ಆಂಧ್ರ ಚುನಾವಣಾ ಫಲಿತಾಂಶದ ಬಗ್ಗೆ ನಟಿ ಪೂನಂ ಅಸಮಾಧಾನ

ಆಂಧ್ರದಲ್ಲಿ ಟಿಡಿಪಿಯ ವಿಜಯ ತೆಲುಗು ಚಿತ್ರರಂಗಕ್ಕೆ ಖುಷಿ ತಂದಿದೆ. ಆದರೆ ನಟಿ ಪೂನಂ ಕೌರ್ ಮಾತ್ರ ಟಿಡಿಪಿ ವಿಜಯದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಆಂಧ್ರ ಮತದಾರರನ್ನು ಪ್ರಶ್ನೆ ಮಾಡಿದ್ದಾರೆ.

ಆಂಧ್ರ ಚುನಾವಣಾ ಫಲಿತಾಂಶದ ಬಗ್ಗೆ ನಟಿ ಪೂನಂ ಅಸಮಾಧಾನ
Follow us
|

Updated on: Jun 06, 2024 | 11:26 AM

ಆಂಧ್ರ ಪ್ರದೇಶ (Andhra Pradesh) ವಿಧಾನಸಭಾ ಫಲಿತಾಂಶ ಜೂನ್ 4 ರಂದು ಹೊರಬಿದ್ದಿದೆ. 175 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷ ವೈಸಿಪಿ ಗೆದ್ದಿದ್ದು ಕೇವಲ 14 ಕ್ಷೇತ್ರಗಳಲ್ಲಿ. ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಮೈತ್ರಿಗೆ 161 ಕ್ಷೇತ್ರಗಳು ಧಕ್ಕಿವೆ. ಆಂಧ್ರದಲ್ಲಿ ವಿಪಕ್ಷವೇ ಇಲ್ಲದಾಗಿದೆ. ಆಂಧ್ರದಲ್ಲಿ ಟಿಡಿಪಿಯ ಜಯ ತೆಲುಗು ಚಿತ್ರರಂಗಕ್ಕೆ ಅಪರಿಮಿತ ಖುಷಿ ತಂದಿದೆ. ಜಗನ್, ಚಿತ್ರರಂಗವನ್ನು ನಿಯಂತ್ರಿಸಲು ಮಾಡಿದ್ದ ಪ್ರಯತ್ನಗಳನ್ನು ಚಿತ್ರರಂಗದ ಪ್ರಮುಖರು ತೀವ್ರವಾಗಿ ವಿರೋಧಿಸಿದ್ದರು. ಹಾಗಾಗಿ ಟಾಲಿವುಡ್​ಗೆ ಟಿಡಿಪಿ ಜಯ ಖುಷಿಯನ್ನೇ ತಂದಿದೆ. ಆದರೆ ನಟಿ ಪೂನಂ ಕೌರ್ ಮಾತ್ರ ಆಂಧ್ರ ಫಲಿತಾಂಶದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಕನ್ನಡದ ‘ಬಂಧು ಬಳಗ’ ಸೇರಿದಂತೆ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿರುವ ಹೈದರಾಬಾದ್​ನ ಚೆಲುವೆ ಪೂನಂ ಕೌರ್ ಆಂಧ್ರ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದು, ‘ಪೂರ್ತಿ 175 ನ್ನು ಕೊಟ್ಟುಬಿಡಬಹುದಿತ್ತಲ್ಲ. ಹೀಗೆ ಮಾಡಿದರಲ್ಲ ಆಂಧ್ರ ಪ್ರದೇಶದ ಜನರೆ’ ಎಂಬರ್ಥದ ಟ್ವೀಟ್ ಮಾಡಿದ್ದಾರೆ. ಅತಿಯಾದ ಮೆಜಾರಿಟಿಯನ್ನು ಒಂದೇ ಪಕ್ಷಕ್ಕೆ ನೀಡಿರುವ ಬಗ್ಗೆ ಪೂನಂ ಅಸಮಾಧಾನಗೊಂಡಿರುವುದು ಅವರ ಪೋಸ್ಟ್​ನಿಂದ ಅರ್ಥವಾಗುತ್ತಿದೆ.

ಇದನ್ನೂ ಓದಿ:‘ಎನ್​​ಡಿಎ ಬಿಟ್ಟು ಹೋಗುವ ಮಾತೇ ಇಲ್ಲ’; ವದಂತಿಗಳಿಗೆ ತೆರೆ ಎಳೆದ ಪವನ್ ಕಲ್ಯಾಣ್

ಈ ಹಿಂದೆಯೂ ಸಹ ಅವರು ಜಗನ್ ಸರ್ಕಾರದ ಪರವಾಗಿ ಟ್ವೀಟ್​ಗಳನ್ನು ಮಾಡಿದ್ದರು. ‘ಜಗನ್ ನೇಯ್ಗೆ ಕುಟುಂಬಗಳಿಗೆ ನಿಜಕ್ಕೂ ಒಳ್ಳೆಯ ಕೆಲಸವನ್ನು ಕೋವಿಡ್ ಸಮಯದಲ್ಲಿ ಮಾಡಿದ್ದಾರೆ ನಾನೊಬ್ಬ ಹೋರಾಟಗಾರ್ತಿಯಾಗಿ ಇದನ್ನು ಮೆಚ್ಚಿಕೊಳ್ಳುತ್ತೇನೆ’ ಎಂದು ಟ್ವೀಟ್ ಮಾಡಿದ್ದರು. ಅದಾದ ಬಳಿಕ ಟಿಡಿಪಿ ಅವರ ಮಾಡಿದ ಟ್ರೋಲ್​ನಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಗೀತಾಂಜಲಿ ಪರವಾಗಿ ಸರಣಿ ಟ್ವೀಟ್​ಗಳನ್ನು ಮಾಡಿದ್ದರು, ಟಿಡಿಪಿಯ ಕಾರ್ಯಕರ್ತರನ್ನು ಗೂಂಡಾಗಳೆಂದು ಸಹ ಕರೆದಿದ್ದರು.

ಪೂನಂ ಕೌರ್, ನಟಿ ಆಗಿರುವ ಜೊತೆಗೆ ತೆಲಂಗಾಣ ಕಾಂಗ್ರೆಸ್ ಸದಸ್ಯೆ ಸಹ. 2006 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪೂನಂ ಕೌರ್, 2022 ರವರೆಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. 2022 ರಲ್ಲಿ ‘ನಾತಿಚರಾಮಿ’ ಹೆಸರಿನ ಸಿನಿಮಾದಲ್ಲಿ ಪೂನಂ ನಟಿಸಿದ್ದರು. ಕನ್ನಡದ ‘ಬಂಧು-ಬಳಗ’ ಸಿನಿಮಾನಲ್ಲಿಯೂ ಪೂನಂ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