‘ಧುರಂಧರ್ 2’ ಗೆಲುವಿನ ಬೆನ್ನಲ್ಲೆ ಆರ್​​ಎಸ್​​ಎಸ್ ಕಚೇರಿಗೆ ರಣ್ವೀರ್ ಸಿಂಗ್ ಭೇಟಿ

Dhurandhar 2: ‘ಧುರಂಧರ್ 2’ ಸಿನಿಮಾ ಭಾರತದಲ್ಲಿ 1000 ಕೋಟಿ ಗಳಿಕೆಯನ್ನು ದಾಟಿದ್ದು, ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇತ್ತೀಚೆಗಷ್ಟೆ ಚುನಾವಣಾ ಪ್ರಚಾರವೊಂದರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಿನಿಮಾದ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದಾರೆ. ಇದೆಲ್ಲದರ ಬೆನ್ನಲ್ಲೆ ನಟ ರಣ್ವಿರ್ ಸಿಂಗ್ ಆರ್​​ಎಸ್​​ಎಸ್ ಕಚೇರಿಗೆ ಭೇಟಿ ನೀಡಿದ್ದು ಆರ್​​ಎಸ್​​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದಾರೆ.

‘ಧುರಂಧರ್ 2’ ಗೆಲುವಿನ ಬೆನ್ನಲ್ಲೆ ಆರ್​​ಎಸ್​​ಎಸ್ ಕಚೇರಿಗೆ ರಣ್ವೀರ್ ಸಿಂಗ್ ಭೇಟಿ
Rss Office

Updated on: Apr 11, 2026 | 7:44 PM

ರಣ್ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿದ್ದು ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಭಾರತದಲ್ಲಿ 1000 ಕೋಟಿ ಗಳಿಕೆಯನ್ನು ದಾಟಿದ್ದು, ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇತ್ತೀಚೆಗಷ್ಟೆ ಚುನಾವಣಾ ಪ್ರಚಾರವೊಂದರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಿನಿಮಾದ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದಾರೆ. ಇದೆಲ್ಲದರ ಬೆನ್ನಲ್ಲೆ ನಟ ರಣ್ವಿರ್ ಸಿಂಗ್ ಆರ್​​ಎಸ್​​ಎಸ್ ಕಚೇರಿಗೆ ಭೇಟಿ ನೀಡಿದ್ದು ಆರ್​​ಎಸ್​​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದಾರೆ.

ನಾಗ್ಪುರದ ರೇಶಿಮ್‌ಬಾಗ್‌ನಲ್ಲಿರುವ ಡಾ ಹೆಡ್ಗೆವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ ರಣ್​​ವೀರ್ ಸಿಂಗ್, ಆರ್‌ಎಸ್‌ಎಸ್ ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಪ್ರತಿನಿಧಿಗಳು ರಣವೀರ್ ಅವರಿಗೆ ಹಿಂದುತ್ವ ಸಂಘಟನೆಯ ಮೊದಲ ಇಬ್ಬರು ಮುಖ್ಯಸ್ಥರ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಸ್ಮೃತಿ ಮಂದಿರದ ಇತಿಹಾಸ ತಿಳಿಸಿಕೊಟ್ಟಿದ್ದಾರೆ. ರಣವೀರ್ ಸಿಂಗ್ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಅವರ ಸಿನಿಮಾ ಮತ್ತು ಸಂಘದ ಸೇವಾ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ.

ಇದನ್ನೂ ಓದಿ:‘ಧುರಂಧರ್’ ನಾಯಕಿಗೆ ಭರ್ಜರಿ ಅವಕಾಶ, ಲಿಜೆಂಡರಿ ನಟಿಯ ಪಾತ್ರದಲ್ಲಿ ಸಾರಾ

ಆರ್​​ಎಸ್​​ಎಸ್​​ನ ಕಾರ್ಯಕ್ರಮಗಳಿಗೆ ಬಾಲಿವುಡ್​​ನ ಕೆಲವು ಸೆಲೆಬ್ರಿಟಿಗಳು ಹೋಗಿ ಬರುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಸಂಘದ 100ನೇ ವರ್ಷದ ಕಾರ್ಯಕ್ರಮದ ವೇಳೆ ಸಲ್ಮಾನ್ ಖಾನ್, ರಣ್​​ಬೀರ್ ಕಪೂರ್, ವಿಕ್ಕಿ ಕೌಶಲ್, ಶಿಲ್ಪಾ ಶೆಟ್ಟಿ, ಅನನ್ಯಾ ಪಾಂಡೆ, ಪಾಕ್ ಮೂಲದ ಗಾಯಕ ಅದ್ನಾನ್ ಸಮಿ ಇನ್ನೂ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಮೋಹನ್ ಭಾಗವತ್ ಹಾಗೂ ಇನ್ನಿತರೆ ಆರ್​​ಎಸ್​​ಎಸ್ ಮುಖಂಡರ ಭಾಷಣಗಳನ್ನು ಆಲಿಸಿದರು. ಇದೀಗ ರಣ್​ವೀರ್ ಸಿಂಗ್ ಸಹ ಆರ್​​ಎಸ್​​ಎಸ್ ಕಚೇರಿಗೆ ಭೇಟಿ ನೀಡಿದ್ದಾರೆ.

ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಕೆ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಸಿನಿಮಾವು ಬಿಜೆಪಿ ಪರವಾದ ವಿಚಾರಗಳನ್ನು ಒಳಗೊಂಡಿದೆ ಎಂದು ಒಂದು ವರ್ಗ ಆರೋಪ ಮಾಡುತ್ತಿದೆ. ಆದರೆ ಇದನ್ನು ನಿರ್ದೇಶಕ ಆದಿತ್ಯ ಧರ್ ನಿರಾಕರಿಸಿದ್ದಾರೆ. ‘ಧುರಂಧರ್ 2’ ಸಿನಿಮಾವು ಭಾರತದ ಸೈನಿಕನೊಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರನ್ನು ಮಟ್ಟ ಹಾಕುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಣ್​​ವೀರ್ ಸಿಂಗ್ ಜೊತೆಗೆ ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Sat, 11 April 26

Follow Us