ದಿ ಕೇರಳ ಸ್ಟೋರಿ ನಿಷೇಧಕ್ಕೆ ಅನುರಾಗ್ ಕಶ್ಯಪ್ ವಿರೋಧ: ಅಭಿಮಾನಿಗಳಿಗೆ ಗೊಂದಲ ಮೂಡಿಸಿದ ನಿರ್ದೇಶಕನ ನಡೆ

|

Updated on: May 10, 2023 | 3:31 PM

The Kerala Story: ಎಡಪಂಥೀಯ ವಿಚಾರಗಳಿಂದ ಗುರುತಿಸಿಕೊಂಡಿದ್ದ ನಿರ್ದೇಶಕ ಅನುರಾಗ್ ಕಶ್ಯಪ್, ದಿ ಕೇರಳ ಸ್ಟೋರಿ ಸಿನಿಮಾದ ನಿಷೇಧಕ್ಕೆ ಒತ್ತಾಯಿಸುವವರ ವಿರುದ್ಧ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದಿ ಕೇರಳ ಸ್ಟೋರಿ ನಿಷೇಧಕ್ಕೆ ಅನುರಾಗ್ ಕಶ್ಯಪ್ ವಿರೋಧ: ಅಭಿಮಾನಿಗಳಿಗೆ ಗೊಂದಲ ಮೂಡಿಸಿದ ನಿರ್ದೇಶಕನ ನಡೆ
ಅನುರಾಗ್ ಕಶ್ಯಪ್
Follow us on

ದಿ ಕೇರಳ ಸ್ಟೋರಿ (The Kerala Story) ಸಿನಿಮಾಕ್ಕೆ ವಿರೋಧದ ಜೊತೆಗೆ ಬೆಂಬಲವೂ ಭರಪೂರವಾಗಿ ವ್ಯಕ್ತವಾಗಿದೆ. ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇನ್ನಿತರರು ಸಿನಿಮಾದ ಪರ ಉತ್ತಮ ಮಾತುಗಳನ್ನಾಡಿ, ಇದೊಂದು ನೋಡಲೇ ಬೇಕಾದ ಸಿನಿಮಾ ಎಂದಿದ್ದಾರೆ.

ಬಿಜೆಪಿಯ ಸಿದ್ಧಾಂತಗಳನ್ನು ವಿರೋಧಿಸುತ್ತಾ ಬಂದಿರುವ ಹಲವರು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿಯೂ ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶಿಸುವುದಿಲ್ಲ ಎಂದಿದ್ದಾರೆ. ಈ ನಡುವೆ ಎಡಪಂಥೀಯ ಆಲೋಚನೆಗಳುಳ್ಳ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್, ದಿ ಕೇರಳ ಸ್ಟೋರಿ ಸಿನಿಮಾದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ಚರ್ಚೆಗೆ ಕಾರಣವಾಗಿದೆ.

ಈ ಹಿಂದೆ ಮೋದಿ ಹಾಗೂ ಆರ್​ಎಸ್​ಎಸ್​ ಅನ್ನು ಟೀಕಿಸಿ ಬಿಜೆಪಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಅನುರಾಗ್ ಕಶ್ಯಪ್, ಇದೇ ಕಾರಣದಿಂದ ಐಟಿ ದಾಳಿಯನ್ನೂ ಎದುರಿಸಿದ್ದರು. ಆದರೆ ಇದೀಗ ಬಿಜೆಪಿಯ ಭರಪೂರ ಬೆಂಬಲ ಪಡೆದಿರುವ ಹಾಗೂ ಎಡಪಂಥೀಯರಿಂದ ಪ್ರೊಪಾಗಾಂಡಾ ಸಿನಿಮಾ ಎನಿಸಿಕೊಂಡಿರುವ ದಿ ಕೇರಳ ಸ್ಟೋರಿ ಪರವಾಗಿ ಟ್ವೀಟ್ ಮಾಡಿದ್ದಾರೆ.

