ವಿಡಿಯೋ ಕಾಲ್ ಮಾಡಿ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಅಲ್ಲು ಅರ್ಜುನ್

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ತಮ್ಮ ದೊಡ್ಡ ಗುಣದ ಮೂಲಕ ಸುದ್ದಿಯಾಗಿದ್ದಾರೆ. ಮಾರಕ ಕಾಯಿಲೆಯಿಂದ ಬಳಲುತ್ತಿರುವ ಶ್ರದ್ಧಾ ಎಂಬ ಪುಟ್ಟ ಬಾಲಕಿ ಮತ್ತು ತನ್ನ ಆರಾಧ್ಯ ದೈವ ಅಲ್ಲು ಅರ್ಜುನ್‌ನನ್ನು ಭೇಟಿಯಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಬಿಡುವು ಮಾಡಿಕೊಂಡ ನಟ, ಆಕೆಗೆ ವಿಡಿಯೋ ಕಾಲ್ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ವಿಡಿಯೋ ಕಾಲ್‌ನಲ್ಲಿ ಶ್ರದ್ಧಾ ಜೊತೆ ‘ಪುಷ್ಪ’ ಚಿತ್ರದ ಫೇಮಸ್ ಡೈಲಾಗ್ ಹೊಡೆದು ಖುಷಿಪಡಿಸಿದ ಅಲ್ಲು ಅರ್ಜುನ್, ಆಕೆಯನ್ನು ಹೈದರಾಬಾದ್‌ಗೆ ಆಹ್ವಾನಿಸಿದ್ದಾರೆ.

ವಿಡಿಯೋ ಕಾಲ್ ಮಾಡಿ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್
Edited By:

Updated on: Jun 20, 2026 | 11:22 AM

ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಮತ್ತೊಮ್ಮೆ ತಮ್ಮ ಉದಾರತೆ ಹಾಗೂ ದೊಡ್ಡ ಗುಣದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮಾರಕ ಕಾಯಿಲೆಯಿಂದ ಬಳಲುತ್ತಿರುವ ಶ್ರದ್ಧಾ ಎಂಬ ತಮ್ಮ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸುವ ಮೂಲಕ ಆಕೆಯ ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ತರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

‘ಮೇಕ್ ಎ ವಿಶ್’ ಮೂಲಕ ತಲುಪಿದ ಆಸೆ:

ಮಾರಕ ಮತ್ತು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಮಕ್ಕಳ ಆಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ‘ಮೇಕ್ ಎ ವಿಶ್ ಫೌಂಡೇಶನ್’ ಕೆಲಸ ಮಾಡುತ್ತದೆ. ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕಿ ಶ್ರದ್ಧಾ, ತನಗೆ ನಟ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಳು. ಈ ವಿಷಯವನ್ನು ಫೌಂಡೇಶನ್‌ನವರು ಅಲ್ಲು ಅರ್ಜುನ್ ಗಮನಕ್ಕೆ ತಂದ ತಕ್ಷಣವೇ ಸ್ಪಂದಿಸಿದ ‘ಬನ್ನಿ’, ಶ್ರದ್ಧಾಗೆ ವಿಡಿಯೋ ಕಾಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.

‘ಪುಷ್ಪ ಅಂದ್ರೆ ಫ್ಲವರ್ ಅನ್ಕೊಂಡ್ರಾ.. ಫೈರ್!’

ವಿಡಿಯೋ ಕಾಲ್‌ನಲ್ಲಿ ಶ್ರದ್ಧಾ ಜೊತೆ ತುಂಬಾ ಹೊತ್ತು ಮೋಜಿನ ಹರಟೆ ಹೊಡೆದ ಅಲ್ಲು ಅರ್ಜುನ್, ತಮ್ಮ ಸೂಪರ್ ಹಿಟ್ ಚಿತ್ರ ‘ಪುಷ್ಪ’ ಚಿತ್ರದ ಸಂಭಾಷಣೆಗಳನ್ನು ಹೇಳಿ ಮಗುವನ್ನು ರಂಜಿಸಿದರು. ‘ಪುಷ್ಪ ಹೂವಲ್ಲ, ಬೆಂಕಿ’ ಎಂದು ಸಿನಿಮಾದ ಸ್ಟೈಲ್‌ನಲ್ಲೇ ಡೈಲಾಗ್ ಹೊಡೆದು ಮಗುವಿನ ಮುಖದಲ್ಲಿ ನಗು ತರಿಸಿದರು. ಇದೇ ವೇಳೆ ಮಗು ಶೀಘ್ರದಲ್ಲೇ ಗುಣಮುಖಳಾಗಲಿ ಎಂದು ಹಾರೈಸಿದ ಬನ್ನಿ, ತಾನು ವೈದ್ಯೆಯಾಗಬೇಕೆಂಬ ಕನಸು ಹೊಂದಿರುವುದಾಗಿ ಹೇಳಿದ ಶ್ರದ್ಧಾಳನ್ನು ಶೀಘ್ರದಲ್ಲೇ ಹೈದರಾಬಾದ್‌ಗೆ ಬರುವಂತೆ ಪ್ರೀತಿಯಿಂದ ಆಹ್ವಾನಿಸಿದರು. ಬಾಲಕಿಯ ಬಳಿಕ ಆಕೆಯ ಪೋಷಕರೊಂದಿಗೂ ಮಾತನಾಡಿದ ನಟ, ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಧೈರ್ಯ ತುಂಬಿದರು. ಸದ್ಯ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟಿಜನ್‌ಗಳು ಅಲ್ಲು ಅರ್ಜುನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಡಿಸಿಎಂ ಪವನ್ ಕಲ್ಯಾಣ್​​ರ ಭೇಟಿಯಾದ ನಟ ಅಲ್ಲು ಅರ್ಜುನ್: ಕಾರಣ?

ಅಲ್ಲು ಅರ್ಜುನ್ ಅವರ ಮುಂಬರುವ ಸಿನಿಮಾಗಳ ವಿಷಯಕ್ಕೆ ಬಂದರೆ, ಸದ್ಯ ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರದ ಬೆನ್ನಲ್ಲೇ ಅವರು ‘ರಾಕಾ’ ಎಂಬ ಬೃಹತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಲಿವುಡ್‌ನ ಸ್ಟಾರ್ ನಿರ್ದೇಶಕ ಅಟ್ಲೀ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಿದ್ಧ ತಮಿಳು ನಿರ್ಮಾಣ ಸಂಸ್ಥೆ ‘ಸನ್ ಪಿಕ್ಚರ್ಸ್’ ಸುಮಾರು 800 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಇದರ ಜೊತೆಗೆ, ತಮಿಳಿನ ಮತ್ತೊಬ್ಬ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ನಿರ್ದೇಶನದಲ್ಲೂ ಅಲ್ಲು ಅರ್ಜುನ್ ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದು, ಈ ಚಿತ್ರದ ಕುರಿತ ಹೆಚ್ಚಿನ ಅಪ್ಡೇಟ್‌ಗಳು ಶೀಘ್ರದಲ್ಲೇ ಹೊರಬರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us