‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

| Updated By: ಮದನ್​ ಕುಮಾರ್​

Updated on: Apr 15, 2022 | 9:59 AM

Thalapathy Vijay: ಕಾಲಿವುಡ್​ ನಟ ದಳಪತಿ ವಿಜಯ್​ ಪುತ್ರ ಸಂಜಯ್​ ಅವರಿಗೆ ಈಗಾಗಲೇ ಬೇಡಿಕೆ ಬಂದಿದೆ. ಆ ಕುರಿತು ವಿಜಯ್​ ಮಾತನಾಡಿದ್ದಾರೆ.

‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು
ದಳಪತಿ ವಿಜಯ್
Follow us on

ತಮಿಳಿನ ಖ್ಯಾತ​ ನಟ ದಳಪತಿ ವಿಜಯ್​ (Thalapathy Vijay) ಅವರು ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಸಿನಿಮಾ ಕ್ಷೇತ್ರದ ಆಗುಹೋಗುಗಳ ಬಗ್ಗೆ ಅವರಿಗೆ ಸ್ಪಷ್ಟ ಅರಿವು ಇದೆ. ಗಲ್ಲಾಪೆಟ್ಟಿಗೆ ವ್ಯವಹಾರದ ಬಗ್ಗೆ ವಿಜಯ್​ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹಾಗಿದ್ದರೂ ಕೂಡ ‘ಬೀಸ್ಟ್​’ ಸಿನಿಮಾ (Beast Movie) ಬಿಡುಗಡೆ ವಿಚಾರದಲ್ಲಿ ಅವರು ಎಡವಿದ್ದಾರೆ ಎಂಬುದು ಸ್ಪಷ್ಟ. ಬಹುನಿರೀಕ್ಷಿತ ‘ಕೆಜಿಎಫ್​: ಚಾಪ್ಟರ್ 2’ ಸಿನಿಮಾದ ಎದುರಿನಲ್ಲಿ ‘ಬೀಸ್ಟ್​’ ರಿಲೀಸ್​ ಆಗುತ್ತದೆ ಎಂಬುದು ಗೊತ್ತಾದಾಗಲೇ ಜನರು ಬುದ್ಧಿಮಾತು ಹೇಳಿದ್ದರು. ‘ಬೀಸ್ಟ್​’ ಬಿಡುಗಡೆಯನ್ನು ಮುಂದೂಡುವುದೇ ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ ಆ ಬಗ್ಗೆ ಚಿತ್ರತಂಡದವರು ತಲೆ ಕೆಡಿಸಿಕೊಳ್ಳಲಿಲ್ಲ. ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಆ ಚಿತ್ರದ ಬಗ್ಗೆ ನೆಗೆಟಿವ್​ ವಿಮರ್ಶೆ ಕೇಳಿಬಂದಿದೆ. ಇತ್ತ, ‘ಕೆಜಿಎಫ್​: ಚಾಪ್ಟರ್​ 2’ ಎಲ್ಲ ಕಡೆಗಳಲ್ಲೂ ಅಬ್ಬರಿಸುತ್ತಿದೆ. ಇದರಿಂದ ಸಹಜವಾಗಿಯೇ ‘ಬೀಸ್ಟ್​’ ಚಿತ್ರಕ್ಕೆ ಹಿನ್ನಡೆ ಆಗಿದೆ. ಈ ನಡುವೆ ದಳಪತಿ ವಿಜಯ್​ ಪುತ್ರನ (Thalapathy Vijay son Sanjay) ಸಿನಿಮಾ ಎಂಟ್ರಿ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಸ್ಟಾರ್​ ನಟರ ಮಕ್ಕಳು ಚಿತ್ರರಂಗಕ್ಕೆ ಕಾಲಿಡುವುದು ವಾಡಿಕೆ. ಹಾಗಾಗಿ ದಳಪತಿ ವಿಜಯ್​ ಪುತ್ರ ಸಂಜಯ್​ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಆ ಕುರಿತು ಇತ್ತೀಚೆಗೆ ವಿಜಯ್​ ಮಾತನಾಡಿದ್ದಾರೆ. ಕಳೆದ 10 ವರ್ಷಗಳಿಂದ ವಿಜಯ್​ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿರಲಿಲ್ಲ. ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ ಎಂಬ ಕಾರಣ ಅವರು ಈ ನಿಲುವು ತಾಳಿದ್ದರು. ಆದರೆ ‘ಬೀಸ್ಟ್​’ ಬಿಡುಗಡೆ ಹೊಸ್ತಿಲಿನಲ್ಲಿ ಅವರು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು ಅಚ್ಚರಿ ಮೂಡಿಸಿದೆ. ಈ ವೇಳೆ ಮಗನ ಸಿನಿಮಾ ಪ್ರವೇಶದ ಬಗ್ಗೆ ಅವರು ಮಾತನಾಡಿದರು.

