Aditya Singh Rajput: ಆದಿತ್ಯ ಸಿಂಗ್ ರಜಪೂತ್ ಸಾವಿಗೆ ಅತಿಯಾದ ಡ್ರಗ್ಸ್​ ಸೇವನೆ ಕಾರಣವೇ? ಪ್ರತಿಕ್ರಿಯೆ ನೀಡಿದ ತಾಯಿ

|

Updated on: May 24, 2023 | 8:13 PM

ಆದಿತ್ಯ ಸಿಂಗ್​ ರಜಪೂತ್​​ ಅವರ ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ. ನಟನ ಸಾವಿನ ಕುರಿತು ಹಬ್ಬಿರುವ ಸುದ್ದಿಗಳ ಬಗ್ಗೆ ಅವರ ತಾಯಿ​ ಮೌನ ಮುರಿದಿದ್ದಾರೆ.

Aditya Singh Rajput: ಆದಿತ್ಯ ಸಿಂಗ್ ರಜಪೂತ್ ಸಾವಿಗೆ ಅತಿಯಾದ ಡ್ರಗ್ಸ್​ ಸೇವನೆ ಕಾರಣವೇ? ಪ್ರತಿಕ್ರಿಯೆ ನೀಡಿದ ತಾಯಿ
ಆದಿತ್ಯ ಸಿಂಗ್ ರಜಪೂತ್, ಉಶಾ ರಜಪೂತ್
Follow us on

ನಟ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಆದಿತ್ಯ ಸಿಂಗ್ ರಜಪೂತ್ (Aditya Singh Rajput) ಅವರು ಸೋಮವಾರ (ಮೇ 22) ಮುಂಬೈನ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ನಿಧನರಾದರು. ಅವರ ಶವ ಪತ್ತೆಯಾದ ನಂತರ ಸಾಕಷ್ಟು ಚರ್ಚೆ ಶುರುವಾಗಿದೆ. ಅವರ ಮರಣದ ನಂತರ, ವಿವಿಧ ಮಾಧ್ಯಮ ವರದಿಗಳು ಪ್ರಕಟವಾಗಿದ್ದು, ಮಿತಿಮೀರಿದ ಡ್ರಗ್ಸ್​ (Drugs) ಸೇವನೆಯೇ ನಟನ ಸಾವಿಗೆ ಕಾರಣ ಎಂದು ಊಹಿಸಲಾಗಿದೆ. ಆದಿತ್ಯ ಸಿಂಗ್​ ರಜಪೂತ್​​ ಅವರ ಮರಣೋತ್ತರ ಪರೀಕ್ಷೆಯ ವರದಿಗಳು ಇನ್ನೂ ಬರಬೇಕಿದೆ. ಈ ನಡುವೆ ಅವರ ತಾಯಿ ಉಶಾ ರಜಪೂತ್​ (Usha Rajput) ಮೌನ ಮುರಿದಿದ್ದಾರೆ. ಪುತ್ರನ ಬಗ್ಗೆ ಪ್ರಕಟ ಆಗಿರುವ ಅಂತೆ-ಕಂತೆಗಳನ್ನು ಅವರು ತಳ್ಳಿಹಾಕಿದ್ದಾರೆ. ‘ಆಧಾರ ರಹಿತವಾದ ಇಂಥ ಸುದ್ದಿಗಳನ್ನು ಹಬ್ಬಿಸುವ ಮೂಲಕ ಮಗನ ಹೆಸರಿಗೆ ಮಸಿ ಬಳಿಯಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಸೋಮವಾರ ಮಧ್ಯಾಹ್ನ, ಮಗನೊಂದಿಗಿನ ನನ್ನ ಸಂಪೂರ್ಣ ಚಾಟ್ ಹಿಸ್ಟರಿ ಡಿಲೀಟ್​ ಆಯಿತು ಎಂಬುದು ನನ್ನ ಗಮನಕ್ಕೆ ಬಂತು. ತಾಂತ್ರಿಕವಾಗಿ ಅಷ್ಟೊಂದು ತಿಳುವಳಿಕೆ ಇಲ್ಲದ ಕಾರಣ, ಏನಾಯಿತು ಎಂದು ಕೇಳಲು ನಾನು ಮಧ್ಯಾಹ್ನ 2.15ರ ಸುಮಾರಿಗೆ ಅವನಿಗೆ ಕರೆ ಮಾಡಿದೆ. ವಾಟ್ಸಾಪ್‌ನಲ್ಲಿ ಸ್ವಲ್ಪ ಸಮಸ್ಯೆ ಇದೆ ಎಂದು ಅವನು ನನಗೆ ಹೇಳಿದ. ನಂತರ ನನಗೆ ಮತ್ತೆ ಮೆಸೇಜ್​ ಕಳುಹಿಸುವುದಾಗಿ ತಿಳಿಸಿದ. ಆದರೆ ತನ್ನ ಅನಾರೋಗ್ಯದ ಬಗ್ಗೆ ಏನನ್ನೂ ಹೇಳಲಿಲ್ಲ’ ಎಂದು ಉಶಾ ರಜಪೂತ್​ ಹೇಳಿದ್ದಾರೆ.

ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಹೀರೋಗಳು ಶೀಘ್ರವೇ ಅರೆಸ್ಟ್; ಪೊಲೀಸರ ಎಚ್ಚರಿಕೆ

ಆದಿತ್ಯ ಸಿಂಗ್ ರಜಪೂತ್ ಸೋಮವಾರ (ಮೇ 22) ತಮ್ಮ ಸ್ನಾನಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಆದಿತ್ಯ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮಂಗಳವಾರ ಸಂಜೆ (ಮೇ 23) ಆದಿತ್ಯ ಸಿಂಗ್ ರಜಪೂತ್ ಅಂತ್ಯಕ್ರಿಯೆ ನಡೆದಿದೆ. ಆದಿತ್ಯ ದೆಹಲಿ ಮೂಲದವರು. ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ‘ಮೇ ಗಾಂಧಿ ಕೋ ನಹಿ ಮಾರಾ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. MTV Splitsvilla ಸೀಸನ್ 9ರಲ್ಲಿ ಭಾಗಿ ಆದ ಬಳಿಕ ಅವರ ಖ್ಯಾತಿ ಹೆಚ್ಚಿತು. ಇನ್ನೂ ಕೆಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಯುವ ಹೀರೋಗಳ ಮೇಲೆ ಡ್ರಗ್ಸ್​ ಸೇವನೆ ಆರೋಪ; ಶೂಟಿಂಗ್​ ಸ್ಥಳದ ಮೇಲೆ ಪೊಲೀಸರ ಕಣ್ಣು

‘ಪಂಚನಾಮದ ಸಮಯದಲ್ಲಿ ಆದಿತ್ಯ ಸಿಂಗ್ ತಲೆಯ ಎಡಭಾಗದಲ್ಲಿ ಸಣ್ಣ ಗಾಯ ಕಂಡುಬಂದಿದೆ. ಯಾವುದೇ ರಕ್ತಸ್ರಾವವಾಗಲಿಲ್ಲ. ಆ ಭಾಗದಲ್ಲಿ ಊತ ಇದೆ. ಅವರ ತಲೆಗೆ ಗಂಭೀರವಾದ ಗಾಯವಾಗಿತ್ತು ಎಂಬುದು ನಮ್ಮ ಶಂಕೆ. ಅವರ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂಬುದಾಗಿ ವರದಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.