ವಿಮಾನ ದುರಂತ: ‘12th ಫೇಲ್’ ಸಿನಿಮಾ ನಟನ ಸಂಬಂಧಿ, ಕರ್ನಾಟಕದ ಕ್ಲೈವ್ ಕುಂದರ್ ಸಾವು
ಪತನವಾದ ಏರ್ ಇಂಡಿಯಾ ವಿಮಾನದಲ್ಲಿ ಕ್ಲೈವ್ ಕುಂದರ್ ಅವರು ಕೋ-ಪೈಲೆಟ್ ಆಗಿದ್ದರು. ಕರ್ನಾಟಕ ಮೂಲದ ಅವರು ಬಾಲಿವುಡ್ ನಟ ವಿಕ್ರಾಂತ್ ಮಾಸಿಯ ಸಂಬಂಧಿ ಎಂಬುದು ತಿಳಿದು ಬಂದಿದೆ. ಕ್ಲೈವ್ ಕುಂದರ್ ನಿಧನಕ್ಕೆ ವಿಕ್ರಾಂತ್ ಮಾಸಿ ಅವರು ಕಂಬನಿ ಮಿಡಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ..

ಇಂಥದ್ದೊಂದು ದುರಂತ ಸಂಭವಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ (Air India) ವಿಮಾನ ಇಂದು (ಜೂನ್ 12) ಪತನ ಆಗಿದೆ. ಈ ದುರ್ಘಟನೆಗೆ ಇಡೀ ವಿಶ್ವದ ಜನರು ಸಂತಾಪ ಸೂಚಿಸುತ್ತಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬದವರು ಶೋಕದಲ್ಲಿ ಮುಳುಗಿದ್ದಾರೆ. ಈ ವಿಮಾನದಲ್ಲಿ ಕೋ-ಪೈಲೆಟ್ ಆಗಿದ್ದ ಕರ್ನಾಟಕ ಮೂಲದ ಕ್ಲೈವ್ ಕುಂದರ್ (Clive Kunder) ಅವರು ಕೂಡ ನಿಧನರಾಗಿದ್ದಾರೆ. ಅಂದಹಾಗೆ, ಕ್ಲೈವ್ ಕುಂದರ್ ಅವರು ಬಾಲಿವುಡ್ ನಟ ವಿಕ್ರಾಂತ್ ಮಾಸಿ ಅವರ ಸಂಬಂಧಿ ಎಂಬುದು ತಿಳಿದುಬಂದಿದೆ. ಇದನ್ನು ವಿಕ್ರಾಂತ್ ಮಾಸಿ (Vikrant Massey) ಅವರೇ ಖಚಿತಪಡಿಸಿದ್ದಾರೆ.
‘12th ಫೇಲ್’ ಸಿನಿಮಾ ಮೂಲಕ ನಟ ವಿಕ್ರಾಂತ್ ಮಾಸಿ ಅವರು ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಅಹಮದಾಬಾದ್ನಲ್ಲಿ ವಿಮಾನ ಪತನ ಆದ ಬಳಿಕ ವಿಕ್ರಾಂತ್ ಮಾಸಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ತಮ್ಮ ಕಸಿನ್ ಆದ ಕ್ಲೈವ್ ಕುಂದರ್ ನಿಧನಕ್ಕೆ ಅವರು ಕಂಬನಿ ಮಿಡಿದ್ದಾರೆ.
‘ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತರಾದವರ ಕುಟುಂಬದವರು ಮತ್ತು ಆಪ್ತರ ಬಗ್ಗೆ ನೆನಪಿಸಿಕೊಂಡಾಗ ತೀವ್ರ ನೋವಾಗುತ್ತದೆ. ನನ್ನ ಅಂಕಲ್ ಕ್ಲಿಫೋರ್ಡ್ ಕುಂದರ್ ಅವರ ಮಗ ಕ್ಲೈವ್ ಕುಂದರ್ ಕೂಡ ಮೃತರಾಗಿದ್ದಾರೆ ಎಂಬುದು ತಿಳಿದ ಬಳಿಕ ಹೆಚ್ಚು ನೋವಾಯಿತು. ಆ ವಿಮಾನದಲ್ಲಿ ಕ್ಲೈವ್ ಕುಂದರ್ ಫಸ್ಟ್ ಆಫೀಸರ್ ಆಗಿದ್ದರು’ ಎಂದು ವಿಕ್ರಾಂತ್ ಮಾಸಿ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ವಿಮಾನ ಪತನದ ಬಳಿಕ ಚಿತ್ರರಂಗದ ಹಲವರು ಪ್ರತಿಕ್ರಿಯಿಸಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಯಶ್, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ರಮ್ಯಾ, ಅಕ್ಷಯ್ ಕುಮಾರ್, ಆಲಿಯಾ ಭಟ್, ಕಂಗನಾ ರಣಾವತ್, ಸೋನು ಸೂದ್, ರಣವೀರ್ ಸಿಂಗ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ವಿಮಾನ ಪತನದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ: ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಟಾಟಾ ಗ್ರೂಪ್
ನಟ ಶಾರುಖ್ ಖಾನ್ ಅವರು ಟ್ವೀಟ್ ಮಾಡಿ, ‘ಅಹಮದಾಬಾದ್ ವಿಮಾನ ದುರಂತದ ಸುದ್ದಿ ತಿಳಿದು ಬಹಳ ನೋವಾಯಿತು. ಮೃತರ ಕುಟುಂಬಕ್ಕಾಗಿ, ತೊಂದರೆ ಒಳಗಾದ ಎಲ್ಲರಿಗಾಗಿ ನನ್ನ ಪ್ರಾರ್ಥನೆಗಳು’ ಎಂದಿದ್ದಾರೆ. ನಟ ಸಲ್ಮಾನ್ ಖಾನ್ ಕೂಡ ಇನ್ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.