‘ಸಾಯಿ ಬಾಬಾ’ ಖ್ಯಾತಿಯ ನಟ ಸುಧೀರ್ ದಲ್ವಿಗೆ ಅನಾರೋಗ್ಯ; ಸಹಾಯಕ್ಕೆ ಬಂದ ಹೀರೋಗಳು

ಸಾಯಿ ಬಾಬಾ ಪಾತ್ರ ಮಾಡಿ ದೇಶಾದ್ಯಂತ ಮನೆ ಮಾತಾಗಿದ್ದ ನಟ ಸುಧೀರ್ ದಲ್ವಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸೋಂಕಿನಿಂದಾಗಿ ಅವರ ಮೂಳೆ ಮತ್ತು ಕೀಲುಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಪ್ರಸ್ತುತ ವಾಕರ್ ಸಹಾಯದಿಂದ ನಡೆಯುತ್ತಿದ್ದಾರೆ. ಅವರಿಗೆ ಸ್ಟಾರ್ ಹೀರೋಗಳು ಹಾಗೂ ಸಾಯಿ ಬಾಬಾ ಭಕ್ತರು ಆರ್ಥಿಕ ನೆರವು ನೀಡಿದ್ದಾರೆ.

‘ಸಾಯಿ ಬಾಬಾ’ ಖ್ಯಾತಿಯ ನಟ ಸುಧೀರ್ ದಲ್ವಿಗೆ ಅನಾರೋಗ್ಯ; ಸಹಾಯಕ್ಕೆ ಬಂದ ಹೀರೋಗಳು
Sudhir Dalvi
Image Credit source: Sarla Charities Trust

Updated on: Sep 02, 2026 | 7:39 PM

‘ಶಿರಡಿ ಕೆ ಸಾಯಿ ಬಾಬಾ’ ಸಿನಿಮಾದಲ್ಲಿ ಸಾಯಿ ಬಾಬಾ ಅವರ ಪಾತ್ರದ ಮೂಲಕ ಪ್ರತಿಯೊಬ್ಬರ ಮನ ಗೆದ್ದಿದ್ದ ಹಿರಿಯ ನಟ ಸುಧೀರ್ ದಲ್ವಿ ಅವರು ಇತ್ತೀಚೆಗೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ವೈದ್ಯಕೀಯ ವೆಚ್ಚ ಭರಿಸಲು ಬಾಲಿವುಡ್‌ನ ಪ್ರಮುಖ ನಟರು ನೆರವಿನ ಹಸ್ತ ಚಾಚಿದ್ದಾರೆ. ಸೆಪ್ಸಿಸ್ ಸಮಸ್ಯೆಯಿಂದಾಗಿ ಸುಧೀರ್ ದಲ್ವಿ ಅವರ ಆರೋಗ್ಯ ತೀವ್ರ ಹದಗೆಟ್ಟು, ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರ ಆಸ್ಪತ್ರೆಯ ಬಿಲ್ 15 ಲಕ್ಷ ರೂಪಾಯಿಗೂ ಅಧಿಕವಾಗಿತ್ತು. ಈ ಕಷ್ಟದ ಸಮಯದಲ್ಲಿ ನಟರಾದ ಅಕ್ಷಯ್ ಕುಮಾರ್, ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್ ಸೇರಿದಂತೆ ಚಿತ್ರರಂಗದ ಹಲವರು ಆರ್ಥಿಕ ಸಹಾಯ ಹಸ್ತ ಚಾಚಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸುಧೀರ್ ದಲ್ವಿ ಅವರ ಪತ್ನಿ ಸುಹಾಸ್ ದಲ್ವಿ, ‘ನಾವು ಆಸ್ಪತ್ರೆಯ ಬಿಲ್ ಪಾವತಿಸಲು ಕಷ್ಟಪಡುತ್ತಿದ್ದೇವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲಿವುಡ್‌ನ ಹಲವರು ಸಹಾಯಕ್ಕೆ ಬಂದರು. ಕಾರ್ತಿಕ್ ಆರ್ಯನ್, ರಣಬೀರ್ ಕಪೂರ್ ಮತ್ತು ಅಕ್ಷಯ್ ಕುಮಾರ್ ಅವರು ತಕ್ಷಣವೇ ನೆರವು ನೀಡಿದವರಲ್ಲಿ ಪ್ರಮುಖರು’ ಎಂದು ಹೇಳಿದ್ದಾರೆ.

‘ಸುಧೀರ್ ಅವರು ಸಾಯಿ ಬಾಬಾ ಪಾತ್ರದ ಮೂಲಕ ಹೆಸರುವಾಸಿಯಾದವರು. ಹೀಗಾಗಿ ಅನೇಕ ಸಾಯಿ ಬಾಬಾ ಭಕ್ತರು ಕೂಡ ನಮ್ಮ ನೆರವಿಗೆ ಧಾವಿಸಿದರು. ಈ ಪ್ರೀತಿ ಮತ್ತು ಉದಾರತೆಯನ್ನು ಕಂಡು ನಮಗೆ ಭಾವುಕರಾಗಿದ್ದೇವೆ’ ಎಂದು ಸುಹಾಸ್ ದಲ್ವಿ ಅವರು ಧನ್ಯವಾದ ತಿಳಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸುಧೀರ್ ಅವರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ಬಾಂಬೆ ಹೈಕೋರ್ಟ್ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನಿಂದ ಸುಧೀರ್ ದಲ್ವಿ ಅವರ ಚಿಕಿತ್ಸೆಗೆ 11 ಲಕ್ಷ ರೂಪಾಯಿ ದೇಣಿಗೆ ನೀಡಲು ಅನುಮತಿ ನೀಡಿತ್ತು. ತೀವ್ರ ಸೋಂಕು ಉಂಟಾಗಿದ್ದರಿಂದ ಅವರ ಮೂಳೆ ಹಾಗೂ ಕೀಲುಗಳ ಮೇಲೆ ಪರಿಣಾಮ ಬೀರಿದ್ದು, ಸದ್ಯಕ್ಕೆ ವಾಕರ್ ಸಹಾಯದಿಂದ ನಡೆಯುತ್ತಿದ್ದಾರೆ ಎಂದು ಅವರ ಪತ್ನಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಶಾರುಖ್​ ಖಾನ್​

ರಾಮಾನಂದ್ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಗುರು ವಸಿಷ್ಠರ ಪಾತ್ರ ಮಾಡಿದ್ದ ಸುಧೀರ್ ದಲ್ವಿ ಅವರು ‘ಚಾಣಕ್ಯ’, ‘ಜೈ ಹನುಮಾನ್’, ‘ವಿಷ್ಣು ಪುರಾಣ’, ‘ಬುನಿಯಾದ್’ ಮತ್ತು ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಹಾಗೂ ಅನೇಕ ಸಿನಿಮಾಗಳಲ್ಲಿ ನಟಿಸಿ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us