ಬಾಲಿವುಡ್ ಬಿಟ್ಟು ಶಾರುಖ್ ಖಾನ್​ಗಿಂತಲೂ ಬ್ಯುಸಿಯಾದ ನಿರ್ದೇಶಕ

Anurag Kashyap: ‘ಗ್ಯಾಂಗ್ಸ್ ಆಫ್ ವಸೇಪುರ್’, ‘ನೋ ಸ್ಮೋಕಿಂಗ್’ ಇನ್ನೂ ಹಲವು ಕಲ್ಟ್ ಕ್ಲಾಸಿಕ್ ಸಿನಿಮಾ ನಿರ್ದೇಶಿಸಿರುವ ಅನುರಾಗ್ ಕಶ್ಯಪ್, ಬಾಲಿವುಡ್​ನಿಂದ ಬೇಸರಗೊಂಡು ದಕ್ಷಿಣ ಭಾರತ ಚಿತ್ರರಂಗಕ್ಕೆ ಶಿಫ್ಟ್ ಆಗಿದ್ದಾರೆ. ಇದೀಗ ತಮ್ಮ ಬಗ್ಗೆ ಆಡಿಕೊಳ್ಳುತ್ತಿರುವ ಬಾಲಿವುಡ್ ಮಂದಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಅವರ ಟ್ವೀಟ್ ಇಲ್ಲಿದೆ...

ಬಾಲಿವುಡ್ ಬಿಟ್ಟು ಶಾರುಖ್ ಖಾನ್​ಗಿಂತಲೂ ಬ್ಯುಸಿಯಾದ ನಿರ್ದೇಶಕ
Anurag Kashyap

Updated on: Apr 18, 2025 | 1:08 PM

ಅನುರಾಗ್ ಕಶ್ಯಪ್ (Anurag Kashyap), ಬಾಲಿವುಡ್​ನ (Bollywood) ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಆದರೆ ಅವರಿಗೆ ಸಿಗಬೇಕಾದ ಮಾನ್ಯತೆ, ಅವಕಾಶಗಳು ಸಿಗಲಿಲ್ಲ. ಸಿಕ್ಕ ಸೀಮಿತ ಅವಕಾಶಗಳಲ್ಲಿಯೇ ‘ಗ್ಯಾಂಗ್ಸ್ ಆಫ್ ವಸೇಪುರ್’, ‘ನೋ ಸ್ಮೋಕಿಂಗ್‘ ಇನ್ನೂ ಕೆಲವು ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಮೊದಲಿನಿಂದಲೂ ಬಾಲಿವುಡ್​ನ ರೀತಿ-ರಿವಾಜುಗಳನ್ನು ಟೀಕಿಸುತ್ತಲೇ ಬರುತ್ತಿದ್ದ ಅನುರಾಗ್ ಕಶ್ಯಪ್, ಕೊನೆಗೂ ಈಗ ಮುಂಬೈನಿಂದ ಹೊರಬಂದಿದ್ದಾರೆ. ಆದರೆ ಅನುರಾಗ್ ಗೆ ಅವಕಾಶ ಸಿಗದೇ ಇದ್ದದ್ದಕ್ಕೆ ಮುಂಬೈ ಬಿಟ್ಟು ಹೋಗಿದ್ದಾರೆ. ಈಗ ದಕ್ಷಿಣದಲ್ಲೂ ಅವರಿಗೆ ಅವಕಾಶಗಳಿಲ್ಲ ಎನ್ನುವ ಮಾತು ಬಾಲಿವುಡ್​ನಲ್ಲಿ ಹಬ್ಬಿದೆಯಂತೆ. ಇದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಖಡಕ್ ಉತ್ತರ ನೀಡಿದ್ದಾರೆ ಕಶ್ಯಪ್.