ವಿಜಯ್ ಪುತ್ರನ ಹೆಸರು ಸಂಜಯ್​. ಅವರು ಶೀಘ್ರದಲ್ಲೇ ಹೀರೋ ಆಗಿ ಪಾದಾರ್ಪಣೆ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ. ‘ನನ್ನ ಮಗ ಸಂಜಯ್​ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. ಆತನಿಗೆ ನಾನು ಒತ್ತಾಯ ಮಾಡುವುದಿಲ್ಲ. ಎಲ್ಲವೂ ಅವನ ಆಸಕ್ತಿಗೆ ಬಿಟ್ಟಿದ್ದು. ನನ್ನ ಅಗತ್ಯ ಅವನಿಗೆ ಇದೆ ಎಂದಾದರೆ ನಾನು ಸಪೋರ್ಟ್​ ಮಾಡುತ್ತೇನೆ. ಆತ ನಟನೆ ಮಾಡುತ್ತಾನಾ ಎಂಬ ಬಗ್ಗೆ ಕೆಲವರು ಈಗಾಗಲೇ ನನ್ನ ಬಳಿ ಕೇಳಿದ್ದಾರೆ. ‘ಪ್ರೇಮಂ’ ನಿರ್ದೇಶಕ ಅಲ್ಫಾನ್ಸ್​ ಪುತ್ರನ್​ ಅವರು ಬಂದು ಒಂದು ಕಥೆ ಹೇಳಿದ್ದರು. ಅದು ತುಂಬ ಚೆನ್ನಾಗಿತ್ತು’ ಎಂದು ವಿಜಯ್​ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ಕೆಲವು ವಿವಾದಾತ್ಮಕ ವಿಚಾರಗಳ ಬಗ್ಗೆಯೂ ವಿಜಯ್​ ಮಾತನಾಡಿದರು. ಧರ್ಮದ ಕಾರಣಕ್ಕಾಗಿ ವಿಜಯ್​ ಕೆಲವೊಮ್ಮೆ ಟ್ರೋಲ್ ಆಗುವುದುಂಟು. ಆ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ತಾಯಿ ಹಿಂದೂ, ನನ್ನ ತಂದೆ ಕ್ರಿಶ್ಚಿಯನ್​. ನಾನು ದೇವರಲ್ಲಿ ನಂಬಿಕೆ ಇಟ್ಟವನು. ದೇವಸ್ಥಾನ, ಚರ್ಚ್​, ದರ್ಗಾ ಎಲ್ಲದಕ್ಕೂ ನಾನು ಹೋಗುತ್ತೇನೆ. ಇಲ್ಲೇ ಹೋಗಬೇಕು, ಅಲ್ಲೇ ಹೋಗಬೇಕು ಅಂತ ಪೋಷಕರು ನನಗೆ ಒತ್ತಾಯ ಮಾಡಿಲ್ಲ. ನನ್ನ ಮಕ್ಕಳಿಗೂ ನಾನು ಒತ್ತಾಯ ಮಾಡಲ್ಲ’ ಎಂದು ವಿಜಯ್​ ಹೇಳಿದ್ದಾರೆ.

ರಾಜಕೀಯದ ವಿಚಾರದಲ್ಲಿ ವಿಜಯ್​ ಅವರು ತಂದೆ ಎಸ್​ಎ ಚಂದ್ರಶೇಖರ್​ ಜೊತೆ ಮನಸ್ತಾಪ ಮಾಡಿಕೊಂಡಿದ್ದರು. ಆದರೆ ಸಂದರ್ಶನದಲ್ಲಿ ಅವರು ತಂದೆ ಬಗ್ಗೆ ಗೌರವದ ಮಾತುಗಳನ್ನು ಆಡಿದ್ದಾರೆ. ತಂದೆ ದೇವರಿಗೆ ಸಮಾನ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

Beast Twitter Review: ‘ಬೀಸ್ಟ್’​ ನೋಡಿ ಡಿಸಾಸ್ಟರ್​ ಎಂದ ಪ್ರೇಕ್ಷಕರು; ದಳಪತಿ ವಿಜಯ್​ ಸಿನಿಮಾ ಹೇಗಿದೆ?

‘ಬೀಸ್ಟ್​’ ಚೆನ್ನಾಗಿಲ್ಲ ಎಂಬ ಹತಾಶೆಯಿಂದ​ ಥಿಯೇಟರ್​ ಪರದೆಗೆ ಬೆಂಕಿ ಹಚ್ಚಿದ ವಿಜಯ್​ ಫ್ಯಾನ್ಸ್​? ವಿಡಿಯೋ ವೈರಲ್​

Published On - 9:55 am, Fri, 15 April 22