Amit Shah: ಕಾರ್ಯಕರ್ತರೇ ನಮ್ಮ ದೊಡ್ಡ ಆಸ್ತಿ; ಬಿಜೆಪಿ ಗೆಲುವಿಗೆ ಧನ್ಯವಾದ ಅರ್ಪಿಸಿದ ಅಮಿತ್ ಶಾ

|

Updated on: Jun 04, 2024 | 8:52 PM

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಬಿಜೆಪಿ ನೇತೃತ್ವದ ಎನ್​ಡಿಎ ನಿರೀಕ್ಷಿತ ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Amit Shah: ಕಾರ್ಯಕರ್ತರೇ ನಮ್ಮ ದೊಡ್ಡ ಆಸ್ತಿ; ಬಿಜೆಪಿ ಗೆಲುವಿಗೆ ಧನ್ಯವಾದ ಅರ್ಪಿಸಿದ ಅಮಿತ್ ಶಾ
ಅಮಿತ್ ಶಾ
Follow us on

ನವದೆಹಲಿ: “ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಮೂರನೇ ಬಾರಿಗೆ ಬಿಜೆಪಿಯ ಈ ಗೆಲುವು, ಈ ವಿಜಯಕ್ಕಾಗಿ ನಾನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಮತ್ತು ಶ್ರಮಿಸುತ್ತಿರುವ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು (BJP Workers) ಅಭಿನಂದಿಸುತ್ತೇನೆ. ದೇಶದ ಪ್ರತಿಯೊಂದು ಭಾಗ ಹಾಗೂ ಕಾರ್ಯಕರ್ತರು ಬಿಜೆಪಿಗೆ ದೊಡ್ಡ ಆಸ್ತಿಯಾಗಿದೆ. ನೀವೆಲ್ಲರೂ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಮನೆ ಮನೆಗೆ ತೆರಳಿ ಜನರ ಆಶೀರ್ವಾದವನ್ನು ಕೋರಿದ್ದೀರಿ. ಇದು ನಿಜಕ್ಕೂ ಶ್ಲಾಘನೀಯ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು, 3 ಬಾರಿ ಗೆಲುವು ನೀಡಿರುವ ಮತದಾರರಿಗೆ ಕೃತಜ್ಞತೆಗಳು ಎಂದಿದ್ದಾರೆ. ಇದರ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮೂಲಕ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಮೂರನೇ ಬಾರಿಗೆ ಬಿಜೆಪಿಯ ಈ ಗೆಲುವು ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಫಲ. ಈ ಗೆಲುವಿಗಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರನ್ನು ಅಭಿನಂದಿಸುತ್ತೇನೆ. ಎಲ್ಲಾ ಬಿಜೆಪಿ ಕಾರ್ಯಕರ್ತರು ದೇಶದ ಪ್ರತಿಯೊಂದು ಭಾಗದಲ್ಲೂ ಶ್ರಮಿಸುತ್ತಿದ್ದಾರೆ. ಅವರಿಗೂ ಧನ್ಯವಾದಗಳು. ಬಿಜೆಪಿಗೆ ಅದರ ಕಾರ್ಯಕರ್ತರೇ ದೊಡ್ಡ ಆಸ್ತಿ. ನೀವೆಲ್ಲರೂ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಮನೆ-ಮನೆಗೆ, ಬೀದಿ- ಬೀದಿಗೆ ತೆರಳಿ ಮೋದಿಯವರ ಆಶೀರ್ವಾದವನ್ನು ಕೋರಿದ ಶ್ರಮ ನಿಜಕ್ಕೂ ಶ್ಲಾಘನೀಯ. ಈ ಕಠಿಣ ಪ್ರಯತ್ನಕ್ಕಾಗಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ಸಂವಿಧಾನದ ರಕ್ಷಣೆಗೆ ಮೊದಲ ಹೆಜ್ಜೆಯಿಟ್ಟಿದ್ದೇವೆ; ಫಲಿತಾಂಶದ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ

ದೇಶದ ಬಡವರು, ಮಹಿಳೆಯರು, ಹಿಂದುಳಿದವರು, ವಂಚಿತರು ಮತ್ತು ಯುವಕರ ಕನಸುಗಳನ್ನು ನನಸಾಗಿಸಲು ಮೋದಿಯವರು ಕಳೆದ 10 ವರ್ಷಗಳಲ್ಲಿ ಶ್ರಮಿಸಿದ ರೀತಿಗೆ ಎನ್‌ಡಿಎಯ ಈ ಗೆಲುವು ಜನರ ಆಶೀರ್ವಾದವಾಗಿದೆ. ಈ ಗೆಲುವಿಗೆ ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಪಿಎಂ ನರೇಂದ್ರ ಮೋದಿಯವರ ನಿರಂತರ ಸಾಧನೆಯ ಫಲವೇ ಈ ಗೆಲುವು. ಕಳೆದ 23 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದು ದಿನವೂ ಬಿಡುವು ತೆಗೆದುಕೊಳ್ಳದೆ, ತನ್ನ ಬಗ್ಗೆ ಕಾಳಜಿ ವಹಿಸದೆ, ದೇಶದ ಜನರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮೋದಿಯವರ ಮ್ಯಾರಥಾನ್ ಪ್ರಯತ್ನಕ್ಕೆ ಸಂದ ಜಯ ಇದಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: Amit Shah Horoscope: ಅಮಿತ್ ಶಾ ಪ್ರಧಾನ ಮಂತ್ರಿ ಹುದ್ದೆ ಆಕಾಂಕ್ಷಿಯೇ?

ಎನ್‌ಡಿಎಯ ಈ ಗೆಲುವು ನಾಯಕ ನರೇಂದ್ರ ಮೋದಿಯವರ ಮೇಲಿನ ಜನರ ಅಚಲ ನಂಬಿಕೆಯ ಪ್ರತಿಬಿಂಬವಾಗಿದೆ. ಅವರು ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟಿದ್ದಾರೆ. ಇದು ಮೋದಿಜಿಯವರ ಅಭಿವೃದ್ಧಿ ಹೊಂದಿದ ಭಾರತದ ಕಲ್ಪನೆಯ ಮೇಲೆ ಜನರ ವಿಶ್ವಾಸದ ಮತವಾಗಿದೆ. ಬಡವರ ಕಲ್ಯಾಣ, ಪರಂಪರೆಯ ಪುನರುಜ್ಜೀವನ, ಮಹಿಳೆಯರ ಸ್ವಾಭಿಮಾನ ಮತ್ತು ರೈತರ ಕಲ್ಯಾಣಕ್ಕಾಗಿ ಕಳೆದ ದಶಕದಲ್ಲಿ ಮೋದಿಜಿಯವರ ಕಾರ್ಯದ ಯಶಸ್ಸಿಗೆ ಇದು ಆಶೀರ್ವಾದವಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಈ ಜನಾದೇಶದೊಂದಿಗೆ ನವ ಭಾರತವು ಅಭಿವೃದ್ಧಿ ಪಯಣಕ್ಕೆ ಮತ್ತಷ್ಟು ವೇಗ ಮತ್ತು ಶಕ್ತಿಯನ್ನು ನೀಡಲು ಸಿದ್ಧವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸತತ ಮೂರನೇ ಬಾರಿಗೆ ಸೇವೆ ಸಲ್ಲಿಸಲು ಎನ್‌ಡಿಎಗೆ ಅವಕಾಶ ನೀಡಿದ್ದಕ್ಕಾಗಿ ನಾನು ದೇಶದ ಜನರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸತತ ಮೂರನೇ ಗೆಲುವು ಸಾರ್ವಜನಿಕರ ವಿಶ್ವಾಸ ಮೋದಿಯವರ ಮೇಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