KPSC ಅನ್ಯಾಯದ ಕುರಿತು ರಾಜ್ಯಪಾಲರಿಗೆ ದೂರು: KAS ಮರು ಪರೀಕ್ಷೆಯಾಗುತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Feb 17, 2025 | 5:36 PM

ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರು ನೀಡಲಾಗಿದೆ. ಕೆಎಎಸ್ ಪರೀಕ್ಷಾ ಪ್ರಶ್ನೆಪತ್ರಿಕೆಯ ಭಾಷಾಂತರದಲ್ಲಿ 79 ಪ್ರಶ್ನೆಗಳು ತಪ್ಪಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿದೆ. ಮರು ಪರೀಕ್ಷೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಸದಾನಂದಗೌಡ​ ಪತ್ರ ಬರೆದಿದ್ದಾರೆ.

KPSC ಅನ್ಯಾಯದ ಕುರಿತು ರಾಜ್ಯಪಾಲರಿಗೆ ದೂರು: KAS ಮರು ಪರೀಕ್ಷೆಯಾಗುತ್ತಾ?
KPSC ಅನ್ಯಾಯದ ಕುರಿತು ರಾಜ್ಯಪಾಲರಿಗೆ ದೂರು: KAS ಮರು ಪರೀಕ್ಷೆಯಾಗುತ್ತಾ?
Follow us on

ಬೆಂಗಳೂರು, ಫೆಬ್ರವರಿ 17: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ಪರೀಕ್ಷೆಯಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಕೆಎಎಸ್​ ಪ್ರಶ್ನೆ ಪತ್ರಿಕೆಯ ಭಾಷಾಂತರದಲ್ಲಿ 79 ಪ್ರಶ್ನೆಗಳು ತಪ್ಪಾಗಿದೆ. ಇದರಿಂದಾಗಿ ಸಾವಿರಾರು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಮರು ಪರೀಕ್ಷೆಗೆ ಬಗ್ಗೆ ರಾಜ್ಯಪಾಲರಿಗೆ ಪರೀಕ್ಷಾರ್ಥಿಗಳು ಮನವಿ ಮಾಡಿದ್ದಾರೆ.

ಕೆಪಿಎಸ್​​ಸಿಯಲ್ಲಿನ ಅನ್ಯಾಯದ ಕುರಿತು ಮತ್ತು ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಎದುರಾದ ಸಮಸ್ಯೆ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ಗೆ ಅಕ್ಸರ ಸಂಘಟನೆ ದೂರು ನೀಡಿವೆ. ಮರುಪರೀಕ್ಷೆಗೆ ಮನವಿ ಮಾಡಲಾಗಿದೆ. ಕೆಪಿಎಸ್​ಸಿ ಮರುಪರೀಕ್ಷೆ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕೆಪಿಎಸ್​ಸಿ ಕರ್ಮಕಾಂಡ: ಅಭ್ಯರ್ಥಿಗಳ ಅಂಗಿ ಹರಿಯುವ ಪರೀಕ್ಷಾ ಪದ್ಧತಿ ಬೇಡ, ಭ್ರಷ್ಟಾಚಾರವಿಲ್ಲದ ವ್ಯವಸ್ಥೆ ತನ್ನಿ

ಇದೆ ರೀತಿಯಾಗಿ ಕೆಪಿಎಸ್​​​ಸಿ ಪರೀಕ್ಷೆಯಲ್ಲಿ ನಿರಂತರ ಅವ್ಯವಸ್ಥೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಸದಾನಂದಗೌಡ​ ಪತ್ರ ಬರೆದಿದ್ದಾರೆ. ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ ರದ್ದುಗೊಳಿಸಿ ಹೊಸ ಜವಾಬ್ದಾರಿಯುತ ಆಯೋಗ ರಚಿಸಬೇಕು. ಕೆಪಿಎಸ್​ಸಿ ಅವ್ಯವಸ್ಥೆ ಕುರಿತು ಪ್ರತ್ಯೇಕ ನ್ಯಾಯಾಂಗ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸಿಎಂಗೆ ಮಾಜಿ ಸಿಎಂ ಸದಾನಂದಗೌಡ​ ಬರೆದ ಪತ್ರದಲ್ಲೇನಿದೆ

ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ನೇಮಕಾತಿ ಪರೀಕ್ಷೆಗಳಲ್ಲಿನ ನಿರಂತರ ಅಶುದ್ಧತೆಗಳು ಸಾವಿರಾರು ಪ್ರತಿಭಾನ್ವಿತ ಯುವಕರ ಭವಿಷ್ಯವನ್ನು ಅಂಧಕಾರಕ್ಕಿಳಿಸುತ್ತಿವೆ. ಇತ್ತೀಚಿನ ಕನ್ನಡ ಅನುವಾದ ದೋಷಗಳು ಮಾತ್ರವಲ್ಲ, ಈ ಹಿಂದಿನ ಅನೇಕ ಪರೀಕ್ಷೆಗಳಲ್ಲೂ ನಡೆದ ಅಕ್ರಮಗಳು, ಅಶಿಸ್ತಿನ ಕೆಲಸ ಹಾಗೂ ಆಯೋಗದ ನಿರ್ಲಕ್ಷ್ಯ ದೃಢವಾಗಿ ಆಕ್ಷೇಪಾರ್ಹ ಎಂದಿದ್ದಾರೆ.

