ಶಿವರಾಜ್​ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ಒಬಿಸಿ ಮೋರ್ಚಾ ದೂರು

|

Updated on: Mar 22, 2024 | 3:10 PM

ಶಿವರಾಜ್​ಕುಮಾರ್​ ಅಭಿನಯದ ‘ಕರಟಕ ದಮನಕ’ ಸಿನಿಮಾ ಮಾ.8ರಂದು ರಿಲೀಸ್​ ಆಗಿತ್ತು. ಅನೇಕ ಕಡೆಗಳಲ್ಲಿ ಈ ಚಿತ್ರ ಪ್ರದರ್ಶನ ಆಗುತ್ತಿದೆ. ಹಲವು ಜಾಹೀರಾತುಗಳಲ್ಲೂ ಅವರು ನಟಿಸಿದ್ದಾರೆ. ಶಿವರಾಜ್​ಕುಮಾರ್​ ಕಾಣಿಸಿಕೊಂಡ ಜಾಹೀರಾತು, ಸಿನಿಮಾ ಮತ್ತು ಬಿಲ್​ಬೋರ್ಡ್​ಗಳ ಪ್ರದರ್ಶನಕ್ಕೆ ನಿಷೇಧ ಹೇರಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಒಬಿಸಿ ಮೋರ್ಚಾ ಮನವಿ ಮಾಡಿಕೊಂಡಿದೆ.

ಶಿವರಾಜ್​ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ಒಬಿಸಿ ಮೋರ್ಚಾ ದೂರು
ಶಿವರಾಜ್​ಕುಮಾರ್​
Follow us on

ನಟ ಶಿವರಾಜ್​ಕುಮಾರ್​ (Shivarajkumar) ಅವರು ಪತ್ನಿ ಗೀತಾ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಗೀತಾ ಶಿವರಾಜ್​ಕುಮಾರ್ (Geetha Shivarajkumar)​ ಸ್ಪರ್ಧಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವರಾಜ್​ಕುಮಾರ್​ ಅವರ ಸಿನಿಮಾ, ಜಾಹೀರಾತು ಹಾಗೂ ಬಿಲ್​ಬೋರ್ಡ್​ಗಳನ್ನು ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ (Election Commission) ಭಾರತೀಯ ಜನತಾ ಪಾರ್ಟಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ದೂರು ನೀಡಲಾಗಿದೆ. ಮೋರ್ಚಾದ ಅಧ್ಯಕ್ಷ ಆರ್​. ರಘು ಅವರು ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

‘ರಾಜ್ಯದಲ್ಲಿ ಪ್ರಭಾವಿ ವ್ಯಕ್ತಿ ಆಗಿರುವ ಶಿವರಾಜ್​ಕುಮಾರ್​ ಅವರು ರಾಜ್ಯದ್ಯಂತ ಕಾಂಗ್ರೆಸ್​ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಅವರು ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್​ಕುಮಾರ್​ ಅವರ ಸಿನಿಮಾ, ಜಾಹೀರಾತು, ಬಿಲ್​ಬೋರ್ಡ್​ಗಳನ್ನು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್​, ಸೋಶಿಯಲ್​ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇನೆ’ ಎಂದು ರಘು ಅವರು ಪತ್ರ ಬರೆದಿದ್ದಾರೆ.

‘ಚುನಾವಣಾ ಆಯೋಗವು ನ್ಯಾಯಯುತವಾದ ಚುನಾವಣೆಯನ್ನು ನಡೆಸುತ್ತದೆ ಎಂದು ನನಗೆ ಭರವಸೆ ಇದೆ. ನನ್ನ ಮನವಿಗೆ ಆಯೋಗವು ಸ್ಪಂದಿಸುತ್ತದೆ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಂಬಿದ್ದೇನೆ’ ಎಂದು ಪತ್ರವನ್ನು ಪೂರ್ಣಗೊಳಿಸಿದ್ದಾರೆ ರಘು.

ಇದನ್ನೂ ಓದಿ: ‘ಶಿವಮೊಗ್ಗ ಹೋಗಿ ಗೀತಾ ಅವರನ್ನು ಗೆಲ್ಲಿಸಿಕೊಂಡು ಬರಬೇಕು’; ಶಿವರಾಜ್​ಕುಮಾರ್

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಏಪ್ರಿಲ್​ 26ರಂದು ಮತದಾನ ನಡೆಯಲಿದ್ದು, 2ನೇ ಹಂತದಲ್ಲಿ ಮೇ 7ರಂದು ಇನ್ನುಳಿದ 14 ಕ್ಷೇತ್ರಗಳಲ್ಲಿ ಮತನಾದ ನಡೆಯಲಿದೆ. ಗೀತಾ ಶಿವರಾಜ್​ಕುಮಾರ್​ ಸ್ಪರ್ಧಿಸುತ್ತಿರುವ ಶಿವಮೊಗ್ಗದಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಅವರ ಪರವಾಗಿ ಚಿತ್ರರಂಗದ ಅನೇಕರು ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ: ‘ಅಪ್ಪಾಜಿಗೂ ಪಾಲಿಟಿಕ್ಸ್​ ಬೇಕು, ಅದಕ್ಕಾಗಿಯೇ..’: ಮನದ ಮಾತು ತಿಳಿಸಿದ ಶಿವಣ್ಣ

ಶಿವರಾಜ್​ಕುಮಾರ್​ ನಟನೆಯ ‘ಕರಟಕ ದಮನಕ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿತ್ತು. ಹಲವು ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅನೇಕ ಜಾಹೀರಾತುಗಳಲ್ಲಿ ಅವರು ನಟಿಸಿದ್ದಾರೆ. ಶಿವಣ್ಣ ಕಾಣಿಸಿಕೊಂಡಿರುವ ಸಿನಿಮಾ, ಜಾಹೀರಾತು ಹಾಗೂ ಬಿಲ್​ಬೋರ್ಡ್​ಗಳಿಗೆ ನಿಷೇಧ ಹೇರಬೇಕು ಎಂದು ಚುನಾವಣಾ ಆಯೋಗಕ್ಕೆ ಭಾರತೀಯ ಜನತಾ ಪಕ್ಷದ ಒಬಿಸಿ ಮೋರ್ಚಾ ಮನವಿ ಮಾಡಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.