ಬಿಜೆಪಿ ನಾಯಕರೊಂದಿಗೆ ಇಂದು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಭೇಟಿ; ಕಿಂಗ್ ಮೇಕರ್​ಗಳ ನಿಲುವೇನು?

|

Updated on: Jun 05, 2024 | 6:36 AM

ಕೇಂದ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ಬಳಿ ಸ್ಪಷ್ಟ ಬಹುಮತವಿಲ್ಲದ ಕಾರಣ ಎನ್​ಡಿಎ ಬಣದಲ್ಲಿರುವ ಮಿತ್ರ ಪಕ್ಷಗಳ ಬೆಂಬಲ ಬೇಕೇಬೇಕು. ಈ ಹಿನ್ನೆಲೆಯಲ್ಲಿ ಇಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ದೆಹಲಿಗೆ ತೆರಳಿ ಬಿಜೆಪಿ ನಾಯಕರನ್ನು ಭೇಟಿಯಾಗುವ ಸಾಧ್ಯತೆಯಿದೆ.

ಬಿಜೆಪಿ ನಾಯಕರೊಂದಿಗೆ ಇಂದು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಭೇಟಿ; ಕಿಂಗ್ ಮೇಕರ್​ಗಳ ನಿಲುವೇನು?
ನಿತೀಶ್ ಕುಮಾರ್ - ಚಂದ್ರಬಾಬು ನಾಯ್ಡು
Follow us on

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) 292 ಸ್ಥಾನಗಳನ್ನು ಪಡೆದಿದ್ದರೂ ಎನ್​ಡಿಎಗೆ (NDA) ತಾನು ಎಣಿಸಿದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದ ಕಾರಣದಿಂದ ನಿರಾಸೆಯಾಗಿದೆ. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಕಾರಣದಿಂದ ತನ್ನ ಮಿತ್ರಪಕ್ಷಗಳ ಮೇಲೆ ಅವಲಂಬಿತರಾಗಬೇಕಾದ ಅನಿವಾರ್ಯತೆಯಿದೆ. ಹೀಗಾಗಿ, ಕೇಂದ್ರದಲ್ಲಿ ಸರ್ಕಾರ ರಚಿಸಬೇಕಾದರೆ ಬಿಜೆಪಿಗೆ ನಿತೀಶ್ ಕುಮಾರ್ (Nitish Kumar) ನೇತೃತ್ವದ ಜೆಡಿಯು ಅಥವಾ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ಟಿಡಿಪಿ ಬೆಂಬಲ ಬೇಕೇಬೇಕು. ಹೀಗಾಗಿ, ಈ ಇಬ್ಬರು ನಾಯಕರು ಇದೀಗ ಕಿಂಗ್ ಮೇಕರ್ ಆಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿ ಹೊರಹೊಮ್ಮಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಇಂದು (ಜೂನ್ 5) ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಿಜೆಪಿಗೆ ಬಹುಮತದ ಕೊರತೆ; ಕಿಂಗ್​ಮೇಕರ್ ಆದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು!

ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಬಹುಮತದ ಮಾರ್ಕ್ 272 ಅನ್ನು ತಲುಪಲು ವಿಫಲವಾದ ನಂತರ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಪಾಲುದಾರರ ಅಗತ್ಯವಿದೆ. ನಿತೀಶ್ ಅವರ ಜೆಡಿಯು ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನ ಗೆದ್ದಿದೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ 12 ಸ್ಥಾನಗಳನ್ನು ಗೆದ್ದಿದೆ.

ಜೆಡಿ (ಯು) ಮತ್ತು ಟಿಡಿಪಿ ಎರಡೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಿದೆ. ಆದರೆ ಇಂಡಿಯ ಬಣದವರು ಈ ಎರಡೂ ಪಕ್ಷದವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೆ ಬಿಜೆಪಿಗೆ ಅಧಿಕಾರಕ್ಕೇರುವುದು ಕಷ್ಟವಾಗುತ್ತದೆ. ಒಂದುವೇಳೆ ಟಿಡಿಪಿ ಮತ್ತು ಜೆಡಿಯು ತಮ್ಮ 27 ಸ್ಥಾನಗಳೊಂದಿಗೆ ಇಂಡಿಯ ಬ್ಲಾಕ್‌ಗೆ ಬೆಂಬಲ ಘೋಷಿಸಿದರೆ ಇಂಡಿಯ ಬಣಕ್ಕೆ ಬಹುಮತ ಸಿಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ: ಕಾರ್ಯಕರ್ತರೊಂದಿಗೆ ಗೆಲುವಿನ ಸಂಭ್ರಮ ಆಚರಿಸಿದ ವಿಜಯೇಂದ್ರ, ರವಿ ಮತ್ತು ಅಶೋಕ

ಇಂದು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಇಬ್ಬರೂ ನಾಯಕರು ಬುಧವಾರ ದೆಹಲಿಗೆ ತೆರಳಲಿದ್ದು, ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಲಿದ್ದಾರೆ. ನಿತೀಶ್ ಇಂದು ದೆಹಲಿಗೆ ಆಗಮಿಸಲಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ಕಚೇರಿ (ಸಿಎಂಒ) ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಬಿಹಾರದ ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಅವರು ನಿತೀಶ್ ಅವರನ್ನು ಭೇಟಿಯಾಗಲು ಮನೆಗೆ ತೆರಳಿದ್ದರು.

ಬಿಜೆಪಿಯು ಸ್ವಂತವಾಗಿ ಬಹುಮತವನ್ನು ಪಡೆಯಲು ವಿಫಲವಾದ ನಂತರ, ಟಿಡಿಪಿ ಮತ್ತು ಜೆಡಿಯು ಕಿಂಗ್‌ಮೇಕರ್‌ಗಳಾಗಿ ಮಾರ್ಪಟ್ಟಿವೆ. ಏಕೆಂದರೆ ಅವರ ಬೆಂಬಲವು ಬಿಜೆಪಿಗೆ ಸರ್ಕಾರ ರಚಿಸಲು ಅವಶ್ಯಕವಾಗಿದೆ. ಈ ಎರಡೂ ಪಕ್ಷಗಳು ಎನ್‌ಡಿಎ ಭಾಗವಾಗಿದ್ದರೂ, ಅವರಿಬ್ಬರೂ ಬಣವನ್ನು ತೊರೆದ ಇತಿಹಾಸವನ್ನು ಹೊಂದಿದ್ದಾರೆ. ನಿತೀಶ್ ಕುಮಾರ್ ಅವರು ಕಳೆದ ವರ್ಷಗಳಲ್ಲಿ ತಮ್ಮ ನಿಷ್ಠೆಯನ್ನು ಬದಲಾಯಿಸಿದ ಉದಾಹರಣೆಗಳು ಹಲವಾರಿವೆ. ಇಂಡಿಯಾ ಬ್ಲಾಕ್ ಈ ಎರಡೂ ಪಕ್ಷಗಳನ್ನು ಸಂಪರ್ಕಿಸಿದೆ. ಅವರನ್ನು ತಮ್ಮ ಕಡೆಗೆ ಓಲೈಸಿಕೊಳ್ಳಲು ಒಪ್ಪಂದಕ್ಕೆ ತಯಾರಿದೆ ಎನ್ನಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