ಮಧ್ಯರಾತ್ರಿ ಟ್ವೀಟ್ ಮಾಡಿರುವ ಅನುರಾಗ್ ಕಶ್ಯಪ್, ‘ನಾನು ಮುಂಬೈ ಬಿಟ್ಟು ಬಂದಿದ್ದೇನೆ, ಹಾಗೆಂದು ಸಿನಿಮಾ ಬಿಟ್ಟು ಬಂದಿಲ್ಲ. ನಾನು ಸಾಕಾಗಿ ಮುಂಬೈ ಬಿಟ್ಟು ಬಂದೆ ಎಂದುಕೊಳ್ಳುವವರಿಗೆ ಹೇಳಲು ಬಯಸುತ್ತೇನೆ, ನಾನು ಈಗ ಶಾರುಖ್ ಖಾನ್​ಗಿಂತಲೂ ಬ್ಯುಸಿಯಾಗಿದ್ದೇನೆ. ಹೌದು ಶಾರುಖ್ ಖಾನ್ ಅಷ್ಟು ಹಣ ಮಾಡದೇ ಇರಬಹುದು, ಆದರೆ ನಾನು 2028ರ ವರೆಗೆ ಬ್ಯುಸಿಯಾಗಿದ್ದೇನೆ ನನ್ನ ಬಳಿ ಡೇಟ್ಸ್ ಇಲ್ಲ’ ಎಂದಿದ್ದಾರೆ.

ಮುಂದುವರೆದು, ‘ನಾನು ಐದು ಹೊಸ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದೇನೆ. ಅವುಗಳಲ್ಲಿ ಎರಡು ಈ ವರ್ಷ, ಮುಂದಿನ ವರ್ಷ ಬಿಡುಗಡೆ ಆಗಲಿವೆ. ನಾನು ಅದೆಷ್ಟು ಬ್ಯುಸಿಯಾಗಿದ್ದೇನೆ ಎಂದರೆ ಪ್ರತಿ ದಿನ ಮೂರು ಹೊಸ ಪ್ರಾಜೆಕ್ಟ್​ಗಳಿಗೆ ನೋ ಹೇಳುತ್ತಿದ್ದೇನೆ’ ಎಂದಿದ್ದಾರೆ. ಕೊನೆಯಲ್ಲಿ ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ, ಆಡಿಕೊಳ್ಳುತ್ತಿರುವವರಿಗೆ ನಿಂದಿಸಿದ್ದಾರೆ ಸಹ.

ಇದನ್ನೂ ಓದಿ:ಬಾಲಿವುಡ್​ ಬಗ್ಗೆ ಅನುರಾಗ್ ಕಶ್ಯಪ್​ಗೆ ಮೂಡಿದೆ ಅಸಹ್ಯ; ದಕ್ಷಿಣ ಬರಲಿದ್ದಾರೆ ಖ್ಯಾತ ನಿರ್ದೇಶಕ

ಅನುರಾಗ್ ಕಶ್ಯಪ್, ಮೊದಲಿನಿಂದಲೂ ಬಾಲಿವುಡ್​ನ ಪದ್ಧತಿಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಬಾಲಿವುಡ್ vs ದಕ್ಷಿಣ ಭಾರತ ಚಿತ್ರರಂಗ ಡಿಬೇಟ್ ಪ್ರಾರಂಭ ಆದ ಬಳಿಕವಂತೂ ಅವರು ಬಾಲಿವುಡ್ ಅನ್ನು ಇನ್ನಷ್ಟು ಟೀಕಿಸಲು ಆರಂಭಿಸಿದ್ದರು. ತಾವು ಬಾಲಿವುಡ್ ಬಿಟ್ಟು ದಕ್ಷಿಣ ಭಾರತ ಚಿತ್ರರಂಗಕ್ಕೆ ಹೋಗುವುದಾಗಿ ಮೊದಲೇ ಘೋಷಿಸಿದ್ದ ಅನುರಾಗ್ ಕಶ್ಯಪ್, ಇದೀಗ ದಕ್ಷಿಣ ಭಾರತಕ್ಕೆ ಬಂದಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ‘ಮಹಾರಾಜ’ ಸಿನಿಮಾದಲ್ಲಿ ನಟಿಸಿದ್ದ ಅನುರಾಗ್ ಕಶ್ಯಪ್, ಈಗ ‘ಡಕೈಟ್’ ತೆಲುಗು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಒಂದು ಸಿನಿಮಾನಲ್ಲಿಯೂ ನಟಿಸಿದ್ದಾರೆ. ಕೆಲವು ಹೊಸ ಸಿನಿಮಾಗಳ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಆಸ್ಕರ್ ವಿಜೇತ ಹಾಲಿವುಡ್ ನಿರ್ದೇಶಕನೊಬ್ಬನ ಸಿನಿಮಾದಲ್ಲಿಯೂ ನಟಿಸುವವರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us