Hiriyuru Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಈ ಪೈಕಿ ಹಿರಿಯೂರು ಕ್ಷೇತ್ರ ಕೂಡ ಒಂದು. 2018ರಲ್ಲಿ ಮೊದಲಬಾರಿ ಬಿಜೆಪಿಯಿಂದ ಸ್ಪರ್ಧಿಸಿ 12,857 ಮತಗಳ ಅಂತರದಿಂದ ಗೆದ್ದಿರುವ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಕಣದಲ್ಲಿದ್ದು, ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ನಿಂದ ಡಿ ಸುಧಾಕರ್, ಜೆಡಿಎಸ್ನಿಂದ ರವೀಂದ್ರಪ್ಪ ಹಾಗೂ ಆಮ್ ಆದ್ಮಿ ಪಕ್ಷದಿಂದ ಕೆಟಿ ತಿಪ್ಪೇಸ್ವಾಮಿ ಕಣದಲ್ಲಿದ್ದಾರೆ.
ಗೊಲ್ಲರು, ಒಕ್ಕಲಿಗರು ಮತ್ತು ಇತರೆ ಪ್ರಮುಖ ಸಮುದಾಯದ ಜನರು ಇಲ್ಲಿ ನಿರ್ಣಾಯಕವಾಗಿದ್ದಾರೆ. ಆದರೆ, 2008ರಲ್ಲಿ ಪಕ್ಕದ ಚಳ್ಳಕೆರೆ ಎಸ್ಟಿ ಮೀಸಲು ಕ್ಷೇತ್ರವಾದ ಬಳಿಕ ಚಳ್ಳಕೆರೆ ಕಾಂಗ್ರೆಸ್ ಶಾಸಕರಾಗಿದ್ದ ಡಿ.ಸುಧಾಕರ್ ಹಿರಿಯೂರಿಗೆ ಲಗ್ಗೆಯಿಟ್ಟಿದ್ದರು. ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರವಾಗಿ ಗೆದ್ದು ಬಿಜೆಪಿ ಬೆಂಬಲಿಸಿ ಸಚಿವರಾಗಿದ್ದರು. 2013ರಲ್ಲಿ ಕಾಂಗ್ರೆಸ್ ಶಾಸಕರಾಗಿ ಗೆದ್ದಿದ್ದರು. ಆದರೆ, ಜೆಡಿಎಸ್ ಅಬ್ಯರ್ಥಿಯಾಗಿ ಸ್ಪರ್ಧೆಯೊಡ್ಡಿದ್ದ ಮಾಜಿ ಸಚಿವ ಎ.ಕೃಷ್ಣಪ್ಪ ಅಲ್ಪ ಮತಗಳಿಂದ ಸೋಲುಂಡಿದ್ದರು. ಬಳಿಕ ಕೆಲ ವರ್ಷದಲ್ಲೇ ಎ.ಕೃಷ್ಣಪ್ಪ ವಿಧಿವಶರಾಗಿದ್ದರು.
ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಆಗಿದ್ದ ಮಾಜಿ ಸಚಿವ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಶ್ರೀನಿವಾಸ್ 2018ರಲ್ಲಿ ಹಿರಿಯೂರಿನಿಂದ ಬಿಜೆಪಿ ಅಬ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡು ಪ್ರಬಲ ಸಮುದಾಯಗಳಾದ ಗೊಲ್ಲ ಮತ್ತು ಒಕ್ಕಲಿಗ ಸಮುದಾಯ ದೂರವಿಟ್ಟು ಜೈನ ಸಮುದಾಯದ ಡಿ.ಸುಧಾಕರ್ ಅವರನ್ನು 2008 ಮತ್ತು 2013ರಲ್ಲಿ ಗೆಲ್ಲಿಸಿದ್ದ ಜನ 2018ರಲ್ಲಿ ಗೊಲ್ಲ ಸಮುದಾಯದ ಪೂರ್ಣಿಮಾ ಗೆಲ್ಲಿಸಿದ್ದರು. ಇದೀಗ ಪೂರ್ಣಿಮಾ ಮತ್ತೊಮ್ಮೆ ಕಮಲ ಪಕ್ಷದಿಂದ ಕಣಕ್ಕಳಿದಿದ್ದಾರೆ.
ಮಾಜಿ ಸಚಿವ ಡಿ.ಸುಧಾಕರ್ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರಾಗಿದ್ದು, ಟಿಕೆಟ್ ಗೆಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಬಿಜೆಪಿ ಶಾಸಕಿ ಪೂರ್ಣಿಮಾ ಹಾಗೂ ಕಾಂಗ್ರೆಸ್ ಅಬ್ಯರ್ಥಿ ಡಿ.ಸುಧಾಕರ್ ನಡುವೆ ನೇರ ಹಣಾ ಹಣಿ ಏರ್ಪಟ್ಟಿದೆ.