ನಾನು ಇತ್ತೀಚೆಗೆ ಕೆಲ ವಿದ್ಯಾರ್ಥಿಗಳ ಮಾತುಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯೋಗ್ಯತೆ ಹಾಗೂ ಶ್ರಮದ ಮೇಲೆ ನಮ್ಮ ಭವಿಷ್ಯ ನಿರ್ಮಿಸಿಕೊಳ್ಳಲು ಹೊರಟಿದ್ದೇವೆ, ಆದರೆ ಸರ್ಕಾರ ಮತ್ತು ಆಯೋಗದ ನಿರ್ಲಕ್ಷ್ಯದಿಂದ ನಮ್ಮ ಕನಸುಗಳು ಕಿತ್ತುಕೊಳ್ಳಲಾಗುತ್ತಿದೆ ಎಂಬ ಅವರ ನೋವಿನ ಮಾತು ಬಹಳ ಖೇದಖರವಾಗಿದೆ. ಅವರ ಆಕ್ರೋಶ ಮತ್ತು ನಿರಾಸೆ ಪರಿಗಣನೆಗೆ ಒಳಗಾಗಲೇಬೇಕು. ಇದು ಕೆಲವೊಬ್ಬರ ವೈಯಕ್ತಿಕ ಸಮಸ್ಯೆಯಾಗಿರುವುದಿಲ್ಲ, ಇದು ಕರ್ನಾಟಕದ ಇಡೀ ಯುವಜನತೆಗೆ ಹೊಡೆತವಾಗಿದೆ ಎಂದರು.

ಈ ಎಲ್ಲಾ ಗೊಂದಲಕ್ಕೆ ಸರ್ಕಾರವೇ ಹೊಣೆ. KPSCಯನ್ನು ಸರಿಪಡಿಸುತ್ತೇವೆ, ದೋಷಗಳನ್ನು ತಿದ್ಯುತ್ತೇವೆ ಎಂದು ನೀಡಿದ ಭರವಸೆಗಳು ಕೇವಲ ಮಾತಾಗಿವೆ. ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಿದ ಕಾರಣಕ್ಕೆ ಆಯೋಗವನ್ನು ಹೊಗಳಲು ಸಾಧ್ಯವಿಲ್ಲ. KPSCಯ ನಿರಂತರ ಅವ್ಯವಸ್ಥೆ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ನೋಡಿದರೆ, ಈ ಆಯೋಗವನ್ನು ಇನ್ನಷ್ಟು ಮುಂದುವರಿಸಲು ಯಾವುದೇ ಅರ್ಥವಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ನೋಂದಣಿ- ಓಎಂಆರ್ ಶೀಟ್​ ನಂಬರ್ ಅದಲು ಬದಲು

ನಾನು ಕರ್ನಾಟಕ ಸರ್ಕಾರವನ್ನು ಹಾಗೂ KPSCಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಆಯೋಗದ ಕಚೇರಿಯಲ್ಲಿ ನಡೆಯುತ್ತಿರುವ ಹಗರಣಗಳು ಮತ್ತು ಕೇವಲ ರಾಜಕೀಯ ನೆಲೆಯಿಂದ ನೇಮಕವಾಗುತ್ತಿರುವ ಅಧಿಕಾರಿಗಳು ಈ ವಿಫಲತೆಗೆ ಜವಾಬ್ದಾರಿಗಳಾಗಿದ್ದಾರೆ. ಇದನ್ನು ಸುಧಾರಿಸಲು ಕೆಲವರನ್ನು ಅಮಾನತು ಮಾಡುವ ಮಟ್ಟಿಗೆ ಮಾತ್ರ ಸೀಮಿತವಾದ ಕ್ರಮ ಬೇಡ, KPSCಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಹೊಸ. ಪಾರದರ್ಶಕ ಮತ್ತು ಜವಾಬ್ದಾರಿಯುತ ಆಯೋಗವನ್ನು ರಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಪರೀಕ್ಷೆಗಳ ಪೂರಕವಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಹಕ್ಕುಗಳನ್ನು ಒದಗಿಸಬೇಕು. ಒಮ್ಮೆ ಮಾತ್ರವಲ್ಲ, ಎರಡು ಬಾರಿ ಅಲ್ಲ, ಏನೋ ಬಾರಿ ಈ ಆಯೋಗ ತಪ್ಪು ಮಾಡಿದೆ. ಪ್ರತ್ಯೇಕ ನ್ಯಾಯಾಂಗ ತನಿಖೆ, ವೈಫಲ್ಯಕ್ಕೆ ಹೊಣೆಗಾರರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪ್ರತಿಭಾನ್ವಿತ ಯುವಕರು ಸರ್ಕಾರದ ಅವ್ಯವಸ್ಥೆಗೆ ಬಲಿಯಾಗಬಾರದು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:31 pm, Mon, 17 February 25