ದಾರೆ.

ಆ ಬಳಿಕ ಪರಿಶೀಲಿಸಿ ಒಂದೊಂದೇ ಕಲ್ಲಂಗಡಿಯನ್ನು ಕತ್ತರಿಸಿದಾಗ ಕೆಂಪು ಕಲ್ಲಂಗಡಿಯ ಬದಲಿಗೆ ದೊಡ್ಡ ದೊಡ್ಡ ಗಾಂಜಾಗಳ ಪ್ಯಾಕೆಟ್​ಗಳು ಪತ್ತೆಯಾಗಿದ್ದವು. ಪೊಲೀಸರ ಈ ಕಾರ್ಯಾಚರಣೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಸೈಟ್ ರೆಡಿಟ್​ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.

ಇದಾಗ್ಯೂ ಕಲ್ಲಂಗಡಿಯೊಂದಿಗೆ ಕೈಚಳಕ ತೋರಿಸಲು ಮುಂದಾದ ಈ ವಿಡಿಯೋ ಯಾವ ದೇಶದ್ದು ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ವೆಬ್​ಸೈಟ್​ವೊಂದು ಇದು ರಿಪ್ಲಬಿಕ್ ಆಫ್ ಚಡ್ ದೇಶದಲ್ಲಿ ನಡೆದ ಕಾರ್ಯಾಚರಣೆ ಎಂದು ತಿಳಿಸಿದ್ದರೂ ಹೆಚ್ಚಿನ ಮಾಹಿತಿ ನೀಡಿಲ್ಲ. ಆದೇನೇ ಇದ್ದರೂ ಮಾದಕ ವಸ್ತು ಕಳ್ಳ ಸಾಗಣಿಕೆಗೆ ಖದೀಮರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂಬುದು ಇದರಿಂದ ಮತ್ತೊಮ್ಮೆ ಬಹಿರಂಗವಾಗಿದೆ. ಅಷ್ಟೇ ಅಲ್ಲದೆ ಖದೀಮರು ಚಾಪೆ ಕೆಳಗೆ ತೂರಿದರೇ, ಚಾಣಕ್ಷ್ಯ ಪೊಲೀಸರು ರಂಗೋಲಿ ಕೆಳಗೆ ತೂರಬಲ್ಲರು ಎಂಬುದನ್ನೂ ಸಹ ನಿರೂಪಿಸಿ ತೋರಿಸಿದ್ದಾರೆ.

 

ಇದನ್ನೂ ಓದಿ: ಮುಂದುವರೆದ ದರ ಸಮರ: ಭರ್ಜರಿ ರಿಚಾರ್ಜ್​ ಆಫರ್ ನೀಡಿದ ಮೂರು ಕಂಪೆನಿಗಳು

ಇದನ್ನೂ ಓದಿ: ಫ್ರೀಡಂ 251 ರೂ. ಮೊಬೈಲ್ ಕಥೆ ಏನಾಯ್ತು? ಮತ್ತೆ ಸುದ್ದಿಯಲ್ಲಿ ಕಂಪೆನಿಯ ಮಾಲೀಕ

ಇದನ್ನೂ ಓದಿ: ವಿದೇಶಿ ತಂಡದ ನಾಯಕತ್ವನ್ನು ತ್ಯಜಿಸಿ ಭಾರತದಲ್ಲಿ ಕಣಕ್ಕಿಳಿಯಲಿರುವ ಸ್ಟಾರ್ ಆಟಗಾರ