AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ತೂರು ಕ್ಷೇತ್ರದಲ್ಲಿ ಹಿಂದೂ ಶಕ್ತಿ ಪ್ರದರ್ಶನದೊಂದಿಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ ಅರುಣ್ ಪುತ್ತಿಲ

ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡ ಅರುಣ್ ಕುಮಾರ್ ಪುತ್ತಿಲ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಸಾವಿರಾರು ಹಿಂದೂ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಪುತ್ತೂರು ಕ್ಷೇತ್ರದಲ್ಲಿ ಹಿಂದೂ ಶಕ್ತಿ ಪ್ರದರ್ಶನದೊಂದಿಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ ಅರುಣ್ ಪುತ್ತಿಲ
ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಪುತ್ತೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ
Follow us
Rakesh Nayak Manchi
|

Updated on:Apr 22, 2023 | 8:07 PM

ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2o23) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟಿದೆ. ಸಾಂಪ್ರದಾಯಿಕವಾಗಿ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಗೆಲುವಿಗಾಗಿ ಹೋರಾಟ ನಡೆಯುತ್ತಿತ್ತು. ಆದರೆ ಈ ಬಾರಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ (Arun Kumar Puttila) ಅವರು ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಧುಮುಕಿದ್ದಾರೆ. ಇಂದು ಅವರು ಸಾವಿರಾರು ಹಿಂದೂ ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಸಿದ್ಧಾಂತವನ್ನು ಬಿಟ್ಟು ಹೋದವರಿಗೆ ಒಳ್ಳೆಯ ಸಂದೇಶ ಕೊಡಲು ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಪುತ್ತೂರು ಮಿನಿ ವಿಧಾನಸೌಧದ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಮಾತನಾಡಿದ ಅರುಣ್ ಪುತ್ತಿಲ, ಹಿಂದುತ್ವದ ಆಧಾರದಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಸಿದ್ಧಾಂತವನ್ನು ಬಿಟ್ಟು ಹೋದವರಿಗೆ ಒಳ್ಳೆಯ ಸಂದೇಶ ಕೊಡಲು ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನಿರೀಕ್ಷೆಗೂ ಮೀರಿದ ಜನಬೆಂಬಲ ದೊರೆತಿದೆ. ಈ ಬಾರಿ ಪುತ್ತೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ನಮ್ಮ ಮುಂದಿರುವ ವಿರೋಧ ಪಕ್ಷ ಯಾರೆನ್ನುವುದು ಜನತೆಗೆ ತಿಳಿದಿದೆ. ಪುತ್ತೂರಿನ ಜನತೆ ಈ ಬಾರಿ ತಮ್ಮ ಶಾಸಕ ಯಾರು ಅನ್ನೋದನ್ನ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಮಹಾಲಿಂಗೇಶ್ವರನ ದಯೆಯಿಂದ ಶಾಸಕನಾಗಿ ಆಯ್ಕೆಯಾಗುವ ಭರವಸೆಯಿದೆ ಎಂದರು.

ಇದನ್ನೂ ಓದಿ: Yadgiri: ಸುರಪುರದಲ್ಲಿ ಅದ್ಧೂರಿ ಚುನಾವಣಾ ಮೆರವಣಿಗೆಗೆ ಬ್ರೇಕ್; ಸರಳವಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿಗಳು

ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಬಿಜೆಪಿ ಹೈಕಮಾಂಡ್ ಕೋಕ್ ನೀಡಿ ಹೊಸ ಅಭ್ಯರ್ಥಿಯನ್ನಾಗಿ ಆಶಾ ತಿಮ್ಮಪ್ಪ ಅವರಿಗೆ ಮಣೆ ಹಾಕಿದೆ. ಇತ್ತು ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಪುತ್ತಿಲ ಅವರು ಟಿಕೆಟ್ ಕೈತಪ್ಪುತ್ತಿದ್ದಂತೆ ತನ್ನ ಬೆಂಬಲಗರ ಬೃಹತ್ ಸಭೆ ಕರೆದಿದ್ದರು. ಈ ವೇಳೆ ಪಕ್ಷೇತ್ರರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಬೆಂಬಲಿಗರು ಸೂಚಿಸಿದ ಹಿನ್ನೆಲೆ ಅರುಣ್ ಪುತ್ತಿಲ ಪಕ್ಷೇತರವಾಗಿ ಚುನಾವಣಾ ರಣಕಣಕ್ಕೆ ಇಳಿದಿದ್ದು, ಇಂದು ನಾಮಪತ್ರ ಕೂಡ ಸಲ್ಲಿಸಿದ್ದಾರೆ.

ಒಂದೆಡೆ ಹಿಂದುತ್ವ ಸಿದ್ಧಾಂತದ ಮೇಲೆ ಅರುಣ್ ಕುಮಾರ್ ಪಕ್ಷೇತರವಾಗಿ ಕಣಕ್ಕಿಳಿಯುತ್ತಿದ್ದಂತೆ ಇತ್ತ ಹಿಂದೂ ಸಿದ್ಧಾಂತ ಪ್ರತಿಪಾದಿಸುವ ಬಿಜೆಪಿಗೆ ನಡುಕ ಉಂಟಾಗಿದೆ. ಪುತ್ತಿಲ ಅವರಿಗೆ ಹಿಂದೂ ಸಂಘಟನೆಗಳು ಸಂಪೂರ್ಣವಾಗಿ ಬೆಂಬಲ ಸೂಚಿಸಿರುವ ಹಿನ್ನೆಲೆ ಬಿಜೆಪಿ ಸಾಂಪ್ರದಾಯಿಕ ವೋಟುಗಳು ಪುತ್ತಿಲ ಪಾಲಾಗುವ ಸಾಧ್ಯತೆ ಇದೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಬಿಜೆಪಿಯಲ್ಲಿ ಭಿನ್ನಮತ ಲಾಭ ತಂದೊಡ್ಡುವ ಸಾಧ್ಯತೆ ಇದೆ. ಕೊನೆಯದಾಗಿ ಕ್ಷೇತ್ರದ ಮತದಾರ ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Mon, 17 April 23