Karnataka Assembly Election 2023: ತಾರಿಹಾಳ ಗ್ರಾಮದಲ್ಲಿ ಯುವಕನ ಕೊಲೆ​: ನಟ ಕಿಚ್ಚ ಸುದೀಪ್​ ರೋಡ್​ ಶೋ ರದ್ದು

|

Updated on: May 01, 2023 | 3:27 PM

ತಾರಿಹಾಳ ಗ್ರಾಮದಲ್ಲಿ ಯುವಕನ ಮರ್ಡರ್​​ ಹಿನ್ನೆಲೆ ಗ್ರಾಮೀಣ‌ ಮತಕ್ಷೇತ್ರದಲ್ಲಿ ಇಂದು ನಡೆಯಬೇಕಿದ್ದ ನಟ ಕಿಚ್ಚ ಸುದೀಪ್​ ರೋಡ್​ ಶೋ ಕೊನೆ ಕ್ಷಣದಲ್ಲಿ ರದ್ದಾಗಿದೆ.

Karnataka Assembly Election 2023: ತಾರಿಹಾಳ ಗ್ರಾಮದಲ್ಲಿ ಯುವಕನ ಕೊಲೆ​: ನಟ ಕಿಚ್ಚ ಸುದೀಪ್​ ರೋಡ್​ ಶೋ ರದ್ದು
ಪ್ರಾತಿನಿಧಿಕ ಚಿತ್ರ
Follow us on

ಬೆಳಗಾವಿ: ತಾರಿಹಾಳ ಗ್ರಾಮದಲ್ಲಿ ಯುವಕನ ಮರ್ಡರ್​​ ಹಿನ್ನೆಲೆ ಗ್ರಾಮೀಣ‌ ಮತಕ್ಷೇತ್ರದಲ್ಲಿ ಇಂದು ನಡೆಯಬೇಕಿದ್ದ ನಟ ಕಿಚ್ಚ ಸುದೀಪ್ (Kichcha Sudeep)​ ರೋಡ್​ ಶೋ ಕೊನೆ ಕ್ಷಣದಲ್ಲಿ ರದ್ದಾಗಿದೆ. ಮೊದಲು ಸುಳೇಭಾವಿಯಲ್ಲಿ ರೋಡ್ ಶೋ ನಿಗಿದಿಯಾಗಿತ್ತು. ನಂತರ ಸುಳೇಭಾವಿ ರೋಡ್ ಶೋ ಕೂಡ ಕ್ಯಾನ್ಸಲ್ ಆಗಿ ಬಳಿಕ ತಾರಿಹಾಳ ಗ್ರಾಮದಲ್ಲಿ ನಿಗದಿಯಾಗಿತ್ತು. ಆದರೆ ತಾರಿಹಾಳ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮರ್ಡರ್ ಹಿನ್ನೆಲೆ ಸುದೀಪ್​​ ರೋಡ್ ಶೋ ರದ್ದು ಪಡಿಸಲಾಗಿದೆ. ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೊಳ್ಕರ್ ಪರ ಸುದೀಪ್ ಪ್ರಚಾರ ಮಾಡಬೇಕಿತ್ತು.

ತಿಂಗಳ ಹಿಂದಷ್ಟೆ ಸಿಎಂ  ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುವುದಾಗಿ ಕಿಚ್ಚ ಸುದೀಪ್ ವಾಗ್ದಾನ ಮಾಡಿದ್ದರು. ಅದೇ ರೀತಿಯಾಗಿ ಕಳೆದ ಕೆಲ ದಿನಗಳಿಂದ ಕಿಚ್ಚ ಸುದೀಪ್​ ರಾಜ್ಯದ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮತ್ತು ರೋಡ್‌ ಶೋ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ತಾರಾಬಲ: ವರುಣಾ ಕ್ಷೇತ್ರದಲ್ಲಿ ಶಿವಣ್ಣ, ರಮ್ಯಾ, ದುನಿಯಾ ವಿಜಯ್ ಪ್ರಚಾರ

ಅದೇ ರೀತಿಯಾಗಿ ಸೋಮವಾರ ಬೆಳಿಗ್ಗೆ ಕಿತ್ತೂರು ವಿಧಾನಸಭಾ ಕ್ಷೇತ್ರದ ನೇಸರಗಿ ಗ್ರಾಮದಲ್ಲಿ ರೋಡ್‌ಶೋ ನಡೆಸಿದರು. ನಂತರ ಯೆಮಕನಮರಡಿ, ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬೆಂಬಲಿಸಲು ಅವರು ರೋಡ್‌ಶೋ ನಡೆಸಲಿದ್ದಾರೆ. ಇಂದು ರಾತ್ರಿ ಬೆಳಗಾವಿಯಲ್ಲಿ ನಟ ಸುದೀಪ್ ವಾಸ್ತವ್ಯ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಪರ ಮೋಹಕ ತಾರೆ ರಮ್ಯಾ ಅಖಾಡಕ್ಕೆ

ರಾಜಕೀಯದಿಂದ ಮೂರು ವರ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ ಅವರು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ರಾಜ್ಯ ರಾಜಕಾರಣಕ್ಕೆ ಮರು ಎಂಟ್ರಿ ಕೊಡುತ್ತಿದ್ದಾರೆ. ಮೇ 1ರಂದು ವಿಜಯಪುರ, ಮಂಡ್ಯ, ರಾಮನಗರ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತಯಾಚನೆ ನಡೆಸಲಿದ್ದಾರೆ. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಕ್ಷೇತ್ರದಿಂದಲೇ ಪ್ರಚಾರ ಆರಂಭ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: BJP Karnataka Manifesto 2023: ಸರ್ಕಾರದ ಹಿಡಿತದಿಂದ ದೇಗುಲಗಳು ಮುಕ್ತ, ಬಡ ಕುಟುಂಬಗಳ ತೀರ್ಥಯಾತ್ರೆಗೆ ಸಬ್ಸಿಡಿ; ಬಿಜೆಪಿ ಭರವಸೆ

ಈ ಹಿಂದೆ ಸಂಸದೆಯಾಗಿ ಆ ನಂತರ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ ರಮ್ಯಾ 2019 ರ ಚುನಾವಣೆ ಬಳಿಕ ಕಾಂಗ್ರೆಸ್ ಹಾಗೂ ಒಟ್ಟಾರೆ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ ಇದೀಗ ಮತ್ತೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು, ಈ ವಿಧಾನಸಭೆ ಚುನಾವಣೆಯಲ್ಲಿ ತಾರಾ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.

ನಟಿಯರಾದ ಹರ್ಷಿಕಾ ಪೂಣಚ್ಚ, ತಾರಾ ಅನುರಾಧ, ಶೃತಿ ಅವರು ಬಿಜೆಪಿ ಪರ ಮತಬೇಟೆಯಾಡುತ್ತಿದ್ದಾರೆ. ಕಾಂಗ್ರೆಸ್ ಪರ ದೊಡ್ಡಣ್ಣ, ಸಾಧು ಕೋಕಿಲ ಅವರು ಪ್ರಚಾರ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು 224 ಸ್ಥಾನಗಳಿಗೆ ಫಲಿತಾಂಶ ಪ್ರಕಟವಾಗಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Mon, 1 May 23