ನೀವು ಯಾವುದೇ ಚಲನಚಿತ್ರವನ್ನು ಒಪ್ಪುತ್ತೀರೋ ಇಲ್ಲವೋ ಅದು ಬೇರೆ ವಿಷಯ. ಆ ಸಿನಿಮಾ ಪ್ರಪೊಗಾಂಡಾ ಆಗಿರಲಿ ಅಥವಾ ಪ್ರೊಪಾಗಾಂಡಾ ರಹಿತ ಸಿನಿಮಾ ಆಗಿರಲಿ. ಆಕ್ರಮಣಕಾರಿ ಸಿನಿಮಾ ಆಗಿರಲಿ ಅಥವಾ ಸಾತ್ವಿಕ ಸಿನಿಮಾ ಆಗಿರಲಿ ಅವುಗಳನ್ನು ನಿಷೇಧಿಸುವುದು ತಪ್ಪು” ಎಂದಿದ್ದಾರೆ ಅನುರಾಗ್ ಕಶ್ಯಪ್. ಇದರ ಜೊತೆಗೆ ”ನಾನು ನೀನು ಹೇಳುವುದನ್ನು ಒಪ್ಪುವುದಿಲ್ಲ ಆದರೆ ನಿನ್ನ ಹೇಳುವ ಅಥವಾ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿಗಾಗಿ ನಾನು ನನ್ನ ಜೀವವನ್ನೇ ಕೊಡಬಲ್ಲೆ” ಫ್ರೆಂಚ್ ಜನಪ್ರಿಯ ಬರಹಗಾರ ವೊಲ್ಟೈರ್​ನ ಅದ್ಭುತ ಕೋಟ್ ಅನ್ನು ಹಂಚಿಕೊಂಡಿದ್ದಾರೆ.

ಅನುರಾಗ್ ಕಶ್ಯಪ್ ಎಡಪಂಥೀಯ ವಿಚಾರಧಾರೆಗಳಿಂದ ಗುರುತಿಸಿಕೊಂಡವರು. ನರೇಂದ್ರ ಮೋದಿ, ಆರ್​ಎಸ್​ಎಸ್, ಹಿಂದುತ್ವದ ರಾಜಕೀಯವನ್ನು ಟೀಕಿಸುತ್ತಾ ಬಂದಿರುವವರು. ಆದರೆ ಇದೀಗ ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ಅವರು ಬೆಂಬಲಿಸಿರುವುದು ಅವರ ಅಭಿಮಾನಿಗಳಲ್ಲೇ ಹಲವರಿಗೆ ಆಶ್ಚರ್ಯ ಮೂಡಿಸಿದೆ.

ದಿ ಕೇರಳ ಸ್ಟೋರಿ ಸಿನಿಮಾವು ಕೇರಳದಲ್ಲಿ ನಡೆದಿದೆ ಎನ್ನಲಾಗಿರುವ ಮತಾಂತರದ ಕತೆಯನ್ನು ಒಳಗೊಂಡಿದೆ. ಕೇರಳದಲ್ಲಿ 32,000 ಸಾವಿರ ಹಿಂದುಗಳು, ಕ್ರಿಶ್ಚಿಯನ್ನರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದು ಸಿನಿಮಾ ತಂಡ ಹೇಳಿತ್ತು. ಈ ಸಿನಿಮಾದ ಬಿಡುಗಡೆ ತಡೆಯಲು ಕೇರಳ ಆಡಳಿತ ಪಕ್ಷ ಹಾಗೂ ಕೇರಳ ಕಾಂಗ್ರೆಸ್ ಇನ್ನಿತರೆ ಕೆಲವು ವಿಪಕ್ಷಗಳು ಪ್ರಯತ್ನ ನಡೆಸಿದವು ಆದರೆ ವಿಫಲವಾದವು. ಇದೀಗ ತಮಿಳುನಾಡಿನಲ್ಲಿ ಸಿನಿಮಾದ ಪ್ರದರ್ಶನಕ್ಕೆ ಅಡ್ಡಿಪಡಿಸಲಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Wed, 10 May 23