ಚಿಕ್ಕಬಳ್ಳಾಪುರ , (ಫೆಬ್ರವರಿ 04): ಚಿಕ್ಕಬಳ್ಳಾಪುರ ತಾಲೂಕಿನ ಗೌಚೇನಹಳ್ಳಿಯ ಸುಭಾಷ್ಗೆ ಈಗಿನ್ನೂ 29 ವರ್ಷ ವಯಸ್ಸು. ಇದೇ ಸುಭಾಷ್ ವರ್ಷದ ಹಿಂದೆ ದೊಡ್ಡಬಳ್ಳಾಪುರದ ಆಚಾರ್ಲಹಳ್ಳಿಯ ಇಂದುಶ್ರೀಯನ್ನ ಪ್ರೀತಿಸಿ ಮದುವೆ ಆಗಿದ್ದ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಸಂಸಾರ ಇತ್ತು. ಪ್ಲಿಪ್ಕಾರ್ಟ್ನಲ್ಲಿ ಕೆಲಸ ಮಾಡ್ತಿದ್ದ ಸುಭಾಷ್, ಮನೆ ಖರ್ಚಿಗೆ ಹಣ ತಂದು ಕೊಡುತ್ತಿದ್ದ. ಆದ್ರೆ ಇದೇ ಸುಭಾಷ್ ಮೇಲೆ ಪತ್ನಿಗೆ ಅನುಮಾನ ಶುರುವಾಗಿತ್ತು. ಅಷ್ಟೇ ಅಲ್ಲ ಪತ್ನಿ ಮೇಲೆ ಸುಭಾಷ್ಗೂ ಅನುಮಾನ ಕಾಡ್ತಿತ್ತು. ನನ್ನ ಬಿಟ್ಟು ಬೇರೆಯವರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಗಲಾಟೆ ಮಾಡಿಕೊಂಡ ಇಬ್ಬರು ಪರಸ್ಪರ ದೂರವಾಗಿದ್ದರು. ಹೀಗಿರುವಾಗ್ಲೇ ನಿನ್ನೆ ತಡರಾತ್ರಿ ಸುಭಾಷ್ ಕೊಲೆ ಆಗಿ ಹೋಗಿದ್ದಾನೆ.
ಇನ್ನು ಮನೆಗೆ ಆಸರೆಯಾಗಿದ್ದ ಸುಭಾಷನ ಕೊಲೆ ಸುದ್ದಿ ತಿಳಿದ ತಾಯಿ, ತಂಗಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಆವರಣದಲ್ಲಿ ಗೋಳಾಡಿದ್ದು, ಮನಕಲುಕುವಂತಿತ್ತು. ಸ್ವತಃ ಇಂದುಶ್ರೀಯ ತಮ್ಮ ಮನೋಜ್ಕುಮಾರ್ ಸೇರಿದಂತೆ ಪ್ರವೀಣ, ವಿಘ್ನೇಷ, ಗಿರೀಶ, ಅನಿಲ್, ಪ್ರಸಾದ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ಠಾಣೆಗೆ ಆಗಮಿಸಿ ಶರಣಾಗಿದ್ದಾರೆ. ಇನ್ನು ಘಟನೆಯಲ್ಲಿ 10 ಜನರು ಭಾಗಿಯಾಗಿದ್ದು, ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ. ಮೋಹನ್, ಕಾರ್ತಿಕ, ನಂದ, ಸಿರೀಶ್, ನಂದ ಬಂಧಿತ ಆರೋಪಿಗಳಾಗಿದ್ದಾರೆ.
