ಪಿಎಂ ಶ್ರೀ ಶಾಲಾ ಯೋಜನೆ: ಪ್ರೆಸಿಡೆನ್ಸಿ ವಿವಿಯಲ್ಲಿ ಶಿಕ್ಷಕರಿಗೆ ನಾವೀನ್ಯತೆ, ಉದ್ಯಮಶೀಲತೆ ಶಿಬಿರ
ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪಿಎಂ ಶ್ರೀ ಯೋಜನೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಪೂರಕವಾಗಿ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ನಾವೀನ್ಯತೆ, ವಿನ್ಯಾಸ ಮತ್ತು ಉದ್ಯಮಶೀಲತೆ ಶಿಬಿರ ನಡೆದಿದೆ. ಡಾ. ಅಭಯ್ ಜೆರೆ ಸೇರಿದಂತೆ ಗಣ್ಯರು ಭಾಗವಹಿಸಿ, ಶಾಲೆಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ನಾವೀನ್ಯತೆ ಮತ್ತು ಉದ್ಯಮಶೀಲತಾ ಚಿಂತನೆಯನ್ನು ಉತ್ತೇಜಿಸಲು ಕರೆ ನೀಡಿದರು.

ಬೆಂಗಳೂರು, ಜನವರಿ 09: ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ‘ಪಿಎಂ ಶ್ರೀ’ ಶಾಲಾ ಯೋಜನೆಯನ್ನು (pm shri scheme) ರೂಪಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ನಾವೀನ್ಯತೆ, ವಿನ್ಯಾಸ ಮತ್ತು ಉದ್ಯಮಶೀಲತೆ (IDE) ಶಿಬಿರ ನಡೆಯುತ್ತಿದೆ. ಶಿಬಿರದ ಮೂರನೇ ದಿನದಂದು ಕೂಡ ಹಲವು ಗಣ್ಯರು ಭಾಗಿಯಾಗಿದ್ದರು.
ಡಿಆರ್ಡಿಓದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವ್ಯವಸ್ಥೆಗಳ ವಿಶೇಷ ವಿಜ್ಞಾನಿ ಮತ್ತು ಮಹಾನಿರ್ದೇಶಕಿ ಡಾ. ಬಿ. ಕೆ. ದಾಸ್ ಮತ್ತು ಡಾ. ವಿದ್ಯಾ ಕುಮಾರಿ ಶಿಬಿರವನ್ನು ಉದ್ಘಾಟಿಸಿದರು. ಈ ಉಪಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಗುರಿಗಳನ್ನು ಬೆಂಬಲಿಸುತ್ತದೆ.
ಡಾ. ಅಭಯ್ ಜೆರೆ ಹೇಳಿದ್ದಿಷ್ಟು
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಮತ್ತು ಶಿಕ್ಷಣ ಸಚಿವಾಲಯ ಅಧಿಕಾರಿ ಡಾ. ಅಭಯ್ ಜೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಪ್ರಾಂಶುಪಾಲರು ಮತ್ತು ಶಿಕ್ಷಕರೊಂದಿಗೆ ಮಾತನಾಡಿದ ಅವರು, ಚಿಕ್ಕ ವಯಸ್ಸಿನಿಂದಲೇ ಶಾಲೆಗಳು ನಾವೀನ್ಯತೆ, ಸಮಸ್ಯೆ ಪರಿಹಾರ ಮತ್ತು ಉದ್ಯಮಶೀಲತಾ ಚಿಂತನೆಯನ್ನು ಪ್ರೋತ್ಸಾಹಿಸಬೇಕು ಎಂದರು. ವಾಡಿಕೆಯಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವ ಬದಲು ಕುತೂಹಲ, ಪ್ರಯೋಗ ಮತ್ತು ನಿಜ ಜೀವನದ ಉದಾಹರಣೆಗಳ ಮೂಲಕ ಕಲಿಸುವಂತೆ ಸಲಹೆ ನೀಡಿದರು.

ನಾವೀನ್ಯತೆ, ವಿನ್ಯಾಸ ಮತ್ತು ಉದ್ಯಮಶೀಲತೆ (IDE) ಶಿಬಿರ ‘ಪಿಎಂ ಶ್ರೀ ಶಾಲಾ’ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ವಿನ್ಯಾಸ ಚಿಂತನೆ, ನವೀನ ಬೋಧನಾ ವಿಧಾನಗಳು, ಉದ್ಯಮಶೀಲತೆಯ ಮೂಲಭೂತ ಅಂಶಗಳು ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಇದು ಅವರ ಶಾಲೆಗಳಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ: ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್ಫೇಸ್ ಸಮಿಟ್ 2025 ಸಂಪನ್ನ
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ. ನಿಸ್ಸಾರ್ ಅಹ್ಮದ್, ಪ್ರಭಾರ ಉಪ ಕುಲಪತಿ ಡಾ. ಎಸ್. ಜೆ. ತಿರುವೆಂಗಡಂ ಮತ್ತು ಪ್ರೊ. ಡಾ. ಶಿವಪೆರುಮಾಳ್, ಅಧ್ಯಾಪಕ ಸದಸ್ಯರು ಮತ್ತು ಸಂಯೋಜಕರೊಂದಿಗೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಎಐಸಿಟಿಇ ಅಧಿಕಾರಿಗಳು ಸಹ ಆನ್ಲೈನ್ ಮುಖಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:16 pm, Fri, 9 January 26