ಅಷ್ಟಕ್ಕೂ ಇಲ್ಲಿ ಸುಭಾಷ್ನ ಕತೆ ಮುಗಿಸಿದ್ದು ಬೇರೆ ಯಾರು ಅಲ್ಲ. ಸುಭಾಷ್ನ ಪತ್ನಿ ಇಂದುಶ್ರೀಯ ಸಹೋದರ ಮನೋಜ್ಕುಮಾರ್. ತನ್ನ ಪಟಾಲಂ ಕಟ್ಟಿಕೊಂಡು ಬಂದು ಭಾವನ ಕತೆ ಮುಗಿಸಿದ್ದ. ಅದೇ ಮನೋಜ್ಕುಮಾರ್ ತನ್ನ ಗ್ಯಾಂಗ್ ಜತೆ ಪೊಲೀಸರಿಗೆ ಶರಣಾಗಿದ್ದಾನೆ. ಈ ಕೊಲೆ ಕೇಸ್ನಲ್ಲಿ ಇಂದುಶ್ರೀ ಸಹೋದರ ಮಾತ್ರ ಭಾಗಿ ಆಗಿಲ್ಲ. ಪ್ರವೀಣ್ ಎನ್ನುವ ಮತ್ತೊಬ್ಬ ಆರೋಪಿಯೂ ಇದ್ದಾನೆ. ಈ ಪ್ರವೀಣ್ ಜತೆ ಇಂದುಶ್ರೀಗೆ ಅಕ್ರಮ ಸಂಬಂಧ ಇತ್ತಂತೆ. ಅದೇ ಪ್ರಿಯಕರನಿಗೆ ಹೇಳಿ ಗಂಡನನ್ನ ಕೊಲ್ಲಿಸಿರುವುದು ಗೊತ್ತಾಗಿದೆ. ಆ ಆ್ಯಂಗಲ್ನಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ.
ಸುಭಾಷ್ನ ಕೊಲೆ ಕೇಸ್ನಲ್ಲಿ 10 ಆರೋಪಿಗಳು ಭಾಗಿ ಆಗಿರೋದು ಗೊತ್ತಾಗಿದ್ದು, ಮನೋಜ್ಕುಮಾರ್ ಸೇರಿದಂತೆ ಪ್ರವೀಣ್, ವಿಘ್ನೇಶ್, ಗಿರೀಶ್, ಅನಿಲ್, ಪ್ರಸಾದ್ ಅನ್ನೋರು ಖಾಕಿಗೆ ಶರಣಾದ್ರೆ, ಮೋಹನ್, ಕಾರ್ತಿಕ್, ನಂದ, ಸಿರೀಶ್ ಅನ್ನೋರನ್ನ ಪೊಲೀಸರು ಬಂಧಿಸಿದ್ದಾರೆ . ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆ ಆಗಿದ್ದ ಜೋಡಿ ನಡುವೆ ಅನುಮಾನ ಅನ್ನೋದು ಕಂದಕ ಸೃಷ್ಟಿಸಿತ್ತು. ಈ ಕಂದಕದ ನಡುವೆ ಪತ್ನಿ ಕಡೆಯವರಿಂದಲೇ ಸುಭಾಷ್ ಕೊಲೆ ಆಗಿದ್ದು ನಿಜಕ್ಕೂ ದುರಂತ.
ದೊಡ್ಡಬಳ್ಳಾಪುರ ತಾಲ್ಲೂಕು ಆಚಾರ್ಲಹಳ್ಳಿ ಗ್ರಾಮದ ಇಂದುಶ್ರೀಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಆದರೆ ಕಳೆದ 6 ತಿಂಗಳಿನಿಂದ ನಿನಗೆ ಅನೈತಿಕ ಸಂಬಂಧವಿದೆಯೆಂದು ಅವಳು.. ನಿನಗೆ ಅನೈತಿಕ ಸಂಬಂಧವಿದೆಯೆಂದು ಇವನು. ಪರಸ್ಪರ ಮುನಿಸಿಕೊಂಡು ದೂರವಾಗಿದ್ದರು. ಇದೇ ವಿಚಾರದಲ್ಲಿ ನಿನ್ನೆ (ಫೆಬ್ರವರಿ 03) ತಡರಾತ್ರಿ ಸುಬಾಷನ ಕೊಲೆಯಾಗಿದೆ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Tue, 4 February 25